ಸರ್ಕಾರದಿಂದ ರೈತ ವಿರೋಧಿ ಧೋರಣೆ ಗಜೇಂದ್ರಗಡ (ಆ.21) :ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಮಾಧ್ಯಮ ವಕ್ತಾರ ಬಿ.ಎಸ್‌. ಶೀಲವಂತರ ಆರೋಪಿಸಿದರು. ಪಟ್ಟಣದ 23ನೇ ವಾರ್ಡಿನ ಉಣಚಗೇರಿ ವ್ಯಾಪ್ತಿಯ ರೈತರ ಜಮೀನುಗಳಿಗೆ ನಿರಂತರ ವಿದ್ಯುತ್‌ ಪೂರೈಕೆಗಾಗಿ ಆಗ್ರಹಿಸಿ ಸೋಮವಾರ ಹೆಸ್ಕಾಂ ಕಚೇರಿ ಆವರಣದಲ್ಲಿ ರೈತರು ಕೈಗೊಂಡಿರುವ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು. ರೈತರ ಆರ್ಥಿಕತೆ ದ್ವಿಗುಣಗೊಳಿಸುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಹಿಂದೇಟು ಹಾಕುತ್ತಿದೆ. ರೈತರಿಗೆ ಮರಣಶಾಸನವಾಗುವ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಿದೆ ಎಂದರು. ಬೆಲೆ ಏರಿಕೆ ಖಂಡಿಸಿ ತಾಲೂಕು ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆ ಸರ್ಕಾರದ ಯೋಜನೆಗಳಿಗೆ ಸಕಾರಾತ್ಮಕ ಪ್ರಚಾರ ನೀಡಿ ಸಮೂಹವನ್ನು ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದೆ. 3 ಕೃಷಿ ಕಾಯ್ದೆಗಳನ್ನು ವಿರೋಧಿಸಿದ ರೈತರು ಹಾಗೂ ಹೋರಾಟಗಾರರನ್ನು ದೇಶದ್ರೋಹಿಗಳು ಎಂಬಂತೆ ಬಿಂಬಿಸಲು ವ್ಯವಸ್ಥಿತವಾದ ಪಿತೂರಿಗಳು ನಡೆದಿದ್ದವು ಎಂದು ದೂರಿದ ಅವರು, ಜನರು ಹಾಗೂ ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕಾದ ಶಾಸಕರು ಹಾಗೂ ಸಂಸದರ ಕಾರ್ಯವೈಖರಿ ವ್ಯತಿರಿಕ್ತವಾಗಿದೆ. ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಚುನಾವಣೆಗೆ ಬರುವುದನ್ನು ಬಿಟ್ಟು ಪ್ರಧಾನಿ ಮೋದಿ ಅವರ ಮುಖ ನೋಡಿ ಮತ ಹಾಕಿ ಎನ್ನುವುದು ನಾಚಿಕೆಗೇಡಿನ ಸಂಗತಿ ಎಂದರು. ಸ್ವಂತ ಊರಿನ ರೈತರು ಅನುಭವಿಸುವ ಸಂಕಷ್ಟಗಳಿಗೆ ಕಿವಿಗೊಡಬೇಕಿದ್ದ ಶಾಸಕರು ಹಾರಿಕೆ ಮಾತುಗಳನ್ನಾಡಿದ್ದಾರೆ ಎಂಬುದು ವಿಪರ್ಯಾಸ. ಉಣಚಗೇರಿ ಗ್ರಾಮದ ರೈತರಿಗೆ ನಿರಂತರ ವಿದ್ಯುತ್‌ ಪೂರೈಸಲು ಹೆಸ್ಕಾಂ ಮುಂದಾಗುವವರೆಗೆ ನಡೆಸುವ ರೈತರ ಹೋರಾಟಕ್ಕೆ ಬೆಂಬಲವಿದೆ ಎಂದರು. ಉಣಚಗೇರಿ ಗ್ರಾಮದ ರೈತರ ಜಮೀನುಗಳಿಗೆ ನಿರಂತರವಾಗಿ ವಿದ್ಯುತ್‌ ಪೂರೈಸಲು ಹೆಸ್ಕಾಂ ಮುಂದಾಗದಿದ್ದರೆ ಕಚೇರಿಗೆ ಹಾಗೂ ಉಣಚಗೇರಿ ಗ್ರಾಮದ ಮುಖ್ಯ ಜಲ ಸಂಗ್ರಹಾಗಾರಕ್ಕೆ ಬೀಗ ಹಾಕಿ, ಹೆಸ್ಕಾಂ ಕಚೇರಿಯಲ್ಲಿ ದನ-ಕರುಗಳು, ಕುರಿಗಳು ಜತೆಗೆ ಕುಟುಂಬಸಹಿತ ಠಿಕಾಣಿ ಹೂಡುತ್ತೇವೆ ಎಂದು ಧರಣಿ ವೇಳೆ ರೈತರು ಪಟ್ಟು ಹಿಡಿದರು. ಈ ವೇಳೆ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿ.ಟಿ. ರಾಜೂರ ಮಾತನಾಡಿ, ಉಣಚಗೇರಿ ಗ್ರಾಮದ ಜಮೀನುಗಳಿಗೆ ಉಚಿತವಾಗಿ ನಿರಂತರ ವಿದ್ಯುತ್‌ ಪೂರೈಕೆ ಆಗಿದ್ದರಿಂದ ಇಲಾಖೆಗೆ ನಷ್ಟವಾದ .18 ಲಕ್ಷವನ್ನು ನನ್ನ ವೇತನ ಖಾತೆಯಿಂದ ಪಡೆಯಲು ಇಲಾಖೆ ಮುಂದಾಗಿದೆ. ಹೀಗಾಗಿ ಸರ್ಕಾರದ ಆದೇಶ ಪಾಲನೆಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು. : ದೇಶಾದ್ಯಂತ ಕಾಂಗ್ರೆಸ್‌ ಪರ ಅಲೆ ಪ್ರಾರಂಭ: ಸಲೀಂ ಅಹ್ಮದ್‌ ಧರಣಿ ಸ್ಥಳಕ್ಕೆ ಹೆಸ್ಕಾಂ ಎಂಡಿ ಬಂದು ಸಮಸ್ಯೆಗೆ ಪರಿಹಾರ ನೀಡಲಿ, ಇಲ್ಲದಿದ್ದರೆ ನಾವು ಧರಣಿ ಸತ್ಯಾಗ್ರಹ ಕೈಬಿಡುವ ಪ್ರಶ್ನೆಯಿಲ್ಲ ಎಂದು ರೈತರು ಹೋರಾಟ ಮುಂದುವರಿಸಿದರು. ಈ ವೇಳೆ ವಿಜಯಕುಮಾರ ಜಾಧವ, ಶರಣು ಪೂಜಾರ, ಇಸ್ಮಾಯಿಲ್‌ ಗೊಲಗೇರಿ, ಬಸವರಾಜ ಪಲ್ಲೇದ, ಎ.ಕೆ. ಕಟ್ಟಿಮನಿ, ಮರಿಯಪ್ಪ ಕಂಠಿ, ಕೆರಿಯಪ್ಪ ಪಟ್ಟಣಶೆಟ್ಟಿ, ರಾಜಪ್ಪ ಧಾರೋಜಿ ಭಾಗವಹಿಸಿದ್ದರು