ಭಾರತಕ್ಕೆ ಆಗಮಿಸಿದ ಆಫ್ಗಾನ್ ಮಿನಿಸ್ಟರ್ಸ್, ಕೆಜಿಎಫ್2 ರಿಲೀಸ್ ದಿನಾಂಕ ಫಿಕ್ಸ್; ಆ.22ರ ಟಾಪ್ 10 ಸುದ್ದಿ! ತಾಲಿಬಾನ್ ಉಗ್ರರಿಂದ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲಾಗಿದೆ. ಇದರಲ್ಲಿ ಆಫ್ಘಾನಿಸ್ತಾನದ ಸಚಿವರು ಭಾರತಕ್ಕೆ ಬಂದಿಳಿದಿದ್ದಾರೆ. ಯಾವುದೇ ಟಫ್ ರೂಲ್ಸ್ ಇದ್ದರೂ ಈ ಬಾರಿ ಗಣಪತಿ ಹಬ್ಬ ಆಚರಿಸಲಾಗುತ್ತದೆ ಎಂದು ಯತ್ನಾಳ್ ಗುಡುಗಿದ್ದಾರೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಟಿಎಂಸಿಗೆ ಸೇರ್ಪಡೆ, ಕೆಜಿಎಫ್ 2 ಚಿತ್ರ ಬಿಡುಗಡೆ ದಿನಾಂಕ ಫಿಕ್ಸ್ ಸೇರಿದಂತೆ ಆಗಸ್ಟ್ 22ರ ಟಾಪ್ 10 ಸುದ್ದಿ ವಿವರ ಇಲ್ಲಿವೆ. ತಾಯ್ನಾಡಿಗೆ ಮರಳಿದ ಅಪ್ಘಾನಿಸ್ತಾನದ ಮೊದಲ ಹಿಂದೂ ಸಂಸದೆ! ತಾಲಿಬಾನಿಗಳ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಭಾರತಕ್ಕೆ ಹಲವರನ್ನು ಏರ್‌ಲಿಫ್ಟ್‌ ಮೂಲಕ ಹಿಂದಕ್ಕೆ ಕರೆತರಲಾಗಿದೆ. ಈ ಏರ್‌ಲಿಫ್ಟ್‌ ಮೂಲಕ ಅಪ್ಘಾನಿಸ್ತಾನದ ಮೊದಲ ಹಿಂದೂ ಸಂಸದೆಯನ್ನೂ ತಾಯ್ನಾಡಿಗೆ ಕರೆತರಲಾಗಿದೆ. ಭಾರತಕ್ಕೆ ಬಂದಿಳಿದ ಅಪ್ಘಾನ್ ಸಚಿವರು: ಪಿಎಂ ಮೋದಿ, ವಾಯುಪಡೆಗೆ ಧನ್ಯವಾದ! ಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಿಂದ 87 ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಎಲ್ಲಾ 87 ಭಾರತೀಯರು ವಿಶೇಷ ವಿಮಾನದ ಮೂಲಕ ದೆಹಲಿ ತಲುಪಿದ್ದಾರೆ. ಅವರಲ್ಲಿ ಇಬ್ಬರು ನೇಪಾಳಿ ಪ್ರಜೆಗಳೂ ಆಗಿದ್ದಾರೆ. ತಮ್ಮ ತಾಯ್ನಾಡಿಗೆ ಮರಳಿದ ಸಂತೋಷದಲ್ಲಿ, ಭಾವುಕರಾದ ಜನರು ವಿಮಾನದಲ್ಲಿಯೇ 'ಭಾರತ್ ಮಾತಾ ಕಿ ಜೈ' ಎಂದು ಘೋಷಣೆ ಕೂಗಿದ್ದಾರೆ. ಈ ಭಾರತೀಯರನ್ನು ಎರಡು ವಿಮಾನಗಳ ಮೂಲಕ ಭಾರತಕ್ಕೆ ಕರೆತರಲಾಗಿದೆ. ಮತ್ತೊಮ್ಮೆ ವೈರಲ್ ಆಯ್ತು ಪುನೀತ್ ರಾಜ್‌ಕುಮಾರ್ ವರ್ಕೌಟ್ ವಿಡಿಯೋ! ಸ್ಯಾಂಡಲ್‌ವುಡ್‌ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೇಮ್ಸ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪಾತ್ರಕ್ಕೆ ಬೇಕಾದಂತೆ ವರ್ಕೌಟ್ ಕೂಡ ಮಾಡುತ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ದಿನ ಎಲ್ಲರೂ ಲಕ್ಷ್ಮಿ ಪೂಜೆ ಮಾಡಿರುವ ಫೋಟೋ ಹಂಚಿಕೊಂಡರೆ, ಪುನೀತ್ ಡಿಫರೆಂಟ್ ಆಗಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. 'ಕೆಜಿಎಫ್ 2'ಗೆ ಕಾಯುತ್ತಿದ್ದವರಿಗೆ ಸಿಕ್ತು ಗುಡ್‌ನ್ಯೂಸ್, ಬಿಡುಗಡೆ ದಿನಾಂಕ ಫಿಕ್ಸ್! ಭಾರತೀಯ ಚಿತ್ರರಂಗ ಕುತೂಹಲದಿಂದ ಕಾಯುತ್ತಿರುವ ‘ಕೆಜಿಎಫ್​​ 2’ ಸಿನಿಮಾ ಯಾವಾಗ ರಿಲೀಸ್‌ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಹೌದು ಈ ಬಗ್ಗೆ ಚಿತ್ರತಂಡ ಸಿನಿ ಪ್ರಿಯರಿಗೆ ಗುಡ್‌ನ್ಯೂಸ್‌ ನೀಡಿದ್ದು, 2022ರ ಏಪ್ರಿಲ್​ 14ರಂದು ಚಿತ್ರ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ನನಗೆ ಗುಂಡು ಹಾರಿಸಿದರೂ ಸೈ : ಗಣಪತಿ ಹಬ್ಬ ಮಾಡೋದೆ ಎಂದ ಯತ್ನಾಳ್ ಶಾಸಕ ಯತ್ನಾಳ್ ಬಾಯಲ್ಲಿ ಗುಂಡಿನ ಮಾತು ಕೇಳಿದೆ..! ಎಸ್ ಪಿ ಹಾಗೂ ಡಿಸಿ ಅವರು ಬರೀ ಹಿಂದೂ ಹಬ್ಬ, ದೇವಾಲಯಗಳ ಮೇಲೆ ಕಾನೂನು ಮಾಡಿದರೆ ನಾನು ಕೇಳಲ್ಲ. ಬಿಜಾಪುರದಲ್ಲಿ ಕಾನೂನು ಮಾಡಿದರೆ ನಾ ಕೇಳಲ್ಲ. ಬಾಳ ಅಂದರೆ ನನಗೆ ಗುಂಡು ಹಾಕಬಹುದು..! ನಾ ಸತ್ತರು ಹೆಸರು ತೆಗೆದುಕೊಂಡೆ ಸಾಯಬೇಕು ಎಂದರು. ಅಲ್ಲೇನೂ ಉಳಿದಿಲ್ಲ ಎಲ್ಲವೂ ನಾಶ: ಕಣ್ಣೀರಿಟ್ಟ ಅಪ್ಘಾನ್‌ ಸಂಸದ ನರೇಂದ್ರ ಸಿಂಗ್! ಅಫ್ಘಾನಿಸ್ತಾನದಿಂದ ಈಗ ಹಲವರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ. ಇದರಲ್ಲಿ ಕೆವು ಸಿಖ್ಖರೂ ಇದ್ದಾರೆ. ಇದರಲ್ಲಿ ಅಪ್ಘಾನಿಸ್ತಾನ ನರೇಂದ್ರ ಸಿಂಗ್ ಕೂಡಾ ಒಬ್ಬರು. ಭಾರತಕ್ಕೆ ಕಾಲಿಡುತ್ತಿದ್ದಂತೆಯೇ ಅವರು ಕಣ್ನೀರಿಡುತ್ತಾ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ವಾಯುಸೇನೆಗೆ ಧನ್ಯವಾದ ತಿಳಿಸಿದ್ದಾರೆ. ಆಗಸ್ಟ್ 30ಕ್ಕೆ ಲಾಂಚ್ ಆಗಲಿದೆ ಹೊಸ 2021 ಟಿವಿಎಸ್ RR310 ಬೈಕ್ ದ್ವಿಚಕ್ರವಾಹನ ಉತ್ಪಾದನಾ ದೇಶಿ ಕಂಪನಿಗಳ ಪೈಕಿ ಟಿವಿಎಸ್‌ ಕೂಡ ಪ್ರಮುಖ ಕಂಪನಿಯಾಗಿದೆ. ಕಂಪನಿಯು ಇದೀಗ 2021ರ ಟಿವಿಎಸ್ ಅಪಾಚೆ ಆರ್‌ಆರ್310 ಹೊಸ ಮೋಟಾರ್ ಸೈಕಲ್ ಅನ್ನು ಆಗಸ್ಟ್ 30ರಂದು ಲಾಂಚ್ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಬಾಬ್ರಿ ಮಸೀದಿ ಧ್ವಂಸದ ವೇಳೆ ಸಿಎಂ ಆಗಿದ್ದ, ಹಿಂದುತ್ವದ ಪ್ರಖರ ಪ್ರತಿಪಾದಕ ಸಿಂಗ್‌! ಹಿರಿಯ ಬಿಜೆಪಿ ನಾಯಕ, ಹಿಂದುತ್ವದ ಪ್ರಖರ ಪ್ರತಿಪಾದಕ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ಸಿಂಗ್‌ (89) ಶನಿವಾರ ಇಲ್ಲಿ ನಿಧನರಾದರು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಲ್ಯಾಣ್‌ಸಿಂಗ್‌ ಅವರನ್ನು ಇಲ್ಲಿನ ಎಸ್‌ಜಿಪಿಜಿಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಹು ಅಂಗಾಂಗ ವೈಫಲ್ಯದಿಂದ ಅವರು ಶನಿವಾರ ರಾತ್ರಿ ಕೊನೆಯುಸಿರೆಳೆದರು. ಕಲ್ಯಾಣ್‌ಸಿಂಗ್‌ ನಿಧನಕ್ಕೆ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿಯಾಗಿ ಗಣ್ಯರು ಕಂಬನಿ ಮಿಡಿದಿದ್ದಾರೆ. ಕಾಂಗ್ರೆಸ್‌ಗೆ ಬಿಗ್ ಶಾಕ್: ಮತ್ತೊಬ್ಬ ರಾಜ್ಯಾಧ್ಯಕ್ಷ ಟಿಎಂಸಿಗೆ? ಮಾಜಿ ಸಂಸದೆ ಸುಶ್ಮಿತಾ ದೇವ್‌ ಕಾಂಗ್ರೆಸ್‌ ತೊರೆದ ಬೆನ್ನಿಗೇ ಪಕ್ಷಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, ತ್ರಿಪುರಾ ಕಾಂಗ್ರೆಸ್‌ ಅಧ್ಯಕ್ಷ ಪಿಜುಶ್‌ ಕಾಂತಿ ಬಿಸ್ವಾಸ್‌ ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.