ಸೋತು ಕಣ್ಣೀರಿಟ್ಟ ಮೈದಾನದಲ್ಲೇ ಟ್ರೋಫಿ ಗೆದ್ದು ಬೀಗಿದ ಛಲದಂಕಮಲ್ಲ ಚಂದ್ರಕಾಂತ್​ ಪಂಡಿತ್..! * 2022ರ ರಣಜಿ ಟ್ರೋಫಿ ಚಾಂಪಿಯನ್ ಪಟ್ಟ ಅಲಂಕರಿಸಿದ ಮಧ್ಯಪ್ರದೇಶ* ಬಲಿಷ್ಠ ಮುಂಬೈಗೆ ಸೋಲುಣಿಸಿದ್ದರ ಹಿಂದಿದೆ ಕೋಚ್ ಚಂದ್ರಕಾಂತ್ ಪಂಡಿತ್ ಕೈವಾಡ* ನಾಯಕನಾಗಿ ಗೆಲ್ಲಲಾಗದ ಟ್ರೋಫಿಯನ್ನು ಕೋಚ್ ಆಗಿ ಗೆದ್ದ ಚಂದ್ರಕಾಂತ್ ಬೆಂಗಳೂರು(ಜೂ.28):ಪ್ರಿಯ ಓದುಗರೇ, ಇದೊಂದು ಸ್ಪೂರ್ತಿದಾಯಕ ಕಹಾನಿ. ಗೆಲುವು ಯಾರೊಬ್ಬರ ಸೊತ್ತಲ್ಲ. ಅದು ದಕ್ಕೋದು ತಡವಾಗಬಹುದು. ಆದ್ರೆ ನಿರಂತರ ಪರಿಶ್ರಮವಿದ್ರೆ ಒಂದಲ್ಲ ಒಂದು ದಿನ ಆ ಗೆಲುವು ನಿನ್ನದಾಗುತ್ತೆ ಅನ್ನೋದಕ್ಕೆ ಈ ಸ್ಟೋರಿ ಬೆಸ್ಟ್ ಎಕ್ಸಾಂಪಲ್​​​. ರಣಜಿ ಟ್ರೋಫಿ ಫೈನಲ್ ( )​ ಪಂದ್ಯದಲ್ಲಿ ಬಲಾಢ್ಯ ಮುಂಬೈ ತಂಡವನ್ನ ಸೋಲಿಸಿ, ಮಧ್ಯಪ್ರದೇಶ ತಂಡ ಕಪ್​ ಗೆದ್ದಾಗ ಸಂಭ್ರಮಿಸಿದ ಪರಿ ನೋಡಲು ಎರಡು ಕಣ್ಣು ಸಾಲದು. 108 ರನ್​ ಗುರಿ ಬೆನ್ನಟ್ಟಿದ ಮಧ್ಯಪ್ರದೇಶ ತಂಡ 6 ವಿಕೆಟ್​​ಗಳ ಪ್ರಚಂಡ ಜಯ ದಾಖಲಿಸಿತು. ರಣಜಿ ಟ್ರೋಫಿ ಇತಿಹಾಸದಲ್ಲಿ ಚೊಚ್ಚಲ ಬಾರಿಗೆ ಟ್ರೋಫಿ ಜಯಿಸಿ ಮೆರೆದಾಡಿತು. 23 ವರ್ಷಗಳ ಕನಸು ನನಸಾಗಿಸಿದ ಚಂದ್ರಕಾಂತ್​ ಪಂಡಿತ್​​: ಮಧ್ಯಪ್ರದೇಶ ತಂಡ ರಣಜಿ ಟ್ರೋಫಿ ( ) ಸುಲ್ತಾನಾಗಿ ಹೊರಹೊಮ್ಮಿದೆ. ಬಲಿಷ್ಠ ಮುಂಬೈಗೆ ಮಣ್ಣುಮುಕ್ಕಿಸಿ ವಿಜೃಂಭಿಸಿದೆ. ಆದ್ರೆ ಟೂರ್ನಿ ಆರಂಭಕ್ಕೂ ಮುನ್ನ ಯಾರೊಬ್ಬರು ಮಧ್ಯಪ್ರದೇಶ ಕ್ರಿಕೆಟ್ ತಂಡವು ಈ ಬಾರಿಯರಣಜಿ ಟ್ರೋಫಿಕಪ್​ ಗೆಲ್ಲುತ್ತೆ ಎಂದು ನಿರೀಕ್ಷಿಸಿರಲಿಲ್ಲ. ಆದ್ರೆ ಈಗ ಎಲ್ಲಾ ಲೆಕ್ಕಚಾರಗಳನ್ನ ತಲೆಕೆಳಗಾಗಿಸಿ ಚಾರಿತ್ರಿಕ ಸಾಧನೆ ನಿರ್ಮಿಸಿದೆ. ಇದಕ್ಕೆ ಕಾರಣನೇ ಕೋಚ್​​ ಚಂದ್ರಕಾಂತ್ ಪಂಡಿತ್​​. ಹೌದು​​, ಮಧ್ಯಪ್ರದೇಶ ಟ್ರೋಫಿ ಗೆಲುವಿನ ರೂವಾರಿನೇ ಕೋಚ್​​​​ ಚಂದ್ರಕಾಂತ್​ ಪಂಡಿತ್​​. ಪಂಡಿತ್​ ಹೆಣೆದ ತಂತ್ರಕ್ಕೆ ಮುಂಬೈ ಲಾಕ್​​​​ ಆಯ್ತು. ಪಂದ್ಯದ ಯಾವ ಹಂತದಲ್ಲೂ ಮುಂಬೈಗೆ ಉಸಿರಾಡಲು ಅವಕಾಶನೇ ನೀಡ್ಲಿಲ್ಲ. ಇಂತಹ ಯಶಸ್ವಿ ಕೋಚ್​​​​​ ಹಿಂದೆ ಒಂದು ಇಂಟ್ರೆಸ್ಟಿಂಗ್​ ಇನ್​​ಸೈಡ್​​​​ ಕಥೆ ಅಡಗಿದೆ. ಅದೇನಂದ್ರೆ ಈಗ ತಂಡವನ್ನ ಚಾಂಪಿಯನ್​ ಮಾಡಿದ ಇದೇ ಪಂಡಿತ್​​​, 1999 ರಲ್ಲಿ ಮಧ್ಯಪ್ರದೇಶದ ತಂಡದ ಕ್ಯಾಪ್ಟನ್ ಆಗಿದ್ರು. ಇವರ ನಾಯಕತ್ವದಲ್ಲಿ ಇದೇ ತಂಡ ಕರ್ನಾಟಕ ವಿರುದ್ಧ ಫೈನಲ್​​ ಪಂದ್ಯದಲ್ಲಿ ಮುಗ್ಗರಿಸಿತ್ತು. ಸೋಲಿನ ಬಳಿಕ ಇದೇ ಚಂದ್ರಕಾಂತ್​​ ಪಂಡಿತ್​ ಚಿನ್ನಸ್ವಾಮಿ ಅಂಗಳದಲ್ಲಿ ಕಣ್ಣೀರು ಹಾಕಿದ್ರು. ಆದ್ರೆ ಇಂದು ಅದೇ ಚಂದ್ರಕಾಂತ್ ಪಂಡಿತ್ ಅದೇ ಅಂಗಳದಲ್ಲಿ ಕೋಚ್​ ಆಗಿ ಮಧ್ಯಪ್ರದೇಶ ತಂಡಕ್ಕೆ ಕಪ್ ಗೆಲ್ಲಿಸಿಕೊಟ್ಟಿದ್ದಾರೆ. ಅದು ಬರೋಬ್ಬರಿ 23 ವರ್ಷಗಳ ಬಳಿಕ. ಇದರೊಂದಿಗೆ ಪಂಡಿತ್​​​ರ ಬಿಗ್ ಡ್ರೀಮ್​ ನನಸಾಗಿದೆ. ಪಂಡಿತ್ ಕೋಚ್​ ಆದ್ರೆ ಕಪ್​ ಮಿಸ್ಸಾಗಲ್ಲ: ಹೌದು, ಚಂದ್ರಕಾಂತ್​ ಪಂಡಿತ್ ಡೊಮೆಸ್ಟಿಕ್​ ಕ್ರಿಕೆಟ್​​​​ನ ಅತ್ಯಂತ ಯಶಸ್ವಿ ಕೋಚ್​. ಇವರು ಕೋಚ್​​ ಆದ ತಂಡಗಳೆಲ್ಲವೂ ಕಪ್ ಗೆದ್ದಿವೆ. 2002 ರಿಂದ 2016ರ ವರೆಗೆ ಮುಂಬೈ ತಂಡವನ್ನ 3 ಬಾರಿ ಗೆಲ್ಲಿಸಿದ್ರೆ, 2018 ಹಾಗೂ 2019 ರಲ್ಲಿ ವಿದರ್ಭ ಟ್ರೋಫಿ ಜಯಿಸಿತ್ತು. ಈ ಬಾರಿ ಕೋಚ್ ಆಗಿ ತವರಿನ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. : ಮುಂಬೈ ಬಗ್ಗುಬಡಿದು ರಣಜಿ ಟ್ರೋಫಿ ಗೆದ್ದ ಮಧ್ಯಪ್ರದೇಶ ಹೇಗಿತ್ತು ರಣಜಿ ಫೈನಲ್ ಪಂದ್ಯ? ಮುಂಬೈ ಹಾಗೂ ಮಧ್ಯಪ್ರದೇಶ ತಂಡಗಳ ನಡುವಿನ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡದ ನಾಯಕ ಪೃಥ್ವಿ ಶಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಸರ್ಫರಾಜ್ ಖಾನ್ ಆಕರ್ಷಕ ಶತಕ(134) ಹಾಗೂ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್(78) ಸಮಯೋಚಿತ ಅರ್ಧಶತಕದ ನೆರವಿನಿಂದ 374 ರನ್ ಕಲೆಹಾಕಿತ್ತು. ಇನ್ನು ಮೊದಲ ಇನಿಂಗ್ಸ್‌ ಆರಂಭಿಸಿದ ಮಧ್ಯಪ್ರದೇಶ ತಂಡವು ಆರಂಭಿಕ ಬ್ಯಾಟರ್‌ ಯಶ್ ದುಬೆ(133), ಶುಭಂ ಶರ್ಮಾ(116) ಹಾಗೂ ರಜತ್ ಪಾಟೀದಾರ್(122) ಆಕರ್ಷಕ ಶತಕ ಮತ್ತು ಸಾರಂಶು ಜೈನ್ ಬಾರಿಸಿದ ಚೊಚ್ಚಲ ಅರ್ಧಶತಕದ ನೆರವಿನಿಂದ 536 ರನ್ ಕಲೆಹಾಕಿತು. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ ಮಧ್ಯಪ್ರದೇಶ ತಂಡವು 162 ರನ್‌ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆಯಿತು. ಇನ್ನು ಎರಡನೇ ಇನಿಂಗ್ಸ್‌ ಆರಂಭಿಸಿದ ಮುಂಬೈ ತಂಡವು ಸುವೇದ್ ಪಾರ್ಕರ್(51) ಅರ್ಧಶತಕ ಹಾಗೂ ಪೃಥ್ವಿ ಶಾ(44) ಮತ್ತು ಸರ್ಫರಾಜ್ ಖಾನ್(45) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 269 ರನ್‌ ಕಲೆಹಾಕುವ ಮೂಲಕ ಮಧ್ಯಪ್ರದೇಶ ತಂಡಕ್ಕೆ ಗೆಲ್ಲಲು 108 ರನ್‌ಗಳ ಸಾಧಾರಣ ಗುರಿ ನೀಡಿತ್ತು.