2022-23: ಉತ್ತರದ ಹೆಬ್ಬಾಗಿಲಿಗೆ ಸಿಎಂ ತೋರಣ..! * ಮಹದಾಯಿಗೆ ಚಾಲನೆ ಸಿಗಬೇಕಿದೆ* ಹೊಸ ಕೈಗಾರಿಕಾ ವಸಾಹತು ಸ್ಥಾಪನೆಯಾಗಲಿ* ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಯೋಜನಾ ವರದಿ ಸಿದ್ಧಪಡಿಸಲು ಘೋಷಣೆ ಶಿವಾನಂದ ಗೊಂಬಿ ಹುಬ್ಬಳ್ಳಿ(ಮಾ.03): ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ( ) ಶಿಗ್ಗಾಂವಿ- ಸವಣೂರು ಕ್ಷೇತ್ರದ ಶಾಸಕರಾಗಿದ್ದರೂ ಹುಟ್ಟಿಬೆಳೆದಿರುವುದೆಲ್ಲ ಹುಬ್ಬಳ್ಳಿಯಲ್ಲೇ(). ಹೀಗಾಗಿ ಶಿಗ್ಗಾಂವಿ- ಸವಣೂರು ತವರು ಕ್ಷೇತ್ರವಾದರೆ ಹುಬ್ಬಳ್ಳಿ-ಧಾರವಾಡ ಜಿಲ್ಲೆ ತವರೂರು. ಮಾ.4ರಂದು ಅವರು ಮಂಡಿಸಲಿರುವ ಮೊದಲ ಬಜೆಟ್‌ನಲ್ಲಿ() ಈ ತವರೂರು ಅರ್ಥಾತ್‌ ಉತ್ತರದ ಹೆಬ್ಬಾಗಿಲು ‘ಹುಬ್ಬಳ್ಳಿ-ಧಾರವಾಡ( ) ಮಹಾನಗರ’ಕ್ಕೆ ಅದ್ಯಾವ ತೋರಣ ಕಟ್ಟುತ್ತಾರೆ? ಏನೇನು ಕೊಡುಗೆ ನೀಡಲಿದ್ದಾರೆ? ವಿಶೇಷ ಪ್ಯಾಕೇಜ್‌( ) ಘೋಷಿಸುವವರೇ? ಇಂಥದೊಂದು ನಿರೀಕ್ಷೆಯಲ್ಲಿದ್ದಾರೆ ಇಲ್ಲಿನ ಜನತೆ. ಕಳೆದ ಬಜೆಟ್‌ನಲ್ಲಿ ಘೋಷಣೆಯಾಗಿ ಉಳಿದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜತೆ ಜತೆಗೆ ಹೊಸ ಯೋಜನೆಗಳನ್ನು ಘೋಷಿಸಬೇಕಿದೆ. ಕಳೆದ ಎರಡ್ಮೂರು ವರ್ಷಗಳಿಂದ ಕೊರೋನಾಂತಕದಿಂದ ಆರ್ಥಿಕ ಪ್ರಗತಿಯೂ ಕುಂಠಿತಗೊಂಡಿದೆ. ಹೀಗಾಗಿ ಆರ್ಥಿಕ ಚಟುವಟಿಕೆಗೆ ಒತ್ತು ನೀಡುವಂತಹ ಯೋಜನೆಗಳ ನಿರೀಕ್ಷೆ ಹೆಚ್ಚಿದೆ. 2022-23: ಸಿಎಂ ಚೊಚ್ಚಲ ಬಜೆಟ್‌ ಬಗ್ಗೆ ಹಲವು ನಿರೀಕ್ಷೆ ಹೊಸ ಕೈಗಾರಿಕಾ ವಸಾಹತು: ಹುಬ್ಬಳ್ಳಿಯಲ್ಲೇ 2019ರಲ್ಲಿ ‘ಇನ್ವೆಸ್ಟ್‌ ಕರ್ನಾಟಕ- ಹುಬ್ಬಳ್ಳಿ ಸಮಾವೇಶ’( - ) ನಡೆಸಲಾಗಿದೆ. ಆಗ ಬರೋಬ್ಬರಿ 82 ಸಾವಿರ ಕೋಟಿ ಬಂಡವಾಳ ಹೂಡಿಕೆಯ ವಾಗ್ದಾನವಾಗಿತ್ತು. ಇದರಲ್ಲಿ ಕೆಲವೊಂದಿಷ್ಟು ಕೈಗಾರಿಕೆಗಳ ಚಾಲನೆಗೆ ಮೊದಲ ಹೆಜ್ಜೆಯನ್ನು ಸರ್ಕಾರ ಇಟ್ಟಿದೆಯಾದರೂ ಕೊರೋನಾದಿಂದಾಗಿ ಬಹುತೇಕ ಉದ್ಯಮಿಗಳು ಈ ವರೆಗೂ ಕೈಗಾರಿಕೆಗಳ ಆರಂಭಕ್ಕೆ ಕ್ರಮ ಕೈಗೊಂಡಿಲ್ಲ. ಇದೀಗ ಅವುಗಳಿಗೆ ಮರು ಚಾಲನೆ ನೀಡಬೇಕಿದೆ. ಕೇಂದ್ರ ಬಜೆಟ್‌ನಲ್ಲಿ( )ರಕ್ಷಣಾ ಇಲಾಖೆಗೆ ಬೇಕಾಗುವ ಸಾಮಗ್ರಿಗಳನ್ನು ದೇಶೀಯವಾಗಿ ಉತ್ಪಾದಿಸುವ ಕುರಿತು ಆಸಕ್ತಿ ತೋರಿದೆ. ಜತೆಗೆ 400 ಹೊಸ ರೈಲುಗಳ ಸಂಚಾರದ ಯೋಜನೆ ಪ್ರಕಟಿತವಾಗಿದೆ. ಇದಕ್ಕೆಲ್ಲ ಬೇಕಾಗುವ ಕಚ್ಚಾ ಸಾಮಗ್ರಿಗಳ ಉತ್ಪಾದಿಸಲು ಸಣ್ಣ, ಮಧ್ಯಮ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ದೊರೆಯುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಹೊಸ ಕೈಗಾರಿಕಾ ವಸಾಹತು ಸ್ಥಾಪನೆಯತ್ತ ಸರ್ಕಾರ ಗಮನ ಹರಿಸಬೇಕು. ಜಿಲ್ಲೆಯಲ್ಲಿ ಈಗಿರುವ ಕೈಗಾರಿಕಾ ಪ್ರದೇಶ ಹೊರತುಪಡಿಸಿ ಧಾರವಾಡ-ಕಿತ್ತೂರು, ಹುಬ್ಬಳ್ಳಿ-ಶಿಗ್ಗಾಂವಿ, ಹುಬ್ಬಳ್ಳಿ-ಗದಗ, ಹುಬ್ಬಳ್ಳಿ-ಕಾರವಾರ ಹೆದ್ದಾರಿ ಮಾರ್ಗಗಳಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಯಾಗಬೇಕು. ವಿಶೇಷ ಪ್ಯಾಕೇಜ್‌: ಹುಬ್ಬಳ್ಳಿ- ಧಾರವಾಡ ರಾಜ್ಯದ 2ನೇ ದೊಡ್ಡ ನಗರ. ಆದರೆ ಮೂಲಸೌಕರ್ಯ ಕೊರತೆಯಿಂದ ದೊಡ್ಡ ಹಳ್ಳಿಯಂತೆ ಗೋಚರಿಸುತ್ತಿದೆಯೇ ವಿನಃ 2ನೇ ದೊಡ್ಡ ನಗರವೆನಿಸಿಕೊಳ್ಳುತ್ತಿಲ್ಲ. ರಸ್ತೆ ಅಗಲೀಕರಣ, ಒಳಚರಂಡಿ, ಘನತ್ಯಾಜ್ಯ ನಿರ್ವಹಣೆಗೆ ಒತ್ತು ನೀಡಬೇಕಿದೆ. ಹೀಗಾಗಿ ಮಾಸ್ಟರ್‌ ಪ್ಲ್ಯಾನ್‌ ಜಾರಿಗೆ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ವಿಶೇಷ ಪ್ಯಾಕೇಜ್‌ ಘೋಷಿಸಿ .1000 ಕೋಟಿ ಮೀಸಲಿಡಬೇಕು. ಕೌಶಲ್ಯಾಭಿವೃದ್ಧಿ ಕೇಂದ್ರ: ಕಳೆದ ವರ್ಷ ಕೇಂದ್ರ ಸಚಿವ ರಾಜೀವ ಚಂದ್ರಶೇಖರ( ) ಆಗಮಿಸಿದ್ದ ವೇಳೆ ಕೌಶಲ್ಯಾಭಿವೃದ್ಧಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಇದಕ್ಕೆ ಪೂರಕವೆಂಬಂತೆ ಈ ಬಜೆಟ್‌ನಲ್ಲಿ ಇದಕ್ಕಾಗಿ ಹಣ ಮೀಸಲಿಡಬೇಕು. ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆಗೆ ಅನುಕೂಲ ಕಲ್ಪಿಸಬೇಕು. ಇಲ್ಲಿನ ಯುವಕರಿಗೆ ಸರಿಯಾದ ತರಬೇತಿ ಸಿಕ್ಕರೆ ಮುಂದೆ ಎಫ್‌ಎಂಸಿಜಿ ಸೇರಿದಂತೆ ವಿವಿಧ ಕೈಗಾರಿಕೆಗಳು ಬಂದರೆ ಕೆಲಸ ಪಡೆಯಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಬೊಮ್ಮಾಯಿ ಪ್ರಥಮ ಹೆಜ್ಜೆ ಇಡಬೇಕಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಹುಬ್ಬಳ್ಳಿ-ಧಾರವಾಡ- ಬೆಳಗಾವಿ ನಗರಗಳು ತೀವ್ರಗತಿಯಿಂದ ಅಭಿವೃದ್ಧಿ ಹೊಂದುತ್ತಿರುವ ನಗರಗಳು. ವಿದ್ಯಾಭ್ಯಾಸ, ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಮತ್ತು ಮರಳಿ ಬರುವವರ ಸಂಖ್ಯೆ ಹೆಚ್ಚಾಗುತ್ತಿವೆ. ವಿದೇಶಿ ಪ್ರಯಾಣಿಕರು ಬೆಂಗಳೂರು, ಮುಂಬೈ, ಚೆನ್ನೈ, ದೆಹಲಿ ವಿಮಾನ ನಿಲ್ದಾಣಗಳನ್ನು ಅವಲಂಬಿಸಬೇಕಿದೆ. ಹೀಗಾಗಿ ಇಲ್ಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಬೇಕು. ಧಾರವಾಡ ಕಿತ್ತೂರು ಮಧ್ಯೆ 1200 ಎಕರೆ ಪ್ರದೇಶವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಸೂಕ್ತ ಎಂಬುದು ಅಧ್ಯಯನದಿಂದ ಸಾಬೀತಾಗಿದೆ. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಸುದೀರ್ಘ ಯೋಜನಾ ವರದಿ ತಯಾರಿಕೆಗೆ ಈ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕಿದೆ.ಇನ್ನು ಧಾರವಾಡ- ಕಿತ್ತೂರು- ಬೆಳಗಾವಿ ರೈಲು ಮಾರ್ಗಕ್ಕೆ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಶುರು ಆಗಿದೆ. ಆದರೆ ಇದನ್ನು ಚುರುಗೊಳಿಸಬೇಕಿದೆ. ಬೆಣ್ಣಿಹಳ್ಳ- ತುಪರಿಹಳ್ಳ: ಇನ್ನು ಪ್ರತಿವರ್ಷ ಬೆಣ್ಣಿಹಳ್ಳ- ತುಪರಿಹಳ್ಳದ ಪ್ರವಾಹ ಅಷ್ಟಿಷ್ಟಲ್ಲ. ಪ್ರವಾಹ ಬಂದಾಗ ಹತ್ತಾರು ಹಳ್ಳಿಗಳು ಸಂಪರ್ಕ ಕಡಿತಗೊಂಡು ನಡುಗಡ್ಡೆಯಂತಾಗುತ್ತವೆ. ಜತೆಗೆ ಸಾವು-ನೋವು ಸಂಭವಿಸುವುದು ಮಾಮೂಲಾಗಿದೆ. ಪರಮಶಿವಯ್ಯ ವರದಿ ಅನುಷ್ಠಾನಗೊಳಿಸಬೇಕೆಂಬ ಬೇಡಿಕೆ ಬಹುವರ್ಷದ್ದು. ಬೆಣ್ಣಿಹಳ್ಳದ 3 ಹಂತಗಳ .1300 ಕೋಟಿ ಯೋಜನೆ ಸಿದ್ಧವಾಗಿ ವರ್ಷಗಳೇ ಕಳೆದರೆ, ತುಪರಿಹಳ್ಳದ .318 ಕೋಟಿ ಯೋಜನೆ ಸಿದ್ಧವಾಗಿ ವರ್ಷವೇ ಕಳೆದಿದೆ. ತುಪರಿಹಳ್ಳದ ಯೋಜನೆ ಸರ್ಕಾರ ತಾತ್ಕಾಲಿಕವಾಗಿ ತಿರಸ್ಕರಿಸಿದ್ದೂ ಆಗಿದೆ. ಈ ಬಜೆಟ್‌ನಲ್ಲಾದರೂ ಈ ಯೋಜನೆ ಘೋಷಿಸಿ ಕಾಮಗಾರಿಗೆ ಚಾಲನೆಗೆ ಹಸಿರು ನಿಶಾನೆ ತೋರಿಸಬೇಕಿದೆ. 2022-23: ವನ್ಯಜೀವಿ ಸಂಪತ್ತಿನ ರಕ್ಷಣೆಗೆ ಬೇಕು ಒತ್ತು ಮಹದಾಯಿಗಾಗಿ() 1677 ಕೋಟಿ ಮೀಸಲಿಡಲಾಗಿದೆ. ಆದರೂ ಕಾಮಗಾರಿ ಪ್ರಾರಂಭವಾಗಿಲ್ಲ. ಈ ಬಜೆಟ್‌ನಲ್ಲಿ ಇನ್ನಷ್ಟುಹಣ ಮೀಸಲಿಡಬೇಕು. ಜತೆಗೆ ಟೆಂಡರ್‌ ಕರೆಯುವ ಕುರಿತು ಘೋಷಿಸಬೇಕಿದೆ. ಹೀಗೆ ಬೊಮ್ಮಾಯಿ ತವರೂರಿಗೆ ಹೆಚ್ಚಿನ ಕೊಡುಗೆ ನೀಡಬೇಕು ಎಂಬ ಬೇಡಿಕೆ ಜನತೆಯದ್ದು. ಇದರಲ್ಲಿ ಯಾವ್ಯಾವ ಬೇಡಿಕೆ ಈಡೇರಿಸುತ್ತಾರೋ ಎಂಬುದನ್ನು ಕಾಯ್ದು ನೋಡಬೇಕಷ್ಟೇ! ಜಯದೇವ ಹೃದ್ರೋಗ ಆಸ್ಪತ್ರೆ ಉತ್ತರ ಕರ್ನಾಟಕದ ವ್ಯಾಪ್ತಿಯಲ್ಲಿ ಎಲ್ಲೂ ಹೃದ್ರೋಗ ಆಸ್ಪತ್ರೆಯಿಲ್ಲ. ಖಾಸಗಿ ಆಸ್ಪತ್ರೆಗಳಷ್ಟೇ ಇವೆ. ಆದಕಾರಣ ಜಯದೇವ ಆಸ್ಪತ್ರೆಯ ಘಟಕ ಸ್ಥಾಪಿಸಬೇಕು ಎಂಬ ಬೇಡಿಕೆ ಜನರದ್ದು. ಇದಕ್ಕಾಗಿ ನಾಲ್ಕಾರು ಮನವಿ ಪ್ರಸ್ತಾವನೆ ಸಲ್ಲಿಸಿದ್ದೂ ಆಗಿದೆ. ಆದರೆ ಪ್ರಯೋಜನವಾಗಿಲ್ಲ. ಇದೀಗ ಇದೇ ಭಾಗದ ಮುಖ್ಯಮಂತ್ರಿಯಾಗಿರುವುದರಿಂದ ಈ ಬೇಡಿಕೆಯನ್ನು ಬೊಮ್ಮಾಯಿ ಈಡೇರಿಸಬೇಕು ಎಂಬ ಆಗ್ರಹ ಜನತೆಯದ್ದು.