: ಬಟ್ಟಲುಗಣ್ಣಿನ ಭಗವಂತ ಗರ್ಭಗುಡಿ ಬಿಟ್ಟು ಹೊರಬರುವುದೇಕೆ? ಸಾಮಾನ್ಯವಾಗಿ ರಥ ಎಳೆಯುವಾಗ ಉತ್ಸವ ಮೂರ್ತಿಯನ್ನು ಬಳಸಿದರೆ, ಪುರಿಯಲ್ಲಿ ಮಾತ್ರ ನಿತ್ಯವೂ ಪೂಜಿಸುವ ಮೂರ್ತಿಗಳನ್ನೇ ರಥಯಾತ್ರೆಗೆ ಬಳಸಲಾಗುತತ್ದೆ. ಇದೇನಿದು ರಥಯಾತ್ರೆ ಎಂಬ ಜಗನ್ನಾಥನ ಸಮ್ಮರ್​ ವೆಕೇಶನ್? - ರಜನಿ ಎಂ.ಜಿ​ ಶ್ರೀ ಮಂದಿರಕ್ಕೆ ಹೋಲಿಸಿದರೆ ಗುಂಡೀಚಾ ದೇಗುಲ ಸಣ್ಣದೆನಿಸಿದರೂ, ಇದರ ವ್ಯಾಪ್ತಿ ದೊಡ್ಡದಿದೆ. ನಾನು ದೊಡ್ಡ ದೊಡ್ಡ ಸರತಿ ಸಾಲಿನಲ್ಲಿ ನಿಂತು ಒಳಹೋದೆ. ಗರ್ಭಗುಡಿಯ ಮುಂದೆ ನಿಂತಾಗ ಭವ್ಯಾಕಾರದಲ್ಲಿ ನಿಂತ ಕೃಷ್ಣ, ಬಲರಾಮ, ಸುಭದ್ರಾ ಫೋಟೋದಲ್ಲಿ ನಾನು ನೋಡಿರುವುದಕ್ಕಿಂತ ಬೇರೆಯದೇ ರೀತಿ ಕಂಡರು. ಸುತ್ತ ನೂಕುನುಗ್ಗಲು, ನಾವು ಯಾವಕಡೆ ಹೋಗುತ್ತಿದ್ದೇವೆಯೋ ಗೊತ್ತಾಗದ ಸ್ಥಿತಿ. ಆದ್ರೆ ಕಣ್ಣು ಮಾತ್ರ ದೇವರ ವಿಗ್ರಹದಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಜನಸಂದಣಿಯೇ ನಮ್ಮನ್ನು ಹೊರಗೆ ಎಳೆದುಕೊಂಡು ಬಂದಿತಾದರೂ ನಮ್ಮ ಕಣ್ಮುಂದೆ ಅದೇ ರೂಪ. ದೊಡ್ಡ ದೊಡ್ಡ ಬಟ್ಟಲುಗಣ್ಣಿನ, ಮುಖದ ತುಂಬಾ ಬಣ್ಣದ ಅಲಂಕಾರದ ಜಗನ್ನಾಥ. ಆದಿವಾಸಿ ಸಂಸ್ಕೃತಿಯ ಬಿಂಬಿಸುವ, ಗೋಕುಲದ ಗೊಲ್ಲ. ಅರೆಕ್ಷಣವೂ ಕಣ್ಣು ಮುಚ್ಚದೇ ಜಗತ್ತಿನ ಯೋಗ ಕ್ಷೇಮದ ಹೊಣೆಹೊತ್ತ ಜಗದೊಡೆಯ! ಶ್ರೀಮಂದಿರದಿಂದ ಗುಂಡಿಚಾ ದೇಗುಲದವರೆಗಿನ ಭಗವಂತನ ಪ್ರಯಾಣವನ್ನು ಹಲವು ರೀತಿ ಅರ್ಥೈಸಲಾಗುತ್ತದೆ. ಅಮ್ಮನ ಮನೆಯಿಂದ ಚಿಕ್ಕಮನ ಮನೆಗೆ, ರುಕ್ಮಿಣಿಯ ಜೊತೆಯಿಂದ ಗೋಪಿಕೆಯರೆಡೆಗೆ, ಅರಮನೆಯಿಂದ ಗ್ರಾಮದೆಡೆಗೆ, ವೈಭವದಿಂದ ಸರಳತೆಯೆಡೆಗೆ..ಹೀಗೆ ಹಲವು ಕಥೆಗಳಿವೆ. ಬಿರುಬೇಸಿಗೆಯ ಈ ದಿನಗಳಲ್ಲಿ ಗಂಧಲೇಪನದಲ್ಲಿ 10 ದಿನ ಕಳೆಯುವ ಜಗನ್ನಾಥನ ಸಮ್ಮರ್​ ವೆಕೇಶನ್​​ ಸಹ ಆಗಿರಬಹುದು. ಅಥವಾ ತನ್ನನ್ನು ನೋಡಲು ಕಾದುಕುಳಿತ ಭಕ್ತರ ನೋಡಲೆಂದು ಗರ್ಭಗುಡಿಯ ಸೆರೆಮನೆಯಿಂದ ದೇವರೇ ಹೊರಬರುತ್ತಾನೇನೋ..! : ಚಿಕ್ಕಮ್ಮನ ಮನೆಗೆ ಅಣ್ಣ, ತಂಗಿಯೊಡನೆ ಹೊರಡೋ ಕೃಷ್ಣ! ಆದಿವಾಸಿಗಳ ಸಂಸ್ಕೃತಿಯ ಪ್ರತೀಕ:ಆದಿವಾಸಿಗಳ ಪರಂಪರೆಯನ್ನು ಈಗಲೂ ಕಾಪಿಟ್ಟುಕೊಂಡಿರುವ ಒರಿಸ್ಸಾದಲ್ಲಿ ಈ ಜಗನ್ನಾಥನೇ ಅಚ್ಚುಮೆಚ್ಚಿನ ದೇವರು. ಮೂಲ ದೇವರೂ ಸಹ ಪೂರ್ಣ ವಿಗ್ರಹಗಳಲ್ಲ. ಕೇವಲ ಮುಖ ಹಾಗೂ ಅರೆ ಮೈ ಮಾತ್ರ ಇರುವ ಮರದ ಶಿಲ್ಪಗಳಿವು. ನಿಜ. ಬೇವಿನ ಮರದಲ್ಲಿ ಮಾಡಿದ ಈ ವಿಗ್ರಹಗಳಿಗೆ ಮೋಟು ಕೈ ಮಾತ್ರ ಇದ್ದು, ಕಾಲು ಇಲ್ಲವೇ ಇಲ್ಲ. ಸಾಕ್ಷಾತ್​ ಕೃಷ್ಣನ ಹೃದಯ ಇರುವುದೇ ಇಲ್ಲಿ ಎಂದು ನಂಬುತ್ತಾರಾದ್ದರಿಂದ ಈ ವಿಗ್ರಹಗಳನ್ನು ಅತ್ಯಂತ ಜತನವಾಗಿ ಕಾಪಾಡಿಕೊಳ್ಳುತ್ತಾರೆ. ಪ್ರತಿ 12 ವರ್ಷಕ್ಕೊಮ್ಮೆ ಈ ವಿಗ್ರಹಗಳನ್ನು ಬದಲಾಯಿಸಲಾಗುತ್ತದೆ. ಗುಂಡಿಚಾ ದೇಗುಲದಿಂದ ಹೊರಗೆ ಬಂದರೆ ಅಲ್ಲಿಯೇ ಮೂರೂ ಬೃಹತ್​ ರಥಗಳು ನಿಂತಿದ್ದವು. ಒಂದೊಂದೂ ರಥವೂ ವಿಭಿನ್ನ ಬಣ್ಣ, ಗಾತ್ರ. 16 ಬೃಹತ್​ ಚಕ್ರಗಳ ಜಗನ್ನಾಥನ ರಥ ನಂದೀಘೋಷ ಎಲ್ಲಕ್ಕಿಂತ ದೊಡ್ಡದು. ರಥಯಾತ್ರೆಗೆಂದೇ ಪ್ರತಿ ವರ್ಷ ಹೊಸದಾಗಿ ನಿರ್ಮಿಸುವ ಈ ರಥಗಳು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ಜಗನ್ನಾಥನ ರಥದಲ್ಲಿ ರಥೋತ್ಸವದ ಸಮಯದಲ್ಲಿ ಸುಮಾರು 150ಕ್ಕೂ ಹೆಚ್ಚು ಜನ ಪಾಂಡಗಳು ಕುಳಿತಿರುತ್ತಾರೆಂದರೆ ಅದರ ಗಾತ್ರ ನೀವು ಅಂದಾಜಿಸಬಹುದು. : ಪೌರ್ಣಮಿ ಮಹಾಸ್ನಾನ ಮಾಡಿದ ಜಗನ್ನಾಥನಿಗೆ ಶುರುವಾಯ್ತು ಜ್ವರ! ಅಷ್ಟು ಹತ್ತಿರದಿಂದ ರಥಗಳನ್ನು ಒಟ್ಟಿಗೇ ನೋಡಿದಾಗ ಅದರ ಎದುರು ಒಂದು ಫೋಟೋ ತೆಗೆಸಿಕೊಳ್ಳುವ ಬಯಕೆಯಾಯಿತು. ಆದರೆ ನಮ್ಮ ಬಳಿ ಕ್ಯಾಮೆರಾ ಇರಲಿಲ್ಲ. ಅದನ್ನು ಮೊದಲೇ ಕೌಂಟರ್​ನಲ್ಲಿ ಇಟ್ಟು ಬಿಟ್ಟಿದ್ದೆವು. ಈಗ ಅಲ್ಲಿಗೆ ಹೋಗುವುದೆಂದರೆ ಮತ್ತೆ ಸರತಿಯ ಸಾಲಿನ ಚಕ್ರವ್ಯೂಹ ಭೇದಿಸಿ ಹೋಗಬೇಕಿತ್ತು. ಅದು ಅಸಂಭವ. ಅಷ್ಟರಲ್ಲೇ ಅಲ್ಲೊಬ್ಬ ಕ್ಯಾಮೆರಾ ಹಿಡಿದು ಓಡಾಡುತ್ತಿದ್ದ ಸ್ಥಳೀಯ ರಿಪೋರ್ಟರ್​ ಕಂಡರು. ಅವರ ಬಳಿ ಹೋಗಿ ನಾವೂ ಜರ್ನಲಿಸ್ಟ್​​ ಎಂದು ಪರಿಚಯಿಸಿಕೊಂಡು ಫೋಟೋ ತೆಗೆಯಲು ಕೇಳಿಕೊಂಡೆವು. ಮೂರೂ ರಥ ಒಟ್ಟಿಗೆ ಬರುವ ಅ್ಯಂಗಲ್​ನಲ್ಲಿ ನಿಂತುಕೊಂಡು ಫೋಟೋ ತೆಗೆಸಿಕೊಂಡು ಖುಷಿಪಟ್ಟೆವು. ಆದರೆ ಮರುದಿನ ಅವರು ಫೋಟೋ ಕಳಿಸಿದಾಗ ಅದು ಕೇವಲ ಗ್ರೂಪ್​ ಫೋಟೋ ಮಾತ್ರವಾಗಿದ್ದು, ಅದರಲ್ಲಿ ರಥಗಳೇ ಕಾಣುತ್ತಿರಲಿಲ್ಲ. ಮೂರೂ ರಥದೊಂದಿಗೆ ಫೋಟೋ ತೆಗೆಸಿಕೊಳ್ಳಬೇಕೆಂದಿದ್ದ ನಮ್ಮ ಆಸೆ ಭಗ್ನವಾಯಿತು!