2022 : ಗುಜರಾತ್ ರಾಜಸ್ಥಾನ ಪ್ಲೇ ಅಫ್‌ ಪಂದ್ಯದ ಮೇಲೆ ವರುಣನ ವಕ್ರದೃಷ್ಠಿ..! * ಐಪಿಎಲ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್-ಗುಜರಾತ್ ಟೈಟಾನ್ಸ್ ಮುಖಾಮುಖಿ * ಐಪಿಎಲ್ ಪ್ಲೇ ಆಫ್‌ ಪಂದ್ಯಗಳಿಗೆ ವರುಣನ ಭೀತಿ * ಮೊದಲ ಕ್ವಾಲಿಫಯರ್ ಹಾಗೂ ಎಲಿಮಿನೇಟರ್ ಪಂದ್ಯಕ್ಕೆ ಕೋಲ್ಕತಾದ ಈಡನ್ ಗಾರ್ಡನ್ಸ್‌ ಆತಿಥ್ಯ ಕೋಲ್ಕತಾ(ಮೇ.24): ಬಹುನಿರೀಕ್ಷಿತ 15ನೇ ಆವೃತ್ತಿಯಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ( ) ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದ ಗುಜರಾತ್ ಟೈಟಾನ್ಸ್ ( ) ಹಾಗೂ ರಾಜಸ್ಥಾನ ರಾಯಲ್ಸ್‌ ( ) ತಂಡಗಳು ಫೈನಲ್‌ಗಾಗಿ ಇಂದು ಇಲ್ಲಿನ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಸೆಣಸಾಟ ನಡೆಸಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಕಳೆದೊಂದು ವಾರದಿಂದ ಪಶ್ಚಿಮ ಬಂಗಾಳದಲ್ಲಿ ಮಳೆಯ ಅಟ್ಟಹಾಸ ಜೋರಾಗಿದ್ದು, ಪ್ರತಿ ಗಂಟೆಗೆ 90 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು, ಈಡನ್ ಗಾರ್ಡನ್ಸ್‌ ಮೈದಾನದ ಮಾಧ್ಯಮ ಗ್ಯಾಲರಿಗೆ ಅಳವಡಿಸಿದ್ದ ಗಾಜುಗಳು ಚೂರು ಚೂರಾಗಿವೆ. ಇದಷ್ಟು ಆದಷ್ಟು ಬೇಗ ರಿಪೇರಿ ಮಾಡಲಾಗಿದ್ದು, ಮಳೆಯಿಂದ ಪಿಚ್ ಒದ್ದೆಯಾಗದಂತೆ ಸಂಪೂರ್ಣವಾಗಿ ಮೈದಾನವನ್ನು ಕವರ್‌ ಮಾಡಲಾಗಿದೆ. ಈಡನ್ ಗಾರ್ಡನ್ಸ್ ( ) ಪಿಚ್ ಕ್ಯೂರೇಟರ್‌ ಪಿಚ್ ಕುರಿತಂತೆ ಮಾತನಾಡಿದ್ದು, ದಟ್ಟವಾದ ಕಪ್ಪು ಮೋಡಗಳು ಕವಿದಿವೆ. ಹೀಗಾಗಿ ನಾವು ಪಿಚ್ ಹಾಗೂ ಮೈದಾನವನ್ನು ಸಂಪೂರ್ಣವಾಗಿ ಕವರ್ ಮಾಡಿದ್ದೇವೆ. ದೊಡ್ಡ ದೊಡ್ಡ ಕಲ್ಲುಗಳು ಕವರ್ ಮೇಲೆ ಹೇರಲಾಗಿದ್ದು, ಗಾಳಿಯ ಒತ್ತಡವನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿವೆ ಎಂದು ಪಿಚ್ ಕ್ಯೂರೇಟರ್ ಸುಜನ್ ಮುಖರ್ಜಿ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮಾಹಿತಿ ನೀಡಿದ್ದಾರೆ. ಪ್ಲೇ-ಆಫ್‌ನ ಒಟ್ಟು 4 ಪಂದ್ಯಗಳಿಗೆ ನಿಗದಿತ 200 ನಿಮಿಷಗಳ ಜೊತೆಗೆ ಹೆಚ್ಚುವರಿ 2 ಗಂಟೆಗಳ ಸಮಯಾವಕಾಶವನ್ನು ನೀಡಲಾಗಿದೆ. ಮೊದಲ 3 ಪಂದ್ಯಗಳು ಮಳೆಯಿಂದಾಗಿ ವಿಳಂಬಗೊಂಡರೆ ಓವರ್‌ ಕಡಿತಗೊಳಿಸದೆ ರಾತ್ರಿ 9.40ಕ್ಕೆ ಆರಂಭಿಸಲು ಗಡುವು ನೀಡಲಾಗಿದೆ. ಒಂದು ವೇಳೆ ತಲಾ 5 ಓವರ್‌ ಪಂದ್ಯ ನಡೆಸಲು ಅವಕಾಶ ಸಿಕ್ಕರೆ ಆ ಪಂದ್ಯವನ್ನು ಆರಂಭಿಸಲು ರಾತ್ರಿ 11.56ರ ವರೆಗೂ ಸಮಯವಿರಲಿದೆ. 5 ಓವರ್‌ ಪಂದ್ಯದಲ್ಲಿ ಟೈಮ್‌ ಔಟ್‌ ಇರುವುದಿಲ್ಲ. ಅಲ್ಲದೇ ಮಧ್ಯರಾತ್ರಿ 12.50ರೊಳಗೆ ಪಂದ್ಯ ಮುಗಿಯಬೇಕು. ರದ್ದಾಗುವುದನ್ನು ತಡೆಯಲು ಬಿಸಿಸಿಐ ಮಾಸ್ಟರ್ ಪ್ಲಾನ್..! 5 ಓವರ್‌ ಪಂದ್ಯವೂ ಸಾಧ್ಯವಾಗದೆ ಇದ್ದಲ್ಲಿ ಸೂಪರ್‌ ಓವರ್‌ ನಡೆಯಲಿದೆ. ಸೂಪರ್‌ ಓವರ್‌ ಆರಂಭಿಸಲು ಮಧ್ಯರಾತ್ರಿ 12.50ರ ವರೆಗೂ ಸಮಯವಿರಲಿದೆ. ಮಳೆ ನಿಲ್ಲದೆ ಪಂದ್ಯ ನಡೆಸಲು ಸಾಧ್ಯವಾಗದೆ ಇದ್ದರೆ ಅಂಕಪಟ್ಟಿಯಲ್ಲಿ ಗಳಿಸಿದ ಸ್ಥಾನಗಳ ಮೇಲೆ ವಿಜೇತರ ನಿರ್ಧಾರವಾಗಲಿದೆ. ಕ್ವಾಲಿಫಯರ್‌-1 ಮಳೆಗೆ ಬಲಿಯಾದರೆ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಗುಜರಾತ್‌ ನೇರವಾಗಿ ಫೈನಲ್‌ಗೇರಲಿದೆ. ರಾಜಸ್ಥಾನ ಕ್ವಾಲಿಫಯರ್‌-2ರಲ್ಲಿ ಆಡಬೇಕಾಗುತ್ತದೆ. ಎಲಿಮಿನೇಟರ್‌ ಪಂದ್ಯ ಮಳೆಗೆ ಆಹುತಿಯಾದರೆ, ಆರ್‌ಸಿಬಿ ಹೊರಬೀಳಲಿದ್ದು, 2ನೇ ಕ್ವಾಲಿಫಯರ್‌ ಪಂದ್ಯಕ್ಕೆ ಲಖನೌ ಪ್ರವೇಶ ಪಡೆಯಲಿದೆ ಫೈನಲ್ ಪಂದ್ಯಕ್ಕೆ ಮೀಸಲು ದಿನ ನಿಗದಿ ಮೇ 29ಕ್ಕೆ ನಿಗದಿಯಾಗಿರುವ ಫೈನಲ್‌ ಪಂದ್ಯ ರಾತ್ರಿ 8ಕ್ಕೆ ಆರಂಭಗೊಳ್ಳುವ ಕಾರಣ ಮಳೆಯಿಂದ ತಡವಾದರೆ ಓವರ್‌ ಕಡಿತವಿಲ್ಲದೆ ಪಂದ್ಯ ಆರಂಭಿಸಲು ರಾತ್ರಿ 10.10ರ ವರೆಗೂ ಅವಕಾಶವಿರಲಿದೆ. 5 ಓವರ್‌ ಪಂದ್ಯ ನಡೆಸಲು ಮಧ್ಯರಾತ್ರಿ 12.26ರ ವರೆಗೂ ಕಾಲಾವಕಾಶವಿರಲಿದ್ದು, ಮೇ 30 ಅನ್ನು ಮೀಸಲು ದಿನವಾಗಿಡಲಾಗಿದೆ. ಮೊದಲ ದಿನ ಪಂದ್ಯ ಅರ್ಧ ನಡೆದಿದ್ದರೆ, ಮೀಸಲು ದಿನದಂದು ಪಂದ್ಯ ಮುಂದುವರಿಯಲಿದೆ. ಕೇವಲ ಟಾಸ್‌ ಅಷ್ಟೇ ಆಗಿ ಪಂದ್ಯ ನಡೆಯದಿದ್ದರೆ, 2ನೇ ದಿನ ಹೊಸದಾಗಿ ಟಾಸ್‌ ಹಾಕಲಾಗುತ್ತದೆ.