105 ಕಿ.ಮೀ ಸೈಕಲ್‌ನಲ್ಲಿ ತೆರಳಿ ಪರೀಕ್ಷೆ ಬರೆದ ವಿದ್ಯಾರ್ಥಿಗೆ ಆನಂದ್ ಮಹೀಂದ್ರ ಭರ್ಜರಿ ಗಿಫ್ಟ್! ಉದ್ಯಮಿ ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವುದು ಮಾತ್ರವಲ್ಲ, ಹಲವು ಬಾರಿ ಸಮಸ್ಯೆಗೆ ಸ್ಪಂದಿಸಿದ್ದಾರೆ. ನೆರವು ನೀಡಿದ್ದಾರೆ. ಇತ್ತೀಚೆಗೆ ಮಗನ ಪರೀಕ್ಷೆಗಾಗಿ ತಂದೆ ಬರೋಬ್ಬರಿ 105 ಕಿ.ಮೀ ಸೈಕಲ್ ತುಳಿದಿದ್ದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದ್ದಂತೆ ಉದ್ಯಮಿ ಆನಂದ್ ಮಹೀಂದ್ರ ವಿದ್ಯಾರ್ಥಿಯ ಶಿಕ್ಷಣಕ್ಕೆ ಸಂಪೂರ್ಣ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಮುಂಬೈ(ಆ.24):ಸಾಮಾಜಿಕ ಜಾಲತಾಣದಲ್ಲಿ ಆನಂದ್ ಮಹೀಂದ್ರ ಹಲವು ಘಟನೆಗಳಿಗೆ ಸ್ಪಂದಿಸಿದ್ದಾರೆ. ಮೈಸೂರಿನ ವ್ಯಕ್ತಿ ತನ್ನ ಹಳೆ ಸ್ಕೂಟರ್‌ನಲ್ಲಿ ತಾಯಿ ಕೂರಿಸಿಕೊಂಡು ಭಾರತ ಸುತ್ತಾಡಿಸಿದ ಘಟನೆ ಅರಿತ ಆನಂದ್ ಮಹೀಂದ್ರ ಆತನಿಗೆ ಕಾರು ಗಿಫ್ಟ್ ನೀಡಿದ್ದರು. ಈ ರೀತಿ ಹಲವರಿಗೆ ಆನಂದ್ ಮಹೀಂದ್ರ ನೆರವು ನೀಡಿದ್ದಾರೆ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಮಗನ ಪರೀಕ್ಷೆಗಾಗಿ ತಂದೆ ಬರೋಬ್ಬರಿ 105 ಕಿ.ಮೀ ಸೈಕಲ್ ತುಳಿದಿದ್ದ ಘಟನೆ ಭಾರಿ ಸದ್ದು ಮಾಡಿತ್ತು. ಇದೀಗ ಆನಂದ್ ಮಹೀಂದ್ರ ಈ ವಿದ್ಯಾರ್ಥಿಯ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಪರೀಕ್ಷೆ: ಮಗನನ್ನು ಕೂರಿಸಿ 3 ದಿನ 105 ಕಿ.ಮೀ ಸೈಕಲ್ ತುಳಿದ ತಂದೆ... ಮಧ್ಯಪ್ರದೇಶದಲ್ಲಿ ಪರೀಕ್ಷೆಯಲ್ಲಿ ಅನುತ್ತೀರ್ಣವಾದ ವಿದ್ಯಾರ್ಥಿಗಳಿಗೆ ಪುನರ್ ಪರೀಕ್ಷೆ ನಡೆಸುತ್ತಿದೆ. ಶೋಭ್ ರಾಮ್ ತನ್ನ ಮಗನ ಪುನರ್ ಪರೀಕ್ಷೆ ಬರೆಯಲು ಸಾರಿಗೆ ವ್ಯವಸ್ಥೆಗಳಿರಲಿಲ್ಲ. ಲಾಕ್‌ಡೌನ್ ಆಗಿದ್ದ ಕಾರಣ ಬಸ್ ವ್ಯವಸ್ಥೆ ಇರಲಿಲ್ಲ. ಇನ್ನು ಇತರ ವಾಹನದಲ್ಲಿ ಪ್ರಯಾಣಿಸುವ ಶಕ್ತಿ ಶೋಭ್ ರಾಮ್ ಅವರ ಕುಟುಂಬಕ್ಕೆ ಇರಲಿಲ್ಲ. ಬಡತನ ರೇಖೆಗಿಂತೆ ಕೆಳಗಿರುವ ಶೋಭ್ ರಾಮ್ ತನ್ಮ ಮಗನ ಒಂದು ವರ್ಷ ಹಾಳಾಗಬಾರದು ಎಂದು 105 ಕಿ.ಮೀ ಸೈಕಲ್ ತುಳಿದು ಮಗನನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದ್ದರು. ಇದನ್ನು ಅರಿತ ಆನಂದ್ ಮಹೀಂದ್ರ ತಕ್ಷಣವೇ ಆನಂದ್ ಮಹೀಂದ್ರ ಫೌಂಡೇಶನ್ ಈ ಬಡ ವಿದ್ಯಾರ್ಥಿಯ ಮುಂದಿನ ಶಿಕ್ಷಣದ ಎಲ್ಲಾ ಜವಾಬ್ದಾರಿ ವಹಿಸಿಕೊಳ್ಳಲಿದೆ ಎಂದು ಘೋಷಿಸಿದ್ದಾರೆ. ಆನಂದ್ ಮಹೀಂದ್ರ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಬಡತನದಲ್ಲಿರು ಶೋಭ್ ರಾಮ್ ಕುಟುಂಬ ಮಗನ ಉತ್ತಮ ವಿದ್ಯಾಭ್ಯಾಸಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಕೂಲಿ ಕೆಲ ಮಾಡುತ್ತಾ ಮಗನ ಬದುಕು ಉಜ್ವಲವಾಗಿಸುವ ಕನಸು ಕಟ್ಟಿಕೊಂಡಿದ್ದಾರೆ. ಇದೀಗ ಶೋಭ್ ರಾಮ್ ಕನಸಿಗೆ ಉದ್ಯಮಿ ಆನಂದ್ ಮಹೀಂದ್ರ ನೆರವಾಗಿದ್ದಾರೆ.