ಬೆಂಗಳೂರು- ಹೊಸೂರು ಮೆಟ್ರೋ ಮಾರ್ಗಕ್ಕೆ ಕನ್ನಡಿಗರ ವಿರೋಧ: ತಮಿಳರ ಸಂಖ್ಯೆ ಜಾಸ್ತಿಯಾಗ್ತಿದೆ ಎಂದು ಕರವೇ ಆಕ್ರೋಶ ದಕ್ಷಿಣ ಭಾರತದ ಮೊದಲ ಅಂತರಾಜ್ಯ ಮೆಟ್ರೋ ಮಾರ್ಗವಾದ ಬೊಮ್ಮಸಂದ್ರ-ಹೊಸೂರು ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ವಿರೋಧ ವ್ಯಕ್ತಪಡಿಸಿದೆ. ಬೆಂಗಳೂರು (ಆ.03)ದೇಶದ ದಕ್ಷಿಣ ಭಾರತದ ಮೊದಲ ಅಂತರಾಜ್ಯ ಮೆಟ್ರೋ ಮಾರ್ಗವಾದ ಬೊಮ್ಮಸಂದ್ರ-ಹೊಸೂರು ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಈಗಾಗಲೇ ಚನ್ನೈ ಮೆಟ್ರೋದಿಂದ ಅಧ್ಯಯನ ಟೆಂಡರ್‌ ಕರೆಯಲು ಮುಂದಾಗಿದ್ದು, ಇದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ವಿರೋಧ ವ್ಯಕ್ತಪಡಿಸಿದೆ. ಬೊಮ್ಮಸಂದ್ರ-ಹೊಸೂರು ಮೆಟ್ರೋ ಅಧ್ಯಯನಕ್ಕೆ ಟೆಂಡರ್ ಕರೆಯಲು ಮುಂದಾಗಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ ಖಂಡನೆ ವ್ಯಕ್ತಪಡಿಸಿದ್ದಾರೆ. ಬೊಮ್ಮಸಂದ್ರ - ಹೊಸೂರು ಮೆಟ್ರೋ ಆಗುವುದಕ್ಕೆ ಬಿಡೋದಿಲ್ಲ. ಒಂದು ವೇಳೆ ಮೆಟ್ರೋ ಆದರೆ ತಮಿಳರಿಗೆ ರೆಡ್ ಕಾರ್ಪೆಟ್ ಹಾಸಿದ ಹಾಗಾಗುತ್ತದೆ. ನಾವು ಕನ್ನಡಿಗರು ಯಾರೂ ಕೆಲಸ ಅರಸಿ ಹೊಸೂರಿಗೆ ಹೋಗೋದಿಲ್ಲ. ಈಗಾಗಲೇ ಬೆಂಗಳೂರಿನಲ್ಲಿ ತಮಿಳರ ಸಂಖ್ಯೆ ಜಾಸ್ತಿಯಾಗಿದೆ. ನಮ್ಮ ಉದ್ಯೋಗವನ್ನು ಕಿತ್ತುಕೊಳ್ತಿದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. : ಕನ್ನಡಿಗರ ವಿರೋಧ ನಡುವೆಯೂ ಹೊಸೂರಿಗೆ ಮೆಟ್ರೋ ವಿಸ್ತರಣೆ: ಚನ್ನೈ ಮೆಟ್ರೋದಿಂದ ವರದಿ ತಯಾರಿ ಕಾವೇರಿ ನೀರಿಗೆ ತಗಾದೆ ತೆಗೆದವರಿಗೆ ಮೆಟ್ರೋ ಕಲ್ಪಿಸಬೇಡಿ:ನಮಗೆ ಕಾವೇರಿ ನೀರಿನ ವಿಚಾರದಲ್ಲಿ ತಗಾದೆ ತೆಗೆದವರು ತಮಿಳರು ಆಗಿದ್ದಾರೆ. ಅವರಿಗೆ ನಾವ್ಯಾಕೆ ಮೆಟ್ರೋ ಮಾಡೋಕೆ ಬಿಡ್ಬೇಕು? ಹೊಸೂರಿನವರೆಗೆ ಮೆಟ್ರೋ ಮಾರ್ಗವನ್ನು ನಿರ್ಮಾಣ ಮಾಡುವ ಬದಲು ಬೆಂಗಳೂರಿನ ಗ್ರಾಮಾಂತರ ಪ್ರದೇಶಗಳಲ್ಲಿ ಮೆಟ್ರೋ ಸೇವೆ ಕಲ್ಪಿಸಲಿ. ನಮ್ಮ ಕನ್ನಡಿಗರಿಗೆ ಇದರಿಂದ ಉಪಯೋಗ ಆಗುತ್ತದೆ. ದೇವನಹಳ್ಳಿ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಭಾಗದಿಂದ ಬರುವವರಿಗೆ ಇದರಿಂದ ಸಹಾಯ ಆಗುತ್ತದೆ. ಸುಖಾಸುಮ್ಮನೆ ಕನ್ನಡಿಗರನ್ನು ಕೆಣಕುವಂತಹ ಕೆಲಸವನ್ನು ಕೈಬಿಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ರಾಜ್ಯದ ಮೆಟ್ರೋಗೆ ತಮಿಳು ನಟರ ಹೆಸರಿಡ್ತಾರೆ:ಕೇಂದ್ರ ಸರ್ಕಾರ ಈ ತರಹದ ನೀತಿಗಳಿಂದ ಈಗಾಗಲೇ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದೆ. ಒಂದು ವೇಳೆ ಮೆಟ್ರೋಗೆ ಅನುಮೋದನೆ ಕೊಟ್ರೆ ತಮಿಳು ನಟರ ಹೆಸರನ್ನೇ ಮೆಟ್ರೋ ಸ್ಟೇಷನ್ ಗೆ ಇಡ್ತಾರೆ. ಅವರ ಬ್ಯಾನರ್ ಗಳನ್ನೇ ನಾವು ನೋಡ್ಬೇಕಾಗುತ್ತದೆ. ಈ ಬಗ್ಗೆ ಸಂಸದರನ್ನು, ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನಾವು ಮನವಿ ಮಾಡ್ತೇವೆ. ಇದಕ್ಕೂ ಮೀರಿ ಸರ್ಕಾರ ಮತ್ತು ಬೆಂಗಳೂರು ಮೆಟ್ರೋ ರೇಲ್‌ ನಿಗಮವು ಮೆಟ್ರೋ ಮಾರ್ಗವನ್ನು ಹೊಸೂರುವರೆಗೆ ವಿಸ್ತರಣೆಗೆ ಮಾಡಲು ಮುಂದಾದರಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಗ್ರ ಹೋರಾಟ ಮಾಡುತ್ತೇವೆ ಎಂದು ಪ್ರವೀಣ್‌ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ಅಧ್ಯಯನ ವರದಿ ತಯಾರಿಗೆ ಟೆಂಡರ್‌ ಕರೆದ ಚೆನ್ನೈ ಮೆಟ್ರೋ:ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ () ತಮಿಳುನಾಡಿನ ಹೊಸೂರು ಮತ್ತು ಕರ್ನಾಟಕದ ಬೆಂಗಳೂರು ನಡುವಿನ ದಕ್ಷಿಣ ಭಾರತದ ಮೊದಲ ಅಂತರ-ರಾಜ್ಯ ಮೆಟ್ರೋ ರೈಲು ಸಂಪರ್ಕಕ್ಕೆ ಚಿಂತನೆ ನಡೆಸಿದ್ದು, ಈ ಸಂಬಂಧ ಅಧ್ಯಯನ ವರದಿಯನ್ನು ತಯಾರಿಸಲು ಟೆಂಡರ್ ಕರೆದಿದೆ. 20.5 ಕಿಮೀ ಮೆಟ್ರೋ ಮಾರ್ಗವು ಬೆಂಗಳೂರಿನ ಐಟಿ ಸಿಟಿ ಮತ್ತು ಹೊಸೂರಿನ ಬೊಮ್ಮಸಂದ್ರವನ್ನು ಸಂಪರ್ಕಿಸುತ್ತದೆ. 20.5 ಕಿಮೀ ವಿಸ್ತಾರದಲ್ಲಿ 11.7 ಕಿಮೀ ಕರ್ನಾಟಕದಲ್ಲಿ ಮತ್ತು 8.8 ಕಿಮೀ ತಮಿಳುನಾಡಿನಲ್ಲಿರುತ್ತದೆ. : ಬೊಮ್ಮಸಂದ್ರ-ಹೊಸೂರು ನಡುವೆ ಮೆಟ್ರೋಗೆ ಮರುಜೀವ! ಸೆಪ್ಟಂಬರ್‌ 1ಕ್ಕೆ ಟೆಂಡರ್‌ ಓಪನ್‌:ಹೊಸೂರಿನಿಂದ ಎಲೆಕ್ಟ್ರಾನಿಕ್ಸ್ ಸಿಟಿ ಬಳಿ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಸಾಮೂಹಿಕ ಕ್ಷಿಪ್ರ ಸಾರಿಗೆಯನ್ನು ಪರಿಚಯಿಸಲು ಕಾರ್ಯಸಾಧ್ಯತೆಯ ಅಧ್ಯಯನ ವರದಿಯನ್ನು ತಯಾರಿಸಲು ಸಲಹೆಗಾರರನ್ನು ಆಯ್ಕೆ ಮಾಡಲು ಟೆಂಡರ್ ಆಹ್ವಾನಿಸಿದೆ. ಟೆಂಡರ್ ಅನ್ನು ಸೆಪ್ಟೆಂಬರ್ 1, 2023 ರಂದು ತೆರೆಯುವ ಸಾಧ್ಯತೆಯಿದೆ. ಕರ್ನಾಟಕದಲ್ಲಿ ಬರುವ ಮಾರ್ಗವನನ್ನು ಬಿಎಂಆರ್‌ಸಿಎಲ್‌ ಮತ್ತು ತಮಿಳುನಾಡಿನ ಮಾರ್ಗವನ್ನು ಸಿಎಂಆರ್‌ಎಲ್‌ ನಿರ್ಮಿಸಲಿದೆ.