ಸಾಗಾಣಿಕೆ ವೆಚ್ಚದಿಂದಾಗಿ ಜಾಗತಿಕ ಮಾರುಕಟ್ಟೆಯಿಂದ ಭಾರತಕ್ಕೆ ಹಿನ್ನಡೆ: ಕೇಂದ್ರ ಸಚಿವ ಜೋಶಿ ಸರಕು ಸಾಗಾಣಿಕೆದಾರರ ಮತ್ತು ಲಾರಿ ಮಾಲೀಕರ ಸಂಘದ ಸುವರ್ಣ ಮಹೋತ್ಸವ, ವೆಚ್ಚ ತಗ್ಗಿಸಲು ಕೇಂದ್ರ ಸರ್ಕಾರದಿಂದ ಪ್ರಯತ್ನ: ಸಚಿವ ಪ್ರಹ್ಲಾದ ಜೋಶಿ ಹುಬ್ಬಳ್ಳಿ(ಜ.09):ಸಾಗಾಣಿಕೆ ವೆಚ್ಚ ಅಧಿಕವಾಗಿರುವುದರಿಂದ ಭಾರತ ಜಾಗತಿಕ ಮಾರುಕಟ್ಟೆಯಲ್ಲಿ ಹಿಂದುಳಿದಿದೆ. ವಿದೇಶದಲ್ಲಿ ಸಾಗಾಣಿಕೆ ವೆಚ್ಚ ಶೇ. 3ರಷ್ಟಿದ್ದರೆ, ಭಾರತದಲ್ಲಿ ಶೇ. 12ರಷ್ಟಿದೆ. ಹಾಗಾಗಿ ಇದನ್ನು 6ಕ್ಕಿಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ನಡೆದ ಹುಬ್ಬಳ್ಳಿ-ಧಾರವಾಡ ಸರಕು ಸಾಗಾಣಿಕೆದಾರರ ಮತ್ತು ಲಾರಿ ಮಾಲೀಕರ ಸಂಘದ ಸುವರ್ಣ ಮಹೋತ್ಸವ ಮತ್ತು ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 2030ರ ವೇಳೆಗೆ ಸರಕು ಸಾಗಣಿಕೆ ವೆಚ್ಚವನ್ನು ಶೇ. 6ಕ್ಕೆ ಇಳಿಸಲಾಗುವುದು. ಸದ್ಯ ರಾಷ್ಟ್ರೀಯ ಹೆದ್ದಾರಿ ಶೇ. 2.7 ಇದೆ. ಅದನ್ನು ಕನಿಷ್ಠ 10ಕ್ಕೇರಿಸುವ ಚಿಂತನೆ ಕೇಂದ್ರ ಸರ್ಕಾರಕ್ಕೆ ಇದೆ. 2014ಕ್ಕೆ 91 ಸಾವಿರ ಕಿಮೀ ರಾಷ್ಟ್ರೀಯ ಹೆದ್ದಾರಿ ಇತ್ತು. ಆದರೆ ಇಂದು 1.41 ಲಕ್ಷ ಹೆದ್ದಾರಿ ನಿರ್ಮಿಸಲಾಗಿದೆ. ದೇಶದಲ್ಲಿ ಪ್ರತಿದಿನ 37 ಕಿಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಿಸುತ್ತಿದ್ದು ಪ್ರಸಕ್ತ ವರ್ಷ 13 ಸಾವಿರ ಕಿಮೀ ಹೆದ್ದಾರಿ ನಿರ್ಮಿಸುವ ಗುರಿ ಇದೆ ಎಂದು ತಿಳಿಸಿದರು.ಲಾರಿ ಚಾಲಕರ ಸ್ಥಳೀಯ ಸಮಸ್ಯೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಪೊಲೀಸ್‌ ಕಮಿಷನರ್‌ರೊಂದಿಗೆ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ದೊಡ್ಡ ಮಟ್ಟದ ಸಮಸ್ಯೆಯನ್ನು ಪ್ರಧಾನಿ ಗಮನಕ್ಕೆ ತಂದು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. : ನಿಮಗೆ‌ ಸರಿಯಾಗಿ ರೇಶನ್‌ ಸಿಗ್ತಿಲ್ಲವೆ, ನೇರವಾಗಿ ಈ‌ ಕೆಳಗಿನ ಪೋನ್‌ ನಂಬರ್‌ಗೆ‌ ಕರೆ ಮಾಡಿ ದೂರು ಸಲ್ಲಿಸಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಮಾತನಾಡಿ, ಸಾರಿಗೆ ವ್ಯವಸ್ಥೆ ಜನರ ಜೀವನಾಡಿಯಾಗಿದೆ. ಇಂತಹ ವ್ಯವಸ್ಥೆಯಿಂದ ಆರ್ಥಿಕ ಚಟುವಟಿಕೆಗೆ ಉತ್ತೇಜನ ಕೊಡುವ ಕೆಲಸವಾಗಿದೆ. ಹಾಗಾಗಿ ಲಾರಿ ಚಾಲಕರು, ಮಾಲೀಕರ ಸಮಸ್ಯೆಗಳ ಕುರಿತು ಅರಿವಿದೆ. ಅಂತಹ ಸಮಸ್ಯೆಯನ್ನು ಸರ್ಕಾರದ ಮಟ್ಟದಲ್ಲಿ ಬಗೆಹರಿಸಲು ಸಾಧ್ಯವಿದೆ. ಸರ್ಕಾರಿ ಅಧಿಕಾರಿಗಳು ತ್ವರಿತ ಸೇವೆ ನೀಡಿದರೆ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ. ಆ ನಿಟ್ಟಿನಲ್ಲಿ ಸಾರಿಗೆಯ ಇಲಾಖೆ ಸಮಾಲೋಚನೆ ನಡೆಸಲಾಗುವುದು ಎಂದರು. ಹುಬ್ಬಳ್ಳಿ-ಧಾರವಾಡದಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಿಸುವುದು ತಮ್ಮ ಬಹುದಿನಗಳ ಕನಸಾಗಿದೆ. ಈಗಾಗಲೇ ಅಂಚಟಗೇರಿ ಬಳಿ 50 ಎಕರೆ ಜಮೀನು ಗುರುತಿಸಲಾಗಿತ್ತು. ಕೆಲ ಸ್ಥಳೀಯರ ವಿರೋಧ ಸೇರಿ ಕೆಲ ಸಮಸ್ಯೆಯಿಂದ ಅದು ತಡವಾಗಿದೆ. ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಿ ಟ್ರಕ್‌ ಟರ್ಮಿನಲ್‌ ನಿರ್ಮಾಣ ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದರು. 2023: ಯುವಜನೋತ್ಸವದ ನೆಪದಲ್ಲಿ ಹಣ ವಸೂಲಿ ಆರೋಪ ಪ್ರಾಸ್ತಾವಿಕ ಮಾತನಾಡಿದ ಸಂಘದ ಗೌರವ ಕಾರ್ಯದರ್ಶಿ ರವೀಂದ್ರ ಬೆಳಮಕರ, ಲೋಡ್‌ ಮತ್ತು ಅನ್‌ಲೋಡಿಂಗ್‌ಗೆ ಸಮಯ ವ್ಯಯಿಸಲಾಗುತ್ತಿದೆ. ಇದರಿಂದ ಮಾಲೀಕರಿಗೆ ಅಪಾರ ನಷ್ಟವಾಗುತ್ತಿದೆ. ಬಾಡಿಗೆ ನೀಡುವುದು ತಡವಾಗುತ್ತಿದೆ. ಲಾರಿ ಮಾಲೀಕರಿಗೆ ಅನ್ಯಾಯವಾಗುತ್ತಿದೆ. ಹಲವು ವರ್ಷಗಳಿಂದ ಟೂಲ್‌ ತೆಗೆದುಕೊಳ್ಳಲಾಗುತ್ತಿದೆ. ಎಲ್ಲ ಟೂಲ್‌ಗಳಲ್ಲಿ ಸಂಗ್ರಹವಾದ ಹಣದ ಕುರಿತು ಮಾಹಿತಿ ನೀಡಬೇಕು. ಹುಬ್ಬಳ್ಳಿ-ಧಾರವಾಡದ ಕೆಲ ರಸ್ತೆಯಲ್ಲಿ ಟ್ರಾನ್ಸ್‌ಪೋರ್ಚ್‌ಗೆ ಮುಕ್ತವಾಗಿ ಅವಕಾಶ ನೀಡಬೇಕು. ರಿಂಗ್‌ ರೋಡ್‌ನಲ್ಲಿ ಲಾರಿ ಟರ್ಮಿನಲ್‌ ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಇದೇ ವೇಳೆ ಸಂಘದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಉದ್ಯಮಿ ಡಾ. ವಿಜಯ ಸಂಕೇಶ್ವರ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ, ಆಲ್‌ ಇಂಡಿಯಾ ಮೋಟರ್ಸ್‌ ಟ್ರಾನ್ಸ್‌ಪೋರ್ಚ್‌ ಕಾಂಗ್ರೆಸ್‌ ಅಧ್ಯಕ್ಷ ಡಾ. ಜಿ.ಆರ್‌. ಷಣುಗಪ್ಪ ಮಾತನಾಡಿದರು. ಸಂಘದ ಹಿರಿಯ ಮುಖಂಡರಾದ ಚೆನ್ನಾರೆಡ್ಡಿ, ಎಸ್‌.ಆರ್‌. ಹೊಸಮನಿ, ಪ್ರಕಾಶ ರಾಯ್ಕರ ಉಪಸ್ಥಿತರಿದ್ದರು. ಸಂಘದ ಕಾರ್ಯಾಧ್ಯಕ್ಷ ವಾಸು ಕೋನರಡ್ಡಿ ಸ್ವಾಗತಿಸಿದರು. ರಾಧಿಕಾ ಕುಲಕರ್ಣಿ ಪ್ರಾರ್ಥಿಸಿದರು.