ಕೈಲಾಸಕ್ಕೆ ಭೇಟಿ ಬೆನ್ನಲ್ಲೇ ಪ್ರಧಾನಿ ಮೋದಿಯಿಂದ ಅಮಿತಾಭ್ ಬಚ್ಚನ್​​ಗೆ ಬಂತೊಂದು ಆಹ್ವಾನ! ಪ್ರಧಾನಿ ನರೇಂದ್ರ ಮೋದಿಯವರು ನಟ ಅಮಿತಾಭ್​ ಬಚ್ಚನ್​ ಅವರಿಗೆ ಗುಜರಾತಿನ ರಣ್ ಉತ್ಸವಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಹಿಂದೆ ಉತ್ತರಾಖಂಡಕ್ಕೆ ಭೇಟಿ ನೀಡಿ ಅಲ್ಲಿನ ಪ್ರಸಿದ್ಧ ಆಧ್ಯಾತ್ಮಿಕ ಕ್ಷೇತ್ರವಾದ ಪಿಥೋರ್‌ಗಢ್‌ನಲ್ಲಿರುವ ಪವಿತ್ರ ಪಾರ್ವತಿ ಕುಂಡದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಭಾರತ-ಚೀನಾ ಗಡಿಯಲ್ಲಿರುವ ಪಿಥೋರ್‌ಗಢಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ ಎನಿಸಿಕೊಂಡ ನರೇಂದ್ರ ಮೋದಿಯವರು ಗ್ರಾಮಸ್ಥರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದರು. ಸ್ಥಳೀಯ ಸಾಂಪ್ರದಾಯಿಕ ಉಡುಗೆ ಜೊತೆಗೆ ತಲೆಗೆ ಪೇಟ ತೊಟ್ಟ ಪ್ರಧಾನಿ ಪೂಜೆಯಲ್ಲಿ ಪಾಲ್ಗೊಂಡು ಡಮರುಗ ಮತ್ತು ಶಂಖನಾದಗಳೊಂದಿಗೆ ಶಿವನನ್ನು ಪ್ರಾರ್ಥಿಸಿದರು. ಅಲ್ಲಿಂದ ಪ್ರಧಾನಿ, ಜೋಲಿಂಗ್‌ಕಾಂಗ್‌ನ ಪಾರ್ವತಿ ಕುಂಡದ ತಪ್ಪಲಿನಲ್ಲಿರುವ ಶಿವ-ಪಾರ್ವತಿ ದೇವಸ್ಥಾನಕ್ಕೂ ಭೇಟಿ ನೀಡಿ ಅಲ್ಲಿಯೂ ಪೂಜೆ ನೆರವೇರಿಸಿದರು. ಜಗದೇಶ್ವರ ಧಾಮ ಮತ್ತು ಗುಂಜಿ ಗ್ರಾಮಕ್ಕೂ ಭೇಟಿ ನೀಡಿದರು. ಇದಾದ ನಂತರ ಕೈಲಾಸ ಶಿಖರದ ಮುಂದೆ ಕೆಲಕಾಲ ಕುಳಿತು ಧ್ಯಾನ ಮಾಡಿದರು. ಅಲ್ಲಿಂದ ಗುಂಜಿ ಗ್ರಾಮಕ್ಕೆ ಆಗಮಿಸಿ ಸ್ಥಳೀಯರೊಂದಿಗೆ ಸಂವಾದ ನಡೆಸಿದ್ದರು. ಅಲ್ಲದೇ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರೊಂದಿಗೆ ಸ್ಥಳೀಯ ಕಲಾಕೃತಿಗಳನ್ನು ಪ್ರದರ್ಶಿಸಿದ ಪ್ರದರ್ಶನದಲ್ಲಿ ಮೋದಿ ಭಾಗವಹಿಸಿದ್ದರು. ಇಷ್ಟೆಲ್ಲಾ ಮಾಡಿದ ಬಳಿಕ, ಪ್ರಧಾನಿ ನರೇಂದ್ರ ಮೋದಿಯವರು, ಪುರಾಣ ಪ್ರಸಿದ್ಧ ಪಾರ್ವತಿ ಕುಂಡ ಮತ್ತು ಜಾಗೇಶ್ವರ ದೇವಾಲಯಗಳಿಗೆ ಭೇಟಿ ನೀಡಿದ್ದ ಕುರಿತು ಫೋಟೋ ಸಮೇತ ತಮ್ಮ ಎಕ್ಸ್​ () ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದರು. ಇದನ್ನು ನೋಡಿದ ಬಾಲಿವುಡ್​ ನಟ ಬಿಗ್​ ಬಿ ಅಮಿತಾಭ್​ ಬಚ್ಚನ್​ ತಾವು ಈ ಸ್ಥಳಕ್ಕೆ ಜೀವಮಾನದಲ್ಲಿಯೇ ಹೋಗದುದಕ್ಕೆ ವಿಷಾದ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದ್ದರು. ಕೈಲಾಸ ಪರ್ವತದ ಧಾರ್ಮಿಕತೆ, ನಿಗೂಢತೆ, ದೈವಿಕತೆ ಬಹಳ ಸಮಯದಿಂದ ನನಗೆ ಕುತೂಹಲ ಕೆರಳಿಸುತ್ತಿದೆ. ಆದರೆ ದುರಂತವೆಂದರೆ ನಾನು ಅಲ್ಲಿಗೆ ಇದುವರೆಗೂ ಭೇಟಿ ನೀಡುವುದಕ್ಕೆ ಸಾಧ್ಯವಾಗಲೇ ಇಲ್ಲ ಎಂದು ಅಮಿತಾಭ್​ ಬಚ್ಚನ್​ ಪ್ರಧಾನಿ ಮೋದಿಯವರ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ್ದರು. : ಗುಜರಾತ್​ ತಲುಪಿದ ಡಾ. ಬ್ರೋ ಕ್ರಿಕೆಟ್​ನ ಏನೇನ್​ ಮಾಹಿತಿ ನೀಡಿದ್ರು ಕೇಳಿ... ಇದನ್ನು ಓದುತ್ತಲೇ ಪ್ರಧಾನಿಯವರು ಅಮಿತಾಭ್​ ಬಚ್ಚನ್​ ಅವರಿಗೆ ಬಹುದೊಡ್ಡ ಆಫರ್​ ನೀಡಿದ್ದಾರೆ. ಅಮಿತಾಭ್​ ಅವರ ಪ್ರತಿಕ್ರಿಯೆಗೆ ಪುನಃ ಪ್ರತಿಕ್ರಿಯೆ ನೀಡಿರುವ ಪ್ರಧಾನಿಯವರು, ಅಮಿತಾಭ್ ಬಚ್ಚನ್ ಅವರ ಬಹುಕಾಲದ ಬಯಕೆಗೆ ಸ್ಪಂದಿಸಿದ್ದಾರೆ. ನಾನು ಪಾರ್ವತಿ ಕುಂಡ ಮತ್ತು ಜಾಗೇಶ್ವರ ದೇವಾಲಯಗಳಿಗೆ ಭೇಟಿ ನೀಡಿದ್ದು ನಿಜಕ್ಕೂ ಮೋಡಿಮಾಡುವಂತಿತ್ತು ಎಂದಿರುವ ಪ್ರಧಾನಿ, ಮುಂಬರುವ ವಾರಗಳಲ್ಲಿ ರಣ್ ಉತ್ಸವವು ಪ್ರಾರಂಭವಾಗುತ್ತಿದೆ. ಹೀಗಾಗಿ ಗುಜರಾತ್​ನ ಕಛ್​ಗೆ ಭೇಟಿ ನೀಡುವಂತೆ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಅಲ್ಲದೇ ಏಕತೆಯ ಪ್ರತಿಮೆಗೆ ( ) ನಿಮ್ಮ ಭೇಟಿ ಇನ್ನೂ ಬಾಕಿ ಇದೆ ಎಂದು ಪ್ರಧಾನಿಯವರು ಅಮಿತಾಭ್​ ಬಚ್ಚನ್​ ಅವರಿಗೆ ಹೇಳಿದ್ದು, ಇದಕ್ಕೆ ಆಹ್ವಾನ ನೀಡಿದ್ದಾರೆ. ಇನ್ನು ತಮ್ಮ ಭೇಟಿಯ ಕುರಿತು ಟ್ವಿಟರ್​ನಲ್ಲಿ ಬರೆದುಕೊಂಡಿರುವ ಪ್ರಧಾನಿ, ಉತ್ತರಾಖಂಡದಲ್ಲಿ ಕುಮಾವೂನ್ ಪ್ರದೇಶದ ಪಾರ್ವತಿ ಕುಂಡ, ಜಗೇಶ್ವರ ದೇವಾಲಯಗಳನ್ನು ನೋಡಲೇಬೇಕು. ಇಲ್ಲಿನ ಪ್ರಕೃತಿಯ ಸೌಂದರ್ಯ ಮತ್ತು ದೈವತ್ವವು ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ. ಉತ್ತರಾಖಂಡದಲ್ಲಿ ಭೇಟಿ ನೀಡಲು ಯೋಗ್ಯವಾದ ಅನೇಕ ಸ್ಥಳಗಳಿವೆ. ಪ್ರವಾಸಿಗರೂ ಇಲ್ಲಿಗೆ ಸಾಕಷ್ಟು ಬರುತ್ತಾರೆ. ನಾನು ಕೂಡ ಈ ರಾಜ್ಯಕ್ಕೆ ಹಲವು ಬಾರಿ ಭೇಟಿ ನೀಡಿದ್ದೇನೆ. ಕೇದಾರನಾಥ, ಬದರಿನಾಥ ಮುಂತಾದ ಪುಣ್ಯ ಕ್ಷೇತ್ರಗಳಿಗೆ ಹೋದೆ. ಈ ಸ್ಥಳಗಳು ನನಗೆ ಮಧುರವಾದ ಭಾವನೆಯನ್ನು ತಂದವು. ಆದರೆ ನಾನು ನನ್ನ ಜೀವನದಲ್ಲಿ ಪಾರ್ವತಿ ಕುಂಡ್ ಮತ್ತು ಜಗೇಶ್ವರ ದೇವಾಲಯಗಳಿಗೆ ಭೇಟಿ ನೀಡುವುದನ್ನು ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ. ಅಮಿತಾಭ್​ ಪುತ್ರಿ ಶ್ವೇತಾಗೆ ಅತ್ತಿಗೆ ಐಶ್ವರ್ಯ ರೈ ಕಂಡ್ರೆ ಸಿಟ್ಟೇಕೆ? ವೈರಲ್​ ವಿಡಿಯೋದಿಂದ ಕಾರಣ ಬಹಿರಂಗ