ಸಸೆಕ್ಸ್‌ ತಂಡದ ನಾಯಕರಾದ ಮೊದಲ ಪಂದ್ಯದಲ್ಲೇ ಶತಕ ಚಚ್ಚಿದ ಚೇತೇಶ್ವರ್ ಪೂಜಾರ * ಕೌಂಟಿ ಕ್ರಿಕೆಟ್‌ನಲ್ಲಿ ಮುಂದುವರೆದ ಚೇತೇಶ್ವರ್ ಪೂಜಾರ ಬ್ಯಾಟಿಂಗ್ ದರ್ಬಾರ್* ಸಸೆಕ್ಸ್‌ ಪರ ನಾಯಕರಾದ ಮೊದಲ ಪಂದ್ಯದಲ್ಲೇ ಪೂಜಾರ ಆಕರ್ಷಕ ಶತಕ* 7 ಪಂದ್ಯಗಳನ್ನಾಡಿ ಕೌಂಟಿ ಕ್ರಿಕೆಟ್‌ನಲ್ಲಿ 5ನೇ ಶತಕ ಚಚ್ಚಿದ ಪೂಜಾರ ನವದೆಹಲಿ(ಜು.20): ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ ತಂಡ ಸಸೆಕ್ಸ್‌ನ ಹಂಗಾಮಿ ನಾಯಕರಾಗಿ ಭಾರತದ ಟೆಸ್ಟ್‌ ತಜ್ಞ ಚೇತೇಶ್ವರ ಪೂಜಾರ ನೇಮಕಗೊಂಡಿದ್ದಾರೆ. ಸಸೆಕ್ಸ್‌ ಕೌಂಟಿ ತಂಡ ನಾಯಕರಾದ ಬೆನ್ನಲ್ಲೇ ಕಣಕ್ಕಿಳಿದ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಮತ್ತೊಂದು ಆಕರ್ಷಕ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ 7ನೇ ಪಂದ್ಯವನ್ನಾಡುತ್ತಿರುವ ಚೇತೇಶ್ವರ್ ಪೂಜಾರ 5ನೇ ಶತಕ ಸಿಡಿಸಿ ಮಿಂಚಿದ್ದಾರೆ. ಪೂಜಾರ ಬಾರಿಸಿದ ಶತಕದ ನೆರವಿನಿಂದ ಸಸೆಕ್ಸ್ ತಂಡವು ಉತ್ತಮ ಸ್ಥಿತಿಯತ್ತ ದಾಪುಗಾಲಿಡುತ್ತಿದೆ. ಸಸೆಕ್ಸ್‌ ಖಾಯಂ ನಾಯಕ ಟಾಮ್‌ ಹೈನ್ಸ್‌ ಗಾಯಗೊಂಡಿರುವ ಕಾರಣ ಅವರಿಗೆ ಒಂದು ತಿಂಗಳಿಗೂ ಹೆಚ್ಚು ಸಮಯ ಕ್ರಿಕೆಟ್‌ನಿಂದ ದೂರವಿರಬೇಕೆಂದು ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚೇತೇಶ್ವರ್ ಪೂಜಾರಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಲಾರ್ಡ್ಸ್‌ ಮೈದಾನದಲ್ಲಿ ಮಿಡಲ್‌ಸೆಕ್ಸ್‌ ವಿರುದ್ದ ನಡೆಯುತ್ತಿರುವ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಸದ್ಯ 156 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 103 ರನ್‌ ಬಾರಿಸಿದ್ದು, ಸಸೆಕ್ಸ್ ತಂಡವು 2 ವಿಕೆಟ್ ಕಳೆದುಕೊಂಡು 291 ರನ್‌ ಗಳಿಸಿದೆ. ಮಿಡಲ್‌ಸೆಕ್ಸ್‌ ಎದುರಿನ ಪಂದ್ಯಕ್ಕೂ ಮುನ್ನ ಕೌಂಟಿ ಚಾಂಪಿಯನ್‌ಶಿಪ್ ಡಿವಿಜನ್ 2ನಲ್ಲಿಚೇತೇಶ್ವರ್ ಪೂಜಾರ3ನೇ ಗರಿಷ್ಠ ಸ್ಕೋರರ್‌ ಎನಿಸಿಕೊಂಡಿದ್ದಾರೆ. ಸೆಸೆಕ್ಸ್‌ ಪರ 6 ಪಂದ್ಯಗಳನ್ನಾಡಿ 109.42ರ ಬ್ಯಾಟಿಂಗ್ ಸರಾಸರಿಯಲ್ಲಿ 766 ರನ್ ಚಚ್ಚಿದ್ದರು. ಇದರಲ್ಲಿ ಚೇತೇಶ್ವರ್ ಪೂಜಾರ ಎರಡು ದ್ವಿಶತಕ ಹಾಗೂ ಮೂರು ಶತಕಗಳು ಸೇರಿವೆ. ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಚೇತೇಶ್ವರ್ ಪೂಜಾರ ಉತ್ತಮ ಪ್ರದರ್ಶನ ತೋರಿದ್ದರಿಂದ ಇಂಗ್ಲೆಂಡ್‌ ಎದುರಿನ 5ನೇ ಟೆಸ್ಟ್ ಪಂದ್ಯದ ವೇಳೆಟೀಂ ಇಂಡಿಯಾಗೆ ಪೂಜಾರ ಕಮ್‌ಬ್ಯಾಕ್ ಮಾಡಿದ್ದರು. ಇಂಗ್ಲೆಂಡ್‌ ಕೌಂಟಿ ಪಾದಾರ್ಪಣೆ ಪಂದ್ಯದಲ್ಲೇ ವಾಷಿಂಗ್ಟನ್ ಸುಂದರ್‌ ಭರ್ಜರಿ ಪ್ರದರ್ಶನ ಭಾರತದ ಆಲ್ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ಗೆ ಪಾದಾರ್ಪಣೆ ಪಂದ್ಯದಲ್ಲೇ ಭರ್ಜರಿ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದಾರೆ. ಲ್ಯಾನ್ಸಶೈರ್‌ ಪರ ಕೌಂಟಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ 22 ವರ್ಷದ ವಾಷಿಂಗ್ಟನ್ ಸುಂದರ್, ನಾರ್ಥ್‌ಹ್ಯಾಂಪ್ಟನ್‌ಶೈರ್ ವಿರುದ್ದ ಮೊದಲ ದಿನವೇ ಪ್ರಮುಖ 4 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ವಾಷಿಂಗ್ಟನ್‌ ಸುಂದರ್‌ ಲ್ಯಾನ್ಸಶೈರ್ ಪರ ಕೇವಲ 69 ರನ್ ನೀಡಿ 4 ವಿಕೆಟ್ ತನ್ನ ಖಾತೆಗೆ ಹಾಕಿಕೊಂಡಿದ್ದಾರೆ. ಇಂಗ್ಲೆಂಡಲ್ಲಿ ಭಾರತ ವೇಗಿಗಳ ಮಿಂಚು! ವಾಷಿಂಗ್ಟನ್ ಸುಂದರ್, ಸತತ ಗಾಯದ ಸಮಸ್ಯೆಯಿಂದಾಗಿ ಟೀಂ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡಲು ವಿಫಲವಾಗಿದ್ದಾರೆ. ಸುಂದರ್‌ ಇತ್ತೀಚೆಗಷ್ಟೇ ಕೈ ಗಾಯದಿಂದ ಚೇತರಿಸಿಕೊಂಡಿದ್ದು, ಸದ್ಯ ಬೆಂಗಳೂರಿನ ಎನ್‌ಸಿಎದಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಟಿ20 ಸ್ಪೆಷಲಿಸ್ಟ್ ಆಲ್ರೌಂಡರ್ ಆಗಿ ಗಮನ ಸೆಳೆದಿದ್ದ ಸುಂದರ್, ಕೆಲ ತಿಂಗಳ ಹಿಂದಷ್ಟೇ ಮುಕ್ತಾಯವಾದ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದರು.