: ಶೀಘ್ರದಲ್ಲೇ ಕೋವಿಡ್​​-19 ಕಾಲರ್ ಟ್ಯೂನ್ ಬಂದ್: ಟ್ವೀಟರ್‌ನಲ್ಲಿ ಮೀಮ್ಸ್‌ ಸುರಿಮಳೆ ಕೋವಿಡ್ ಕಾಲರ್ ಟ್ಯೂನ್ ಈಗ ಅಸ್ತಿತ್ವದಲ್ಲಿಲ್ಲ ಎಂದು ವರದಿಗಳು ತಿಳಿಸಿವೆ, ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲಿ ನೆಟ್ಟಿಗರು‌ ಸಾವಿರಾರು ಮೀಮ್ಸ್ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ. ನವದೆಹಲಿ (ಮಾ. 29):ಕೊರೋನಾ ಸಾಂಕ್ರಾಮಿಕ ರೋಗವು ದೇಶಾದ್ಯಂತ ಹರಡಿದಾಗಿನಿಂದ, ಮಾಸ್ಕ್ ಧರಿಸುವ ಜವಾಬ್ದಾರಿಯ ಹೊರತಾಗಿ, ಜನರು ಕೋವಿಡ್ -19 ಕುರಿತು ಮಾಹಿತಿಯಿಂದ ತುಂಬಿದ ವಿಸ್ತಾರವಾದ ಕಡ್ಡಾಯ ಕಾಲರ್ ಟ್ಯೂನನ್ನು ಕೇಳಬೇಕಾಗಿತ್ತು. ಕೊರೋನಾದ ಆರಂಭದ ದಿನಗಳಿಂದಲೂ ಫೋನ್ ಮೂಲಕ ಜಾಗೃತಿಯ ಧ್ವನಿ ಸಂದೇಶ ಬಿತ್ತರವಾಗತೊಡಗಿತ್ತು. ಕೋಟ್ಯಂತರ ಜನ ಇದನ್ನು ಆಲಿಸಿದರು. ಈಗಂತೂ ಈ ಸಂದೇಶ ಫೋನ್ ಕರೆಗಳ ಅವಿಭಾಜ್ಯ ಅಂಗವೇ ಆಗಿದೆ. ಆದರೆ ಈ ಕಾಲರ್ ಟ್ಯೂನ್ ಬಗ್ಗೆ ಈಗಲೂ ಹಲವರಲ್ಲಿ ಅಸಮಾಧಾನವಿದೆ. ಕೊರೋನಾ ಕಾಲರ್‌ ಟ್ಯೂನ್‌ ಕೇಳಿ ನಿಮಗೂ ಬೇಸರವಾಗಿದ್ದರೆ ನಿಮಗಾಗಿ ಒಂದು ಸಿಹಿ ಸುದ್ದಿ ಕಾದಿದೆ. ಹೌದು! ಮೊಬೈಲ್‌ ಕರೆಗಳ ಸಮಯದಲ್ಲಿ ಕೋವಿಡ್ ಕಾಲರ್ ಟ್ಯೂನ್ ಇನ್ಮುಂದೆ ಕೇಳಬೇಕಾಗಿಲ್ಲ ಎಂದು ಸುದ್ದಿ ಸಂಸ್ಥೆ ಎಎನ್‌ಐಯ ವರದಿ ಮಾಡಿದೆ. ಇದನ್ನೂ ಓದಿ:ಫೋನಲ್ಲಿ ನೀವು ಕೇಳೋ ಕೊರೋನಾ ಜಾಗೃತಿ ಧ್ವನಿಯ ಒಡತಿಯರು ಇವರೇ ನೋಡಿ..! ಭಾರತದಲ್ಲಿ ಫೋನ್ ಕರೆಗಳನ್ನು ಮಾಡುವಾಗ, ಕೆಮ್ಮುವ ಧ್ವನಿಯೊಂದಿಗೆ ಪ್ರಾರಂಭವಾಗುವ ಕಾಲರ್ ಟ್ಯೂನ್‌ನಿಂದ ಜನರನ್ನು ಸ್ವಾಗತಿಸಲಾಗುತ್ತಿತ್ತು, ನಂತರ ನಟ ಅಮಿತಾಬ್ ಬಚ್ಚನ್ ಧ್ವನಿ ನೀಡಿರುವ ಕೋವಿಡ್ ನಡವಳಿಕೆಯ ಬಗ್ಗೆ ಎಚ್ಚರಿಕೆಯ ಟಿಪ್ಪಣಿ ಕೇಳಿಬರುತ್ತಿತ್ತು. ಜನವರಿ 2021 ರಲ್ಲಿ, ಕಾಲರ್ ಟ್ಯೂನ್‌ನ ಸ್ವರೂಪವನ್ನು ಬದಲಾಯಿಸಲಾಗಿತ್ತು. ಕೊರೋನಾ ಲಸಿಕೆ ಅಭಿಯಾನ:ಮೊಬೈಲ್‌ ಕರೆ ವೇಳೆ ನಟ ಅಮಿತಾಭ್‌ ಬಚ್ಚನ್‌ ಧ್ವನಿಯಲ್ಲಿ ಕೇಳಿಬರುತ್ತಿದ್ದ, ಕೊರೋನಾ ಜಾಗೃತಿ ಕುರಿತ ಕಾಲರ್‌ ಟ್ಯೂನ್‌ ಹಿಂದಕ್ಕೆ ಪಡೆದು ಅದರ ಬದಲು ಮಹಿಳೆಯ ಧ್ವನಿಯಲ್ಲಿ ಕೊರೋನಾ ಲಸಿಕೆ ಅಭಿಯಾನ ಕುರಿತ ಕಾಲರ್‌ಟ್ಯೂನ್‌ ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ಕರೆ ಮಾಡುವ ಮೊದಲು ಈ ದೀರ್ಘ ಕಾಲರ್ ಟ್ಯೂನನ್ನು ಆಲಿಸುವುದರೊಂದಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೆಯೇ ಉಳಿದಿಕೊಂಡಿದ್ದವು. ಯಾವುದೇ ವ್ಯಕ್ತಿಗೆ ಕಾಲರ್ ಟ್ಯೂನ್ ಕೇಳದೆ ತುರ್ತು ಕರೆ ಮಾಡುವುದು ಬಹಳ ಕಷ್ಟಕರವಾಗಿತ್ತು. ಕನ್ನಡ ಧ್ವನಿ ದಕ್ಷಿಣಕನ್ನಡದ ಹೆಣ್ಮಕ್ಕಳದ್ದು: ಇನ್ನು ಕನ್ನಡದಲ್ಲಿ ಮೂರು ಹಂತಗಳಲ್ಲಿ ಧ್ವನಿ ಸಂದೇಶ ಕೇಳಿಬರುತಿತ್ತು. ಈ ಪೈಕಿ ಮೊದಲ ಹಂತದ ಧ್ವನಿ ಮಂಗಳೂರು ಮೂಲದ ಡಾರೆಲ್ ಜೆಸಿಂತಾ ಫೆರ್ನಾಂಡಿಸ್ ಅವರದು. ಕನ್ನಡ ಭಾಷೆಯ ಎರಡು ಮತ್ತು ಮೂರನೆಯ ಹಂತದಲ್ಲಿ ಜಾಗೃತಿ ಸಂದೇಶಕ್ಕೆ ವಿಟ್ಲದ ಮುಳಿಯದವರಾದ ವಿದ್ಯಾ ನಾರಾಯಣ ಭಟ್ ಧ್ವನಿ ನೀಡಿದ್ದರು. ಇದನ್ನೂ ಓದಿ:ಕಾಲರ್‌ ಟ್ಯೂನ್‌ಗೆ ಸೋಂಕಿತ ಅಮಿತಾಬ್‌ ಧ್ವನಿ ಬೇಡ: ಹೈ ಕೋರ್ಟ್‌ನಲ್ಲಿ ಅರ್ಜಿ ವಿಶೇಷವೆಂದರೆ ಕೇರಳ ರಾಜ್ಯಕ್ಕೆಂದು ತಯಾರಾದ ಮಲಯಾಳಂ ಜಾಗೃತಿ ಸಂದೇಶಕ್ಕೆ ಧ್ವನಿ ನೀಡಿದವರು ಕೂಡ ದಕ್ಷಿಣ ಕನ್ನಡ ಜಿಲ್ಲೆಯವರದ್ದೇ. ಇವರ ಕುರಿತಂತೆ ಈಗಾಗಲೇ ಮಲಯಾಳಂ ಮತ್ತು ಕನ್ನಡ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಬಲ್ನಾಡುಪೇಟೆಯಲ್ಲಿ ವಾಸ್ತವ್ಯವಿರುವ ಟಿ.ವಿ.ಜೋಸೆಫ್ ಹಾಗೂ ಅಲೀಸಾ ದಂಪತಿಯ ಪುತ್ರಿಯಾಗಿರುವ ಟಿಂಟು ಮೋಳ್ ಜೋಸೆಫ್ ಕೊರೋನಾ ಸಂದೇಶಕ್ಕೆ ಧ್ವನಿ ನೀಡಿದ್ದರು. ಜಗತ್ತಿನಲ್ಲಿ ಕಾಣಿಸಿಕೊಂಡ ಕೊರೋನಾ, ಭಾರತದಲ್ಲೂ ತನ್ನ ಪರಿಣಾಮ ಬೀರುವ ಆರಂಭದ ದಿನಗಳಲ್ಲೇ ಈ ಕುರಿತಾದ ಮೊಬೈಲ್ ಧ್ವನಿ ಸಂದೇಶಗಳು ಮೊಳಗಿ ಜಾಗೃತಿಯ ಸಂದೇಶ ನೀಡತೊಡಗಿದ್ದವು. ಯಾರಿಗೇ ಯಾರು ಕರೆ ಮಾಡಿದರೂ ಕನೆಕ್ಟ್ ಆದ ಕೂಡಲೇ ಕೊರೋನಾ ಜಾಗೃತಿ ಕುರಿತಾದ ಈ ಧ್ವನಿ ಸಂದೇಶ ಕೇಳಬೇಕಿತ್ತು. ಈ ಸಮಸ್ಯೆಗೆ ಈಗ ಬ್ರೇಕ್‌ ಬಿದ್ದಿದೆ. ಈ ಸುದ್ದಿಯನ್ನು ಕೇಳಿದ್ದೆ ತಡ ಸಾಮಾಜಿಕ ಜಾಲತಾಣಗಳಲಿ ನೆಟ್ಟಿಗರು‌ ಸಾವಿರಾರು ಮೀಮ್ಸ್ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ. ಅದರ ಕೆಲವು ತುಣುಕುಗಳು ಇಲ್ಲಿವೆ