ಭಾರತದಲ್ಲಿ ತಂಡಕ್ಕಿಂತ ವ್ಯಕ್ತಿಯೇ ಮೇಲು: ಸೋಲಿನ ಬೆನ್ನಲ್ಲೇ ಗಂಭೀರ್ ಸಿಡಿಮಿಡಿ ಟೀಂ ಇಂಡಿಯಾ ಸೋಲಿನ ಬೆನ್ನಲ್ಲೇ ಗೌತಮ್ ಗಂಭೀರ್ ಕಿಡಿನಮ್ಮಲ್ಲಿ ತಂಡಕ್ಕಿಂತ ವ್ಯಕ್ತಿ ವೈಭವೀಕರಣವೇ ಮೇಲು ಎಂದ ಗಂಭೀರ್ಕಳೆದೊಂದು ದಶಕದಿಂದ ಐಸಿಸಿ ಟ್ರೋಫಿ ಗೆಲ್ಲಲು ಟೀಂ ಇಂಡಿಯಾ ವಿಫಲ ನವದೆಹಲಿ(ಜೂ.12): ಐಸಿಸಿ ಟೂರ್ನಿಯಲ್ಲಿ ಮತ್ತೆ ಹಳೆ ಕಥೆಯೇ ಮರುಕಳಿಸಿದೆ. ಕಳೆದೊಂದು ದಶಕದಿಂದ ಐಸಿಸಿ ಚಾಂಪಿಯನ್ ಪಟ್ಟ ಟೀಂ ಇಂಡಿಯಾ ಪಾಲಿಗೆ ಕನ್ನಡಿಯೊಳಗಿನ ಗಂಟು ಎನ್ನುವಂತೆ ಭಾಸವಾಗುತ್ತಿದೆ. ಲಂಡನ್‌ನ ದಿ ಓವಲ್ ಮೈದಾನದಲ್ಲಿ ನಡೆದ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ಎದುರು ಗೆಲುವು ಸಾಧಿಸುವ ಮೂಲಕ ಐಸಿಸಿ ಪ್ರಶಸ್ತಿ ಬರ ನೀಗಿಸಿಕೊಳ್ಳಲಿದೆ ಎನ್ನುವ ನಿರೀಕ್ಷೆ ಕೂಡಾ ಹುಸಿಯಾಗಿದೆ. ಭಾರತದ ಎದುರು ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು 209 ರನ್ ಅಂತರದ ಗೆಲುವು ದಾಖಲಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇನ್ನು ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ರನ್ನರ್ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಐಸಿಸಿ ಟ್ರೋಫಿಗಾಗಿ ನಿಲ್ಲದ ಭಾರತದ ಹುಡುಕಾಟ! ಭಾರತ ಐಸಿಸಿ ಫೈನ​ಲ್‌​ನಲ್ಲಿ ಎಡ​ವು​ತ್ತಿ​ರು​ವುದು ಇದೇ ಮೊದ​ಲೇ​ನಲ್ಲ. ತಂಡಕ್ಕೆ ಒಂದು ದಶಕದಿಂದ ಸೋಲಿನ ಸರಪಳಿ ಕಳಚಲು ಸಾಧ್ಯವಾಗಿಲ್ಲ. 2013ರಲ್ಲಿ ಕೊನೆ ಬಾರಿ ಚಾಂಪಿ​ಯನ್ಸ್‌ ಟ್ರೋಫಿ ಗೆದ್ದಿದ್ದ ಭಾರತ ಈ ಬಳಿಕ ಐಸಿಸಿ ಟೂರ್ನಿ​ಗ​ಳಲ್ಲಿ ಸೆಮೀಸ್‌ ಅಥವಾ ಫೈನ​ಲ್‌​ನಲ್ಲಿ ಮುಗ್ಗ​ರಿ​ಸಿದೆ. ಧೋನಿ ನಾಯ​ಕ​ತ್ವ​ದಲ್ಲಿ 2014ರ ಟಿ20 ವಿಶ್ವಕಪ್‌ನಲ್ಲಿ ರನ್ನರ್‌-ಅಪ್‌ ಆಗಿದ್ದ ತಂಡ 2015ರ ಏಕದಿನ ವಿಶ್ವಕಪ್‌ ಹಾಗೂ 2016ರ ಟಿ20 ವಿಶ್ವಕಪ್‌ನ ಸೆಮೀ​ಸ್‌​ನಲ್ಲಿ ಸೋತಿತ್ತು. ಬಳಿಕ ಕೊಹ್ಲಿ ನಾಯ​ಕ​ತ್ವ​ದಡಿ 2017ರ ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌, 2019ರ ಏಕದಿನ ವಿಶ್ವಕಪ್‌ ಸೆಮೀಸ್‌ ಹಾಗೂ 2021ರ ಟೆಸ್ಟ್‌ ವಿಶ್ವಕಪ್‌ ಫೈನಲ್‌ನಲ್ಲಿ ಪರಾಭವ​ಗೊಂಡಿದೆ. ಬಳಿಕ 2022ರ ಟಿ20 ವಿಶ್ವಕಪ್‌ ಸೆಮೀಸ್‌, 2023ರ ಟೆಸ್ಟ್‌ ವಿಶ್ವಕಪ್‌ ಫೈನಲ್‌ನಲ್ಲಿ ಸೋತಿದೆ. ಈ ಎರಡೂ ಟೂರ್ನಿಗೆ ರೋಹಿತ್‌ ನಾಯ​ಕ​ರಾ​ಗಿ​ದ್ದ​ರು. ಸೋಲಿನ ಬೆನ್ನಲ್ಲೇ 3 ಪಂದ್ಯಗಳ ಫೈನಲ್ ಸಲಹೆ ಕೊಟ್ಟ ರೋಹಿತ್ ಶರ್ಮಾ..! ಆಸೀಸ್ ನಾಯಕ ತಿರುಗೇಟು ಇನ್ನು ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸುತ್ತಿದ್ದಂತೆಯೇ, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಗೌತಮ್‌ ಗಂಭೀರ್, ತಂಡದ ವಾತಾವರಣದ ಕುರಿತಂತೆ ಕಿಡಿಕಾರಿದ್ದು, ಭಾರತದಲ್ಲಿ ತಂಡಕ್ಕಿಂತ ವ್ಯಕ್ತಿಯ ವೈಭವೀಕರಣವೇ ಮೇಲು ಎನ್ನುವಂತಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. "ಭಾರತದಲ್ಲಿ ತಂಡವೇ ಶ್ರೇಷ್ಠ ಎನ್ನುವಂತಹ ಸಂಪ್ರದಾಯವಿಲ್ಲ. ನಮ್ಮಲ್ಲಿ ತಂಡಕ್ಕಿಂತ ಆಟಗಾರನಿಗೇ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಆದರೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಇಂಗ್ಲೆಂಡ್‌ನಂತಹ ದೇಶಗಳಲ್ಲಿ ಆಟಗಾರನಿಗಿಂತ ತಂಡಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂದು ಗೌತಿ ಹೇಳಿದ್ದಾರೆ. ಟೆಸ್ಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆಲ್ಲಲು 444 ರನ್‌ಗಳ ಕಠಿಣ ಗುರಿ ಪಡೆದ ಟೀಂ ಇಂಡಿಯಾ, ಗೆಲುವಿನ ಗೆರೆ ದಾಟಲು ವಿಫಲವಾಯಿತು. ಭಾರತ ಪರ ಯಾವೊಬ್ಬ ಬ್ಯಾಟರ್ ಸಹಾ ಎರಡು ಇನಿಂಗ್ಸ್‌ನಲ್ಲೂ ಮೂರಂಕಿ ಮೊತ್ತ ದಾಖಲಿಸಲು ಸಫಲವಾಗಲಿಲ್ಲ. ಇನ್ನು ಎರಡನೇ ಇನಿಂಗ್ಸ್‌ ವಿರಾಟ್ ಕೊಹ್ಲಿ 49 ರನ್ ಬಾರಿಸಿದ್ದೇ, ಭಾರತ ಪರ ದಾಖಲಾದ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿಕೊಂಡಿತು. ಇನ್ನು ಅಜಿಂಕ್ಯ ರಹಾನೆ(46) ಹಾಗೂ ನಾಯಕ ರೋಹಿತ್ ಶರ್ಮಾ(43) ಉತ್ತಮ ಆರಂಭವನ್ನು ಪಡೆದರಾದರೂ, ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲರಾದರು. ಇದು ಪಂದ್ಯದ ಫಲಿತಾಂಶದ ಮೇಲೂ ಪರಿಣಾಮ ಬೀರಿತು.