: ದೇಶದ ಹೆಮ್ಮೆಯ ಕ್ರೀಡಾ ಸಾಧಕರಿಗೆ ಪದ್ಮ ಗೌರವ ಪ್ರದಾನ * ರಾಷ್ಟ್ರಪತಿ ಭವನದಲ್ಲಿ ಕ್ರೀಡಾ ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ * ಈ ಬಾರಿ 9 ಕ್ರೀಡಾ ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ * ದೇವೇಂದ್ರ ಝಾಝರಿಯಾಗೆ ಪದ್ಮಭೂಷಣ ಪ್ರಶಸ್ತಿ ವಿತರಣೆ ನವದೆಹಲಿ(ಮಾ.22): ಭಾರತದ ತಾರಾ ಪ್ಯಾರಾ ಅಥ್ಲೀಟ್‌ ದೇವೇಂದ್ರ ಝಾಝರಿಯಾಗೆ ( ) ಸೋಮವಾರ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ( ) ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು. ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ( ) 2 ಪದಕ ಗೆದ್ದಿದ್ದ ಶೂಟರ್‌ ಅವನಿ ಲೇಖರಾ, ತಾರಾ ಹಾಕಿ ಪಟು ವಂದನಾ ಕಟಾರಿಯಾ, ಜಮ್ಮು ಮತ್ತು ಕಾಶ್ಮೀರದ ಮಾರ್ಷಲ್‌ ಆರ್ಟ್ಸ್‌ ಕೋಚ್‌ ಫೈಸಲ್‌ ಅಲಿ ದಾರ್‌ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು. ಈ ಸಾಲಿನಲ್ಲಿ ಒಟ್ಟು 9 ಕ್ರೀಡಾ ಸಾಧಕರು ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಈ ಪೈಕಿ ನಾಲ್ವರು ಟೋಕಿಯೋ ಪ್ಯಾರಾಲಿಂಪಿಕ್ಸ್‌ ಪದಕ ವಿಜೇತರೂ ಸೇರಿದ್ದಾರೆ. ಇವುಗಳ ಪೈಕಿ ದೇಶದ ಮೂರನೇ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಗೆ ದೇವೇಂದ್ರ ಪಾತ್ರರಾಗಿದ್ದಾರೆ. ಈ ಬಾರಿಯ ಪದ್ಮ ಪ್ರಶಸ್ತಿಗೆ ಪಾತ್ರರಾದ ಪ್ಯಾರಾಲಿಂಪಿಕ್ಸ್‌ ಪಟುಗಳೆಂದರೆ, ದೇವೇಂದ್ರ ಝಾಝರಿಯಾ, ಅವನಿ ಲೇಖರಾ, ಸಮಿತ್ ಆಂಟಿಲ್ ಹಾಗೂ ಪ್ರಮೋದ್ ಭಗತ್ ಈ ನಾಲ್ವರು ಕ್ರೀಡಾ ತಾರೆಯರು ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಉಳಿದ 5 ಮಂದಿಗೆ ಮಾರ್ಚ್‌ 28ರಂದು ಪ್ರಶಸ್ತಿ ವಿತರಿಸಲಾಗುತ್ತದೆ. 2022ರಲ್ಲಿ ಮೊದಲ ಬಾರಿ ಸೋತ ರಾಫೆಲ್‌ ನಡಾಲ್‌ ಕ್ಯಾಲಿಫೋರ್ನಿಯಾ: ಇತ್ತೀಚೆಗಷ್ಟೇ ಆಸ್ಪ್ರೇಲಿಯನ್‌ ಓಪನ್‌ ( ) ಗೆದ್ದು ದಾಖಲೆಯ 21ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದ ಸ್ಪೇನ್‌ನ ರಾಫೆಲ್‌ ನಡಾಲ್‌ ( ), 2022ರಲ್ಲಿ ಮೊದಲ ಬಾರಿ ಸೋಲನುಭವಿಸಿದ್ದಾರೆ. ಸತತ 20 ಪಂದ್ಯಗಳನ್ನು ಗೆದ್ದಿದ್ದ ನಡಾಲ್‌, ಸೋಮವಾರ ಇಂಡಿಯಾನಾ ವೆಲ್ಸ್‌ ಟೂರ್ನಿಯ ಫೈನಲ್‌ನಲ್ಲಿ ಅಮೆರಿಕದ ಟೇಲರ್‌ ಫಿಟ್ಜ್ ವಿರುದ್ಧ 3​-6, 6-​7(5) ನೇರ ಸೆಟ್‌ಗಳಿಂದ ಪರಾಭವಗೊಂಡರು. ಆದರೆ 35 ವರ್ಷದ ನಡಾಲ್‌ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರೂ ಫೈನಲ್‌ನಲ್ಲಿ ಆಡಿದ್ದಾರೆ ಎಂದು ಗೊತ್ತಾಗಿದೆ. ‘ಆಡುವಾಗ ಉಸಿರಾಡಲು ಕಷ್ಟವಾಗುತ್ತಿತ್ತು. ಎದೆ ಭಾಗದಲ್ಲಿ ಸೂಜಿಯಿಂದ ಚುಚ್ಚಿದಂತೆ ಅನುಭವವಾಗುತ್ತಿತ್ತು’ ಎಂದು ನಡಾಲ್‌ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ. ಇಂದಿನಿಂದ ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌ ಬಾಸೆಲ್‌: ಸ್ವಿಸ್‌ ಓಪನ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿ ಮಂಗಳವಾರ ಆರಂಭವಾಗಲಿದ್ದು, ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು ( ) ಹಾಗೂ ಕಿದಂಬಿ ಶ್ರೀಕಾಂತ್‌ ( ) ಸುಧಾರಿತ ಪ್ರದರ್ಶನ ನೀಡಿ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. 1955ರಿಂದ ನಡೆಯುತ್ತಿರುವ ಟೂರ್ನಿಯಲ್ಲಿ ಭಾರತ ಈವರೆಗೆ 5 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್‌(2015), ಎಚ್‌.ಎಸ್‌.ಪ್ರಣಯ್‌(2016) ಹಾಗೂ ಸಮೀರ್‌ ವರ್ಮಾ(2018) ಚಾಂಪಿಯನ್‌ ಆಗಿದ್ದರೆ, ಮಹಿಳಾ ಸಿಂಗಲ್ಸ್‌ನಲ್ಲಿ 2011 ಮತ್ತು 2012ರಲ್ಲಿ ಸೈನಾ ನೆಹ್ವಾಲ್‌ ( ) ಪ್ರಶಸ್ತಿ ಗೆದ್ದಿದ್ದರು. ಪುರುಷರ ಸಿಂಗಲ್ಸ್‌ನಲ್ಲಿ ಪಾರುಪಳ್ಳಿ ಕಶ್ಯಪ್‌, ಸಾಯಿ ಪ್ರಣೀತ್‌, ಪ್ರಣಯ್‌, ಸಮೀರ್‌ ಹಾಗೂ ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್‌ ಜೊತೆ ಆಕರ್ಷಿ ಕಶ್ಯಪ್‌ ಕೂಡಾ ಕಣದಲ್ಲಿದ್ದಾರೆ. ಆಲ್‌ ಇಂಗ್ಲೆಂಡ್‌ ಟೂರ್ನಿಯ ಸೆಮೀಸ್‌ ತಲುಪಿ ಗಮನ ಸೆಳೆದಿದ್ದ ಗಾಯತ್ರಿ ಗೋಪಿಚಂದ್‌ ಹಾಗೂ ತ್ರೀಸಾ ಜಾಲಿ ಮಹಿಳಾ ಡಬಲ್ಸ್‌ನ ಪ್ರಮುಖ ಆಕರ್ಷಣೆಯಾಗಿದ್ದು, ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಜೋಡಿಯೂ ಸ್ಪರ್ಧಿಸಲಿದೆ. ಸಾತ್ವಿಕ್‌-ಚಿರಾಗ್‌ ಶೆಟ್ಟಿ, ಅರ್ಜುನ್‌-ಧ್ರುವ್‌ ಕಪಿಲಾ, ಕೃಷ್ಣ ಪ್ರಸಾದ್‌-ವಿಷ್ಣುವರ್ಧನ್‌ ಪುರುಷರ ಡಬಲ್ಸ್‌ ಹಾಗೂ ಇಶಾನ್‌ ಭಟ್ನಾಗರರ್‌-ತನಿಶಾ ಕ್ರಾಸ್ಟೊ, ವೆಂಕಟ್‌ ಗೌರವ್‌-ಜೂಹಿ ದೇವಾಂಗನ್‌ ಮಿಶ್ರ ಡಬಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಸ್ವಿಸ್‌ ಓಪನ್‌ ಆಡದಿರಲು ನಿರ್ಧಾರ ಈ ವರ್ಷ ಸತತ ಟೂರ್ನಿಗಳನ್ನು ಆಡಿ ದಣಿದಿರುವ 20 ವರ್ಷದ ಲಕ್ಷ್ಯ, ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ‘ಕಳೆದೆರಡು ವಾರಗಳಲ್ಲಿ ಜರ್ಮನ್‌ ಓಪನ್‌ ಹಾಗೂ ಆಲ್‌ ಇಂಗ್ಲೆಂಡ್‌ ಟೂರ್ನಿಯಲ್ಲಿ ಪಾಲ್ಗೊಂಡಿರುವ ಸೆನ್‌ ಸ್ವಿಸ್‌ ಓಪನ್‌ನಲ್ಲಿ ಆಡಲ್ಲ. ಬೆಂಗಳೂರಿನಲ್ಲಿ 7-10 ದಿನಗಳ ಕಾಲ ವಿಶ್ರಾಂತಿ ಪಡೆದು ಬಳಿಕ ಕೊರಿಯನ್‌ ಓಪನ್‌ನಲ್ಲಿ ಸ್ಪರ್ಧಿಸಲಿದ್ದಾರೆ’ ಎಂದು ಸೆನ್‌ ಅವರ ಮಾರ್ಗದರ್ಶಕ ವಿಮಲ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.