ಅವಳಿ ಬಾಲಕಿಯರ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಚೆಸ್ ಗ್ರ್ಯಾಂಡ್‌ ಮಾಸ್ಟರ್ ಆನಂದ್‌: ವಿಡಿಯೋ ನೋಡಿ ಐದು ಬಾರಿ ಚೆಸ್ ವಿಶ್ವ ಚಾಂಪಿಯನ್ ಆಗಿರುವ ವಿಶ್ವನಾಥನ್ ಆನಂದ್ ಅವರು ಮಕ್ಕಳ ಎಡವಟ್ಟಿನ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಘಟನೆ ಚೆನ್ನೈನಲ್ಲಿ ನಡೆದಿದೆ. ಐದು ಬಾರಿ ಚೆಸ್ ವಿಶ್ವ ಚಾಂಪಿಯನ್ ಆಗಿರುವ ವಿಶ್ವನಾಥನ್ ಆನಂದ್ ಅವರು ಮಕ್ಕಳ ಎಡವಟ್ಟಿನ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಘಟನೆ ಚೆನ್ನೈನಲ್ಲಿ ನಡೆದಿದೆ. ಚೆನ್ನೈನಲ್ಲಿ ಚೆಸ್‌ ಒಲಿಂಪಿಯಾಡ್‌ 2022 ನಡೆಯುತ್ತಿದ್ದು, ಇದೇ ಕಾರ್ಯಕ್ರಮದ ಭಾಗವಾದ ಸಂವಾದದಲ್ಲಿ ಮಕ್ಕಳು ಪ್ರಶ್ನೆಯೊಂದನ್ನು ಕೇಳಿದ್ದು, ಈ ವೇಳೆ ಮಕ್ಕಳ ಪ್ರಶ್ನೆಗೆ ಒಂದು ಕಾಲದ ಚೆಸ್‌ ಚಾಂಪಿಯನ್ ಆಗಿರುವ ವಿಶ್ವನಾಥನ್ ಆನಂದ್ ಗೊಂದಲಕ್ಕೀಡಾಗಿ ತಡವರಿಸಿದ ಘಟನೆ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಕ್ಕಳೇ ಹಾಗೆ ಉತ್ತರಿಸಿದಷ್ಟು ಹೊಸ ಹೊಸ ಕುತೂಹಲಗಳು ಅವರನ್ನು ಕಾಡುತ್ತವೆ. ಮಕ್ಕಳ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸುವುದು ಬಲು ಕಷ್ಟದ ಕೆಲಸ. ಕೆಲವೊಮ್ಮ ಮನೆಯಲ್ಲೇ ಮಕ್ಕಳ ಈ ಎಡವಟ್ಟು ಪ್ರಶ್ನೆಗಳಿಗೆ ಉತ್ತರಿಸಲಾಗದೇ ಪೋಷಕರು ಸರಿಯಾಗಿ ಎರಡು ಬೈದು ಕಳುಹಿಸುವುದನ್ನು ಮಾಡುತ್ತಾರೆ. ಆದರೆ ಇಲ್ಲಿ ಚೆಸ್ ಮಾಸ್ಟರ್ ಹಾಗೆ ಮಾಡುವಂತಿಲ್ಲ. ಪ್ರಶ್ನೆ ಕೇಳುವ ಮೊದಲು ಮಕ್ಕಳಿಬ್ಬರು ಗಹನವಾಗಿ ಗುಸು ಗುಸು ಮಾಡುತ್ತಾ ಚರ್ಚಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಅನುರಾಧ್‌ ಬೇನಿವಲ್ ಎಂಬುವವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಎಂಟು ವರ್ಷ ಪ್ರಾಯದ ಅವಳಿ ಸಹೋದರಿಯರು ವಿಶ್ವನಾಥನ್ ಆನಂದ್ ಅವರನ್ನು ಗೊಂದಲಕ್ಕೀಡು ಮಾಡಲು ಪಿತೂರಿ ಮಾಡಿದ್ದಾರೆ ಎಂದು ಹಾಸ್ಯಾಸ್ಪದವಾಗಿ ಅವರು ಬರೆದುಕೊಂಡಿದ್ದಾರೆ. ಜೊತೆಗೆ ವಿಶ್ವನಾಥ್ ಆನಂದ್ ಅವರಿಗೆ ಈ ಟ್ವಿಟ್‌ನ್ನು ಟ್ಯಾಗ್ ಮಾಡಿದ್ದಾರೆ. ಈ ವಿಡಿಯೋವನ್ನು ವಿಶ್ವನಾಥ್ ಆನಂದ್ ಅವರು ಕೂಡ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು ಕ್ವೆಶ್ಚನ್ ಆಫ್ ದ ಇಯರ್ ಎಂದು ಬರೆದುಕೊಂಡಿದ್ದಾರೆ. ಪ್ರಸ್ತುತ ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ವಿಶ್ವನಾಥ್ ಆನಂದ್ ಅವರು ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, 2022 ರ ಚೆಸ್‌ ಒಲಿಂಪಿಯಾಡ್‌ ನಲ್ಲಿ ಆಟವಾಡದಿರಲು ನಿರ್ಧರಿಸಿದ್ದಾರೆ. ತಮಿಳುನಾಡಿನ ಮಮಲ್ಲಪುರಂನಲ್ಲಿ 2022ರ ಚೆಸ್‌ ಒಲಿಂಪಿಯಾಡ್‌ ನಡೆಯುತ್ತಿದೆ. ಆಟದಲ್ಲಿ ಭಾಗವಹಿಸದಿದ್ದರೂ ಆನಂದ್‌ಗೆ ಈ ಒಲಿಂಪಿಯಾಡ್ ಸುಲಭ ಎನಿಸಿಲ್ಲ. ಇದಕ್ಕೆ ಕಾರಣ ಮಕ್ಕಳ ಕಿತಾಪತಿ. ನಿರಾಯಾಸವಾಗಿ ಗೆದ್ದ ಭಾರತದ ಆರೂ ತಂಡಗಳು! ಪರಸ್ಪರ ಗಂಭಿರವಾಗಿ ಚರ್ಚಿಸಿದ ಇಬ್ಬರು ಸಹೋದರಿಯರು ನಂತರ ಮೈಕ್ ತೆಗೆದುಕೊಂಡು ಆನಂದ್ ಅವರ ಬಳಿ ಚೆಸ್‌ ಕಾಯಿಗಳನ್ನು ಅತ್ತಿತ್ತ ಮಾಡುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಆನಂದ್‌ ಅವರು ಉತ್ತರಿಸಲು ಮೈಕ್ ತೆಗೆದುಕೊಂಡು ವಿರೋಧಿಯನ್ನು ಹೇಗೆ ವಿಚಲಿತಗೊಳಿಸುವುದು ಎಂದು ವಿವರಿಸುವ ವೇಳೆಯ ಅವರನ್ನು ಮಧ್ಯದಲ್ಲೇ ಅಡ್ಡಿಪಡಿಸಿದ ಮತ್ತೊಬ್ಬ ವಿದ್ಯಾರ್ಥಿನಿ, ಅಲ್ಲ, ಕಾಯಿಗಳನ್ನು ವಿಚಲಿತಗೊಳಿಸುವುದು ಹೇಗೆ ಎಂದು ಪ್ರಶ್ನಿಸಿದ್ದಾಳೆ. ಇದರಿಂದ ಮಾಸ್ಟರ್ ಗೊಂದಲಕ್ಕೊಳಗಾಗಿದ್ದಾರೆ. ಕಾಯಿಗಳನ್ನು ವಿಚಲಿತಗೊಳಿಸುವುದು ಹೇಗೆ ಎಂಬುದು ನನಗೆ ತಿಳಿದಿಲ್ಲ ಎಂದು ಐ ಹ್ಯಾವ್ ನೋ ಐಡಿಯಾ ಎಂದ ಆನಂದ್, ಅವುಗಳು ವಿಚಲಿತಗೊಳ್ಳದಂತೆ ನಾನು ಅದಷ್ಟು ಶ್ರಮ ವಹಿಸುತ್ತೇನೆ ಎಂದು ಹೇಳಿದ್ದಾರೆ. ದಯವಿಟ್ಟು ಕ್ಷಮಿಸಿ ನನಗೆ ವಿರೋಧಿಯನ್ನು ವಿಚಲಿತಗೊಳಿಸುವುದು ಗೊತ್ತು. ಆದರೆ ಚೆಸ್‌ ಕಾಯಿಗಳನ್ನು ವಿಚಲಿತಗೊಳಿಸುವುದು ಗೊತ್ತಿಲ್ಲ. ಅದಾಗ್ಯೂ ಇದೊಂದು ಒಳ್ಳೆಯ ಯೋಚನೆ ಎಂದು ಮಾಸ್ಟರ್ ಆನಂದ್ ಪ್ರತಿಕ್ರಿಯಿಸಿದ್ದಾರೆ. ಬಾಲಕಿಯ ಈ ತಲೆಹರಟೆ ಪ್ರಶ್ನೆ ಎಲ್ಲರನ್ನು ನಗೆಗಡಲಲ್ಲಿ ತೇಲಿಸುವಂತೆ ಮಾಡಿದೆ. ಚೆಸ್‌ ಒಲಿಂಪಿಯಾಡ್‌: 4ನೇ ಸುತ್ತಿನಲ್ಲಿ ಭಾರತಕ್ಕೆ ಮಿಶ್ರ ಫಲ