'ಕೊಹ್ಲಿ ಅಂಕಲ್‌, ವಮಿಕಾನ ಡೇಟ್‌ಗೆ ಕಳಿಸ್ತೀರಾ?' ಪ್ಲಕಾರ್ಡ್‌ ಹಿಡಿದ ಪುಟಾಣಿ, ಪಾಲಕರ ಕೀಳು ಪ್ರಚಾರ ಪ್ರಶ್ನಿಸಿದ ನೆಟ್ಟಿಗರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್‌ವಿರಾಟ್ ಕೊಹ್ಲಿ ಪುತ್ರಿಗೆ ಡೇಟ್‌ಗೆ ಕರೆದ ಪುಟಾಣಿ ಬಾಲಕಬಾಲಕನ ಪೋಷಕರಿಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು ಬೆಂಗಳೂರು(ಏ.18): ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳ ನಡುವಿನ ಹೈವೋಲ್ಟೇಜ್‌ ಪಂದ್ಯವು ಸಾಕಷ್ಟು ರೋಚಕತೆ ಹಾಗೂ ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಯಿತು. ಇನ್ನು ಪಂದ್ಯದ ವೇಳೆ ಪುಟಾಣಿ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿ ಪುತ್ರಿ ಕುರಿತಂತೆ ಹಿಡಿದ ಪ್ಲಕಾರ್ಡ್‌ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೋಷಕರಿಗೆ ನೆಟ್ಟಿಗರು ಶಿಸ್ತಿನ ಪಾಠ ಮಾಡಿದ್ದಾರೆ. ಹೌದು, ಇಲ್ಲಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್‌ ಅಭಿಮಾನಿಗಳು ಸ್ಟೇಡಿಯಂನಲ್ಲಿ ಕಿಕ್ಕಿರಿದು ತುಂಬಿದ್ದರು. ಸ್ಟೇಡಿಯಂನಲ್ಲಿ ಆರ್‌ಸಿಬಿ ಹಾಗೂ ಚೆನ್ನೈ ಅಭಿಮಾನಿಗಳು ತಮ್ಮ ತಮ್ಮ ನೆಚ್ಚಿನ ತಂಡವನ್ನು ಹುರಿದುಂಬಿಸಲು, ಜೆರ್ಸಿಗಳನ್ನು ತೊಟ್ಟು, ಬಾವುಟ ಹಿಡಿದು ಮೈದಾನಕ್ಕೆ ಆಗಮಿಸಿದ್ದರು. ಇನ್ನು ಇವೆಲ್ಲದರ ನಡುವೆ ಓರ್ವ ಪೋಷಕರು ಕೀಳು ಅಭಿರುಚಿಯ ಪ್ರಚಾರಕ್ಕಾಗಿ ತಮ್ಮ ಪುಟ್ಟ ಮಗುವಿನ ಕೈಯಲ್ಲಿ " ಹಾಯ್ ವಿರಾಟ್ ಅಂಕಲ್, ನಾನು ವಮಿಕಾ ಅವರನ್ನು ಡೇಟ್‌ ಮಾಡಲು ಕರೆದುಕೊಂಡು ಹೋಗಬಹುದೇ? ಎನ್ನುವ ಪ್ಲಕಾರ್ಡ್‌ ಹಿಡಿಸಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೇ ವೈರಲ್ ಆಗಿದೆ. 2023: ಚೆನ್ನೈ ಎದುರು ಸೋಲಿನ ಬೆನ್ನಲ್ಲೇ ವಿರಾಟ್‌ ಕೊಹ್ಲಿಗೆ ಶಾಕ್ ನೀಡಿದ ಬಿಸಿಸಿಐ..! ಇನ್ನು ಏನೂ ಅರಿಯದ ಮುಗ್ದ ಬಾಲಕನ ಕೈಯಲ್ಲಿ ಕೇವಲ ಪ್ರಚಾರಕ್ಕಾಗಿ ಈ ರೀತಿಯ ಪ್ಲಕಾರ್ಡ್‌ ಹಿಡಿಸಿದ ಪೋಷಕರ ವಿರುದ್ದ ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಪೂಜಾ ತ್ರಿಪಾಠಿ, "ನಾನು ಒಂದು ವೇಳೆ ವಮಿಕಾ ಪೋಷಕರಾಗಿದ್ದರೇ, ಖಂಡಿತವಾಗಿಯೂ ಈ ಪೋಸ್ಟ್ ನೋಡಿ ಸಿಟ್ಟಾಗುತ್ತಿದ್ದೆ. ಇನ್ನು ಪೋಷಕರಾದರವರು ಈ ರೀತಿ ಗಮನ ಸೆಳೆಯಲು ನಿಮ್ಮ ತೆವಲಿಗಾಗಿ ಮಕ್ಕಳನ್ನು ಬಳಸಿಕೊಳ್ಳಬೇಡಿ ಎಂದು ಕಿಡಿಕಾರಿದ್ದಾರೆ. ಇನ್ನೋರ್ವ ನೆಟ್ಟಿಗ, ನಿನ್ನ ಪೋಷಕರು ಎರಡು ನಿಮಿಷ ಗಮನ ತಮ್ಮತ್ತ ಸೆಳೆಯಲು ಈ ರೀತಿ ಮಾಡಿರಬಹುದು. ಆದರೆ ಯಾವುದೇ ರೀತಿಯಿಂದ ನೋಡಿದರೂ ಸರಿಯಲ್ಲ. ಎಲ್ಲವನ್ನು ತಮಾಷೆಯಾಗಿಯೇ ನೋಡಬಾರದು. ಎಂಥಹ ಪೋಷಕರಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ ದಯವಿಟ್ಟು ವಮಿಕಾ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ಈ ಮಗು ಕೈಯಲ್ಲಿ ಏನು ಹಿಡಿದುಕೊಂಡಿದ್ದಾನೆ ಎಂದು ಆತನಿಗೆ ಗೊತ್ತಿಲ್ಲವೇನೋ. ಪ್ರಚಾರಕ್ಕಾಗಿ ಜನರು ಹೀಗೆಲ್ಲಾ ಮಾಡುತ್ತಾರೆ ಎಂದು ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಆರ್‌ಸಿಬಿ ವರ್ಸಸ್‌ ಸಿಎಸ್‌ಕೆ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೇ, ಮೊದಲು ಬ್ಯಾಟ್‌ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ನಿಗದಿತ 20 ಓವರ್‌ಗಳಲ್ಲಿ ಡೆವೊನ್‌ ಕಾನ್‌ವೇ(83) ಹಾಗೂ ಶಿವಂ ದುಬೆ(52) ಸ್ಪೋಟಕ ಅರ್ಧಶತಕದ ನೆರವಿನಿಂದ 6 ವಿಕೆಟ್ ಕಳೆದುಕೊಂಡು 226 ರನ್ ಕಲೆಹಾಕಿತು. ಇನ್ನು ಸವಾಲಿನ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಮೊದಲ ಓವರ್‌ನಲ್ಲೇ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿತು. ಎರಡನೇ ಓವರ್‌ ಅಂತ್ಯದ ವೇಳೆಗೆ ಮಹಿಪಾಲ್ ಲೋಮ್ರಾರ್ ಕೂಡಾ ಪೆವಿಲಿಯನ್ ಸೇರಿದರು. 15 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿದ್ದ ಆರ್‌ಸಿಬಿ ತಂಡಕ್ಕೆ ಮೂರನೇ ವಿಕೆಟ್‌ಗೆ ನಾಯಕ ಫಾಫ್ ಡು ಪ್ಲೆಸಿಸ್‌ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್‌ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ಈ ಇಬ್ಬರ ವಿಕೆಟ್ ಪತನವಾಗುತ್ತಿದ್ದಂತೆಯೇ ನಾಟಕೀಯ ಕುಸಿತ ಕಾಣುವ ಮೂಲಕ ಆರ್‌ಸಿಬಿ 8 ವಿಕೆಟ್ ಕಳೆದುಕೊಂಡು 218 ರನ್ ಗಳಿಸಲಷ್ಟೇ ಶಕ್ತವಾಯಿತು.