ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಹುಡುಗನ ಖಡಕ್ ಅಟ: ರಾಯಚೂರಿನ ಹುಡುಗನನ್ನು ಬೆಳೆಸಿದರೆ ಕರ್ನಾಟಕ ತಂಡಕ್ಕೆ ಆಸ್ತಿಯಾಗಬಲ್ಲ! ಮಹಾರಾಜ ಟ್ರೋಫಿಯಲ್ಲಿ ಅಕ್ಷರಶಃ ಅಬ್ಬರಿಸುತ್ತಿರುವ ಹಳ್ಳಿ ಪ್ರತಿಭೆ ಮನೋಜ್ ಭಾಂಡಗೆ, ಆರ್‌ಸಿಬಿ ತಂಡದಲ್ಲಿ ಎರಡು ವರ್ಷ ಬೆಂಚ್ ಕಾಯಿಸಿದ್ದು, ಈಗ ಬ್ಯಾಟ್ ಮೂಲಕ ರಾಯಚೂರು ಮೂಲದ ಕ್ರಿಕೆಟಿಗ ಖಡಕ್ ಉತ್ತರ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ -ಸುದರ್ಶನ್, ಸುವರ್ಣ ನ್ಯೂಸ್ ಬೆಂಗಳೂರು: ಕ್ರಿಕೆಟ್ ಸಿಟಿ ಹುಡುಗರ ಆಟ ಎಂಬ ಮಾತನ್ನು ಹಳ್ಳಿ ಹುಡುಗರು ಪದೇ ಪದೇ ಸುಳ್ಳಾಗಿಸುತ್ತಲೇ ಬಂದಿದ್ದಾರೆ. ಹಳ್ಳಿ ಹುಡುಗರ ತಾಕತ್ತು ಎಂಥದ್ದು ಎಂಬುದಕ್ಕೆ ರಾಂಚಿಯಿಂದ ಬಂದ ಧೋನಿ ಭಾರತಕ್ಕೆ ಎರಡೆರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ಸಾಧನೆಯೇ ಸಾಕು. ಗದಗದಿಂದ ಬಂದ ಸುನೀಲ್ ಜೋಶಿ ಭಾರತ ಪರ 84 ಅಂತರಾಷ್ಟ್ರೀಯ ಪಂದ್ಯಗಳನ್ನಾಡುತ್ತಾರೆ. ದಾವಣಗೆರೆಯ ಆಟೋ ರಿಕ್ಷಾ ಚಾಲಕರೊಬ್ಬರ ಮಗ ವಿನಯ್ ಕುಮಾರ್ ಕರ್ನಾಟಕದ ಸರ್ವಶ್ರೇಷ್ಠ ರಣಜಿ ಹೀರೋ ಆಗಿ ಹೆಸರು ಮಾಡುತ್ತಾರೆ. ಅಷ್ಟೇ ಅಲ್ಲ, ದೇಶವನ್ನೂ ಪ್ರತಿನಿಧಿಸುತ್ತಾರೆ. ಇದು ನಮ್ಮ ಹಳ್ಳಿ ಹುಡುಗರ ಶಕ್ತಿ ಮತ್ತು ತಾಕತ್ತು. ಅಂಥಾ ತಾಕತ್ತಿನ ಮತ್ತೊಬ್ಬ ಹಳ್ಳಿ ಪ್ರತಿಭೆ ಎದ್ದು ಬಂದಿದ್ದಾನೆ. ಸದ್ದು ಮಾಡುತ್ತಿದ್ದಾನೆ.. ಅವಕಾಶವನ್ನೇ ನೀಡದೆ ಖಾಲಿ ಕೂರಿಸಿ ಸದ್ದೇ ಇಲ್ಲದಂತೆ ಮಾಡಿದವರಿಗೆ ಆಟದಿಂದಲೇ ಉತ್ತರ ಕೊಡುತ್ತಿದ್ದಾನೆ. ಮಹಾರಾಜ ಟ್ರೋಫಿ: ಮನೋಜ್‌ ಸ್ಪೋಟಕ ಬ್ಯಾಟಿಂಗ್, ಇನ್ನಾದ್ರೂ ಕನ್ನಡಿಗರಿಗೆ ಚಾನ್ಸ್‌ ಕೊಡ್ರೋ ಎಂದು ಆರ್‌ಸಿಬಿಗೆ ಫ್ಯಾನ್ಸ್ ತರಾಟೆ ಹೆಸರು ಮನೋಜ್ ಭಾಂಡಗೆ. ರಾಯಚೂರಿನ ಹುಡುಗ. . ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್’ನಂತೆ ಬಲಗೈ ಮಧ್ಯಮ ವೇಗಿ, ಎಡಗೈ ದಾಂಡಿಗ. ದೊಡ್ಡ ದೊಡ್ಡ ಸಿಕ್ಸರ್’ಗಳನ್ನು ಬಾರಿಸುವ ಸಿಡಿಲ ಹೊಡೆತಗಳ ಆಟಗಾರ. . ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಆಡಿದ ಮೊದಲ ಎರಡೂ ಪಂದ್ಯಗಳಲ್ಲಿ ಭಾಂಡಗೆ ಆಟವನ್ನು ನೋಡಿದವರು, ಆರ್’ಸಿಬಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಶಿವಮೊಗ್ಗ ವಿರುದ್ಧ 16 ಎಸೆತಗಳಲ್ಲಿ 42 ನಾಟೌಟ್. ಬೆಂಗಳೂರು ವಿರುದ್ಧ 33 ಎಸೆತಗಳಲ್ಲಿ ಅಜೇಯ 58. ಈ ಆರ್’ಸಿಬಿಯವರು ಇಡೀ 2 ವರ್ಷ ತಂಡದಲ್ಲಿಟ್ಟುಕೊಂಡು ಒಂದೂ ಅವಕಾಶ ನೀಡಲಿಲ್ಲವಲ್ಲಾ ಈ ಹುಡುಗನಿಗೆ..? ಮನೋಜ್ ಭಾಂಡಗೆಗೆ ಐಪಿಎಲ್’ನಲ್ಲಿ ಬೆಂಚ್ ಕಾಯಿಸುವುದನ್ನು ಬಿಟ್ಟು ಒಂದೆರಡು ಅವಕಾಶ ನೀಡಿದ್ದರೆ, ತಂಡ ಕಳೆದುಕೊಳ್ಳುವಂಥದ್ದೇನಿತ್ತು..? ಅದ್ಯಾರೋ ಪ್ರಭುದೇಸಾಯಿ, ಅನುಜ್ ರಾವತ್’ನಂಥ ಯಾರೋ ಕೆಲಸಕ್ಕೆ ಬಾರದ ಆಟಗಾರರನ್ನು ಬೆಳೆಸುವ ಬದಲು ನಮ್ಮ ಈ ಹುಡುಗನನ್ನು ಬೆಳೆಸಿದ್ದರೆ ಆರ್’ಸಿಬಿ ತಂಡಕ್ಕೆ ಆಸ್ತಿಯಾಗುತ್ತಿದ್ದ. ಒಂದು ಓವರ್‌ನಲ್ಲಿ 39 ರನ್: ಇಂಟರ್‌ನ್ಯಾಷನಲ್ ಕ್ರಿಕೆಟ್‌ನಲ್ಲಿ 17 ವರ್ಷದ ಯುವರಾಜ್ ಸಿಂಗ್ ರೆಕಾರ್ಡ್‌ ನುಚ್ಚುನೂರು..! ಆರ್’ಸಿಬಿ ಟೀಮ್ ಮ್ಯಾನೇಜ್ಮೆಂಟ್’ಗೆ ಒಂದೇ ಒಂದು ಮನವಿ. ದಯವಿಟ್ಟು ಈ ಮನೋಜ್ ಭಾಂಡಗೆಯನ್ನು ತಂಡದಲ್ಲಿ ಉಳಿಸಿಕೊಳ್ಳಬೇಡಿ.. ನೀವು ಅವನನ್ನು ತಂಡದಿಂದ ರಿಲೀಸ್ ಮಾಡಿದರೆ, ಇನ್ಯಾವುದೋ ತಂಡವನ್ನು ಸೇರಿಕೊಳ್ಳುತ್ತಾನೆ. ಅಲ್ಲಿ ಆತನ ಪ್ರತಿಭೆಗೆ ಬೆಲೆ ಸಿಕ್ಕೇ ಸಿಗುತ್ತದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೂ ಒಂದು ಮನವಿ.. ಈ ಹುಡುಗನನ್ನು ಈ ಬಾರಿ ರಣಜಿ ಟ್ರೋಫಿಯಲ್ಲಿ ಆಡಿಸಿ ಪುಣ್ಯ ಕಟ್ಟಿಕೊಳ್ಳಿ. ಇಲ್ಲವಾದರೆ, ಮತ್ತೊಬ್ಬ ಪ್ರತಿಭಾವಂತನನ್ನು ಕರ್ನಾಟಕ ಕಳೆದುಕೊಳ್ಳಬೇಕಾಗುತ್ತದೆ.