'ದೇಶದ ಕೀರ್ತಿ ಹೆಚ್ಚಿಸಿದ್ದೀರ..': ಪ್ಯಾರಾಲಿಂಪಿಕ್ಸ್‌ ಪದಕ ವಿಜೇತರಿಗೆ ಫೋನ್‌ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪದಕ ಬೇಟೆಯಾಡಿದ ಭಾರತೀಯ ಪ್ಯಾರಾ ಅಥ್ಲೀಟ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿ ಫೋನ್ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ ಪ್ಯಾರಿಸ್: ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ನೀವು ಭಾರತಕ್ಕೆ ಹೆಮ್ಮೆ ತಂದಿದ್ದೀರಿ ಎಂದು ಶ್ಲಾಘಿಸಿದ್ದಾರೆ. ಪದಕ ವಿಜೇತ ಶೂಟರ್‌ಗಳಾದ ಮೋನಾ ಅಗರ್‌ವಾಲ್‌, ರುಬಿನಾ ಫ್ರಾನ್ಸಿನ್‌, ಮನೀಶ್‌ ನರ್ವಾಲ್‌ ಹಾಗೂ ಅಥ್ಲೆಟಿಕ್ಸ್‌ನ ಪ್ರೀತ್‌ ಪಾಲ್‌ ಜೊತೆ ಮೋದಿ ಮಾತನಾಡಿದರು. ಆದರೆ ಸ್ಪರ್ಧೆಯಲ್ಲಿ ಪಾಲ್ಗೊಂಡ ಕಾರಣ ಅವನಿ ಲೇಖರಾಗೆ ಪ್ರಧಾನಿ ಜೊತೆ ಫೋನ್‌ನಲ್ಲಿ ಮಾತನಾಡಲು ಸಾಧ್ಯವಾಗಲಿಲ್ಲ. ಇಂದು ಸುಮಿತ್‌, ಯೋಗೇಶ್ ಕಣದಲ್ಲಿ: ಸಿಗುತ್ತಾ ಮೆಡಲ್‌? ಸೋಮವಾರ ಭಾರತ ಕೆಲ ಸ್ಪರ್ಧೆಗಳಲ್ಲಿ ಪದಕ ಭರವಸೆ ಇಟ್ಟುಕೊಂಡಿದೆ. ಟೋಕಿಯೋ ಒಲಿಂಪಿಕ್ಸ್‌ ಚಿನ್ನ ವಿಜೇತ ಸುಮಿತ್‌ ಅಂತಿಲ್‌ ಜಾವೆಲಿನ್‌ ಎಸೆತದ ಎಫ್‌64 ವಿಭಾಗದಲ್ಲಿ ಸ್ಪರ್ಧಿಸಲಿದ್ದು, ಸತತ 2ನೇ ಚಿನ್ನದ ಮೇಲೆ ಕಣ್ಣಿಟ್ಟಿದ್ದಾರೆ. ಇದೇ ಸ್ಪರ್ಧೆಯಲ್ಲಿ ಸಂದೀಪ್‌ ಸಂಜಯ್‌ ಕೂಡಾ ಕಣದಲ್ಲಿದ್ದಾರೆ. ಡಿಸ್ಕಸ್‌ ಎಸೆತದಲ್ಲಿ ಯೋಗೇಶ್‌ ಕಥುನಿಯಾ, ಮಹಿಳಾ ವಿಭಾಗದಲ್ಲಿ ಕಾಂಚನ್‌ ಲಖನಿ, 400 ಮೀ. ರೇಸ್‌ನಲ್ಲಿ ದೀಪ್ತಿ ಸ್ಪರ್ಧಿಸಲಿದ್ದಾರೆ. ಬ್ಯಾಡ್ಮಿಂಟನ್‌ನ ಪುರುಷರ ಸಿಂಗಲ್ಸ್‌ ಎಸ್‌ಎಲ್‌3 ಫೈನಲ್‌ನಲ್ಲಿ ನಿತೇಶ್‌ ಕುಮಾರ್‌, ಮಿಶ್ರ ಡಬಲ್ಸ್‌ ಎಸ್‌ಎಚ್‌6 ವಿಭಾಗದ ಕಂಚಿನ ಪದಕ ಪಂದ್ಯದಲ್ಲಿ ಶಿವರಾಜನ್‌-ಸುಮತಿ ಸ್ಪರ್ಧಿಸಲಿದ್ದಾರೆ. ಶೂಟಿಂಗ್‌ನ ಮಿಶ್ರ 25 ಮೀ. ಪಿಸ್ತೂಲ್‌ ಎಸ್‌ಎಚ್‌1 ವಿಭಾಗದಲ್ಲಿ ನಿಹಾಲ್‌ ಸಿಂಗ್‌, ಅಮೀರ್‌ ಅಹ್ಮದ್‌ ಭಟ್‌ ಕಣದಲ್ಲಿದ್ದಾರೆ. ಬ್ಯಾಡ್ಮಿಂಟನಲ್ಲಿ ಭಾರತಕ್ಕೆ ಮತ್ತೆ 2 ಪದಕ ಖಚಿತ; ಟೋಕಿಯೋ ಸೋಲಿಗೆ ಸೇಡು ತೀರಿಸಿಕೊಳ್ಳಲು ಕನ್ನಡಿಗ ಸುಹಾಸ್‌ ರೆಡಿ ಕನ್ನಡತಿ ರಕ್ಷಿತಾ ರಾಜುಗೆ 12ನೇ ಸ್ಥಾನ: ಪದಕವಿಲ್ಲ ಚೊಚ್ಚಲ ಪ್ಯಾರಾಲಿಂಪಿಕ್ಸ್‌ನಲ್ಲೇ ಪದಕ ಗೆಲ್ಲುವ ಕರ್ನಾಟಕದ ತಾರಾ ಓಟಗಾರ್ತಿ ರಕ್ಷಿತಾ ರಾಜು ಕನಸು ಭಗ್ನಗೊಂಡಿದೆ. ಭಾನುವಾರ ಮಹಿಳೆಯರ 1500 ಮೀ. ಟಿ11 ವಿಭಾಗದಲ್ಲ ರೇಸ್‌ನಲ್ಲಿ ಚಿಕ್ಕಮಗಳೂರಿನ 23 ವರ್ಷದ ರಕ್ಷಿತಾ ಹೀಟ್ಸ್‌ನಲ್ಲಿ 4ನೇ ಸ್ಥಾನ ಪಡೆದುಕೊಂಡರು. ಅವರು 5 ನಿಮಿಷ 29.92 ಸೆಕೆಂಡ್‌ಗಳಲ್ಲಿ ಕ್ರಮಿಸಿ ಒಟ್ಟಾರೆ 13 ಸ್ಪರ್ಧಿಗಳ ಪೈಕಿ 12ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಪ್ಯಾರಾ ಏಷ್ಯನ್‌ ಗೇಮ್ಸ್‌ ಚಿನ್ನ ವಿಜೇತ ರಕ್ಷಿತಾ ತಮ್ಮ ಗೈಡ್ ರಾಹುಲ್ ಬಾಲಕೃಷ್ಣ ಜೊತೆಗೂಡಿ ಓಡಿದರು. ಟಿ11 ಅಂದರೆ ಸಂಪೂರ್ಣ ಕಣ್ಣು ಕುರುಡಾಗಿರುವ ಅಥವಾ ಬೆಳಕನ್ನು ಗ್ರಹಿಸಿದರೂ ಯಾವುದೇ ದೂರದಲ್ಲಿ ಆಕಾರ ನೋಡುವ ಸಾಮರ್ಥ್ಯ ಹೊಂದಿರದ ಅಥ್ಲೀಟ್‌ಗಳು ಸ್ಪರ್ಧಿಸುವ ವಿಭಾಗ. 2024: ಶೂಟರ್ ರುಬಿನಾ ಫ್ರಾನ್ಸಿಸ್ ಪ್ಯಾರಾ ಕಂಚಿಗೆ ಕಿಸ್..! 1 ಅಂಕದಲ್ಲಿ ಪದಕ ಮಿಸ್ ಮಾಡಿಕೊಂಡ ರಾಕೇಶ್‌! ಭಾರತ ಪದಕ ಭರವಸೆಯಾಗಿದ್ದ ಆರ್ಚರಿ ಪಟು ರಾಕೇಶ್‌ ಕುಮಾರ್‌ ಕಂಚಿನ ಪದಕ ಪಂದ್ಯದಲ್ಲಿ ವೀರೋಚಿತ ಸೋಲು ಕಂಡರು. ಭಾನುವಾರ ಪುರುಷರ ಕಾಂಪೌಂಡ್‌ ಮುಕ್ತ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಗೆದ್ದಿದ್ದ ಅವರು, ಸೆಮಿಫೈನಲ್‌ನಲ್ಲಿ ಚೀನಾದ ಕ್ಷಿನ್‌ಲಿಯಾಂಗ್‌ ವಿರುದ್ಧ 143-145ರಲ್ಲಿ ಸೋತರು. ಬಳಿಕ ನಡೆದ ಕಂಚಿನ ಪದಕ ಪಂದ್ಯದಲ್ಲಿ ವಿಶ್ವ ನಂ.1 ರಾಕೇಶ್‌, ಚೀನಾದ ಹೆ ಜಿಯಾಹೊ ವಿರುದ್ಧ 146-147 ಅಂಕಗಳಲ್ಲಿ ಸೋಲುಂಡು ಪದಕ ತಪ್ಪಿಸಿಕೊಂಡರು. ಕುಸಿದ ಸೀನ್‌ ನದಿ ನೀರು ಗುಣಮಟ್ಟ: ಟ್ರಯಥ್ಲಾನ್‌ ಸ್ಪರ್ಧೆಗಳು ಮುಂದೂಡಿಕೆ ಪ್ಯಾರಿಸ್: ಪ್ಯಾರಿಸ್‌ನ ಸೀನ್‌ ನದಿಯ ನೀರು ಭಾರಿ ಮಳೆ ಬಳಿಕ ಕಲುಷಿತಗೊಂಡಿದೆ. ಇದರಿಂದಾಗಿ ಭಾನುವಾರ ನಡೆಯಬೇಕಿದ್ದ ಪ್ಯಾರಾಲಿಂಪಿಕ್ಸ್‌ನ ಟ್ರಯಥ್ಲಾನ್‌ ಸ್ಪರ್ಧೆ ಮುಂದೂಡಲಾಯಿತು. ಶುಕ್ರವಾರ ಹಾಗೂ ಶನಿವಾರ ನಗರದಲ್ಲಿ ಭಾರಿ ಮಳೆಯಾಗಿದೆ. ಇದರಿಂದಾಗಿ ನಗರದ ಇತರ ಭಾಗಗಳ ತ್ಯಾಜ್ಯ ನೀರು ನದಿಗೆ ಸೇರಿದೆ. ನೀರಿನಲ್ಲಿರುವ ಬ್ಯಾಕ್ಟೀರಿಯಾ ಮಟ್ಟ ಕೂಡಾ ಹೆಚ್ಚಾಗಿದ್ದರಿಂದ ಭಾನುವಾರದ ಸ್ಪರ್ಧೆಗಳನ್ನು ಮುಂದೂಡಲು ಆಯೋಜಕರು ನಿರ್ಧರಿಸಿದರು. ಒಲಿಂಪಿಕ್ಸ್‌ ಸಂದರ್ಭದಲ್ಲೂ ನದಿ ನೀರು ಕಲುಷಿತಗೊಂಡ ಕಾರಣ ಸ್ಪರ್ಧಿಗಳು ಅಸ್ವಸ್ಥಗೊಂಡಿದ್ದರು. ಕೆಲ ಸ್ಪರ್ಧೆಗಳನ್ನು ಮುಂದೂಡಲಾಗಿತ್ತು.