ಧಾರವಾಡದಲ್ಲಿ ದಕ್ಷಿಣ ಭಾರತದ ಮೊದಲ ಎಫ್‌ಎಂಸಿಜಿ ಕಾರಿಡಾರ್‌ ಮಮ್ಮಿಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ದಿನ ಬಳಕೆ ಉತ್ಪನ್ನ ಘಟಕಗಳ ಸ್ಥಾಪನೆ, 16 ಕಂಪನಿಗಳ ಜೊತೆಗಿನ ಒಡಂಬಡಿಕೆ ಪತ್ರಗಳಿಗೆ ರಾಜ್ಯ ಸರ್ಕಾರ ಅಂಕಿತ ಹುಬ್ಬಳ್ಳಿ(ಅ.29):ಧಾರವಾಡದ ಮಮ್ಮಿಗಟ್ಟಿಕೈಗಾರಿಕಾ ಪ್ರದೇಶದಲ್ಲಿ ಎಫ್‌ಎಂಸಿಜಿ (ತ್ವರಿತಗತಿಯಲ್ಲಿ ಬಿಕರಿಯಾಗುವ ದಿನ ಬಳಕೆಯ ಉತ್ಪನ್ನಗಳ) ಘಟಕಗಳನ್ನು ಆರಂಭಿಸಲು 16 ಕಂಪನಿಗಳು ಮುಂದೆ ಬಂದಿದ್ದು, ಈ ಸಂಬಂಧ ಶುಕ್ರವಾರ ರಾಜ್ಯ ಸರ್ಕಾರದ ಜೊತೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿವೆ. ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ 16 ಕಂಪನಿಗಳ ಮುಖ್ಯಸ್ಥರಿಗೆ ಒಡಂಬಡಿಕೆ ಪತ್ರಗಳನ್ನು ನೀಡಿ, ಸಿಹಿ ಕೊಟ್ಟು ಗೌರವಿಸಿದರು. ಇಲ್ಲಿನ 183 ಎಕ್ರೆ ಪ್ರದೇಶವ್ಯಾಪ್ತಿಯಲ್ಲಿ ಈ ಕೈಗಾರಿಕಾ ಕಾರಿಡಾರ್‌ ಸ್ಥಾಪನೆಯಾಗಲಿದೆ. ಯೋಜನೆಯ ಮೊದಲ ಹಂತದಲ್ಲಿ 1,257 ಕೋಟಿ ರು.ಬಂಡವಾಳ ಹರಿದು ಬರಲಿದ್ದು, 9,100 ಮಂದಿಗೆ ಉದ್ಯೋಗ ದೊರೆಯಲಿದೆ. ಯೋಜನೆಯಡಿ ಮುಂದಿನ 5 ವರ್ಷದಲ್ಲಿ 5 ಲಕ್ಷ ಜನರಿಗೆ ಉದ್ಯೋಗ ನೀಡುವ ವಾಗ್ದಾನವನ್ನು ಉದ್ಯಮಿಗಳು ನೀಡಿದ್ದಾರೆ. ಸರ್ಕಾರ ನೀಡುವ ವಿವಿಧ ಪ್ರೋತ್ಸಾಹದಾಯಕ ವಿನಾಯಿತಿಗಳನ್ನು ಪಡೆದು, ಈ ಕಂಪನಿಗಳು ತ್ವರಿತಗತಿಯಲ್ಲಿ ಬಿಕರಿಯಾಗುವ ದಿನ ಬಳಕೆಯ ಉತ್ಪನ್ನಗಳ (ಎಫ್‌ಎಂಸಿಜಿ) ತಯಾರಿಕಾ ಘಟಕಗಳನ್ನು ಇಲ್ಲಿ ಸ್ಥಾಪಿಸುತ್ತಿವೆ. ಇಂತಹ ಕ್ಲಸ್ಟರ್‌ ಯೋಜನೆ ಕರ್ನಾಟಕದಲ್ಲೇ ಮೊದಲನೆಯದು. ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿನ್ನು ಡಿಜಿಟಲ್‌ ಜಾಹೀರಾತು ಫಲಕದ ಜಮಾನ..! ಎಫ್‌ಎಂಸಿಜಿ ಅಕ್ಷರಶಃ ಗೇಮ್‌ ಚೇಂಜರ್‌: ಈ ವೇಳೆ ಮಾತನಾಡಿದ ಬೊಮ್ಮಾಯಿ, ಈ ಯೋಜನೆಯಿಂದಾಗಿ ಬೆಂಗಳೂರು ನಂತರ ಕೈಗಾರಿಕೆಗಳ ಸ್ಥಾಪನೆಗೆ ಹುಬ್ಬಳ್ಳಿ-ಧಾರವಾಡ ಅತ್ಯಂತ ಪ್ರಶಸ್ತ ಸ್ಥಳವಾಗಿ ಹೊರಹೊಮ್ಮಲಿದೆ. ಇಲ್ಲಿನ ಕೈಗಾರಿಕೆಗಳ ಬೆಳವಣಿಗೆಗೆ ರಾಜ್ಯ ಸರ್ಕಾರ ಸಹಕಾರ ನೀಡಲು ಬದ್ಧ. ಎಫ್‌ಎಂಸಿಜಿ ಅಕ್ಷರಶ: ಗೇಮ್‌ ಚೇಂಜರ್‌ ಆಗಲಿದೆ. ಇಲ್ಲಿನ ಜನರಿಗೆ ಉದ್ಯೋಗ ನೀಡುವುದರ ಜತೆಗೆ ಆರ್ಥಿಕತೆಯ ಬೆಳವಣಿಗೆಗೂ ಪೂರಕವಾಗಲಿದೆ. ಎಂದು ತಿಳಿಸಿದರು.ಎಫ್‌ಎಂಸಿಜಿ ಈ ಭಾಗದ ಆರ್ಥಿಕ ಅಭಿವೃದ್ಧಿ ಜೊತೆಗೆ ಇಡೀ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲಿದೆ. 2025ರಲ್ಲಿ 1 ಟ್ರಿಲಿಯನ್‌ ಆರ್ಥಿಕತೆ ಸಾಧಿಸುವ ಗುರಿ ರಾಜ್ಯ ಸರ್ಕಾರದ್ದು. 2025ರಲ್ಲಿ 1 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಮುಟ್ಟಲು ಎಫ್‌ಎಂಸಿಜಿ ತನ್ನದೇ ಆದ ಕೊಡುಗೆ ನೀಡಲಿದೆ. ಆ ನಿಟ್ಟಿನಲ್ಲಿ ಏನೇನು ಕ್ರಮ ಕೈಗೊಳ್ಳಬೇಕೋ ಆ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದು ಭರವಸೆ ನೀಡಿದರು. ಮುಂದಿನ 5 ವರ್ಷದಲ್ಲಿ 5 ಲಕ್ಷ ಉದ್ಯೋಗ: ಇದೇ ವೇಳೆ ಎಫ್‌ಎಂಸಿಜಿ ಕ್ಲಸ್ಟರ್‌ ಸ್ಥಾಪನೆಯ ರೂವಾರಿ, ವಿಜನ್‌ ಗ್ರೂಪ್‌ನ ಮುಖ್ಯಸ್ಥ ಉಲ್ಲಾಸ ಕಾಮತ್‌ ಮಾತನಾಡಿ, ಎಫ್‌ಎಂಸಿಜಿ, ಉತ್ತರ ಕರ್ನಾಟಕದ ಗೇಮ್‌ ಚೇಂಜರ್‌ ಆಗಲಿದೆ. ಇದೀಗ ಪ್ರಾರಂಭವಾಗುತ್ತಿರುವುದು ಮೊದಲ ಹಂತ. ಮುಂಬರುವ 5 ವರ್ಷಗಳಲ್ಲಿ ಇನ್ನಷ್ಟುಎಫ್‌ಎಂಸಿಜಿ ಕೈಗಾರಿಕೆಗಳು ಬರಲಿವೆ. ಮುಂದಿನ 5 ವರ್ಷದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿಮಾಡುವ ಗುರಿ ನಮ್ಮದಾಗಿದೆ ಎಂದು ವಾಗ್ದಾನ ಮಾಡಿದರು.ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್‌, ಕೈಗಾರಿಕೆ ಸಚಿವ ಮುರಗೇಶ ನಿರಾಣಿ, ಸಣ್ಣ ಕೈಗಾರಿಕೆ ಸಚಿವ ಎನ್‌.ನಾಗರಾಜ್‌, ಉದ್ಯಮಿ ವಿಜಯ ಸಂಕೇಶ್ವರ ಸೇರಿದಂತೆ ಹಲವು ಜನಪ್ರತಿನಿಧಿಗಳು ಈ ವೇಳೆ ಹಾಜರಿದ್ದರು. ಶೆಟ್ಟರ್‌ ಕನಸಿನ ಎಫ್‌ಎಂಸಿಜಿಗೆ ಕಾಲ ಸನ್ನಿಹಿತ: 50,000ಕ್ಕೂ ಅಧಿಕ ಜನರಿಗೆ ಉದ್ಯೋಗ..! ಒಡಂಬಡಿಕೆ ಮಾಡಿಕೊಂಡ ಕಂಪನಿಗಳ ವಿವರ: ಯಾವ ಕಂಪನಿ ಎಷ್ಟು ಬಂಡವಾಳ ಉದ್ಯೋಗ ಎಷ್ಟು ಜ್ಯೋತಿ ಲ್ಯಾಬ್ಸ್‌ 50 ಕೋಟಿ 600ನ್ಯಾಚರೋ ಫುಡ್ಸ್‌ ಆ್ಯಂಡ್‌ ಪ್ರುಟ್ಸ್‌ ಪ್ರೊಡೆಕ್ಟ್ 25 ಕೋಟಿ 500ಅಲ್ಟ್ರಾ ಇಂಡಿಯಾ 100 ಕೋಟಿ 300ಯು-ಫ್ಲೆಕ್ಸ್‌ 500 ಕೋಟಿ 500ರಿವೈನಾ ಫುಡ್ಸ್‌ 50 ಕೋಟಿ 1000ಗೋಡಾವತ್‌ ಫುಡ್ಸ್‌ ಪ್ರೋ 320 ಕೋಟಿ 2500ಪಗರಿಯಾ ಫುಡ್‌ ಪ್ರೊಡೆಕ್ಟ್ 30 ಕೋಟಿ 500ಹ್ಯಾಂಗೋ ಐಸ್‌ಕ್ರೀಂ 25 ಕೋಟಿ 500ಅನುಶರಣ ಗ್ರೂಪ್‌ 25 ಕೋಟಿ 500ಪಂಚಾಮಮೃತ ಇಂಡಸ್ಟ್ರೀಸ್‌ 20 ಕೋಟಿ 300ಇಂದಿರಾ ಫುಡ್‌ 20 ಕೋಟಿ 300ವಿಭವ ಇಂಡ್‌ಸ್ಟ್ರೀಸ್‌ 50 ಕೋಟಿ 800ಓರಿಯಂಟ್‌ ಪ್ರೆಸ್‌ ಲಿ. 30 ಕೋಟಿ 300ಮಹಾಲಕ್ಷ್ಮಿ ಗ್ರೂಪ್‌ 10 ಕೋಟಿ 100ಉರ್ದನೇತಾ ಕ್ಯಾಪಿಟಲ್‌ ಹೋಲ್ಡಿಂಗ್‌ 10 ಕೋಟಿ 100ಪಾಟೀಲ ಪರಿಮಳ ವರ್ಕ್ಸ್ 20 ಕೋಟಿ 300 5 ಕಡೆ ಕೈಗಾರಿಕಾ ಟೌನ್‌ಶಿಪ್‌ ರಾಜ್ಯದಲ್ಲಿ ಚಿತ್ರದುರ್ಗ, ಹಾವೇರಿ, ದಾವಣಗೆರೆ, ಧಾರವಾಡ ಹಾಗೂ ಬೆಳಗಾವಿಗಳಲ್ಲಿ ಕೈಗಾರಿಕಾ ವಿಶೇಷ ಟೌನ್‌ಶಿಪ್‌ ಸ್ಥಾಪಿಸಲಾಗುವುದು. ಪ್ರತಿಯೊಂದು ಕಡೆಯೂ ತಲಾ 1 ಸಾವಿರ ಎಕರೆ ಪ್ರದೇಶದಲ್ಲಿ ಟೌನ್‌ ನಿರ್ಮಿಸಲಾಗುವುದು ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಏನಿದು ಎಫ್‌ಎಂಸಿಜಿ? ಅರ್ಥಾತ್‌ ತ್ವರಿತಗತಿಯಲ್ಲಿ ಬಿಕರಿಯಾಗುವ ದಿನ ಬಳಕೆಯ ಉತ್ಪನ್ನಗಳನ್ನು ಕ್ಷಿಪ್ರವಾಗಿ ಎಫ್‌ಎಂಸಿಜಿ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಪ್ಯಾಕ್‌ ಮಾಡಿದ ಆಹಾರೋತ್ಪನ್ನಗಳು, ಪಾನೀಯಗಳು, ಸ್ನಾನ-ಶೌಚ-ಶೃಂಗಾರಕ್ಕೆ ಬಳಸುವ ಉತ್ಪನ್ನಗಳು, ವೈದ್ಯರ ಟಿಪ್ಪಣಿ ಇಲ್ಲದೆ ದೊರಕುವ ಔಷಧೋತ್ಪನ್ನಗಳು, ಪೆನ್ನು-ಪೆನ್ಸಿಲ್‌-ಪುಸ್ತಕ-ಹಾಳೆ ಮತ್ತಿತರೆ ನಿತ್ಯ ಬಳಕೆಯ ಉತ್ಪನ್ನಗಳು. ಇಲ್ಲಿ ಏನು ಉತ್ಪಾದನೆ? 183 ಎಕರೆ: ಧಾರವಾಡದ ಮಮ್ಮಿಗಟ್ಟಿಎಫ್‌ಎಂಸಿಜಿ ಕ್ಲಸ್ಟರ್‌ನ ಭೂಪ್ರದೇಶ16 ಕಂಪನಿ: ಎಫ್‌ಎಂಸಿಜಿ ಕ್ಲಸ್ಟರ್‌ನಲ್ಲಿ ಘಟಕ ಸ್ಥಾಪಿಸಲಿರುವ ಕಂಪನಿಗಳು.1257 ಕೋಟಿ: ಎಫ್‌ಎಂಸಿಜಿ ಕ್ಲಸ್ಟರ್‌ನಲ್ಲಿ ಹೂಡಿಕೆಯಾಗಲಿರುವ ಬಂಡವಾಳ9100 ಮಂದಿ: ಈ ಕ್ಲಸ್ಟರ್‌ನಿಂದ ನೇರವಾಗಿ ದೊರೆಯಲಿರುವ ಉದ್ಯೋಗ