ಅಯ್ಯೋ ದೇವ್ರೇ..! ಕಬಡ್ಡಿ ಕೋರ್ಟ್‌ನಲ್ಲಿ ಆಡುತ್ತಿದ್ದಂತೆ ಕೊನೆಯುಸಿರೆಳೆದ ಆಟಗಾರ..! * ಕಬಡ್ಡಿ ಆಡುತ್ತಿದ್ದಂತೆಯೇ ಹಾರಿಹೋಯ್ತು ಯುವಕನ ಪ್ರಾಣಪಕ್ಷಿ* 22 ವರ್ಷದ ಯುವ ಆಟಗಾರ ಹೃದಯಾಘಾತದಿಂದ ಕೊನೆಯುಸಿರು* ಜಿಲ್ಲಾಮಟ್ಟದ ಕಬಡ್ಡಿ ಟೂರ್ನಿಯಲ್ಲಿ ನಡೆದ ದುರಂತ ಕುಡ್ಡಲೊರೆ(ಜು.26): ಸಾವು ಹೇಗೆ ಬೇಕಾದರೂ ಸಂಭವಿಸಬಹುದು ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಕಣ್ಣೆದುರು ಬಂದಿದೆ. ಕಬಡ್ಡಿ ಅಂಕಣದಲ್ಲಿ ತೊಡೆತಟ್ಟಿ ಅಂಕಗಳಿಸುವ ಯತ್ನದಲ್ಲಿದ್ದ ಕಬಡ್ಡಿ ಪಟು ನೋಡ ನೋಡುತ್ತಿದ್ದಂತೆಯೇ ಕಬಡ್ಡಿ ಕೋರ್ಟ್‌ನಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದ ಆಘಾತಕಾರಿ ಘಟನೆ ತಮಿಳುನಾಡಿನ ಕುಡ್ಡಲೊರೆ ಜಿಲ್ಲೆಯ ಪನ್ರುತಿ ಸಮೀಪದ ಮನಾಡಿಕುಪ್ಪಂ ಎಂಬಲ್ಲಿ ನಡೆದಿದೆ. ಕೊನೆಯುಸಿರೆಳೆದ ಆಟಗಾರನನ್ನು 22 ವರ್ಷದ ವಿಮಲ್‌ರಾಜ್ ಎಂದು ಗುರುತಿಸಲಾಗಿದೆ. ವಿಮಲ್‌ರಾಜ್‌, ಸೇಲಂ ಜಿಲ್ಲೆಯ ಖಾಸಗಿ ಕಾಲೇಜಿನಲ್ಲಿ . ಓದುತ್ತಿದ್ದರು. ಕುಡ್ಡಲೊರೆ ಜಿಲ್ಲೆಯ ಕಡಮಪುಲಿಯೊರ್ ಸಮೀಪದ ಪುರಾನಗಿನಿ ನಿವಾಸಿಯಾಗಿದ್ದ ವಿಮಲ್‌ರಾಜ್, ಜಿಲ್ಲಾ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಮುರತ್ತು ಕಾಲೈ ತಂಡವನ್ನು ಪ್ರತಿನಿಧಿಸುತ್ತಿದ್ದರು. ರೈಡಿಂಗ್ ಮಾಡಲು ತೆರಳಿದ್ದ ವಿಮಲ್‌ರಾಜ್ ಅವರನ್ನು ಟ್ಯಾಕಲ್ ಮಾಡುವಲ್ಲಿ ಎದುರಾಳಿ ತಂಡವು ಯಶಸ್ವಿಯಾಗುತ್ತದೆ. ಕ್ಷಣಾರ್ಧದಲ್ಲೇ ನೆಲಕ್ಕುರುಳಿದ ವಿಮಲ್‌ರಾಜ್ ನೋಡ ನೋಡುತ್ತಿದ್ದಂತೆಯೇ ಪ್ರಜ್ಞೆ ಕಳೆದುಕೊಂಡಿದ್ದಾರೆ. ಕುಸಿದು ಬಿದ್ದ ವಿಮಲ್‌ರಾಜ್ ಅವರನ್ನು ತಕ್ಷಣವೇ ಪನ್ರತಿ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಆತನನ್ನು ಪರೀಕ್ಷಿಸಿದ ವೈದರು, ಆಸ್ಪತ್ರೆಗೆ ಬರುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ ಎಂದು ಘೋಷಿಸಿದರು. ಇದಾದ ಬಳಿಕ ವಿಮಲ್‌ರಾಜ್ ಅವರ ಮೃತದೇಹವನ್ನು ಶವಪರೀಕ್ಷೆ ನಡೆಸಲು ವಿಲುಪುರಂ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕಳಿಸಿಕೊಡಲಾಗಿದೆ. ಇದೀಗ ಕಡಂಪುಲಿಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಆರಂಭಿಸಿದ್ದಾರೆ.