ತಿರುಪತಿ ಗರ್ಭಗುಡಿ ಮುಚ್ಚಲ್ಲ: ಮುಖ್ಯ ಅರ್ಚಕ ಸ್ಪಷ್ಟನೆ ತಿರುಪತಿ ಗರ್ಭಗುಡಿ ಮುಚ್ಚಲ್ಲ ಎಂದು ಮುಖ್ಯ ಅರ್ಚಕ ಸ್ಪಷ್ಟನೆ ನೀಡಿದ್ದಾರೆ. ಗೋಪುರಕ್ಕೆ ಚಿನ್ನಲೇಪನ ಮಾರ್ಚ್‌ 1ಕ್ಕೆ ಆರಂಭವಾಗಲಿದೆ. ಆದರೆ, ಈ ವೇಳೆ ಮೂಲ ದೇವರ ದರ್ಶನ ಅಬಾಧಿತವಾಗಿ ನಡೆಯಲಿದೆ. ಸುಪ್ರಭಾತದಿಂದ ಏಕಾಂತ ಸೇವೆವರೆಗಿನ ಸೇವೆಗಳನ್ನು ಏಕನಾಥಂನಲ್ಲಿ ಮಾಡಲಾಗುತ್ತದೆ ಎಂದು ದೀಕ್ಷಿತ್‌ ಹೇಳಿದ್ದಾರೆ. ತಿರುಮಲ: ತಿರುಪತಿ ತಿಮ್ಮಪ್ಪನ ದೇವಾಲಯದ ( ) ಗರ್ಭಗುಡಿಯನ್ನು 6 ರಿಂದ 8 ತಿಂಗಳು ಮುಚ್ಚುಲಾಗುತ್ತದೆ ಎಂಬ ವರದಿಗಳನ್ನು ದೇಗುಲದ ಮುಖ್ಯ ಅರ್ಚಕರಲ್ಲಿ ಒಬ್ಬರಾದ ವೇಣುಗೋಪಾಲ ದೀಕ್ಷಿತುಲು ಅವರು ತಳ್ಳಿಹಾಕಿದ್ದಾರೆ. ‘ಗೋಪುರಕ್ಕೆ ಚಿನ್ನಲೇಪನ ಕಾರ್ಯ ನಡೆದಿದ್ದರೂ ತಿಮ್ಮಪ್ಪನ ಮೂಲ ವಿರಾಟ್‌ ಮೂರ್ತಿಯ ದರ್ಶನವು ಎಂದಿನಂತೆ ನಡೆಯಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. ‘ಚಿನ್ನಲೇಪನದ ವೇಳೆ ಗರ್ಭಗುಡಿಯನ್ನು 6-8 ತಿಂಗಳು ಮುಚ್ಚಲಾಗುತ್ತದೆ. ಈ ವೇಳೆ ಮೂಲ ಮೂರ್ತಿಯ ದರ್ಶನ ಆಗದು. ಹೀಗಾಗಿ ದೇಗುಲದ ಪಕ್ಕದಲ್ಲೇ ತಾತ್ಕಾಲಿಕ ದೇಗುಲ ನಿರ್ಮಿಸಿ ತಿಮ್ಮಪ್ಪನ ಪ್ರತಿಕೃತಿ (ಉತ್ಸವ ಮೂರ್ತಿ) ಇರಿಸಲಾಗುತ್ತದೆ. ಅಲ್ಲಿ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ಲಭಿಸಲಿದೆ’ ಎಂದು ದೇಗುಲದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದ್ದವು. ಇದಕ್ಕೆ ಸ್ಪಷ್ಟನೆ ನೀಡಿರುವ ದೀಕ್ಷಿತುಲು, ‘ಮಾರ್ಚ್‌ 1ರಿಂದ ಗೋಪುರದ ಚಿನ್ನಲೇಪನ ಆರಂಭವಾಗಲಿದೆ. ಚಿನ್ನ ಲೇಪನಕ್ಕೆ 6 ತಿಂಗಳು ಹಿಡಿಯಲಿದೆ. ಇದಕ್ಕೂ 1 ವಾರ ಮುನ್ನ ದೇಗುಲದ ಪಕ್ಕದಲ್ಲೇ ಬಾಲಾಲಯ (ತಾತ್ಕಾಲಿಕ ಮಂದಿರ) ನಿರ್ಮಿಸಿ ಅಲ್ಲಿ ವೆಂಕಟೇಶ್ವರನ ಪ್ರತಿಕೃತಿ ಇರಿಸಲಾಗುತ್ತದೆ. ಈ 6 ತಿಂಗಳೂ ಮೂಲ ಮೂರ್ತಿಯ ದರ್ಶನವು ಭಕ್ತರಿಗೆ ಲಭ್ಯವಿರುತ್ತದೆ. ಆದರೆ ಸುಪ್ರಭಾತದಿಂದ ಏಕಾಂತ ಸೇವೆವರೆಗಿನ ಸೇವೆಗಳನ್ನು ಏಕನಾಥಂನಲ್ಲಿ ಮಾಡಲಾಗುತ್ತದೆ. ಕಲ್ಯಾಣೋತ್ಸವದಂಥ ಅರಿಜಿತ ಸೇವೆಯನ್ನು ಉತ್ಸವ ಮೂರ್ತಿಗಳಿಗೆ ಮಾಡಲಾಗುತ್ತದೆ. ಭಕ್ತರು ಗರ್ಭಗುಡಿ ಮುಚ್ಚುತ್ತದೆ ಎಂಬ ವದಂತಿಗೆ ಕಿವಿಗೊಡಬಾರದು’ ಎಂದು ಮನವಿ ಮಾಡಿದ್ದಾರೆ. ಇದನ್ನು ಓದಿ:2022ರಲ್ಲಿ ಅತಿ ಹೆಚ್ಚು ಭಕ್ತರ ಭೇಟಿ ಕಂಡ 2ನೇ ದೇವಾಲಯ ತಿರುಪತಿ! ಅಚ್ಚರಿ ಹುಟ್ಟಿಸುತ್ತೆ ಭಕ್ತರ ಸಂಖ್ಯೆ! ಇನ್ನು, 1957-58ರಲ್ಲಿ ಚಿನ್ನದ ಲೇಪನದ ಕೆಲಸಗಳ ದಾಖಲೆಗಳ ಪ್ರಕಾರ ಮತ್ತು 2018 ರಲ್ಲಿ ಬಾಲಾಲಯ ಉತ್ಸವದಲ್ಲಿ ಶ್ರೀವಾರಿ ಮೂಲ ಮೂರ್ತಿ ದರ್ಶನ ಮತ್ತು ಆರ್ಜಿತ ಸೇವೆಗಳನ್ನು ಯಾವುದೇ ವಿರಾಮವಿಲ್ಲದೆ ನಡೆಸಲಾಯಿತು. ಈ ಹಿನ್ನೆಲೆ 6 ತಿಂಗಳ ಕಾಲ ಶ್ರೀವಾರಿ ದರ್ಶನ ರದ್ದು ಮಾಡುವ ವದಂತಿಗಳನ್ನು ನಂಬಬೇಡಿ ಎಂದು ಟಿಟಿಡಿ ಸಹ ಭಕ್ತರಿಗೆ ಮನವಿ ಮಾಡಿದೆ. ಡಿಸೆಂಬರ್‌ 31 ರಿಂದ ಜನವರಿ 11 ರವರೆಗೆ ಶ್ರೀವಾಣಿ ಟಿಕೆಟ್‌ಗಳ ಸ್ಥಗಿತ..!ವೈಕುಂಠ ದ್ವಾರ ದರ್ಶನದ ಪೂರ್ವಭಾವಿಯಾಗಿ ನಾಳೆಯಿಂದ ಜನವರಿ 1ರವರೆಗೆ ಸರ್ವದರ್ಶನದ ಟೋಕನ್‌ಗಳು, ಶ್ರೀವಾಣಿ ಟ್ರಸ್ಟ್ ಮತ್ತು ಆರ್ಜಿತ ಸೇವಾ ಟಿಕೆಟ್‌ಗಳ ವಿತರಣೆಯನ್ನು ಸ್ಥಗಿತಗೊಳಿಸಲು ಟಿಟಿಡಿ ನಿರ್ಧರಿಸಿದೆ. ಈ ಮದ್ಯೆ, ವೈಕುಂಠ ಏಕಾದಶಿ ನಿಮಿತ್ತ ತಿರುಮಲಕ್ಕೆ ಆರ್‌ಟಿಸಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದೆ. ತಿರುಪತಿಯ 9 ಕೇಂದ್ರಗಳಲ್ಲಿ 93 ವಿಶೇಷ ಕೌಂಟರ್‌ಗಳಲ್ಲಿ ಜನವರಿಯಲ್ಲಿ 10 ದಿನಗಳವರೆಗೆ 4.50 ಲಕ್ಷ ಮೊತ್ತದ ವೈಕುಂಠ ದ್ವಾರ ದರ್ಶನ ಟೋಕನ್‌ಗಳನ್ನು ಬಿಡುಗಡೆ ಮಾಡಲು ಟಿಟಿಡಿ ಈಗಾಗಲೇ ನಿರ್ಧರಿಸಿದೆ. ಟಿಟಿಡಿ ತಂತ್ರಜ್ಞಾನವನ್ನು ಬಳಸಿಕೊಂಡು ಎಲ್ಲಾ ಕೇಂದ್ರಗಳಲ್ಲಿ ಕ್ಯೂಆರ್ ಕೋಡ್‌ಗಳೊಂದಿಗೆ ಫ್ಲೆಕ್ಸಿಯನ್ನು ಸ್ಥಾಪಿಸಿದೆ. ಇದನ್ನೂ ಓದಿ:ತಿರುಪತಿ ದೇವಾಲಯದ ಗೋಪುರಕ್ಕೆ ಚಿನ್ನದ ಲೇಪನ, 6-8 ತಿಂಗಳು ದೇಗುಲ ಕ್ಲೋಸ್? ತಿರುಮಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಗುರುವಾರ ಸಂಜೆ ವೈಕುಂಟಂ ಕ್ಯೂ ಕಾಂಪ್ಲೆಕ್ಸ್‌ನ 31 ಕಂಪಾರ್ಟ್‌ಮೆಂಟ್‌ಗಳು ಮತ್ತು ನಾರಾಯಣಗಿರಿಯ 6 ಶೆಡ್‌ಗಳು ಎಸ್‌ಎಸ್‌ಒ ಟೋಕನ್ ಇಲ್ಲದೆ ಧರ್ಮದರ್ಶನಕ್ಕಾಗಿ ಸರದಿಯಲ್ಲಿ ಬಂದು ಎಟಿಜಿಎಚ್‌ವರೆಗೆ ಕಾಯುತ್ತಿದ್ದ ಭಕ್ತರಿಂದ ತುಂಬಿದ್ದವು. ದೇವರ ದರ್ಶನ ಪೂರ್ಣಗೊಳ್ಳಲು 24 ಗಂಟೆ ಕ್ಯೂ ಇತ್ತು ಎಂದು ಟಿಟಿಡಿ ತಿಳಿಸಿದೆ. ಹಾಗೆ, ಶ್ರೀವಾಣಿ ದೇಣಿಗೆ ನೀಡುಗರಿಗೆ ಡಿಸೆಂಬರ್ 31 ರಿಂದ ಜನವರಿ 11 ರವರೆಗೆ ವಿಐಪಿ ಟಿಕೆಟ್‌ಗಳ ಆಫ್‌ಲೈನ್‌ ಅನ್ನು ಸ್ಥಗಿತಗೊಳಿಸುವುದಾಗಿ ಟಿಟಿಡಿ ಭಕ್ತರಿಗೆ ಮಾಹಿತಿ ನೀಡಿದೆ. ಇನ್ನು, ಶ್ರಿವಾಣಿ ದೇಣಿಗೆ ನೀಡಿದವರಿಗೆ ಪ್ರತಿದಿನ 2 ಸಾವಿರ ಆನ್‌ಲೈನ್‌ ಟಿಕೆಟ್‌ ವಿತರಿಸುವುದಾಗಿಯೂ ತಿಳಿಸಿದೆ. ಇದನ್ನೂ ಓದಿ:ತಿರುಪತಿ ಹುಂಡಿಗೆ ಎಂಟೇ ತಿಂಗಳಲ್ಲಿ 1000 ಕೋಟಿ ರೂ. ಗೂ ಅಧಿಕ ಹಣ ಸಂಗ್ರಹ..!