ಉಚ್ಚಿಲ ದಸರಾ: ಸಮುದ್ರ ತೀರದಲ್ಲಿ ನವದೇವಿಯರಿಗೆ ಕಡಲಾರತಿ ಕಾಶಿಯ ಗಂಗಾ ತೀರದಲ್ಲಿ ನಡೆವ ಗಂಗಾರತಿಯಂತೆಯೇ ಉಚ್ಚಿಲ ದಸರಾವನ್ನು ಕಡಲಾರತಿ ಮಾಡಿ ಸಂಪನ್ನಗೊಳಿಸಲಾಯಿತು. ವರದಿ- ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್ ಉಡುಪಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನಡೆದ ಉಚ್ಚಿಲ ದಸರಾ ವಿಶೇಷ ಆಚರಣೆಯೊಂದಕ್ಕೆ ಸಾಕ್ಷಿ ಆಯ್ತು. ಕಾಪು ಕಡಲತಡಿಯಲ್ಲಿ ಅತ್ಯಂತ ವೈಭವದ ಗಂಗಾರತಿ ನಡೆಯಿತು. ಕಾಶಿಯ ಗಂಗಾ ನದಿ ತಟದಲ್ಲಿ ನಡೆಯುವ, ಈ ಸುಂದರ ಆಚರಣೆಗೆ ಕರಾವಳಿ ತೀರದ ಜನರು ನಡುರಾತ್ರಿ ಸಾಕ್ಷಿಯಾದರು. ಉಡುಪಿಯ ಮಹಾಲಕ್ಷ್ಮಿ ದೇವಸ್ಥಾನದ ದಸರಾ() ಮಹೋತ್ಸವ ಸಂಪನ್ನಗೊಂಡಿದ್ದು ವೈಭವದ ಮೆರವಣಿಗೆ ನಡೆಯಿತು. ಕಾಪು ಕಡಲ ತೀರದಲ್ಲಿ ನವದುರ್ಗೆಯರನ್ನು ಕುಳ್ಳಿರಿಸಿ, ಸಾವಿರಾರು ಜನರ ನಡುವೆ ಕಡಲಾರತಿ ನಡೆಸಿ, ಜಲ ವಿಸರ್ಜನೆ ಮಾಡಲಾಯಿತು. ಈ ವೇಳೆ ನೂರಾರು ಮಹಿಳೆಯರು ಕೂಡ ಸಮುದ್ರಕ್ಕೆ ಆರತಿ ಬೆಳಗುವ ಮೂಲಕ ಈ ಕ್ಷಣವನ್ನು ಸ್ಮರಣೀಯಗೊಳಿಸಿದರು. ಜನ ಸಾಗರದ ಸಮ್ಮುಖದಲ್ಲಿ ನವ ದೇವಿಯರ ಜೊತೆಗೆ ಸಮುದ್ರ ರಾಜನಿಗೂ ಆರತಿ ಬೆಳಗಲಾಯಿತು. ದಕ್ಷಿಣ ಭಾರತದ ಪ್ರಸಿದ್ಧ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ( )ದಲ್ಲಿ ನವರಾತ್ರಿ ಉತ್ಸವವನ್ನು ವೈಭವದಿಂದ ಆಚರಿಸಲಾಗಿತ್ತು. ನವ ದುರ್ಗೆಯರ ಮೂರ್ತಿಯನ್ನು 9 ದಿನ ಆರಾಧಿಸಿ, ಇಂದು ಮುಂಜಾನೆ ವಿಸರ್ಜನಾ ಮೆರವಣಿಗೆ ಮಾಡಲಾಯಿತು. ಸಮುದ್ರ ತೀರದಲ್ಲಿ ನವದುರ್ಗ ವಿಸರ್ಜನೆ ವಿಶೇಷವಾಗಿತ್ತು. 2022: ಈ ರಾಶಿಗಳಿಗೆ ಕೈ ಇಟ್ಟಿದ್ದೆಲ್ಲ ಚಿನ್ನ, ಧನಲಾಭ ಇದಕ್ಕೂ ಮುನ್ನ ಹೆಲಿಕಾಪ್ಟರ್ ನಲ್ಲಿ ಮೂರು ಸುತ್ತು ಪುಷ್ಪವೃಷ್ಟಿ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ನೂತನ ತಂತ್ರಜ್ಞಾನದ ಹೆಲಿಕಾಪ್ಟರ್ ನವ ದುರ್ಗೆಯರ ಸಮೀಪಕ್ಕೆ ಬಂದು ಮೂರು ಬಾರಿ ಪುಷ್ಪಾರ್ಚನೆ ಮಾಡಿದ್ದು ವಿಶೇಷವಾಗಿತ್ತು. ಮೆರವಣಿಗೆಯ ವೈಭವದಲ್ಲಿ 80ಕ್ಕಿಂತ ಹೆಚ್ಚು ಟ್ಯಾಬ್ಲೋಗಳು ಭಾಗಿಯಾದವು. ಗಣಪತಿ ಈಶ್ವರ ನವದುರ್ಗೆಯರು, ಹನುಮಂತ, ಮೂಷಿಕದ ಮೇಲೆ ಸಂಚಾರ ಹೊರಟ ವಿಘ್ನ ವಿನಾಶಕ, ಕಾಳಿಂಗ ಮರ್ಧನ ಕೃಷ್ಣ , ಬಕಾಸುರ ,ರಥದಲ್ಲಿ ಸಂಚರಿಸುವ ಕೃಷ್ಣ ಅರ್ಜುನರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹುಲಿ ವೇಷ ಕುಣಿತ, ವಿವಿಧ ಭಜನಾ ತಂಡಗಳು ಭಾಗಿಯಾದವು. ಕಳೆದ ಹತ್ತು ದಿನದಲ್ಲಿ ಸುಮಾರು 5 ಲಕ್ಷ ಜನ ಭಕ್ತರು ಶ್ರೀ ಕ್ಷೇತ್ರ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ದೇವರ ದರ್ಶನ ಮತ್ತು ಪ್ರಸಾದವನ್ನು ಸ್ವೀಕರಿಸಿದ್ದಾರೆ. ಮಹಾಲಕ್ಷ್ಮಿ ದೇವಸ್ಥಾನದಿಂದ ಹೆಜಮಾಡಿ ಟೋಲ್ ವರೆಗೆ ಅಲ್ಲಿಂದ ಕಾಪುವಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿದೆ. ಸುಮಾರು 25 kmಗಳ ಬೃಹತ್ ಮೆರವಣಿಗೆಯನ್ನು ಕೈಗೊಂಡು ಜಿಲ್ಲೆಯಲ್ಲೇ ಅತಿ ದೊಡ್ಡ ವೈಭವದ ಶೋಭಾ ಯಾತ್ರೆ ಎಂಬ ಹೆಗ್ಗಳಿಕೆಗೆ ಉಚ್ಚಿಲ ದಸರಾ ಪಾತ್ರವಾಗಿದೆ. ಕರ್ನಾಟಕದ ಹಲವೆಡೆ ಸಂಭ್ರಮದ ವಿಜಯದಶಮಿ: ದಸರಾ ಆಚರಣೆಗೆ ತೆರೆ ರಾತ್ರಿ ಎರಡು ಗಂಟೆಯವರೆಗೂ ಕಾಪು ಕಡಲತೀರದವರೆಗೆ ನವ ದುರ್ಗೆಯರ ವೈಭವದ ಮೆರವಣಿಗೆ ನಡೆಯಿತು. ಅಲ್ಲಲ್ಲಿ ನಿಂತು ಜನ ದೇವರಿಗೆ ಪ್ರಾರ್ಥನೆ, ಪೂಜೆ ಸಲ್ಲಿಸಿದರು. ಮಲ್ಪೆ ಕಡಲ ತೀರದಲ್ಲಿ ಸಾವಿರಾರು ಜನ ಭಕ್ತ ಸಮುದಾಯದ ನಡುವೆ ಸಾಲಾಗಿ ನವ ದುರ್ಗೆಯರ ಮೂರ್ತಿಯನ್ನು ಇಟ್ಟು ಗಂಗರತಿ ಸಲ್ಲಿಸಲಾಯಿತು. 9 ದೇವಿಯರನ್ನು ಏಕಕಾಲದಲ್ಲಿ ಜಲ ಸ್ತಂಭ ಮಾಡಿದ್ದು ವಿಶೇಷವಾಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲೇ ಮೆರವಣಿಗೆ ಸಾಗಿದ್ದರಿಂದ ಸಾವಿರಾರು ಜನ ಪ್ರಮುಖ ಜಂಕ್ಷನ್ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಕೆಲ ಕಡೆ ನಿಧಾನ ಸಂಚಾರ ಕಂಡು ಬಂತು. ಉಡುಪಿ ಜಿಲ್ಲಾ ಪೊಲೀಸರು, ನೂರಾರು ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಗಳ ವಾಹನ ಸು ಸಂಚಾರಕ್ಕೆ ವ್ಯವಸ್ಥೆಗಳನ್ನು ಮಾಡಿಕೊಟ್ಟರು. ಮೈಸೂರು ದಸರಾ ಮಂಗಳೂರು ದಸರಾ( ) ಸಾಲಿಗೆ ಉಚ್ಚಿಲ ದಸರಾ ಒಂದು ಹೊಸ ಸೇರ್ಪಡೆ ಎಂಬ ಮಾತುಗಳು ಜನರಿಂದ ಕೇಳಿಬಂತು.