ಪಿಎಸ್‌ಐ ಪರೀಕ್ಷೆ ಮುಂದೂಡಿಕೆಗೆ ರಕ್ತದಲ್ಲಿ ಪತ್ರ ಬರೆದ ಅಭ್ಯರ್ಥಿಗಳು: ಮಸ್ಕಿ ಶಾಸಕರಿಂದಲೂ ಸಿಎಂಗೆ ಮನವಿ ರಾಜ್ಯದಲ್ಲಿ 545 ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಹುದ್ದೆಗಳಿಗೆ ಡಿ.23ರಂದು ನಡೆಸಲಾಗುತ್ತಿರುವ ಮರು ಪರೀಕ್ಷೆ ದಿನಾಂಕವನ್ನು ಮುಂದೂಡಿಕೆ ಮಾಡುವಂತೆ ಅಭ್ಯರ್ಥಿಗಳು ರಕ್ತದಲ್ಲಿ ಪತ್ರ ಬರೆದಿದ್ದಾರೆ. ಬೆಂಗಳೂರು (ಡಿ.03):ರಾಜ್ಯ ಸರ್ಕಾರದಿಂದ ಈ ಹಿಂದೆ ನಡೆಸಲಾಗಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಸಿವಿಲ್) 545 ಹುದ್ದೆಗಳ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿ, ಮರು ಪರೀಕ್ಷೆ ನಡೆಸಲು ಡಿ.23ರಂದು ದಿನಾಂಕ ನಿಗದಿ ಮಾಡಲಾಗಿದೆ. ಆದರೆ, ಪಿಎಸ್‌ಐ ಅಭ್ಯರ್ಥಿಗಳು ಈ ಪರೀಕ್ಷೆಯನ್ನು ಮುಂದೂಡಿಕೆ ಮಾಡುವಂತೆ ಸರ್ಕಾರಕ್ಕೆ ರಕ್ತದಲ್ಲಿ ಪತ್ರ ಬರೆದು ಮನವಿ ಮಾಡಿದ್ದಾರೆ. ಜೊತೆಗೆ, ರಾಯಚೂರು ಜಿಲ್ಲೆಯ ಮಸ್ಕಿ ಶಾಸಕರೂ ಕೂಡ ಪರೀಕ್ಷೆ ಮುಂದೂಡುವಂತೆ ಪತ್ರವನ್ನು ಬರೆದಿದ್ದಾರೆ. ಈ ಕುರಿತು ರಕ್ತದಲ್ಲಿ ಬರೆದ ಪತ್ರವೊಂದನ್ನು ಹಂಚಿಕೊಂಡಿರುವ ಅಭ್ಯರ್ಥಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪರೀಕ್ಷೆ ಮುಂದೂಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಮಂತ್ರಿ ಜಿ. ಪರಮೇಶ್ವರ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ಅಭ್ಯರ್ಥಿ ರಕ್ತದಿಂದ ಬರೆದ ಪತ್ರದಲ್ಲಿ 545 ಎಂದು ಬರೆದುಕೊಂಡಿದ್ದಾರೆ. ಈ ಪತ್ರವನ್ನು ರವಿಶಂಕರ್ ಮಾಲಿಪಾಟೀಲ್ ಎನ್ನುವವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದು, 56,000 ಪಿಎಸ್‌ಐ ಪರೀಕ್ಷಾ ಅಭ್ಯರ್ಥಿಗಳ ಮನವಿ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ. ಬೆಳಗಾವಿ ಸುವರ್ಣಸೌಧದಲ್ಲಿ ಸಾವರ್ಕರ್ ಆಯ್ತು, ಈಗ ನೆಹರು ಫೋಟೋ ಅಳವಡಿಕೆ: ಯುಟಿ ಖಾದರ್ ಮಾಹಿತಿ ಜೊತೆಗೆ, ನಮ್ಮ ಅಭ್ಯರ್ಥಿಯೊಬ್ಬರು ತಮ್ಮ ರಕ್ತದಿಂದ 545 ಅಂತ ಬರೆದಿದ್ದಾರೆ ದಯವಿಟ್ಟು ಯಾರು ಈ ಥರ ಮಾಡ್ಬೇಡಿ ನಮಗೆ ಸರಕಾರದ ಮೇಲೆ ಭರವಸೆ ಇದೆ ನಮ್ಮ ಸರ್ಕಾರ ನಮ್ಮ ಅಭ್ಯರ್ಥಿಗಳ ಮಾತು ಕೇಳುತ್ತೆ ಮತ್ತು ನಮಗೆಲ್ಲ ಸ್ವಲ್ಪ ಕಾಲಾವಕಾಶ ಮಾಡಿಕೊಡುತ್ತದೆ ಅಂತ ನಾವು ನಂಬಿಕೆ ಇಟ್ಟಿದ್ದೇವೆ.ಯಾರು ಈ ತರಹ ರಕ್ತದಲ್ಲಿ ಬರೆಯೋದು ಮಾಡ್ಬೇಡಿ, ಸರ್ಕಾರದ ಮೇಲೆ ನಂಬಿಕೆ ಇಡಿ 56,000 ಅಭ್ಯರ್ಥಿಗಳ ಪರವಾಗಿ ಸರ್ಕಾರ ನಿಂತಿದೆ ಎಲ್ರಲ್ಲಿ ಇದೊಂದೇ ವಿನಂತಿ. ನಮ್ಮ ಜನಪ್ರತಿನಿಧಿಗಳು ನಮ್ಮನ್ನ ಯಾವತ್ತೂ ನಡು ನೀರಲ್ಲಿ ಕೈ ಬಿಡಲ್ಲ ಅಂತ ನಾವು ನಂಬಿದ್ದೇವೆ ದಯವಿಟ್ಟು ಎಲ್ಲರೂ ನಿಮ್ಮ ಎಂಎಲ್ಎ ಮತ್ತು ಎಂಪಿ ಮತ್ತು ನಿನ್ನೆಸರುಗಳನ್ನು ಭೇಟಿಯಾಗಿ ಅಥವಾ ಕಾಲ್ ಮೆಸೇಜ್ ಮುಖಾಂತರ ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳಿ ಇತರ ರಕ್ತದಲ್ಲಿ ಬರೆಯೋದು ಮಾಡಬೇಡಿ ಎಂದು ರವಿಶಂಕರ್ ಮಾಲೀಪಾಟೀಲ್ ಮನವಿ ಮಾಡಿಕೊಂಡಿದ್ದಾರೆ. ಇನ್ನು ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ತುರವಿಹಾಳ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ಬರೆದಿದ್ದು, ಪಿ.ಎಸ್.ಐ (ಸಿವಿಲ್ ) 545 ಹುದ್ದೆಗಳ ನೇಮಕಾತಿ ಮರು ಪರೀಕ್ಷೆಯ ದಿನಾಂಕವನ್ನು ಕನಿಷ್ಟ ಪಕ್ಷ-02 ತಿಂಗಳುಗಳ ಕಾಲ ಮುಂದೂಡಿಕೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಪಿ.ಎಸ್.ಐ (ಸಿವಿಲ್) 545 ನೇಮಕಾತಿ ಮರು ಪರೀಕ್ಷೆಯನ್ನು ಮಾಡಲು ಈಗಾಗಲೇ ಮಾನ್ಯ ಉಚ್ಚನ್ಯಾಯಲವು ಆದೇಶ ನೀಡಿರುತ್ತದೆ. 23-12-2023 ಪಿಎಸ್‌ಐ ನೇಮಕಾತಿಗೆ ಸಂಬಂಧಪಟ್ಟಂತೆ ಮರು ಪರೀಕ್ಷೆಯನ್ನು ನಡೆಸಲು ದಿನಾಂಕ ಘೋಷಣೆ ಮಾಡಲಾಗಿದೆ. ಆದರೆ, ಸದರಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಆಭ್ಯರ್ಥಿಗಳಿಗೆ ಸಾಕಷ್ಟು ಸಮಯಾಕಾಶವು ಬೇಕಾಗುತ್ತದೆ. ಆದರೆ ತರಾ-ತುರಿಯಲ್ಲಿ ಪರೀಕ್ಷಾ ದಿನಾಂಕ ನಿಗದಿಪಡಿಸಿರುವುದರಿಂದ ಅಭ್ಯರ್ಥಿಗಳಲ್ಲಿ ಆತಂಕ ಉಂಟಾಗಿದೆ. ಈ ಕುರಿತಂತೆ ಈಗಾಗಲೇ ಅಭ್ಯರ್ಥಿಗಳು ದಿನಾಂಕ 27-11- 2023ರಂದು ನಡೆದ ಜಿಲ್ಲಾ ಜನತಾ ದರ್ಶನದಲ್ಲಿ ತಮಗೆ ಮನವಿಯನ್ನು ಸಲ್ಲಿಸಿದ್ದಾರೆ. ತಾವು ಸಹ ದಿನಾಂಕವನ್ನು ಮುಂದೂಡುವುದಾಗಿ ಭರವಸೆಯನ್ನು ನೀಡಿರುವುದಾಗಿ ಅಭ್ಯರ್ಥಿಗಳು ತಿಳಿಸಿರುತ್ತಾರೆ. ರೈತರಾಯ್ತ, ಮೃತ ಸೈನಿಕನ ಕುಟುಂಬವಾಯ್ತು ಈಗ ಮಾಧ್ಯಮಗಳಿಗೂ ಹಣ ಬಾಕಿ ಇರಿಸಿಕೊಂಡ ರಾಜ್ಯ ಸರ್ಕಾರ! ಆದ್ದರಿಂದ ರಾಜ್ಯದ ಪಿಎಎಸ್‌ಐ ಅಭ್ಯರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಅಭ್ಯರ್ಥಿಗಳ ಮನವಿಯಂತೆ ಈಗಾಗಲೇ ನಿಗದಿಪಡಿಸಲಾದ ದಿನಾಂಕ 23-12-2023 ರ ಬದಲಾಗಿ, 02 ತಿಂಗಳುಗಳ ಕಾಲ ಮುಂದೂಡಿ, ಸೂಕ್ತ ದಿನಾಂಕವನ್ನು ನಿಗದಿಪಡಿಸಬೇಕು. ಈ ಮೂಲಕ ಪೂರ್ವ ಸಿದ್ಧತೆಗಳೊಂದಿಗೆ ಯಾವುದೇ ಲೋಪವಾಗದಂತ ಕಟ್ಟುನಿಟ್ಟಾಗಿ ಪರೀಕ್ಷಾ ಪ್ರಕ್ರಿಯೆಗಳನ್ನು ಕೈಗೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇವರಿಗೆ ಸೂಕ್ತ ಸೂಚನೆ ನೀಡಬೇಕಾಗಿ ತಮ್ಮಲ್ಲ ಕಳಕಳಿಯಿಂದ ವಿನಂತಿಸಿದ್ದೇವೆ ಎಂದು ಶಾಸಕ ಬಸನಗೌಡ ತುರವಿಹಾಳ ಮನವಿ ಮಾಡಿದ್ದಾರೆ.