ಮಾಂಗಲ್ಯ ತೆೆಗೆಯೋದು ಪತಿಗೆ ನೀಡೋ ಮಾನಸಿಕ ಕ್ರೌರ್ಯ: ಮದ್ರಾಸ್ ಹೈ ಕೋರ್ಟ್ ಪತಿ ಬದುಕಿದ್ದಾಗ ಮಹಿಳೆ ಯಾವುದೇ ಕಾರಣಕ್ಕೂ ಮಂಗಳಸೂತ್ರವನ್ನು ತೆಗೆಯೋದಿಲ್ಲ. ಆದ್ರೆ ಇಲ್ಲೊಬ್ಬ ಮಹಿಳೆ ವಿಚ್ಛೇದನ ಸಿಗುವ ಮೊದಲೇ ಮಂಗಳಸೂತ್ರ ತೆಗೆದು ಯಡವಟ್ಟು ಮಾಡಿಕೊಂಡಿದ್ದಾಳೆ. ಮದ್ರಾಸ್ ಹೈಕೋರ್ಟ್ ಮಹಿಳೆ ಕೆಲಸಕ್ಕೆ ತಕ್ಕ ಉತ್ತರ ನೀಡಿದೆ. ಹಿಂದೂ ಧರ್ಮದಲ್ಲಿ ಮಂಗಳ ಸೂತ್ರಕ್ಕೆ ಮಹತ್ವದ ಸ್ಥಾನವಿದೆ. ಮಂಗಳಸೂತ್ರವನ್ನು ಮದುವೆಯ ಸಂಕೇತ, ಸೌಭಾಗ್ಯದ ಸಂಕೇತವೆಂದು ನಂಬಲಾಗಿದೆ. ಮದುವೆಯ ನಂತರ ವಿವಾಹಿತ ಮಹಿಳೆಯರು ಅದನ್ನು ಗೌರವದಿಂದ ಕುತ್ತಿಗೆ ಧರಿಸುತ್ತಾರೆ. ಪತಿ ಈ ಜಗತ್ತಿನಲ್ಲಿ ಇಲ್ಲದಿದ್ದಾಗ ಅಥವಾ ಇಬ್ಬರ ನಡುವಿನ ಸಂಬಂಧವು ಕೊನೆಗೊಂಡಾಗ ಮಾತ್ರ ಮಹಿಳೆಯರು ಅದನ್ನು ತಮ್ಮಿಂದ ಬೇರ್ಪಡಿಸುತ್ತಾರೆ. ಮಂಗಳಸೂತ್ರವನ್ನು ಧರಿಸುವ ಈ ನಿಯಮವನ್ನು ಶತಮಾನಗಳಿಂದ ಸಾಂಪ್ರದಾಯಿಕವಾಗಿ ಅನುಸರಿಸಿಕೊಂಡು ಬರಲಾಗುತ್ತಿದೆ. ಮಂಗಳ ಸೂತ್ರವನ್ನು ಗಂಡನ ಮೇಲಿನ ಪ್ರೀತಿಯ ಸಂಕೇತವೆಂದು ಭಾವಿಸಲಾಗಿದೆ. ಜಗತ್ತು ಎಷ್ಟೇ ಮುಂದುವರೆದಿರಲಿ ಮಂಗಳ ಸೂತ್ರದ ಬಗ್ಗೆ ಮಹಿಳೆಯರು ವಿಶೇಷ ಭಾವನೆ ಹೊಂದಿರುತ್ತಾರೆ. ಬಹುತೇಕ ಭಾರತೀಯ ಮಹಿಳೆಯರು ಮಂಗಳ ಸೂತ್ರವನ್ನು ಕತ್ತಿನಿಂದ ತೆಗೆಯುವುದಿಲ್ಲ. ಅನಿವಾರ್ಯ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಮಂಗಳ ಸೂತ್ರವನ್ನು ತೆಗೆಯುತ್ತಾರೆ. ಈ ಮಂಗಳ ಸೂತ್ರದ ಬಣ್ಣ, ಅದರ ವಿನ್ಯಾಸ ಹಾಗೂ ಬಂಗಾರ ಎಲ್ಲದಕ್ಕೂ ಒಂದೊಂದು ಅರ್ಥವನ್ನು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಮಂಗಳ ಸೂತ್ರ ಹರಿದ್ರೂ ಅಥವಾ ಅದ್ರ ಒಂದು ಕೊಂಡಿ ಕಳಚಿದ್ರೂ ಅದನ್ನು ಅಪಶಕುನವೆಂದು ಭಾವಿಸುವ ಜನರಿದ್ದಾರೆ. ಈ ಎಲ್ಲ ನಂಬಿಕೆಗಳ ಮಧ್ಯೆಯೇ ಮಂಗಳ ಸೂತ್ರದ ಬಗ್ಗೆ ಮದ್ರಾಸ್ ಹೈಕೋರ್ಟ್ ಖಡಕ್ ತೀರ್ಪು ನೀಡಿದ ಪ್ರಕರಣ ಸುದ್ದಿಯಲ್ಲಿದೆ . ಗಂಡನಿಂದ ಬೇರ್ಪಟ್ಟ ಮಹಿಳೆ ಮಂಗಳ ಸೂತ್ರವನ್ನು ತೆಗೆದಿದ್ದಳು. ಗಂಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ. ವಿಚಾರಣೆ ವೇಳೆ ಮಂಗಳ ಸೂತ್ರವನ್ನು ಧರಿಸುವುದು ಅನಿವಾರ್ಯವಲ್ಲ ಮತ್ತು ಹೆಂಡತಿ ಅದನ್ನು ತೆಗೆದುಹಾಕುವುದರಿಂದ ವೈವಾಹಿಕ ಸಂಬಂಧದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಮಹಿಳೆ ಪರ ವಕೀಲರು ವಾದಿಸಿದ್ದರು. ವಿಚ್ಛೇದಿತ ಪತ್ನಿ ಮಂಗಳ ಸೂತ್ರ ತೆಗೆದರೆ, ಗಂಡನಿಗೆ ಇದು ಮಾನಸಿಕ ಹಿಂಸೆಯಾಗುತ್ತದೆ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಷ್ಟಕ್ಕೂ ಮದ್ರಾಸ್ ಹೈಕೋರ್ಟ್ ನಲ್ಲಿ ನಡೆದ ಪ್ರಕರಣವೇನು ಎಂಬುದನ್ನು ನಾವಿಂದು ಹೇಳ್ತೇವೆ. ಏನು ಮಂಗಳಸೂತ್ರ () ದ ಪ್ರಕರಣ :ಮದ್ರಾಸ್ ಹೈಕೋರ್ಟ್ ( ) ಗೆ ಪ್ರಾಧ್ಯಾಪಕ ಸಿ.ಶಿವಕುಮಾರ್‌, ಸ್ಥಳೀಯ ನ್ಯಾಯಾಲಯ ನೀಡಿರುವ ಆದೇಶವನ್ನು ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. 2016, ಜೂನ್ 16ರಂದು ಸ್ಥಳೀಯ ನ್ಯಾಯಾಲಯ ಮಂಗಳಸೂತ್ರ ತೆಗೆದ ಕಾರಣ ಪತ್ನಿಗೆ ವಿಚ್ಛೇದನ ನೀಡಲು ಸಾಧ್ಯವಿಲ್ಲವೆಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಪತಿ, ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.ನ್ಯಾಯಮೂರ್ತಿ ವಿ.ಎಂ.ವೇಲುಮಣಿ ಮತ್ತು ನ್ಯಾಯಮೂರ್ತಿ ಎಸ್ ಪೀಠ, ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿತ್ತು. ಈರೋಡ್‌ನ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸಿ.ಶಿವಕುಮಾರ್‌ ಅವರ ಮೇಲ್ಮನವಿಯನ್ನು ಸೌಂತರ್‌ ವಿಭಾಗೀಯ ಪೀಠ ಅಂಗೀಕರಿಸಿದೆ.ಇದನ್ನೂ ಓದಿ:ಮಾಂಗಲ್ಯಧಾರಣೆ ಮಹತ್ವ, ಪ್ರಯೋಜನಗಳು! ಮಹಿಳೆ ಹೇಳಿದ್ದೇನು? :ಮದ್ರಾಸ್ ಹೈಕೋರ್ಟ್ ವಿಚಾರಣೆ ವೇಳೆ ಮಹಿಳೆ, ಮಂಗಳ ಸೂತ್ರವನ್ನು ತೆಗೆದಿರುವುದಾಗಿ ಹೇಳಿದ್ದಳು. ಮಂಗಳಸೂತ್ರವನ್ನು ತೆಗೆದಿದ್ದು ನಿಜ. ನಾನು ಸರ ತೆಗೆದು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದೇನೆ. ಆದ್ರೆ ತಾಳಿ ತೆಗೆದಿರಲಿಲ್ಲವೆಂದು ಹೇಳಿಕೆ ನೀಡಿದ್ದಳು. ಮಹಿಳೆ ಪರ ವಕೀಲರು ಹೇಳಿದ್ದೇನು ? :ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 7 ಅನ್ನು ಮಹಿಳೆ ಪರ ವಕೀಲರು ಉಲ್ಲೇಖಿಸಿದ್ದಾರೆ. ತಾಳಿ ಧರಿಸುವುದು ಅನಿವಾರ್ಯವಲ್ಲ ಎಂದವರು ವಾದಿಸಿದ್ದರು. ಹೆಂಡತಿ ಮಂಗಳ ಸೂತ್ರವನ್ನು ತೆಗೆದು ಹಾಕುವುದರಿಂದ ವೈವಾಹಿಕ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಕೀಲರು ವಾದಿಸಿದ್ದರು. ಇದನ್ನೂ ಓದಿ:ಮಂಗಳಸೂತ್ರ ಪ್ರಚಾರಕ್ಕೆ ಅರೆ ನಗ್ನ ಫೋಟೋ : ವಿನ್ಯಾಸಕಗೆ ಬಿಜೆಪಿ ನೋಟಿಸ್‌! ಕೋರ್ಟ್ ತೀರ್ಪೇನು ? :ಪರ –ವಿರೋಧಗಳನ್ನು ಆಲಿಸಿದ ಕೋರ್ಟ್, ಮಂಗಳಸೂತ್ರವನ್ನು ತೆಗೆಯುವುದು ಬೇರೆ ಅರ್ಥವನ್ನೇ ನೀಡುತ್ತದೆ ಎಂದಿದೆ. ಪತಿಯಿಂದ ಬೇರೆ ವಾಸವಾಗಿರುವ ಮಹಿಳೆ ವಿಚ್ಛೇದನಕ್ಕಿಂತ ಮೊದಲೇ ಮಂಗಳಸೂತ್ರ ತೆಗೆಯುವುದು ಪತಿಗೆ ಮಾಡುವ ಮಾನಸಿಕ ಕ್ರೌರ್ಯವೆಂದು ಕೋರ್ಟ್ ಹೇಳಿದೆ. ಅಲ್ಲದೆ ವಿಚ್ಛೇದನಕ್ಕೆ ಒಪ್ಪಿಗೆ ನೀಡಿದೆ.