2023: ಮನೆ, ಗಾಡಿ, ಮದ್ಯದ ಮೇಲೆ ತೆರಿಗೆ ಭಾರ...ಮನೆ ಖರೀದಿಯೂ ಕಷ್ಟ, ಕಟ್ಟೋದು ಕಷ್ಟ! 2023: ಸಿದ್ಧರಾಮಯ್ಯ ಸರ್ಕಾರದ ಬಜೆಟ್‌ ಬೆನ್ನಲ್ಲಿಯೇ ಯಾವುದಕ್ಕೆಲ್ಲಾ ತೆರಿಗೆ ಜಾಸ್ತಿ ಅನ್ನೋ ಲೆಕ್ಕಾಚಾರ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಮನೆ ಖರೀದಿ ಮಾಡೋದು ಕಷ್ಟ, ಮನೆ ಕಟ್ಟೋದು ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಬೆಂಗಳೂರು (ಜು.7):ದೇಶದ ದೊಒಡ್ಡ ರಾಜ್ಯಗಳ ಪೈಕಿ ನಮ್ಮ ರಾಜ್ಯವು ಜಿಎಸ್‌ಡಿ ತೆರಿಗೆ ಸಂಗ್ರಹಣೆಯಲ್ಲಿ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 21ರಷ್ಟು ಬೆಳವಣಿಗೆ ದರ ಸಾಧಿಸಿದೆ. ಪ್ರಸ್ತುತ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಕರ್ನಾಟಕದ ಜಿಎಸ್‌ಟಿ ರಾಜಸ್ವ ಸಂಗ್ರಹವು 18,962 ಕೋಟಿ ರೂಪಾಯಿ ಆಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಯೋಜನೆಗಳಿಗೆ ಹಣಕಾಸು ನೆರವು ನೀಡುವ ಸಲುವಾಗಿ ಅಬಕಾರಿ ಇಲಾಖೆ, ನೋಂದಣಿ ಮತ್ತು ಮುದ್ರಾಂಕ, ಗಣಿ ಮತ್ತು ಭೂವಿಜ್ಞಾನ ಹಾಗೂ ರೋಡ್‌ ಟ್ಯಾಕ್ಸ್‌ಅನ್ನು ಏರಿಕೆ ಮಾಡುವ ನಿರ್ಧಾರ ಮಾಡಲಾಗಿದೆ. ಸಿದ್ಧರಾಮಯ್ಯ ದಾಖಲೆಯ 14ನೇ ಬಾರಿಗೆ ಬಜೆಟ್‌ ಮಂಡನೆ ಮಾಡಿದ್ದು ( 2023) ಪ್ರಮುಖವಾಗಿ ಮದ್ಯದ ಮೇಲಿನ ಸುಂಕವನ್ನು ಶೇ. 20ರಷ್ಟು ಏರಿಕೆ ಮಾಡಿದ್ದಾರೆ. ಅದೇ ರೀತಿ ಇನ್ನೂ ಕೆಲವು ವಸ್ತುಗಳ ತೆರಿಗೆ ಪರಿಷ್ಕರಣೆ ಮಾಡುವ ಮೂಲಕ ಆದಾಯವನ್ನು ಏರಿಸುವ ಗುರಿ ಇರಿಸಿಕೊಂಡಿದ್ದಾರೆ.ಅತ್ಯಧಿಕ ತೆರಿಗೆ ಪಾವತಿದಾರರಿಗಾಗಿ ಒಂದು ಪ್ರತ್ಯೇಕ ವಿಭಾಗವನ್ನು ಬೆಂಗಳೂರು ಸ್ಥಾಪಿಸಲಾಗುವುದು ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. ಪರಿಣಾಮಕಾರಿ ತೆರಿಗೆ ಆಡಳಿತಕ್ಕಾಗಿ ಹಾಗೂ ವಾಣಿಜ್ಯೋದ್ಯಮಗಳಿಗೆ ಉತ್ತಮ ಸಂಪರ್ಕ ನೀಡಲು ಬೆಂಗಳೂರು ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ನಾಲ್ಕು ಹೊಸ ವಿಭಾಗಗಳನ್ನು ಶೀಘ್ರದಲ್ಲಿಯೇ ಕಾರ್ಯೋನ್ಮುಖಗೊಳಿಸಲಾಗುವುದು.2023-24ನೇ ಸಾಲಿಗೆ ವಾಣಿಜ್ಯ ತರಿಗೆ ಇಲಾಖೆಯ ರಾಜಸ್ವ ಸಂಗ್ರಹಣೆ ಗುರಿಯನ್ನು 1,01,000 ಕೋಟಿ ರೂಪಾಯಿ ಎಂದು ನಿಗದಿ ಮಾಡಲಾಗಿದೆ. ಮದ್ಯದ ಮೇಲೆ ಶೇ 20ರಷ್ಟು ಮತ್ತು ಬಿಯರ್ ಮೇಲೆ ಶೇ 10ರಷ್ಟು ಅಬಕಾರಿ ಸುಂಕವನ್ನು ಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ಬಿಯರ್ ಮೇಲಿನ ಅಬಕಾರಿ ಸುಂಕ ಶೇ 175 ರಿಂದ 185ಕ್ಕೆ ಹೆಚ್ಚಳವಾಗಲಿದೆ. 2023-24ರ ಸಾಲಿನಲ್ಲಿ ಅಬಕಾರಿ ಇಲಾಖೆಗೆ 36 ಸಾವಿರ ಕೋಟಿ ರೂಪಾಯಿ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿ ಮಾಡಲಾಗಿದೆ.ಸಿರಾಸ್ಥಿ ಮಾರ್ಗಸೂಚಿ ದರ ಪರಷ್ಕರಣೆ ಖಚಿತ:ಎಲ್ಲ ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಿಸಲಾಗುವುದು ಎಂದು ಬಜೆಟ್​​ನಲ್ಲಿ ಘೋಷಣೆ ಮಾಡಲಾಗಿದೆ. ಕೋವಿಡ್ ಸಾಂಕ್ರಾಮಿಕದ ಕಾರಣ 2019ರ ನಂತರ ಸ್ಥಿರಾಸ್ತಿ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿರಲಿಲ್ಲ. ಪ್ರಸ್ತುತ ಮಾರುಕಟ್ಟೆ ದರದಲ್ಲಿ ವ್ಯತ್ಯಾಸವಾಗಿರುವುದರಿಂದ ಪರಿಷ್ಕರಣೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಅದರೊಂದಿಗೆ ಮನೆ ಖರೀದಿ ಮಾಡುವ ಯೋಚನೆಯಲ್ಲಿದ್ದವರಿಗೆ ಇನ್ನಷ್ಟು ಹೊರೆಯಾಗುವುದು ಖಚಿತವಾಗಿದೆ. ಆದರೆ, ಎಷ್ಟು ಪ್ರಮಾಣದಲ್ಲಿ ಪರಿಷ್ಕರಣೆ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಿಲ್ಲ. ಅದರೊಂದಿಗೆ 2023-24ನೇ ಸಾಲಿನಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 25 ಸಾವಿರ ಕೋಟಿ ರಾಜಸ್ವ ಸಂಗ್ರಹಣೆ ಗುರಿ ನಿಗದಿ ಮಾಡಲಾಗಿದೆ. ಇನ್ನು ಮೋಟಾರು ವಾಹನ ಕಾಯ್ದೆ ಸರಳೀಕರಣಗೊಳಿಸಲು ಪ್ರಸ್ತಾಪ ಮಾಡಲಾಗಿದ್ದು, 11500 ಕೋಟಿ ತೆರಿಗೆ ಸಂಗ್ರಹ ಗಗುರಿ ಇರಿಸಿಕೊಳ್ಳಲಾಗಿದೆ. ಅದರೊಂದಿಗೆ ಕರ್ನಾಟಕ ಮೋಟಾರು ವಾಹನ ನೋಂದಣಿ ತೆರಿಗೆ ಹೆಚ್ಚಳಕ್ಕೆ ಉದ್ದೇಶಿಸಲಾಗಿದೆ. ಆದರೆ, ಎಷ್ಟು ಪ್ರಮಾಣದಲ್ಲಿ ತೆರಿಗೆ ಹೆಚ್ಚಳ ಆಗುತ್ತದೆ ಎನ್ನುವ ಮಾಹಿತಿ ಸಿಕ್ಕಿಲ್ಲ. 2023: ನೇಕಾರರಿಗೆ 250 ಯುನಿಟ್‌ ವಿದ್ಯುತ್‌ ಉಚಿತ: ಗಾಂಧಿ ವಸ್ತ್ರೋದ್ಯಮ ಕೋಶ ಸ್ಥಾಪನೆ ಮರಳು, ಗ್ರ್ಯಾನೈಟ್‌, ಎಂಸ್ಯಾಂಡ್‌, ಕಲ್ಲಿನ ಬೆಲೆಗಳಲ್ಲಿ ಏರಿಕೆ:ರಾಜ್ಯ ಸರ್ಕಾರ ಗಣಿ ಮತ್ತು ಭೂವಿಜ್ಞಾನ ಕ್ಷೇತ್ರದಿಂದ 9,000 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ಹಾಕಿಕೊಳ್ಳಲಾಗಿದೆ. ಇದರಿಂದಾಗಿ ಮನೆ ಕಟ್ಟಲು ಬೇಕಾಗಿರುವ ಅವಶ್ಯಕ ವಸ್ತುಗಳಾಗಿರುವ ಮರಳು, ಗ್ರ್ಯಾನೈಟ್‌, ಕಲ್ಲು ಹಾಗೂ ಎಂಸ್ಯಾಂಡ್‌ ಬೆಲೆಗಳಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. 2023: ಮೇಕೆದಾಟು, ಭದ್ರಾ ಮೇಲ್ದಂಡೆ, ಎತ್ತಿಹೊಳೆ.. ಜಲಸಂಪನ್ಮೂಲಕ್ಕೆ ಸರ್ಕಾರ ಇಟ್ಟಿದ್ದೆಷ್ಟು!