ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಕೇರಳ ಉದ್ಯಮಿಗೆ ಸಚಿವ ರಾಜೀವ್ ಚಂದ್ರಶೇಖರ್ ಆಹ್ವಾನ! * ಕೇರಳದಲ್ಲಿ ಉದ್ಯಮ ಸ್ಥಗಿತಗೊಳಿಸಲು ಮುಂದಾದ ಉದ್ಯಮಿ ಸಾಬು ಜಾಕೋಬ್ * ಕೇರಳ ಬಿಡಲು ಸಿದ್ಧರಾದ ಉದ್ಯಮಿಗೆ ಕರ್ನಾಟಕಕ್ಕೆ ಆಹ್ವಾನಿಸಿದ ಸಚಿವರು * ಟ್ವೀಟ್‌ ಮಾಡಿ ಮಾಹಿತಿ ಕೊಟ್ಟ ನೂತನ ಸಚಿವ ರಾಜೀವ್ ಚಂದ್ರಶೇಖರ್ ಬೆಂಗಳೂರು(ಜು.10) ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್‌ ಕೇರಳದ ಅತೀ ದೊಡ್ಡ ಬ್ಯುಸಿನೆಸ್‌ ಗ್ರೂಪ್‌ಗಳಲ್ಲಿ ಒಂದಾದ 'ಕೈಟೆಕ್ಸ್' ಮಾಲೀಕ ಸಾಬು ಜಾಕೋಬ್ ಅವರಿಗೆ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಹ್ವಾನಿಸಿದ್ದಾರೆ. ಟ್ವೀಟ್‌ ಮೂಲಕ ಈ ಬಗ್ಗೆ ಮಾಹಿತಿ ನೀಡಿರುವ ರಾಜೀವ್ ಚಂದ್ರಶೇಖರ್, ಕರ್ನಾಟಕದಲ್ಲಿ ಅವರಿಗೆ ಬೇಜಾದ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಕೇರಳ ಮೇಲಿನ ವ್ಯಾಮೋಹಕ್ಕೆ ಬ್ರೇಕ್ ಇತ್ತೇಚೆಗಷ್ಟೇ ಮಾತನಾಡಿದ್ದ ಉದ್ಯಮಿ ಸಾಬು ಜಾಕೋಬ್ ಕೇರಳದ ಪ್ರಸ್ತುತ ಪರಿಸ್ಥಿತಿಯಲ್ಲಿ, ಕೈಗಾರಿಕಾ ಘಟಕಗಳನ್ನು ನಡೆಸುವುದು ಕಷ್ಟಕರವಾಗುತ್ತಿದೆ. ಕೈಟೆಕ್ಸ್‌ನ ವಿವಿಧ ಘಟಕಗಳ ಮೇಲೆ ವಿವಿಧ ಇಲಾಖೆಗಳಿಂದ 10 ದಾಳಿಗಳಾಗಿವೆ. 40-50 ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಅವರು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದೂ ಅವರಿಗೆ ಎಚ್ಚರಿಸಿಲ್ಲ ಎಂದು ಆರೋಪಿಸಿದ್ದಾರೆ. ಇನ್ನು ಕೈಟೆಕ್ಸ್ ಕಳೆದ 26 ವರ್ಷಗಳಿಂದ ಕೇರಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 10 ಸಾವಿರ ಜನರಿಗೆ ಉದ್ಯೋಗ ನೀಡಿದೆ. ಆದರೀಗ ನಿರಂತರ ದಾಳಿಯಿಂದ ಬೇಸತ್ತಿರುವ ಜಾಕೋಬ್ ತಮ್ಮ ವ್ಯವಹಾರವನ್ನು ಕೇರಳದಲ್ಲಿ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಆಸಕ್ತಿ ತೋರಿದ ತೆಲಂಗಾಣ ತೆಲಂಗಾಣ ಸರ್ಕಾರವು ಜಾಕೋಬ್‌ಗೆ ತಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವ ಅವಕಾಶ ನೀಡಿದೆ. ಐಟೆಕ್ಸ್ ಇಲ್ಲಿ 3,500 ಕೋಟಿಯಷ್ಟು ಹೂಡಿಕೆ ಮಾಡಬಹುದು ಎಂದು ಅಂದಾಜಿಸಲಾಗಿದೆ.