ರಾಮೇಶ್ವರಂ ಕೆಫೆ ಸ್ಪೋಟಕ್ಕೆ ಬಾಂಬ್‌ ತಯಾರಿಸಿದ್ದ ಮುಜಾಮಿಲ್ ಶರೀಫ್‌ 7 ದಿನ ಎನ್‌ಐಎ ವಶಕ್ಕೆ ರಾಮೇಶ್ವರಂ ಕೆಫೆ ಸ್ಫೋಟ ಮಾಡಲು ಬಾಂಬ್‌ ತಯಾರಿಸಿದ್ದ ಎನ್ನಲಾದ ಆರೋಪಿ ಮುಜಾಮಿಲ್ ಶರೀಫ್‌ನನ್ನು ಕೋರ್ಟ್‌ 7 ದಿನಗಳ ಕಾಲ ಎನ್‌ಐಎ ವಶಕ್ಕೆ ಒಪ್ಪಿಸಿ ಆದೇಶಿಸಿದೆ. ಬೆಂಗಳೂರು (ಮಾ.29):ರಾಜ್ಯ ರಾಜಧಾನಿ ಬೆಂಗಳೂರನ್ನೇ ಬೆಚ್ಚಿ ಬೀಳಿಸುವಂತೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಮಾಡಿದ ಆರೋಪಿಗಳ ಪೈಕಿ, ಬಾಂಬ್ ತಯಾರಿಕೆ ಮಾಡಿದ ಆರೋಪಿ ಮುಜಾಮಿಲ್ ಶರೀಫ್‌ನನ್ನು 7 ದಿನಗಳ ಕಾಲ ಎನ್‌ಐಎ ವಶಕ್ಕೆ ಒಪ್ಪಿಸಿ ಕೋರ್ಟ್‌ ಆದೇಶ ಹೊರಡಿಸಿದೆ. ರಾಮೇಶ್ವರಂ ಕೆಫೆಗೆ ಮಾ.1ರಂದು ಬಾಂಬ್‌ ಇಟ್ಟು ಸ್ಫೋಟ ಮಾಡಲಾಗಿತ್ತು. ಇದರಿಂದ ಇಡೀ ಬೆಂಗಳೂರು ನಗರವೇ ಬೆಚ್ಚಿ ಬಿದ್ದಿತ್ತು. ಆದರೆ, ಈ ಪ್ರಕರಣವನ್ನು ರಾಜ್ಯ ಸರ್ಕಾರದಿಂದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಗೆ ವಹಿಸಲಾಗಿದೆ. ಎನ್‌ಐಎನಿಂದ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಬಾಂಬ್ ತಯಾರಿಸಿದ ವ್ಯಕ್ತಿಯನ್ನು ಬಂಧಿಸಿ ಶುಕ್ರವಾರ ಬೆಳಗ್ಗೆ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈತನನ್ನು ಇನ್ನಷ್ಟು ವಿಚಾರಣೆ ಮಾಡುವುದು ಅಗತ್ಯವಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ 7 ದಿನಗಳ ಕಾಲ ಎನ್‌ಐಎ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಲಾಗಿದೆ. : ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಎನ್‌ಐಎಯಿಂದ ಮೊದಲ ಅರೆಸ್ಟ್‌, ಮುಝಮ್ಮಿಲ್ ಷರೀಫ್ ಬಂಧನ! ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ ಆರೋಪಿ ಮುಜಾಮಿಲ್ ಷರೀಫ್ ಬಾಂಬ್‌ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದನು. ಅಲ್ಲದೆ ಉಳಿದ ಆರೋಪಿಗಳ ಜೊತೆ ಸಂಪರ್ಕದ ಹೊಂದಿದ್ದ ಬಗ್ಗೆಯೂ ಎನ್‌ಐಎ ಮಾಹಿತಿ ಸಂಗ್ರಹ ಮಾಡಿತ್ತು. ಇವರೆಲ್ಲರೂ ಡಾರ್ಕ್ ವೆಬ್ ಸೈಟ್ ಮೂಲಕ ಸಂಪರ್ಕ ಮಾಡುತ್ತಿದ್ದರು. ಈಗ ಎನ್‌ಐಎ ಅಧಿಕಾರಿಗಳು ಡಾರ್ಕ್‌ ವೆಬ್‌ಸೈಟ್ ಮೂಲಕವೇ ಸಾಕ್ಷಿಗಳ ಸಂಪರ್ಕ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಜೊತೆಗೆ ಆರೋಪಿಗಳ ಮಧ್ಯೆ ನಡೆದಿದ್ದ ಹಣಕಾಸಿನ ವ್ಯವಹಾರದ ಸಾಕ್ಷಿಗಳ ಸಂಗ್ರಹ ಮಾಡಲಾಗಿದೆ. ಇನ್ನು ಒಂದು ವಾರಗಳ ಕಾಲ ಆರೋಪಿಯನ್ನು ವಶಕ್ಕೆ ಪಡೆದಿರುವ ಎನ್‌ಐಎ ಪೊಲೀಸರು ರಾಮೇಶ್ವರಂ ಕೆಫೆಯ ಬಾಂಬ್ ಬ್ಲಾಸ್ಟ್ ಹಿಂದಿರುವ ಷಡ್ಯಂತ್ರದ ಸಂಬಂಧ ವಿಚಾರಣೆ ನಡೆಸಲಿದ್ದಾರೆ. ಇದಕ್ಕೆ 7 ದಿನಗಳ ಕಾಲಾವಕಾಶ ನೀಡಲಾಗಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಸಹ ಸಂಚುಕೋರನಾಗಿರುವ ಮುಜಾಮಿಲ್ ಶರೀಫ್‌, ಬಾಂಬ್‌ ಬ್ಲಾಸ್ಟ್‌ ಮಾಡಿದ ಆರೋಪಿ ಮುಸ್ಸಾವಿರ್ ಶಜೀಬ್ ಮತ್ತು ಆತನ ಸಹಚರ ಅಬ್ದುಲ್ ಮಥೀನ್ ತಾಹಾ ಅವರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದನು. ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಎನ್‌ಐಎ ತನ್ನ ತನಿಖೆಯಲ್ಲಿ ಮಹತ್ವದ ಹಂತ ತಲುಪಲಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಶುಕ್ರವಾರ ಪ್ರಕರಣದ ಸಹ ಸಂಚುಕೋರ ಮುಜಾಮಿಲ್ ಶರೀಫ್‌ ನ್ಯಾಯಾಲಯದ ಆದೇಶದಂತೆ ಏ.3ರವರೆಗೆ ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಲಿದೆ. ಬಾಕಿ ಆರೋಪಿಗಳಿಗಾಗಿ ಮೂರು ರಾಜ್ಯಗಳ ದೊಡ್ಡ ನಗರಗಳಲ್ಲಿ ಶೋಧ ಕಾರ್ಯ ನಡೆಸುತ್ತಿದೆ. ಇನ್ನು ಮುಜಾಮಿಲ್ ಶರೀಫ್‌ ಬಂಧನಕ್ಕೆ ಕರ್ನಾಟಕದ 12 ಸ್ಥಳಗಳು, ತಮಿಳುನಾಡಿನ 5 ಹಾಗೂ ಉತ್ತರ ಪ್ರದೇಶದ ಒಂದು ಸ್ಥಳದಲ್ಲಿ ಶೋಧ ನಡೆಸಲಾಗಿತ್ತು ಎಂದು ತಿಳಿಸಿದೆ. ಶಂಕಿತ ಉಗ್ರ ಮಹೆಬೂಬ್ ಪಾಷಾ ಮನೆ ಸೇರಿ ರಾಜ್ಯದ ಹಲವು ಕಡೆ ಎನ್ಐಎ ದಾಳಿ ಮಾರ್ಚ್‌ 3 ರಂದು ಎನ್‌ಐಎ ಈ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಮುಸ್ಸಾವಿರ್ ಶಜೀಬ್ ಹುಸೇನ್‌ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಈತನೇ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇಟ್ಟು ಬ್ಲಾಸ್ಟ್‌ ನಡೆಸಿದ್ದ. ಇದಕ್ಕೆ ಇನ್ನೊಬ್ಬ ವ್ಯಕ್ತಿಯ ಸಹಾಯ ಕೂಡ ಇದೆ. ಆತನನ್ನು ಅಬ್ದುಲ್ ಮಥೀನ್ ತಾಹಾ ಎಂದು ಗುರುತಿಸಲಾಗಿದೆ. ಈತ ಎನ್‌ಐಎಗೆ ಇನ್ನೊಂದು ಪ್ರಮುಖ ಪ್ರಕರಣದಲ್ಲೂ ಬೇಕಾದ ವ್ಯಕ್ತಿ ಆಗಿದ್ದಾನೆ. ಇಬ್ಬರೂ ಸದ್ಯ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಜಾರಿಯಲ್ಲಿದೆ ಎಂದು ಪ್ರಕಟಣೆಯಲ್ಲಿ ವಿವರ ನೀಡಿದೆ.