2 ತಿಂಗಳಲ್ಲಿ BSYಗೆ ಗೇಟ್ ಪಾಸ್; ಟೀಸರ್‌ ದಾಖಲೆ ಬರೆದ ಡಿಬಾಸ್; ಇಲ್ಲಿವೆ ನ.6ರ ಟಾಪ್ 10 ಸುದ್ದಿ! ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಅವಧಿ ಕೇವಲ 2 ತಿಂಗಳು ಮಾತ್ರ. ಬಿಜೆಪಿ ಹೈಕಮಾಂಡ್ ಸೂತ್ರಕ್ಕೆ ಸೀಟು ಬಿಡಬೇಕಾದ ಪರಿಸ್ಥಿತಿ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಹೊಸ ಸೂತ್ರ ಮುಂದಿಟ್ಟಿರುವ ಬಿಜೆಪಿ, ನಿತಿನ್ ಗಡ್ಕರಿಗೆ ಸಿಎಂ ಪಟ್ಟ ಕಟ್ಟಲು ಮುಂದಾಗಿದೆ. ಬಾಂಗ್ಲಾ ವಿರುದ್ದದ 2ನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಬದಲಾವಣೆ, ಡಿಕೆಶಿ ಕ್ಷೇತ್ರದಲ್ಲಿ ಅವಿರೋಧ ಆಯ್ಕೆ ಸೇರಿದಂತೆ ನವೆಂಬರ್ 6ರ ಟಾಪ್ 10 ಸುದ್ದಿ ಇಲ್ಲಿವೆ. 1)ಕಾಡಿನ ಮಧ್ಯೆ ಹಾಳಾದ ಬಸ್ ಜೊತೆ ಒಬ್ಬಳೇ ಲೇಡಿ ಕಂಡಕ್ಟರ್! ಮುಂದೆ ನಡೆದದ್ದು ಇದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಘಟಕ ಬಸ್ಸಿನ ಲೇಡಿ‌ ಕಂಡಕ್ಟರ್ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾಡಿನ ಮಧ್ಯ ಪಂಕ್ಚರ್ ಆದ ಬಸ್ಸಿಗೆ, ಡಿಪೋ ಮ್ಯಾನೇಜರ್ ಒಂದು ಚಕ್ರ ಮಾತ್ರ ಕಳುಹಿಸಿಕೊಟ್ಟಿದ್ದಾರೆ. ಬಸ್ಸಿನ ಟೂಲ್ ಬಾಕ್ಸ್ ಓಪನ್ ಆಗ್ತಿಲ್ಲ, ಅದನ್ನು ಬದಲಿಸಲು ಟೂಲ್ಸ್ ಆಗಲಿ, ಮೆಕಾನಿಕ್ ನನ್ನಾಗಲಿ ಕಳುಹಿಸಿಲ್ಲ ಎಂದು ಆಕೆ ಅಳಲು ತೋಡಿಕೊಂಡಿದ್ದಾರೆ. 2)ಮರ ಕಡಿಯಲು ಬಿಟ್ಟಿಲ್ಲ ಎಂದು ವಿಷದ ಇಂಜೆಕ್ಷನ್ ಕೊಟ್ಟ ಡಾಕ್ಟರ್ ದಂಪತಿ? ಮರ ಕಡಿಯಲು ಬಿಡಲಿಲ್ಲ ಎಂದು‌‌ ದಂಪತಿ ಮರಕ್ಕೆ ವಿಷ ಇಟ್ಟ ಆರೋಪ ಕೇಳಿಬಂದಿದೆ. ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಇಲ್ಲಿನ ಪಂಚಶೀಲ ಬ್ಲಾಕ್ ನಿವಾಸಿಗಳ ಸಂಘದಿಂದ ಬಿಬಿಎಂಪಿ‌ ಅರಣ್ಯ ಘಟಕಕ್ಕೆ ದೂರು ನೀಡಲಾಗಿದೆ.ನರೇಂದ್ರ - ಮಾಲಿನಿ ದಂಪತಿ ಕಟ್ಟಡ ನಿರ್ಮಿಸುತ್ತಿದ್ದು, ‌ಅಲ್ಲೇ ಇರುವ 5 ಮರಗಳನ್ನು ಕತ್ತರಿಸಲು ಮುಂದಾಗಿದ್ದರು. ಸ್ಥಳೀಯರು ಅದರ ವಿರುದ್ಧ ಪ್ರತಿಭಟನೆ ಕೂಡಾ ನಡೆಸಿದ್ದರು. 3)4 ವರ್ಷದ ನಂತರ ತುಂಬಿದ ಜಲಾಶಯ, ನೀರಿನಲ್ಲಿ ಈಜಾಡಿದ ಕುಣಿಗಲ್ ಶಾಸಕ..! ಕೆರೆಗಳು, ಜಲಾಶಯಗಳು ತುಂಬಿದಾಗ ಆಯಾ ಕ್ಷೇತ್ರದ ಶಾಸಕರು, ಪ್ರಮುಖರು ಹೋಗಿ ಬಾಗಿನ ಅರ್ಪಿಸುವುದು ವಾಡಿಕೆ. ತುಮಕೂರಿನ ಕುಣಿಗಲ್‌ನಲ್ಲಿ ಮಾರ್ಕೋನಹಳ್ಳಿ ಜಲಾಶಯದ ತುಂಬಿದ ಹಿನ್ನೆಲೆಯಲ್ಲಿ ಶಾಸಕ ರಂಗನಾಥ್ ಬೆಂಬಲಿಗರೊಂದಿಗೆ ಈಜಾಡಿ ಸಂಭ್ರಮಿಸಿದ್ದಾರೆ. 4)ಲೋಕಲ್ ಫೈಟ್ : ಡಿಕೆಶಿ ಕ್ಷೇತ್ರದಲ್ಲಿ ಅವಿರೋಧ ಆಯ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಸ್ವಕ್ಷೇತ್ರ ಕನಕಪುರದ ನಗರಸಭೆಯ 7 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕನಕಪುರ ನಗರಸಭೆಯಲ್ಲಿನ 31 ವಾರ್ಡ್‌ಗಳ ಪೈಕಿ 7 ಸ್ಥಾನಗಳನ್ನು ಕಾಂಗ್ರೆಸ್‌ ನಿರಾಯಾಸವಾಗಿ ಗೆದ್ದಿದ್ದು, ಇನ್ನುಳಿದ 24 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ. 5) 'ಮಹಾ' ಬಿಕ್ಕಟ್ಟಿಗೆ ಬಿಜೆಪಿ ಪರಿಹಾರ: ಗಡ್ಕರಿ ಕೈಗೆ ಕೊಡಲಿದೆ ಅಧಿಕಾರ? ಶಿವಸೇನೆಯನ್ನು ತಣ್ಣಗಾಗಿಸಲು ಹಾಗೂ ಭರ್ತಿ ಐದು ವರ್ಷ ಅಧಿಕಾರ ತನ್ನಲ್ಲೇ ಉಳಿಸಿಕೊಳ್ಳಲು ಬಿಜೆಪಿ ಭರ್ಜರಿ ಪ್ಲ್ಯಾನ್ ಮಾಡಿದ್ದು, ಕೇಂದ್ರ ಸಚಿವ ಹಾಗೂ ಆರ್‌ಎಸ್‌ಎಸ್‌ ಮೊಗಸಾಲೆಯಲ್ಲಿ ರೂಪುಗೊಂಡ ನಾಯಕ ನಿತಿನ್ ಗಡ್ಕರಿ ಅವರನ್ನು ಸಿಎಂ ಮಾಡುವ ಕುರಿತು ಚಿಂತನೆ ನಡೆಸಿದೆ. 6)2ನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಮಹತ್ತರ ಬದಲಾವಣೆ? ಬಾಂಗ್ಲಾದೇಶ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ತಿರುಗೇಟು ನೀಡಲು ರೋಹಿತ್ ಪಡೆ ಸಜ್ಜಾಗಿದೆ. ದೆಹಲಿ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡು ಸರಣಿ ಜೀವಂತವಾಗಿರಿಸಲು ಭಾರತ ತಯಾರಿ ಮಾಡಿಕೊಂಡಿದೆ. ಇದಕ್ಕಾಗಿ ತಂಡದಲ್ಲಿ ಕೆಲ ಬದಲಾವಣೆ ಮಾಡಲು ಟೀಂ ಮ್ಯಾನೇಜ್ಮೆಂಟ್ ಮುಂದಾಗಿದೆ. 7)ಬಿಟ್ಟಿದ್ದು ಒಂದೇ ನಿಮಿಷದ ಟೀಸರ್; ಡಿ ಬಾಸ್ ಮಾಡಿದ ದಾಖಲೆ ಅಷ್ಟಿಷ್ಟಲ್ಲ! ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಒಡೆಯ' ಟೀಸರ್ ರಿಲೀಸ್ ಆಗಿ 8 ದಾಖಲೆಗಳನ್ನು ಮಾಡಿದೆ. ಅತೀ ಹೆಚ್ಚು ವೀಕ್ಷಣೆ ಪಡೆದ ಟಾಪ್ 10 ಲೀಸ್ಟ್ ನಲ್ಲಿ 'ಒಡೆಯ' ಟೀಸರ್ ಸೇರಿದೆ. ಕನ್ನಡ ಚಿತ್ರರಂಗದಲ್ಲೇ ಅತೀ ಹೆಚ್ಚು ಲೈಕ್ಸ್ ಪಡೆದು ದಾಖಲೆ ಮಾಡಿದೆ. 8)‘ಡಿಸೆಂಬರ್ ತಿಂಗಳ ನಂತರ ಸಿಎಂ ಹುದ್ದೆ ಖಾಲಿಯಾಗಲಿದೆ’ ಸೆಂಬರ್ ತಿಂಗಳ ನಂತರ ಸಿಎಂ ಬಿ.ಎಸ್. ಯಡಿಯೂರಪ್ಪ ಹುದ್ದೆ ಖಾಲಿಯಾಗಲಿದೆ. ಯಡಿಯೂರಪ್ಪನವರಿಗೆ ಭಾರತೀಯ ಜನತಾ ಪಕ್ಷದಲ್ಲಿ ಪಕ್ಷದಲ್ಲಿ ಕ್ಷೇಮ ವಿಲ್ಲ. ಯಡಿಯೂರಪ್ಪನವರಿಗೆ ಹೈಕಮಾಂಡ್ ಎರಡು ತಿಂಗಳು ಗ್ರೇಸ್ ಪಿರೇಡ್ ಕೊಟ್ಟಿದ್ದಾರೆ ಎಂದು ಶಾಸಕ ನಾಗನಗೌಡ ಕಂದಕೂರ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ. 9)ಇ ಆಧಾರ್‌ ಮಾದರಿಯಲ್ಲಿ ಶೀಘ್ರ ಇ-ಪಾನ್‌ ಸೌಲಭ್ಯ ಆಧಾರ್‌ ಮಾಹಿತಿ ಆಧರಿಸಿ ಆನ್‌ಲೈನ್‌ನಲ್ಲಿ ತಕ್ಷಣವೇ ಪಾನ್‌ ನಂಬರ್‌ ವಿತರಿಸುವ ಯೋಜನೆ ಜಾರಿಗೆ ಆದಾಯ ತೆರಿಗೆ ಇಲಾಖೆ ಮುಂದಾಗಿದೆ. ಇಲೆಕ್ಟ್ರಾನಿಕ್‌ ಪಾನ್‌ ಅಥವಾ ಇ- ಪಾನ್‌ ಸೌಲಭ್ಯವನ್ನು ಮುಂದಿನ ಕೆಲವು ವಾರಗಳಲ್ಲೇ ಬಿಡುಗಡೆ ಮಾಡಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ತೆರಿಗೆ ಇಲಾಖೆ ಕಳೆದ 8 ದಿನಗಳ ಅವಧಿಯಲ್ಲಿ 62,000 ಇ- ಪಾನ್‌ಗಳನ್ನು ವಿತರಿಸಿದೆ ಎಂದು ವರದಿಗಳು ತಿಳಿಸಿವೆ. 10)ಇನ್ಫೋಸಿಸ್ ನ 10000 ಸಿಬ್ಬಂದಿ ಕೆಲಸಕ್ಕೆ ಕತ್ತರಿ? ದೇಶವನ್ನು ಆರ್ಥಿಕ ಹಿಂಜರಿತ ಕಾಡುತ್ತಿದೆ ಎಂಬ ವರದಿಗಳ ಸಂದರ್ಭದಲ್ಲೇ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಿ ವೆಚ್ಚ ಕಡಿತ ಕ್ರಮಗಳು ಪ್ರಾರಂಭವಾದಂತಿವೆ. 10 ರಿಂದ 12 ಸಾವಿರ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವುದಾಗಿ ಕಾಗ್ನಿಜೆಂಟ್ ಕಂಪನಿ ಘೋಷಿಸಿದ ಬೆನ್ನಲ್ಲೇ, ಬೆಂಗಳೂರು ಮೂಲದ ಜಾಗತಿಕ ಐಟಿ ಕಂಪನಿ ಇನ್ಫೋಸಿಸ್ ಕೂಡ ಸುಮಾರು 10 ಸಾವಿರ ಸಿಬ್ಬಂದಿಗೆ ಗೇಟ್ ಪಾಸ್ ನೀಡುವ ಚಿಂತನೆಯಲ್ಲಿದೆ.