ಇಂದು/ನಾಳೆ ಕರ್ನಾಟಕದ 15-20 ಕ್ಷೇತ್ರಗಳ ಬಿಜೆಪಿ ಪಟ್ಟಿ ಪ್ರಕಟ?, ಇಲ್ಲಿದೆ ಸಂಭಾವ್ಯರ ಪಟ್ಟಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ರಾಷ್ಟ್ರೀಯ ನಾಯಕರನ್ನು ಒಳಗೊಂಡ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಬಿರುಸಿನ ಚರ್ಚೆ ನಡೆದಿದ್ದು, ಇಂದು ಅಥವಾ ನಾಳೆ ಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆಯಿದೆ. ಬೆಂಗಳೂರು(ಮಾ.12):ತೀವ್ರ ಕುತೂಹಲ ಮೂಡಿಸಿರುವ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಒಳಗೊಂಡಂತೆ ಬಿಜೆಪಿಯ ಎರಡನೇ ಪಟ್ಟಿ ಅಂತಿಮಗೊ‍‍ಳಿಸುವ ಸಂಬಂಧ ಸೋಮವಾರ ರಾತ್ರಿ ದೆಹಲಿಯಲ್ಲಿ ಕಸರತ್ತು ನಡೆದಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ರಾಷ್ಟ್ರೀಯ ನಾಯಕರನ್ನು ಒಳಗೊಂಡ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಬಿರುಸಿನ ಚರ್ಚೆ ನಡೆದಿದ್ದು, ಮಂಗಳವಾರ ಅಥವಾ ಬುಧವಾರ ಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆಯಿದೆ. ಕರ್ನಾಟಕದ ಅಭ್ಯರ್ಥಿಗಳ ಪಟ್ಟಿ ಎರಡು ಹಂತಗಳಲ್ಲಿ ಪ್ರಕಟಗೊಳ್ಳಲಿದ್ದು, ಹೆಚ್ಚು ಗೊಂದಲಗಳಿಲ್ಲದ ಸುಮಾರು 15ರಿಂದ 20 ಕ್ಷೇತ್ರಗಳನ್ನು ಮೊದಲ ಪಟ್ಟಿಯಲ್ಲಿ ಘೋಷಿಸುವ ಸಂಭವವಿದೆ. ಚುನಾವಣಾ ಸಮಿತಿ ಸಭೆಯಲ್ಲಿ ರಾಜ್ಯದ ಹಲವು ಕ್ಷೇತ್ರಗಳ ಬಗ್ಗೆ ಒಮ್ಮತಾಭಿಪ್ರಾಯಕ್ಕೆ ಬರಲು ಸಾಧ್ಯವಾಗಿಲ್ಲ. ಈ ಬಗ್ಗೆ ಮಂಗಳವಾರ ಅಥವಾ ಬುಧವಾರ ಸರಣಿ ಸಭೆಗಳು ನಡೆಯಲಿದ್ದು, ಬಳಿಕ ಅಂತಿಮ ನಿರ್ಧಾರಕ್ಕೆ ಬರಬಹುದು ಎನ್ನಲಾಗುತ್ತಿದೆ. 2024: ಮಾ. 15ರಿಂದ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಪ್ರವಾಸ ಹಲವು ಕ್ಷೇತ್ರಗಳಲ್ಲಿ ಪಕ್ಷದ ವರಿಷ್ಠರು ಪ್ರಯೋಗ ನಡೆಸುವ ಮೂಲಕ ಹೊಸಬರಿಗೆ ಅವಕಾಶ ನೀಡುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಆದರೆ, ಇದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸಹಮತ ವ್ಯಕ್ತಪಡಿಸದೆ ಹೊಸ ಪ್ರಯೋಗ ಮಾಡುವುದು ಬೇಡ. ಗೆಲ್ಲುವ ಮಾನದಂಡದ ಆಧಾರದ ಮೇಲೆ ಟಿಕೆಟ್ ನೀಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ. ಹಾಲಿ ಸಂಸದರ ಪೈಕಿ ವಿವಾದಾಸ್ಪದ ಹೇಳಿಕೆಗಳನ್ನು ನೀಡುತ್ತಿರುವ ಉತ್ತರ ಕನ್ನಡ ಕ್ಷೇತ್ರದ ಅನಂತಕುಮಾರ್ ಹೆಗಡೆ ಅವರಿಗೆ ಟಿಕೆಟ್ ನೀಡುವ ಬಗ್ಗೆ ಸಭೆಯಲ್ಲಿ ವಿರೋಧ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಮತ್ತು ಬಸವರಾಜ ಬೊಮ್ಮಾಯಿ ಅವರಿಗೆ ಹಾವೇರಿ ಕ್ಷೇತ್ರದಿಂದ ಟಿಕೆಟ್ ನೀಡುವ ಬಗ್ಗೆ ಚರ್ಚೆಯಾಗಿದೆ ಎನ್ನಲಾಗಿದೆ. ಸಂಭಾವ್ಯ ಹೆಸರುಗಳು 1.ಶಿವಮೊಗ್ಗ -ಬಿ.ವೈ.ರಾಘವೇಂದ್ರ2.ಧಾರವಾಡ- ಪ್ರಹ್ಲಾದ್ ಜೋಶಿ3.ಉಡುಪಿ-ಚಿಕ್ಕಮಗಳೂರು- ಶೋಭಾ ಕರಂದ್ಲಾಜೆ4.ವಿಜಯಪುರ- ಗೋವಿಂದ ಕಾರಜೋಳ5.ಬೆಳಗಾವಿ- ಜಗದೀಶ್ ಶೆಟ್ಟರ್‌6.ಹಾವೇರಿ- ಬಸವರಾಜ ಬೊಮ್ಮಾಯಿ7.ಬೆಂಗಳೂರು ಗ್ರಾಮಾಂತರ- ಡಾ.ಸಿ.ಎನ್‌.ಮಂಜುನಾಥ್‌8.ಬೆಂಗಳೂರು ಕೇಂದ್ರ- ಪಿ.ಸಿ.ಮೋಹನ್‌9.ಬೆಂಗಳೂರು ದಕ್ಷಿಣ- ತೇಜಸ್ವಿ ಸೂರ್ಯ10.ಚಿಕ್ಕಬಳ್ಳಾಪುರ- ಡಾ.ಕೆ.ಸುಧಾಕರ್‌11.ತುಮಕೂರು- ವಿ.ಸೋಮಣ್ಣ12.ಚಿತ್ರದುರ್ಗ- ಎ.ನಾರಾಯಣಸ್ವಾಮಿ13.ಕಲಬುರಗಿ- ಉಮೇಶ್ ಜಾಧವ್‌14.ಮೈಸೂರು- ಯದುವೀರ್ ಒಡೆಯರ್‌15.ಬಳ್ಳಾರಿ- ಬಿ.ಶ್ರೀರಾಮುಲು