ಗೆದ್ದ ಪದಕಗಳನ್ನು ಹರಿದ್ವಾರದಲ್ಲಿ ಗಂಗಾ ನದಿಗೆ ಎಸೆಯಲಿರುವ ಕುಸ್ತಿಪಟುಗಳು! ದೆಹಲಿಯಲ್ಲಿ ಪ್ರತಿಭಟನಾನಿರತ ಕುಸ್ತಿಪಟುಗಳು, ಇಂದು ಸಂಜೆ 6 ಗಂಟೆಗೆ ತಾವು ಗೆದ್ದ ಪದಕಗಳನ್ನು ಹರಿದ್ವಾರದಲ್ಲಿ ಗಂಗಾ ನದಿಗೆ ಎಸೆಯುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನವದೆಹಲಿ (ಮೇ. 30):ಕುಸ್ತಿಪಟುಗಳ ಪ್ರತಿಭಟನೆ ಇನ್ನೊಂದು ಹಂತಕ್ಕೆ ಹೋಗಿದ್ದು, ತಾವು ಗೆದ್ದ ಪದಕಗಳನ್ನು ಇಂದು ಹರಿದ್ವಾರದ ಗಂಗಾನದಿಯಲ್ಲಿ ಎಸೆಯುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆ ಬಳಿಕ ಇಂಡಿಯಾ ಗೇಟ್‌ನಲ್ಲಿ ಅನಿರ್ಧಿಷ್ಟಾವಧಿ ಧರಣಿಗೆ ಕುಳಿತುಕೊಳ್ಳುವುದಾಗಿ ಪ್ರಕಟಣೆ ನೀಡುವ ಮೂಲಕ ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಇಂದು ಸಂಜೆ 6 ಗಂಟೆಗೆ ಪದಕಗಳನ್ನು ನದಿಯಲ್ಲಿ ವಿಸರ್ಜನೆ ಮಾಡುವುದಾಗಿ ತಿಳಿಸಿದ್ದಾರೆ.ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಲೈಂಗಿಕ ದೌರ್ಜನ್ಯ ಮಾಡಿದ್ದ ಕುಸ್ತಿಪಟುಗಳನ್ನು ಅವರನ್ನು ಫೆಡರೇಷನ್‌ನಿಂದಲೇ ಹೊರಹಾಕುವಂತೆ ಕಳೆದ ಕೆಲವು ತಿಂಗಳುಗಳಿಂದ ಒತ್ತಾಯ ಮಾಡುತ್ತಿದ್ದಾರೆ. ಸರ್ಕಾರ ಗಮನ ನೀಡದ ಹಿನ್ನಲೆಯಲ್ಲಿ ಅವರು ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆಗೆ ಇಳಿದಿದ್ದರು. ನೂತನ ಸಂಸತ್‌ ಭವನ ಉದ್ಘಾಟನೆಯ ದಿನದ ವೇಳೆ ಹೊಸ ಸಂಸತ್‌ಗೆ ಮುತ್ತಿಗೆ ಹಾಕುವ ವೇಳೆ ದೆಹಲಿ ಪೊಲೀಸರು ರೆಸ್ಲರ್‌ಗಳನ್ನು ಬಂಧಿಸಿದ್ದರು. ಇದರ ಬೆನ್ನಲ್ಲಿಯೇ ತಾವು ಗೆದ್ದ ಪದಕಗಳನ್ನು ಗಂಗಾ ನದಿಗೆ ಎಸೆಯುವುದಾಗಿ ಕುಸ್ತಿಪಟುಗಳು ತಿಳಿಸಿದ್ದಾರೆ. ಪದಕಗಳನ್ನು ಇಂದು ಸಂಜೆ ಗಂಗಾ ನದಿಗೆ ಎಸೆದ ಬಳಿಕ ಇಂಡಿಯಾ ಗೇಟ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರತಾಗಿ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ವಿನೇಶ್‌ ಪೋಗಟ್‌ ಇಂದು ಸಂಜೆ ನಾವೆಲ್ಲರೂ ಹರಿದ್ವಾರಕ್ಕೆ ತೆರಳಿ ಗಂಗಾನದಿಯಲ್ಲಿ ಪದಕವನ್ನು ಎಸೆಯುವ ತೀರ್ಮಾನ ಮಾಡಿದ್ದೇವೆ. ಆ ಬಳಿಕ ಇಂಡಿಯಾ ಗೇಟ್‌ನಲ್ಲಿ ಸಾಯುವವರೆಗೂ ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ ಎಂದಿದ್ದಾರೆ. ರೆಸ್ಲರ್‌ಗಳು ಹಾಗೂ ಪೊಲೀಸರ ನಡುವಿನ ಹೋರಾಟದ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌, ಜಂತರ್‌ ಮಂತರ್‌ನಲ್ಲಿ ನಿಯೋಜಿತ ಪ್ರದೇಶದಲ್ಲಿ ಇವರೆಲ್ಲರೂ ಹೋರಾಟ ಮಾಡಬೇಕು. ಅವರ ಹೋರಾಟದಲ್ಲಿ ಯಾವುದೇ ಹಸ್ತಕ್ಷೇಪ ಮಾಡೋದಿಲ್ಲ ಎಂದು ಹೇಳಿದ್ದರು. ಭಾನುವಾರ, ದೆಹಲಿ ಪೊಲೀಸರು ವಿನೇಶ್ ಫೋಗಟ್, ಬಜರಂಗ್ ಪೂನಿಯಾ, ಸಂಗೀತಾ ಫೋಗಟ್, ಸಾಕ್ಷಿ ಮಲಿಕ್ ಮತ್ತು ಮಹಿಳೆಯರ "ಮಹಾಪಂಚಾಯತ್" ಗಾಗಿ ಹೊಸ ಸಂಸತ್ತಿನ ಕಟ್ಟಡಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದರು. ಈ ವೇಳೆ ಅವರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದರು. ಪಾರ್ಲಿ​ಮೆಂಟ್‌ ಮುತ್ತಿ​ಗೆಗೆ ಯತ್ನಿ​ಸಿ​ದ್ದ ಕುಸ್ತಿಪಟುಗಳ ವಿರು​ದ್ಧ ಎಫ್‌ಐಆರ್‌!ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಏಪ್ರಿಲ್ 23 ರಿಂದ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳನ್ನು ಭಾನುವಾರ ತಾತ್ಕಾಲಿಕವಾಗಿ ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು. ಅಧಿಕಾರಿಗಳ ಪ್ರಕಾರ, ನೂತನ ಸಂಸತ್ ಭವನದ ಉದ್ಘಾಟನೆಯ ವೇಳೆ ಗಲಾಟೆ ಉಂಟು ಮಾಡುವುದು ರಾಷ್ಟ್ರದ ಪ್ರತಿಷ್ಠೆಗೆ ಧಕ್ಕೆ ತರುತ್ತದೆ ಮತ್ತು ಅದನ್ನು ಒಪ್ಪಲಾಗದು ಎಂಬ ಪೊಲೀಸರ ಎಚ್ಚರಿಕೆಯನ್ನು ಪ್ರತಿಭಟನಾ ನಿರತ ಕುಸ್ತಿಪಟುಗಳು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪರಿಣಾಮವಾಗಿ, ಅವರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ. ಕುಸ್ತಿಪಟುಗಳ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಲ್ಲ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ