ತಮಿಳುನಾಡು ವಿಧಾನಸಭೆಯಲ್ಲಿ 'ಜಯಾ ಪ್ರತಿಜ್ಞೆ' ನೆನೆದ ನಿರ್ಮಲಾ ಸೀತಾರಾಮನ್: ಅಂದು ಆಗಿದ್ದೇನು? ಮಣಿಪುರದಲ್ಲಿ ಹೆಣ್ಣಿಗೆ ಅವಮಾನವಾಯ್ತು ಎಂದು ಬೊಬ್ಬೆ ಹೊಡೆಯುತ್ತಿರುವ ಡಿಎಂಕೆ ನಾಯಕಿ ಸಂಸದೆ ಕನ್ನಿಮೋಳಿ ಅವರಿಗೆ ಅಂದು ತಮಿಳುನಾಡು ವಿಧಾನಸಭೆಯಲ್ಲಿ ಜಯಲಲಿತಾ ಅವರನ್ನು ಅವಮಾನಿಸಿರುವುದನ್ನು ಡಿಎಂಕೆ ಯಾವ ರೀತಿ ನೋಡಿತು ಎಂಬುದನ್ನು ನೆನಪಿಸುವ ಮೂಲಕ ಸೀತಾರಾಮನ್ ಸಂಸದೆ ಕನ್ನಿಮೋಳಿಗೆ ತಿರುಗೇಟು ನೀಡಿದ್ದಾರೆ. ನವದೆಹಲಿ: ನಮ್ಮ ಭಾರತದ ಇತಿಹಾಸದಲ್ಲಿ ಹೆಣ್ಣನ್ನು ಕೆಣಕಿ ಉಳಿದವರೇ ಇಲ್ಲ, ಹೆಣ್ಣಿನಿಂದಾಗಿ ರಾಮಾಯಣ ನಡೆಯಿತು, ಹೆಣ್ಣನ್ನು ಕೆಣಕಿ ದುರ್ಯೋಧನ ಸರ್ವನಾಶವಾದ, ಹೆಣ್ಣನ್ನು ಕೆಣಕಿ ಬದುಕಿ ಉಳಿದವರಿಲ್ಲ, ಹೆಣ್ಣನ್ನು ಕೆಣಕಿದರೆ ಏನಾಗುವುದು ಎಂಬುವುದಕ್ಕೆ ಈ ಮಹಾಕಾವ್ಯಗಳೇ ಉದಾಹರಣೆಗಳು. ಹಾಗಿದ್ದು ಹೆಣ್ಣಿನ ಮೇಲೆ ಶೋಷಣೆಗಳ ಮೇಲೆ ಶೋಷಣೆ ನಡೆಯುತ್ತಿದೆ. ಮಣಿಪುರದಲ್ಲಿ ಹೆಣ್ಣಿನ ಅತ್ಯಾಚಾರ ಹೆಣ್ಮಕ್ಕಳ ಬೆತ್ತಲೆ ಮೆರವಣಿಗೆಯಿಂದಾಗಿ ಅಲ್ಲಿನ ಕ್ರೌರ್ಯತೆ ಇಡೀ ದೇಶವೇ ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಈಗ ಇದೇ ವಿಚಾರದಿಂದಾಗಿ ಮಣಿಪುರ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡು ಸಂಸತ್ ಕಲಾಪದಲ್ಲಿ ಕೋಲಾಹಲವೆಬ್ಬಿಸುತ್ತಿದೆ. ಹೆಣ್ಣಿನ ಮೇಲೆ ಶೋಷಣೆ ಆಯ್ತು, ಈ ಬಗ್ಗೆ ಸರ್ಕಾರ, ಪ್ರಧಾನಿ ಮಾತನಾಡುತ್ತಿಲ್ಲವೆಂದು ವಿರೋಧ ಪಕ್ಷಗಳು ಸಂಸತ್‌ನಲ್ಲಿ ಅವಿಶ್ವಾಸ ಮತವನ್ನು ಮಂಡನೆ ಮಾಡಿದವು. ಈಗ ಈ ಅವಿಶ್ವಾಸದ ಮತದ ಅಡಿ ಮೂರನೇ ದಿನದ ಚರ್ಚೆ ನಡೆಯುತ್ತಿದೆ. ಈ ಚರ್ಚೆಯ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಂದು ತಮಿಳುನಾಡು ವಿಧಾನಸಭೆ ಕಲಾಪದಲ್ಲಿ ಓರ್ವ ಹೆಣ್ಣಾಗಿದ್ದ ತಮಿಳುನಾಡು ಮಾಜಿ ಸಿಎಂ ಎಐಎಡಿಎಂಕೆ ನಾಯಕಿ ಜಯಲಲಿತಾ ಅವರಿಗೆ ಯಾವ ರೀತಿ ಅವಮಾನ ಮಾಡಲಾಯ್ತು ಎಂಬುದನ್ನು ನೆನಪಿಸಿಕೊಂಡಿದ್ದಾರೆ. ಅವಿಶ್ವಾಸಮತದ ಚರ್ಚೆ ವೇಳೆ ಮಾತನಾಡಿದ ಅವರು ಎಲ್ಲಾ ಕಡೆ ಹೆಣ್ಣಿಗೆ ಅವಮಾನವಾಗುತ್ತಿದೆ ಎಂಬುದನ್ನು ನಾನು ಒಪ್ಪಿಕೊಳ್ಳುವೆ, ದೆಹಲಿ, ಮಣಿಪುರ ರಾಜಸ್ಥಾನ ಎಲ್ಲಾ ಕಡೆಯೂ ಹೆಣ್ಣಿಗೆ ಅವಮಾನವಾಗುತ್ತಿದೆ ಇದನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಇದರಲ್ಲಿ ರಾಜಕೀಯ ಆಡಬಾರದು. ಆದರೆ ನಾನು ಇದೇ ವೇಳೆ 1989ರಲ್ಲಿ ತಮಿಳುನಾಡು ಸಿಎಂ ಹಾಗೂ ಎಐಎಡಿಎಂಕೆ ನಾಯಕಿಯಾಗಿದ್ದ ಜಯಲಲಿತಾ ಅವರನ್ನು ತಮಿಳುನಾಡಿನ ವಿಧಾನಸಭಾ ಕಲಾಪದಲ್ಲಿ ಹೇಗೆ ಅವಮಾನಿಸಲಾಯ್ತು ಎಂಬುದನ್ನು ನೆನಪಿಸಿಕೊಳ್ಳಲು ಬಯಸುವೆ ಎಂದ ನಿರ್ಮಲಾ ಸೀತಾರಾಮನ್ 1989ರ ಮಾರ್ಚ್‌ 25 ರಂದು ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಆಘಾತಕಾರಿ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ಅದು 1989ರ ಮಾರ್ಚ್‌ 25 ಆಗ ಜಯಲಲಿತಾ ಸಿಎಂ ಆಗಿರಲಿಲ್ಲ, ಅಂದು ಜಯಲಲಿತಾ ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕಿಯಾಗಿದ್ದರು, ಸದನ ಹಾಗೂ ಆಕೆ ಓರ್ವ ಸ್ತ್ರೀ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೇ ಆಡಳಿತ ಪಕ್ಷ ಡಿಎಂಕೆಯ ಸದಸ್ಯರು ಜಯಲಲಿತಾ ಅವರ ಸೀರೆಯನ್ನು ಎಳೆದಾಡಿದರು. ಓರ್ವ ಸ್ತೀಯ ಸೀರೆ ಕಿತ್ತಾಡಿ ಇಡೀ ಸದನದಲ್ಲಿ ಅವಮಾನಿಸುತ್ತಿದ್ದರೆ ಅಲ್ಲೇ ಕುಳಿತಿದ್ದ ಡಿಎಂಕೆ ಸದಸ್ಯರು ಆಕೆಯನ್ನು ಅಪಹಾಸ್ಯ ಮಾಡಿ ನಕ್ಕಿದ್ದರು. ಈಗ ಕೌರವರು , ದ್ರೌಪದಿ ಬಗ್ಗೆ ಮಾತನಾಡುವವರು ಅಂದು ಡಿಎಂಕೆ ಜಯಲಲಿತಾರಿಗೆ ಮಾಡಿದ ಅವಮಾನವನ್ನು ಮರೆತಿದೆಯಾ? ನೀವು ಅವರ ಸೀರೆಯನ್ನು ಎಳೆದಾಡಿದ್ದೀರಿ? ನೀವು ಅವರನ್ನು ಕೆಟ್ಟದಾಗಿ ಅವಮಾನಿಸಿದ್ದೀರಿ ಎಂದು ನಿರ್ಮಲಾ ಸೀತಾರಾಮನ್‌ ಕೇಳಿದರು. ಈ ಅವಮಾನಕಾರಿ ಘಟನೆಯ ವೇಳೆಯೇ ಜಯಲಲಿತಾ ಅವರು ಪ್ರತಿಜ್ಞೆಯೊಂದನ್ನು ಮಾಡುತ್ತಾರೆ. ಈ ರೀತಿ ದ್ರೌಪದಿಯನ್ನು ಅವಮಾನಿಸಿದಂತೆ ತನ್ನ ಸೀರೆ ಎಳೆದಾಡಿದ ಈ ಸದನಕ್ಕೆ ನಾನು ಮತ್ತೆ ಬರುವುದಾದರೆ ಸಿಎಂ ಆಗಿಯೇ ಬರುತ್ತೇನೆ ಎಂದು ಶಪಥವೊಂದನ್ನು ಮಾಡುತ್ತಾರೆ ಹಾಗೆಯೇ ಅವರು ಎರಡು ವರ್ಷಗಳ ನಂತರ ತಮಿಳುನಾಡಿನ ಸಿಎಂ ಆಗಿಯೇ ಸದನಕ್ಕೆ ಬಂದರು. ಈ ಘಟನೆಯನ್ನು ವಿವರಿಸುವ ಮೂಲಕ, ಇತ್ತ ಮಣಿಪುರದಲ್ಲಿ ಹೆಣ್ಣಿಗೆ ಅವಮಾನವಾಯ್ತು ಎಂದು ಬೊಬ್ಬೆ ಹೊಡೆಯುತ್ತಿರುವ ಡಿಎಂಕೆ ನಾಯಕಿ ಸಂಸದೆ ಕನ್ನಿಮೋಳಿ ಅವರಿಗೆ ಅಂದು ತಮಿಳುನಾಡು ವಿಧಾನಸಭೆಯಲ್ಲಿ ಜಯಲಲಿತಾ ಅವರನ್ನು ಅವಮಾನಿಸಿರುವುದನ್ನು ಡಿಎಂಕೆ ಯಾವ ರೀತಿ ನೋಡಿತು ಎಂಬುದನ್ನು ನೆನಪಿಸುವ ಮೂಲಕ ಸೀತಾರಾಮನ್ ಸಂಸದೆ ಕನ್ನಿಮೋಳಿಗೆ ತಿರುಗೇಟು ನೀಡಿದ್ದಾರೆ. ತಮಿಳುನಾಡು ವಿಧಾನಸಭೆಯಲ್ಲಿ ಜಯಲಲಿತಾ ವಸ್ತ್ರಾಪಹರಣ 1989ರ ಮಾರ್ಚ್‌ 25 ರಂದು ತಮಿಳುನಾಡು ವಿಧಾನಸಭೆಯ ( ) ವಿರೋಧ ಪಕ್ಷದ ನಾಯಕಿ ( ) ಹಾಗೂ ಆ ಸ್ಥಾನವನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಜಯಲಲಿತಾ ಮೇಲೆ ತಮಿಳುನಾಡು ವಿಧಾನಸಭೆಯಲ್ಲಿ ಅಮಾನವೀಯವಾಗಿ ಥಳಿಸಲಾಯ್ತು. ಜಯಲಲಿತಾ ಅವರ ಎಐಎಡಿಎಂಕೆ ಪಕ್ಷ ಹಾಗೂ ಆಗ ಸಿಎಂ ಆಗಿದ್ದ ಕರುಣಾನಿಧಿ ಅವರ ಡಿಎಂಕೆ ಪಕ್ಷದ ಸದಸ್ಯರ ಮಧ್ಯೆ ಗಲಾಟೆ ಆರಂಭವಾಗಿತ್ತು. ತನ್ನನ್ನು ಕ್ರಿಮಿನಲ್‌ () ಎಂದು ಕರೆದ ಜಯಲಲಿತಾರನ್ನು ಕರುಣಾನಿಧಿ ಎಲ್ಲ ಕೆಟ್ಟ ಪದಗಳನ್ನು ಕರೆದು ಬೈದಿದ್ದಲ್ಲದೇ ನಂತರ ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ಮಾಡಲಾಯ್ತು. ಅಲ್ಲದೇ ಆಕೆಯ ಸೀರೆಯನ್ನು ಮೃಗಗಳಂತೆ ಎಳೆದಾಡಲಾಯ್ತು. ಈ ಘಟನೆಯಿಂದ ಅವಮಾನಿತರಾದ ಜಯಲಲಿತಾ ಅವರು ಅಲ್ಲೇ ನಿಂತು ಪ್ರತಿಜ್ಞೆಯೊಂದನ್ನು ಮಾಡುತ್ತಾರೆ. ಒಂದು ವೇಳೆ ಈ ಸದನಕ್ಕೆ ನಾನು ಮತ್ತೆ ಬರುವುದಾದರೆ ಕೇವಲ ಸಿಎಂ ಆಗಿ ಮಾತ್ರ ಬರುವೆ ಎಂದು ಅಲ್ಲೇ ಶಪಥ ಮಾಡುತ್ತಾರೆ. ನಂತರ ನಡೆದಿದ್ದು ಇತಿಹಾಸ. ಜಯಲಲಿತಾ ತಾವು ಮಾಡಿದ ಶಪಥದಂತೆ ಎರಡು ವರುಷಗಳ ನಂತರ ತಮಿಳುನಾಡಿನ ಸಿಎಂ ಆಗಿಯೇ ವಿಧಾನಸಭೆಗೆ ಕಾಲಿಡುತ್ತಾರೆ. ಅಲ್ಲದೇ ಘಟನೆ ನಡೆದ ವೇಳೆ ಸಿಎಂ ಆಗಿದ್ದ ಕರುಣಾನಿಧಿಯನ್ನು ಮನೆಗೆ ಕಳುಹಿಸುವಲ್ಲಿ ಯಶಸ್ವಿಯಾಗುತ್ತಾರೆ.