ಮಲೆನಾಡ ಕತೆಯ ಕುತೂಹಲಕರ ಪ್ರಯಾಣ ಗೌರಿಶಂಕರ್, ಬಿಂದು ಶಿವರಾಮ್, ಹರಿಣಿ, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ನಟನೆಯ ಕೆರೆಬೇಟೆ ಸಿನಿಮಾ ರಿಲೀಸ್ ಆಗಿದೆ. ಚಿತ್ರ ಹೇಗಿದೆ? ಆರ್.ಎಸ್. ಮಲೆನಾಡ ಭಾಗದ ಕಾಡಿನ ನಿಗೂಢತೆ, ಮಳೆಯ ಚೆಂದ, ಮಣ್ಣಿನ ಸೊಗಸು, ಕೆರೆಬೇಟೆಯ ಹುಮ್ಮಸ್ಸು ಎಲ್ಲವನ್ನೂ ದಾಟಿಸುವ ಕೊಂಚ ವಿಭಿನ್ನವಾಗಿ ಕಾಣುವ ಕಥನ ಇದು. ನಾಗ ಎಂಬ ಪಾತ್ರಧಾರಿ ಬೀಡಿ ಸೇದುತ್ತಲೇ ಜೈಲಿನಿಂದ ಆಚೆ ಬಂದು ಕೆರೆಬೇಟೆಗೆ ಕೆರೆಗೆ ನುಗ್ಗುವಲ್ಲಿಂದ ಕತೆ ಶುರುವಾಗುತ್ತದೆ. ಅಲ್ಲಿಂದ ಒಂದೊಂದೇ ಪಾತ್ರಗಳು ಪರಿಚಯವಾಗಬೇಕು ಎಂದುಕೊಳ್ಳುವಷ್ಟರಲ್ಲಿ ದೊಡ್ಡದೊಂದು ತಿರುವು ಸಿಕ್ಕಿ ಮುಖ್ಯ ಪಾತ್ರ ಕಾಣೆಯಾಗುತ್ತದೆ ಎಂಬಲ್ಲಿಗೆ ಹುಡುಕಾಟ ಶುರು. ಆಗ ಹಸಿರು ಪರಿಸರದ ಚೆಂದದೊಂದು ಪ್ರೇಮ ಕತೆ ತೆರೆದುಕೊಳ್ಳುತ್ತದೆ. ಈ ಮಧ್ಯೆ ಮಲೆನಾಡ ಆಚರಣೆ, ಸಂಪ್ರದಾಯಗಳನ್ನು ತೋರಿಸುತ್ತಲೇ ಕತೆ ಗಾಢವಾಗುತ್ತಾ ಹೋಗುತ್ತದೆ. ನಿಜಕ್ಕೂ ನೋಡುಗನನ್ನು ಅಚ್ಚರಿಗೊಳಿಸುವುದು ಈ ಸಿನಿಮಾದ ಅಂತ್ಯ. ತಮಾಷೆಯ ದಾರಿ, ವಿಷಾದವೇ ಗುರಿ ನಿರ್ದೇಶನ:ರಾಜ್‌ಗುರು ತಾರಾಗಣ:ಗೌರಿಶಂಕರ್, ಬಿಂದು ಶಿವರಾಮ್, ಹರಿಣಿ, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ರೇಟಿಂಗ್: 3 ಮೊದಲಾರ್ಧದಲ್ಲಿ ಪಾತ್ರಗಳು ಪರಿಚಯವಾಗುತ್ತವೆ. ಮಲೆನಾಡ ಅಂದ ಚೆಂದ ಪ್ರೇಕ್ಷಕನ ಎದೆಗೆ ದಾಟುತ್ತದೆ. ದ್ವಿತೀಯಾರ್ಧದ ಕೊನೆಗೆ ಸಿಗುವ ತಿರುವು ನಿರ್ದೇಶಕರ ಜಾಣ್ಮೆಗೆ ಕನ್ನಡಿಯಾಗಿದೆ. ಇಲ್ಲಿ ನಿರ್ದೇಶಕರು ನೇರವಾಗಿ ಕತೆ ಹೇಳುವ ಶೈಲಿಯನ್ನು ಬಳಸಿಲ್ಲ. ಕತೆ ಕುತೂಹಲವಾಗಿ ಮುಂದುವರಿಯಲು ಬೇಕಾದಂತೆ ಚಿತ್ರಕತೆ ದುಡಿಸಿಕೊಂಡಿದ್ದಾರೆ. ಆ ಮಟ್ಟಿಗೆ ಅವರ ಬರವಣಿಗೆ ಸೊಗಸಾಗಿದೆ. ನಾಯಕ ನಟ ಗೌರಿಶಂಕರ್ ಒಬ್ಬ ಹುಂಬನ, ಅತಿಕೋಪಿಯ ಪಾತ್ರದಲ್ಲಿ ಮೆಚ್ಚಿಕೊಳ್ಳುವಂತೆ ನಟಿಸಿದ್ದಾರೆ. ನಾಯಕ ನಟಿ ಬಿಂದು ಶಿವರಾಮ್ ಗಮನ ಸೆಳೆಯುತ್ತಾರೆ. ಗೋಪಾಲಕೃಷ್ಣ ದೇಶಪಾಂಡೆ ಎಂದಿನಂತೆ ಇಲ್ಲೂ ಮಿಂಚಿದ್ದಾರೆ. ಖ್ಯಾತ ನಿರ್ದೇಶಕನ ಕಥೆ ವ್ಯಥೆ ದುಃಖ ದುಮ್ಮಾನ ಆರಂಭದಲ್ಲಿ ತಣ್ಣಗೆ ಸಾಗುವ ಈ ಸಿನಿಮಾ ಕೊನೆಯ ಹೊತ್ತಿಗೆ ಹಚ್ಚುವ ಬೆಂಕಿಯಿಂದಾಗಿ ಸುದೀರ್ಘ ನಿಟ್ಟುಸಿರು ಹೊರಹೊಮ್ಮುತ್ತದೆ. ಅದೇ ಈ ಸಿನಿಮಾದ ಹೆಚ್ಚುಗಾರಿಕೆ.