ಟೈಟಾನ್ಸ್ ಎದುರು ತೊಡೆ ತಟ್ಟಿ ಗೆದ್ದ ಬೆಂಗಳೂರು ಬುಲ್ಸ್ ಮತ್ತೊಂದು ಭರ್ಜರಿ ಜಯ ಸಾಧಿಸಿದ ಬೆಂಗಳೂರು ಬುಲ್ಸ್ತೆಲುಗು ಟೈಟಾನ್ಸ್ ಎದುರು 38-49 ಅಂಕಗಳ ಗೆಲುವು ಸಾಧಿಸಿದ ಬುಲ್ಸ್ ಒಡೆಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಬೆಂಗಳೂರು ಗೂಳಿಗಳು ಪುಣೆ(ನ.16): ಬೆಂಗಳೂರು ಬುಲ್ಸ್‌ 9ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಜಯದ ಓಟ ಮುಂದುವರಿಸಿದ್ದು, ತೆಲುಗು ಟೈಟಾನ್ಸ್‌ ತಂಡವನ್ನು ಮಂಗಳವಾರ 49-38ರ ಅಂತರದಲ್ಲಿ ಬಗ್ಗುಬಡಿದು ಮತ್ತೊಮ್ಮೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅಗ್ರಸ್ಥಾನಕ್ಕಾಗಿ ಪುಣೇರಿ ಪಲ್ಟನ್‌ ಜೊತೆ ಪೈಪೋಟಿ ನಡೆಸುತ್ತಿರುವ ಬುಲ್ಸ್‌ ಸದ್ಯ 14 ಪಂದ್ಯಗಳಲ್ಲಿ 9 ಜಯದೊಂದಿಗೆ 51 ಅಂಕ ಗಳಿಸಿದೆ. ಪುಣೇರಿ 14 ಪಂದ್ಯಗಳಲ್ಲಿ 8 ಜಯದೊಂದಿಗೆ 49 ಅಂಕ ಗಳಿಸಿ 2ನೇ ಸ್ಥಾನದಲ್ಲಿದೆ. ಬೆಂಗಳೂರು ಬುಲ್ಸ್‌ ಮೊದಲಾರ್ಧದ ಮುಕ್ತಾಯಕ್ಕೆ 18-19ರಿಂದ ಹಿನ್ನಡೆ ಅನುಭವಿಸಿದರೂ, ದ್ವಿತೀಯಾರ್ಧದಲ್ಲಿ ಟೈಟಾನ್ಸ್‌ ಪಡೆಯನ್ನು 2 ಬಾರಿ ಆಲೌಟ್‌ ಮಾಡಿ ಪ್ರಾಬಲ್ಯ ಸಾಧಿಸಿತು. ಭರತ್‌ 16 ರೈಡ್‌ ಅಂಕ ಗಳಿಸಿದರೆ, ನೀರಜ್‌ 11 ರೈಡ್‌ ಅಂಕ ಪಡೆದು ಜಯಕ್ಕೆ ನೆರವಾದರು. ದಿನದ ಮೊದಲ ಪಂದ್ಯದಲ್ಲಿ ಜೈಪುರ 32-22ರಿಂದ ಯು ಮುಂಬಾ ವಿರುದ್ಧ ಜಯಿಸಿತು. ಇಂದಿನ ಪಂದ್ಯಗಳು:ಪಾಟ್ನಾ-ತಲೈವಾಸ್‌, ಸಂಜೆ 7.30ಕ್ಕೆ,ಡೆಲ್ಲಿ-ಯು.ಪಿ.ಯೋಧಾಸ್‌, ರಾತ್ರಿ 8.30ಕ್ಕೆ ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್‌ ಕೂಟ: ಕೊನೆ ದಿನ ರಾಜ್ಯಕ್ಕೆ 8 ಪದಕ! ಗುವಾಹಟಿ: 37ನೇ ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್‌ ಕೂಟವನ್ನು ಕರ್ನಾಟಕ ಯಶಸ್ವಿಯಾಗಿದೆ ಮುಕ್ತಾಯಗೊಳಿಸಿದೆ. ಕೂಟದ ಕೊನೆಯ ದಿನವಾದ ಮಂಗಳವಾರ ರಾಜ್ಯದ ಅಥ್ಲೀಟ್‌ಗಳು 8 ಪದಕ ಗೆದ್ದರು. ಕೂಟದಲ್ಲಿ ಕರ್ನಾಟಕ ಒಟ್ಟು 7 ಚಿನ್ನ, 4 ಬೆಳ್ಳಿ, 5 ಕಂಚು ಜಯಿಸಿತು. ಮಂಗಳವಾರ ಅಂಡರ್‌-18 ಬಾಲಕಿಯರ 400 ಮೀ. ಹರ್ಡಲ್ಸ್‌ನಲ್ಲಿ ಶ್ರೇಯಾ, ಅಂಡರ್‌-20 ಪುರುಷರ ಟ್ರಿಪಲ್‌ ಜಂಪ್‌ನಲ್ಲಿ ಅಖಿಲೇಶ್‌ ಚಿನ್ನದ ಪದಕ ಗೆದ್ದರು. ಅಂಡರ್‌-20 ಮಹಿಳೆಯರ 200 ಮೀ. ಓಟದಲ್ಲಿ ನಯನಾ, ಅಂಡರ್‌-18 ಬಾಲಕಿಯರ ಹೈಜಂಪ್‌ನಲ್ಲಿ ಗೌತಮಿ ಬೆಳ್ಳಿ ಜಯಿಸಿದರು. ಅಂಡರ್‌-20 ಪುರುಷರ 5000 ಮೀ. ಓಟದಲ್ಲಿ ನರಸಿಂಗ್‌ ಪಟೇಲ್‌ ಬೆಳ್ಳಿ ಪದಕ ಗೆದ್ದರೆ, ಅರುಣ್‌ ಶಂಕರ್‌ ಕಂಚಿಗೆ ತೃಪ್ತಿಪಟ್ಟರು. ಅಂಡರ್‌-16 ಬಾಲಕಿಯರ 800 ಮೀ. ಓಟದಲ್ಲಿ ರೀತು ಶ್ರೀ, ಅಂಡರ್‌-16 ಬಾಲಕಿಯರ 2000 ಮೀ. ಓಟದಲ್ಲಿ ಪ್ರಣತಿ ಕಂಚಿನ ಪದಕ ಪಡೆದರು. ಮ್ಯಾಂಚೆಸ್ಟರ್‌ ಯುನೈಟೆಡ್‌ನಿಂದ ಮೋಸವಾದಂತೆ ಅನಿಸಿದೆ, ರೊನಾಲ್ಡೊ ಸ್ಫೋಟಕ ಹೇಳಿಕೆ! ಉನ್ನತಿ ಶ್ರೇಷ್ಠ ಅಥ್ಲೀಟ್‌:ಅಂಡರ್‌-18 ಬಾಲಕಿಯರ ವಿಭಾಗದಲ್ಲಿ ಕರ್ನಾಟಕದ ಉನ್ನತಿ ಅಯ್ಯಪ್ಪ ಶ್ರೇಷ್ಠ ಅಥ್ಲೀಟ್‌ ಗೌರವಕ್ಕೆ ಪಾತ್ರರಾದರು. ಉನ್ನತಿ 100 ಮೀ. ಹರ್ಡಲ್ಸ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಭಾರತ ಹಾಕಿ ತಂಡದಲ್ಲಿ ರಾಜ್ಯದ ರಾಹೀಲ್‌ಗೆ ಸ್ಥಾನ ನವದೆಹಲಿ: ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್‌ಗೆ ಸಿದ್ಧತೆ ನಡೆಸುವ ಉದ್ದೇಶದಿಂದ ಭಾರತ ಪುರುಷರ ಹಾಕಿ ತಂಡ ಈ ತಿಂಗಳಾಂತ್ಯದಲ್ಲಿ ಆಸ್ಪ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, 5 ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಗೆ ಮಂಗಳವಾರ ಹಾಕಿ ಇಂಡಿಯಾ ತಂಡವನ್ನು ಪ್ರಕಟಿಸಿತು. ತಂಡದಲ್ಲಿ ಕರ್ನಾಟಕದ ಯುವ ಆಟಗಾರ ಮೊಹಮದ್‌ ರಾಹೀಲ್‌ ಸ್ಥಾನ ಪಡೆದಿದ್ದಾರೆ. ಡ್ರ್ಯಾಗ್‌ ಫ್ಲಿಕರ್‌ ಹರ್ಮನ್‌ಪ್ರೀತ್‌ ಸಿಂಗ್‌ ತಂಡವನ್ನು ಮುನ್ನಡೆಸಲಿದ್ದಾರೆ. ನ.26ರಿಂದ ಸರಣಿ ಆರಂಭಗೊಳ್ಳಲಿದೆ. ಆಸ್ಪ್ರೇಲಿಯನ್‌ ಓಪನ್‌: ಜೋಕೋಗೆ ಹಸಿರು ನಿಶಾನೆ ಮೆಲ್ಬರ್ನ್‌: ನೋವಾಕ್‌ ಜೋಕೋವಿಚ್‌ 2023ರ ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಆಡುವುದು ಖಚಿತವಾಗಿದೆ. ಅವರಿಗೆ ಆಸ್ಪ್ರೇಲಿಯಾ ಸರ್ಕಾರ ವೀಸಾ ನೀಡಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕೋವಿಡ್‌ ಲಸಿಕೆ ಪಡೆಯದ ಜೋಕೋವಿಚ್‌ರನ್ನು ಕಳೆದ ವರ್ಷ ಮೆಲ್ಬರ್ನ್‌ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿತ್ತು. ಬಳಿಕ ಅವರನ್ನು ಗಡಿಪಾರು ಮಾಡಲಾಗಿತ್ತು. ಆಸ್ಪ್ರೇಲಿಯಾ ಸರ್ಕಾರ ಕೋವಿಡ್‌ ಲಸಿಕೆ ನಿಯಮವನ್ನು ಸಡಿಲಗೊಳಿಸಿರುವ ಹಿನ್ನೆಲೆಯಲ್ಲಿ ಜೋಕೋ ಸ್ಪರ್ಧೆಗೆ ಹಸಿರು ನಿಶಾನೆ ಸಿಕ್ಕಿದೆ.