ಈತ ವಿಶ್ವಕಪ್‌ನಲ್ಲಿ ಭಾರತದ ಫ್ಯಾಕ್ಟರ್ ಆಗಬಲ್ಲ ಕ್ರಿಕೆಟಿಗ: ಅಚ್ಚರಿಯ ಭವಿಷ್ಯ ನುಡಿದ ಸೆಹ್ವಾಗ್ ಶುಕ್ರವಾರ ಇಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿತು. ಇದರೊಂದಿಗೆ ತಂಡದ ರೇಟಿಂಗ್‌ ಅಂಕ 116ಕ್ಕೆ ಹೆಚ್ಚಿದ್ದು, ಪಾಕಿಸ್ತಾನ(115)ವನ್ನು ಹಿಂದಿಕ್ಕಿದೆ. ಅಗ್ರಸ್ಥಾನಿಯಾಗೇ ವಿಶ್ವಕಪ್‌ಗೆ ಪ್ರವೇಶಿಸಬೇಕಿದ್ದರೆ, ಭಾರತ ಸರಣಿ ಗೆಲ್ಲಬೇಕಿದೆ. ಮುಂಬೈ(ಸೆ.24): ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ಆರಂಭವಾಗಲಿದ್ದು, 10 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಕಳೆದೊಂದು ದಶಕದಿಂದ ಟೀಂ ಇಂಡಿಯಾ, ಐಸಿಸಿ ಟ್ರೋಫಿ ಬರ ಎದುರಿಸುತ್ತಾ ಬಂದಿದ್ದು, ಇದೀಗ ತವರಿನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಕಪ್‌ ಗೆಲ್ಲುವ ನೆಚ್ಚಿನ ತಂಡವಾಗಿ ಭಾರತ ಗುರುತಿಸಿಕೊಂಡಿದೆ. ಹೀಗಿರುವಾಗಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾದಲ್ಲಿ ಸೂರ್ಯಕುಮಾರ್ ಯಾದವ್ ಎಕ್ಸ್ ಫ್ಯಾಕ್ಟರ್ ಆಗಿ ಹೊರಹೊಮ್ಮಲಿದ್ದಾರೆ ಎಂದು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ ಹೌದು, ಟಿ20 ಕ್ರಿಕೆಟ್‌ನಲ್ಲಿ ನಂ.1 ಬ್ಯಾಟರ್ ಆಗಿರುವ ಸೂರ್ಯಕುಮಾರ್ ಯಾದವ್, ಏಕದಿನ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ತೋರಲು ವಿಫಲವಾಗಿದ್ದರು. ಹೀಗಿದ್ದೂ, ವಿಶ್ವಕಪ್‌ ತಂಡದಲ್ಲಿ ಸೂರ್ಯನಿಗೆ ಸ್ಥಾನ ನೀಡಲಾಗಿತ್ತು. ವಿಶ್ವಕಪ್ ಟೂರ್ನಿಗೂ ಮುನ್ನ ತವರಿನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಕೇವಲ 49 ಎಸೆತಗಳಲ್ಲಿ ಜವಾಬ್ದಾರಿಯುತ 50 ರನ್ ಸಿಡಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸೂರ್ಯ ಅವರ ಸೊಗಸಾದ ಇನಿಂಗ್ಸ್‌ನಲ್ಲಿ 5 ಬೌಂಡರಿ ಹಾಗೂ ಒಂದು ಆಕರ್ಷಕ ಸಿಕ್ಸರ್ ಕೂಡಾ ಸೇರಿತ್ತು. ಕಳೆದ 21 ಪಂದ್ಯಗಳಿಂದ ಅರ್ಧಶತಕದ ಬರ ಎದುರಿಸುತ್ತಾ ಬಂದಿದ್ದ ಸೂರ್ಯ, ಕೊನೆಗೂ ಏಕದಿನ ಪಂದ್ಯದಲ್ಲಿ ಫಿಫ್ಟಿ ಬಾರಿಸುವಲ್ಲಿ ಯಶಸ್ವಿಯಾಗಿದ್ದರು. ಇದರ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ಪ್ರದರ್ಶನವನ್ನು ಸೆಹ್ವಾಗ್ ಕೊಂಡಾಡಿದ್ದಾರೆ. : ಇಂದೋರ್‌ನಲ್ಲಿಂದು ಟೀಂ ಇಂಡಿಯಾಗೆ ಸರಣಿ ಗೆಲ್ಲುವ ಗುರಿ..! "ಸೂರ್ಯಕುಮಾರ್ ಯಾದವ್ ಪ್ರದರ್ಶನ ನೋಡಿ ಖುಷಿಯಾಯಿತು. ಅವರು ಖಂಡಿತವಾಗಿಯೂ ಎಕ್ಸ್‌ ಫ್ಯಾಕ್ಟರ್ ಆಗಲಿದ್ದಾರೆ. ಕೆಲವೇ ಕೆಲವು ಆಟಗಾರರು ಮಾತ್ರ ಈ ರೀತಿ ಪಂದ್ಯದ ಗೇರ್ ಬದಲಿಸುವ ಮೂಲಕ ಎದುರಾಳಿ ಪಾಳಯದಲ್ಲಿ ನಡುಕ ಹುಟ್ಟಿಸುವ ಕ್ಷಮತೆ ಹೊಂದಿರುತ್ತಾರೆ. ನಾವು ಆತನನ್ನು ಸತತವಾಗಿ ಬೆಂಬಲಿಸುತ್ತಾ ಬಂದಿದ್ದರಿಂದ, ಆತ ತಂಡದ ಪಾಲಿಗೆ ಒಳ್ಳೆಯ ಆಸ್ತಿಯಾಗಬಲ್ಲ. ಅಭಿನಂದನೆಗಳು ಭಾರತ" ಎಂದು ವೀರೂ ಟ್ವೀಟ್ ಮಾಡಿದ್ದಾರೆ. ಶುಕ್ರವಾರ ಇಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿತು. ಇದರೊಂದಿಗೆ ತಂಡದ ರೇಟಿಂಗ್‌ ಅಂಕ 116ಕ್ಕೆ ಹೆಚ್ಚಿದ್ದು, ಪಾಕಿಸ್ತಾನ(115)ವನ್ನು ಹಿಂದಿಕ್ಕಿದೆ. ಅಗ್ರಸ್ಥಾನಿಯಾಗೇ ವಿಶ್ವಕಪ್‌ಗೆ ಪ್ರವೇಶಿಸಬೇಕಿದ್ದರೆ, ಭಾರತ ಸರಣಿ ಗೆಲ್ಲಬೇಕಿದೆ. ಶುಕ್ರವಾರದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಫೀಲ್ಡ್‌ ಮಾಡಿದ ಭಾರತ, ಆಸ್ಟ್ರೇಲಿಯಾವನ್ನು 50 ಓವರಲ್ಲಿ 276 ರನ್‌ಗೆ ಆಲೌಟ್‌ ಮಾಡಿತು. ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ ಮಾರಕ ದಾಳಿ ಸಂಘಟಿಸಿದ ಮೊಹಮದ್‌ ಶಮಿ, ಕಾಂಗರೂಗಳು ದೊಡ್ಡ ಮೊತ್ತ ತಲುಪುದಂತೆ ಕಡಿವಾಣ ಹಾಕಿದರು. ಈ ಎರಡು ತಂಡಗಳಲ್ಲೊಂದು ತಂಡ ವಿಶ್ವಕಪ್ ಗೆಲ್ಲಲಿದೆ: ಅಚ್ಚರಿಯ ಭವಿಷ್ಯ ನುಡಿದ ಕುಮಾರ ಸಂಗಕ್ಕರ..! ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತಕ್ಕೆ ಶುಭ್‌ಮನ್‌ ಗಿಲ್‌ ಹಾಗೂ ಋತುರಾಜ್‌ ಗಾಯಕ್ವಾಡ್‌ ಭದ್ರ ಬುನಾದಿ ಹಾಕಿಕೊಟ್ಟರು. ಇವರಿಬ್ಬರ ನಡುವೆ ಮೊದಲ ವಿಕೆಟ್‌ಗೆ 21.4 ಓವರಲ್ಲಿ 142 ರನ್‌ ಜೊತೆಯಾಟ ಮೂಡಿಬಂತು. ಗಾಯಕ್ವಾಡ್‌ 71, ಗಿಲ್‌ 74 ರನ್‌ ಗಳಿಸಿದರು. ಶ್ರೇಯಸ್‌(03), ಕಿಶನ್‌(18) ಬೇಗನೆ ಔಟಾದರೂ, ರಾಹುಲ್‌ ಹಾಗೂ ಸೂರ್ಯ ನಡುವಿನ 80 ರನ್‌ ಜೊತೆಯಾಟ ತಂಡಕ್ಕೆ ಇನ್ನೂ 08 ಎಸೆತ ಬಾಕಿ ಇರುವಂತೆ ಜಯ ತಂದುಕೊಟ್ಟಿತು. ಸೂರ್ಯಕುಮಾರ್ ಯಾದವ್ 50 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಕೆ ಎಲ್ ರಾಹುಲ್‌ 63 ಎಸೆತಗಳಲ್ಲಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 58 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.