ಬೆಂಗಳೂರು ಕೃಷಿ ಮೇಳಕ್ಕೆ ರಾಗಿ ಸೇರಿ 5 ಹೊಸ ತಳಿ ಬಿಡುಗಡೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಕೃಷಿ ಮೇಳಕ್ಕೆ ಸಜ್ಜಾಗುತ್ತಿದ್ದು, ವಿವಿ ವ್ಯಾಪ್ತಿಯ 10 ಜಿಲ್ಲೆಗಳ ಹವಾಮಾನಕ್ಕೆ ಪೂರಕವಾದ ರಾಗಿ, ಹಲಸು, ಸಾಮೆ, ಬರಗು, ಸೂರ್ಯಕಾಂತಿ ಬೆಳೆಗಳ 5 ಹೊಸ ತಳಿಗಳನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ವರದಿ- ಸಿದ್ದು ಚಿಕ್ಕಬಳ್ಳೇಕೆರೆ,ಕನ್ನಡಪ್ರಭ ವಾರ್ತೆಬೆಂಗಳೂರು (ಜು.30):ಬಹು ನಿರೀಕ್ಷಿತ ಕೃಷಿ ಮೇಳಕ್ಕೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಸಜ್ಜಾಗುತ್ತಿದ್ದು 10 ಜಿಲ್ಲೆಯ ಹವಾಮಾನಕ್ಕೆ ಪೂರಕವಾದ ರಾಗಿ, ಹಲಸು, ಸಾಮೆ, ಬರಗು, ಸೂರ್ಯಕಾಂತಿ ಬೆಳೆಗಳ 5 ಹೊಸ ತಳಿಗಳನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ನವೆಂಬರ್‌ ಮೊದಲ ವಾರದಲ್ಲಿ ಹೆಬ್ಬಾಳದ ಜಿಕೆವಿಕೆಯಲ್ಲಿ ಕೃಷಿ ಮೇಳ ನಡೆಯುವ ಸಾಧ್ಯತೆಯಿದ್ದು, 5 ಹೊಸ ತಳಿಗಳು ಲೋಕಾರ್ಪಣೆಯಾಗಲಿವೆ. ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷಾಚರಣೆ ಹಿನ್ನೆಲೆಯಲ್ಲಿ 5 ತಳಿಗಳಲ್ಲಿ 3 ಸಿರಿಧಾನ್ಯಗಳೇ ಆಗಿರುವುದು ವಿಶೇಷವಾಗಿದೆ. ರಾಗಿ, ಹಲಸು, ಸಾಮೆ, ಬರಗು ಮತ್ತು ಸೂರ್ಯಕಾಂತಿಯ ಹೊಸ ತಳಿಗಳು ಈ ಬಾರಿ ಮೇಳದಲ್ಲಿ ಆಕರ್ಷಣೆಯಾಗಲಿವೆ. ಈ ಐದು ಹೊಸ ತಳಿಗಳನ್ನೂ ವಿಶ್ವವಿದ್ಯಾಲಯ ವ್ಯಾಪ್ತಿಯ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಮತ್ತು ತುಮಕೂರು ಜಿಲ್ಲೆ ವ್ಯಾಪ್ತಿಯಲ್ಲಿ ರೈತರು ಬೆಳೆಯಬಹುದಾಗಿದೆ. ಬೆಳೆಹಾನಿ ವೈಜ್ಞಾನಿಕ ವರದಿ ಸಲ್ಲಿ​ಸಲು ಸೂಚನೆ: ಸಚಿ​ವ ಮಧು ಬಂಗಾರಪ್ಪ ಮೂರೂವರೆ ತಿಂಗಳಿಗೇ ಕಟಾವು:'ಎಂ.ಎಲ್‌.322 ರಾಗಿ'ಯ ಹೊಸ ತಳಿಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ( ) ಸಂಶೋಧಿಸಿದ್ದು, ಮೂರೂವರೆ ತಿಂಗಳಿಗೇ ಇದು ಕಟಾವಿಗೆ ಬರಲಿದೆ. ಆಗಸ್ಟ್‌ವರೆಗೂ ಬಿತ್ತನೆ ಮಾಡಬಹುದಾಗಿದ್ದು, ಮುಂಗಾರು ವಿಳಂಬಕ್ಕೆ ಸೂಕ್ತವಾದ ತಳಿಯಾಗಿ ದೆ. ಬೆಂಕಿ ರೋಗ, ಇಲಕ ರೋಗ ನಿರೋಧಕ ಶಕ್ತಿ ಹೊಂದಿದ್ದು ಹೆಕ್ಟೇರ್‌ಗೆ 40 ರಿಂದ 45 ಕ್ವಿಂಟಾಲ್‌ ಇಳುವರಿ ಬರಲಿದೆ. ಗಟ್ಟಿಮುಟ್ಟಾದ ಕಾಂಡ ಹೊಂದಿದ್ದು ತೆನೆ ಸುಲಭಕ್ಕೆ ನೆಲಕ್ಕೆ ಬೀಳುವುದಿಲ್ಲ. ಎಲೆ ಅಂಗಮಾರಿ ಮತ್ತು ತೆನೆ ಕಾಡಿಗೆ ರೋಗಕ್ಕೆ ನಿರೋಧಕತೆ ಹೊಂದಿದ್ದು ಮೂರು ತಿಂಗಳಿಗೆ ಕಟಾವಿಗೆ ಬರುವ 'ಜಿಪಿಯುಎಲ್‌-11 ಸಾಮೆ', ಅಧಿಕ ಬೀಜದ ಜೊತೆಗೆ ಎಣ್ಣೆಯಲ್ಲೂ ಇಳುವರಿ ಬರುವ 'ಕೆಬಿಎಸ್‌ಎಚ್‌-85 ಸೂರ್ಯಕಾಂತಿ', 80 ದಿನದಲ್ಲಿ ಫಸಲು ಬರುವ ಹೆಕ್ಟೇರ್‌ಗೆ 18 ರಿಂದ 20 ಕ್ವಿಂಟಾಲ್‌ ಇಳುವರಿ ನೀಡುವ 'ಜಿಪಿಯುಪಿ-32 ಬರಗು' ತಳಿಯನ್ನೂ ವಿವಿಯ ವಿಜ್ಞಾನಿಗಳ ತಂಡ ಸಂಶೋಧಿಸಿದೆ ಎಂದು ವಿವಿ ಮೂಲಗಳು ತಿಳಿಸಿವೆ. ಅಧಿಕ ರುಚಿಯ ಜಿಕೆವಿಕೆ ಕೆಂಪು ಹಲಸು:ಸಾಮಾನ್ಯವಾಗಿ ನಾಲ್ಕೈದು ವರ್ಷಕ್ಕೆ ಹಲಸು ಫಸಲು ನೀಡುತ್ತದೆ. ಆದರೆ, ಮೂರೂವರೆ ವರ್ಷಕ್ಕೇ ಫಸಲು ನೀಡುವ ‘ಜಿಕೆವಿಕೆ ಕೆಂಪು ಹಲಸು’ ತಳಿಯನ್ನು ವಿವಿಯಿಂದ ಸಂಶೋಧಿಸಲಾಗಿದೆ. ದಿಂಡಿನಲ್ಲಿ ಮಾತ್ರ ಅಂಟು ಇದ್ದು ಉದ್ದನೆಯ ತೊಳೆಗಳು ಹೆಚ್ಚಾಗಿದ್ದು ಸಕ್ಕರೆ ಅಂಶ ಅಧಿಕವಾಗಿದೆ. ಮಲ್ಲೇಶ್ವರಂ 18ನೇ ಕ್ರಾಸ್‌ನಲ್ಲಿದ್ದ ಉತ್ತಮ ರುಚಿಯ ಮರವನ್ನು 2007 ರಲ್ಲಿ ಗುರುತಿಸಿ ಬೀಜಗಳನ್ನು ರಕ್ಷಿಸಿ ಜಿಕೆವಿಕೆಯಲ್ಲಿ ಪ್ರಯೋಗ ಮಾಡಿ ಈ ಹೊಸ ತಳಿ ಅಭಿವೃದ್ಧಿಪಡಿಸಲಾಗಿದೆ. ಹಣ್ಣಿನ ವ್ಯಾಪಾರಕ್ಕೆ ಇದು ಸೂಕ್ತವಾಗಿದ್ದು, ತರಕಾರಿಯಾಗಿಯೂ ಬಳಸಬಹುದಾಗಿದೆ. ಟೊಮೆಟೊ ತುಂಬಿಕೊಂಡು ಕೋಲಾರದಿಂದ ರಾಜಸ್ಥಾನಕ್ಕೆ ಹೊರಟಿದ್ದ ಲಾರಿ ನಾಪತ್ತೆ: ರೈತರು ಕಂಗಾಲು ಹೊಸ ತಳಿಗಳ ಬೀಜೋತ್ಪಾದನ ಕಾರ್ಯಕ್ರಮರೈತರಿಗೆ ಉಪಯುಕ್ತವಾಗುವಂತೆ 5 ಹೊಸ ತಳಿಗಳನ್ನು ಕೃಷಿ ಮೇಳದಲ್ಲಿ ಲೋಕಾರ್ಪಣೆಗೊಳಿಸಲಾಗುವುದು. ರೈತರ ಸಹಭಾಗಿತ್ವದಲ್ಲಿ ಹೊಸ ತಳಿಗಳ ಬೀಜೋತ್ಪಾದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.-ಡಾ.ಎಸ್‌.ವಿ.ಸುರೇಶ್‌, ಬೆಂಗಳೂರು ಕೃಷಿ ವಿವಿ ಕುಲಪತಿ