ಬ್ಲೂಟೂತ್ ಎಫೆಕ್ಟ್: ಖಾಕಿ ಕಾವಲಿನಲ್ಲಿ ಕೆಪಿಎಸ್ಸಿ ಪರೀಕ್ಷೆ..! ಅಕ್ರಮಗಳು ನಡೆಯದಂತೆ ಕಟ್ಟೆಚ್ಚರ ವಹಿಸಲು, ಪರೀಕ್ಷೆಗೆ 2 ಗಂಟೆಗಳ ಮೊದಲೇ ಅಭ್ಯರ್ಥಿಗಳ ತಪಾಸಣಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಪ್ರತಿಯೊಂದು ಕೇಂದ್ರಗಳಲ್ಲಿ ಪೊಲೀಸ್‌ ಹಾಗೂ ಭದ್ರತಾ ವ್ಯವಸ್ಥೆ ನಿಯೋಜಿಸಲಾಗಿತ್ತು. ಪ್ರತಿಯೊಬ್ಬರನ್ನು ಕೂಲಂಕುಷವಾಗಿ ತಪಾಸಣೆ ಮಾಡಿ ಒಳಬಿಡಲಾಗುತ್ತಿತ್ತು. ಕಿವಿಯಲ್ಲಿ ಟಾರ್ಚ್ ಹಾಕಿ ಎರಡೆರಡು ಬಾರಿ ಪೊಲೀಸ್‌ ಸಿಬ್ಬಂದಿ ಪರಿಶೀಲಿಸುತ್ತಿದ್ದರು. ಯಾದಗಿರಿ(ನ.05):ಪಿಎಸೈ ಹಾಗೂ ಎಫ್‌ಡಿಎ ಹುದ್ದೆಗಳ ನೇಮಕಾತಿಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳ ಬಿಸಿ ಪರಿಣಾಮ, ಕರ್ನಾಟಕ ಲೋಕಸೇವಾ ಆಯೋಗದ, ಗ್ರೂಪ್‌ "ಸಿ" ವೃಂದದ ಹುದ್ದೆಗಳಿಗಾಗಿ ನ.4 ಹಾಗೂ ನ.5ರಂದು 2 ದಿನಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೊದಲ ದಿನವಾದ ಶನಿವಾರ (ನ.4) ಯಾದಗಿರಿಯಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿತ್ತು. ಯಾದಗಿರಿಯ ಐದು ಸರ್ಕಾರಿ ಕೇಂದ್ರಗಳಲ್ಲಿ ಈ ಪರೀಕ್ಷೆಗಳನ್ನು ಆಯೋಜಿಸಲಾಗಿತ್ತು. ಪರೀಕ್ಷೆಗೆ 1659 ಅಭ್ಯರ್ಥಿಗಳು ನೋಂದಣಿ ಮಾಡಿದ್ದರಾದರೂ, 763 ಅಭ್ಯರ್ಥಿಗಳು ಹಾಜರಾಗಿ, 896 ಅಭ್ಯರ್ಥಿಗಳು ಗೈರಾಗಿದ್ದರು. ಅಕ್ರಮಗಳು ನಡೆಯದಂತೆ ಕಟ್ಟೆಚ್ಚರ ವಹಿಸಲು, ಪರೀಕ್ಷೆಗೆ 2 ಗಂಟೆಗಳ ಮೊದಲೇ ಅಭ್ಯರ್ಥಿಗಳ ತಪಾಸಣಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಪ್ರತಿಯೊಂದು ಕೇಂದ್ರಗಳಲ್ಲಿ ಪೊಲೀಸ್‌ ಹಾಗೂ ಭದ್ರತಾ ವ್ಯವಸ್ಥೆ ನಿಯೋಜಿಸಲಾಗಿತ್ತು. ಪ್ರತಿಯೊಬ್ಬರನ್ನು ಕೂಲಂಕುಷವಾಗಿ ತಪಾಸಣೆ ಮಾಡಿ ಒಳಬಿಡಲಾಗುತ್ತಿತ್ತು. ಕಿವಿಯಲ್ಲಿ ಟಾರ್ಚ್ ಹಾಕಿ ಎರಡೆರಡು ಬಾರಿ ಪೊಲೀಸ್‌ ಸಿಬ್ಬಂದಿ ಪರಿಶೀಲಿಸುತ್ತಿದ್ದರು. ಅಕ್ರಮ ಬಳಿಕ ಪರೀಕ್ಷೆ ಬಿಗಿ: ಅಭ್ಯರ್ಥಿ ಗುರುತು ಪತ್ತೆಗೆ ಫೇಸ್‌ ರೆಕಗ್ನಿಷನ್‌! ಯಾವುದೇ ಸೂಕ್ಷ್ಮ ರೀತಿಯ ವಸ್ತು ಇರದಿದ್ದನ್ನು ಖಚಿತಪಡಿಸಿಕೊಂಡು, ಯಾವುದೇ ತರಹದ ಲೋಹ ಅಥವಾ ಇನ್ನಿತರ ವಸ್ತುಗಳು ಇರದಂತೆ ಮೆಟಲ್‌ ಡಿಟೆಕ್ಟರ್‌ನಲ್ಲಿ ಚೆಕ್‌ ಮಾಡಿ ಅಭ್ಯರ್ಥಿಗಳನ್ನು ಕೇಂದ್ರದೊಳಗೆ ಬಿಡಲಾಗುತ್ತಿತ್ತು.ಅಭ್ಯರ್ಥಿಗಳ ಕಿವಿಯೋಲೆ, ಚೈನ್‌ ಸೇರಿದಂತೆ ಎಲ್ಲವೂ ಹೊರಗಡೆ ತೆಗೆಸಲಾಗುತ್ತಿತ್ತು. ಓರ್ವ ಅಭ್ಯರ್ಥಿಯನ್ನು ನಾಲ್ಕು ಬಾರಿ ಪರೀಶಿಲನೆ ನಡೆಸಿ, ಒಳಬಿಡಲಾಗುತ್ತಿತ್ತು. ಪರೀಕ್ಷೆಯ ಹಿನ್ನೆಲೆಯಲ್ಲಿ, ಭದ್ರತೆಗಾಗಿ ಓರ್ವ ಡಿವೈಎಸ್ಪಿ, ಇಬ್ಬರು ಸರ್ಕಲ್‌ ಇನ್ಸಪೆಕ್ಟರ್‌ಗಳು, ಆರು ಜನ ಪಿಎಸೈಗಳು ಸೇರಿದಂತೆ 10ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಅಕ್ರಮಗಳ ಎಫೆಕ್ಟ್‌ ! ಪಿಎಸೈ ಅಕ್ರಮ ಜನಮಾನಸದಲ್ಲಿ ಹಚ್ಚ ಹಸಿರಿರುವುವಾಗಲೇ, ಮೊನ್ನೆ ಮೊನ್ನೆಯಷ್ಟೇ ಅಕ್ಟೋಬರ್‌ 28 ರಂದು ನಡೆದ ಬೆಳಿಗ್ಗಿನ ಅವಧಿಯ ಪರೀಕ್ಷೆಯಲ್ಲಿ ಬ್ಲೂಟೂತ್ ಅಕ್ರಮಗಳು ಬಯಲಾಗಿದ್ದವು. ಯಾದಗಿರಿ ಹಾಗೂ ಕಲಬುರಗಿಯಲ್ಲಿ ಸೇರಿ 25ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳು ಹೆಚ್ಚಿದ ಹಿನ್ನೆಲೆಯಲ್ಲಿ, ಕರ್ನಾಟಕ ಲೋಕಸೇವಾ ಆಯೋಗ ನ.4 ಹಾಗೂ ನ.5 ರಂದು ನಡೆಯುವ ಪರೀಕ್ಷೆಗಳಿಗಾಗಿ ಇಂತಹ ಮುಂಜಾಗ್ರತಾ ಬಿಗಿ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಿ, ಈ ಕಟ್ಟುನಿಟ್ಟಿನ ಕ್ರಮಗಳ ಕೈಗೊಂಡಿದೆ.