ಹಲ್ಲು ಕೀಳೋ ಡಾಕ್ಟ್ರು ಗದ್ದೇಲಿ ಹುಲ್ಲೂ ಕೀಳ್ತಾರೆ, ಗದ್ದೆನೂ ಊಳ್ತಾರೆ! ನಾವು ಯಾವ ಕೆಲಸ ಮಾಡಿದರೇನು? ಹೊಟ್ಟೆಗೆ ಹಿಟ್ಟು ತಿನ್ನಲೇಬೇಕಲ್ವಾ? ಏನೇನೋ ಹಾಬಿ ಬೆಳೆಯಿಸಿಕೊಳ್ಳೋ ಬದಲು ಕೃಷಿಯನ್ನೇ ಹವ್ಯಾಸವನ್ನಾಗಿಸಿ ಜೈ ಎನಿಸಿಕೊಂಡಿದ್ದಾರೆ ಡೆಂಟಿಸ್ಟ್! - ಜಿ ವಾಸುದೇವ ಭಟ್ ಪೆರಂಪಳ್ಳಿಇದೊಂದು ಯುವಜನತೆಗೆ ಸ್ಫೂರ್ತಿ ಕೊಡುವ ವಿಶೇಷ ಸಂಗತಿ. ಗದ್ದೆ, ಬೇಸಾಯ, ಕೃಷಿ ಅಂದ್ರೆ ಮೂಗು ಮುರಿಯೋ ಕಾಲದಲ್ಲಿದ್ದೇವೆ. ಅದ್ರಲ್ಲೂ ಯುವ ಸಮುದಾಯವಂತೂ ಇನ್‌ಸ್ಟೆಂಟ್ ಯುಗದ ಎಲ್ಲ ಮಾರುಕಟ್ಟೆಗೂ ಮೊದಲ ಗ್ರಾಹಕರಾಗಲು ನಾ ಮುಂದು, ತಾ ಮುಂದು ಅಂತ ಧಾವಿಸುವ ಮನಸ್ಥತಿಯಲ್ಲಿದ್ದಾರೆ. ಪ್ರತಿಯೊಬ್ಬರ ಪರ್ಸ್ ಕಿಸೆಗಳಲ್ಲೂ ಸಾಲ ಮಾಡಿಯಾದರೂ ತುಪ್ಪ ತಿನ್ನಬಹುದೆಂಬ ರೀತಿಯಲ್ಲಿ ಡೆಬಿಟ್ ಕ್ರೆಡಿಟ್ ಕಾರ್ಡ್‌ಗಳೇ ಮೊದಲಾದವುಗಳು ನಮ್ಮ‌ ಖರೀದಿ ಸಾಮರ್ಥ್ಯ ಹೆಚ್ಚಿಸಿದಂದಿನಿಂದ ಕೃಷಿ, ಗೋ ಪಾಲನೆ ಮೊದಲಾದ ಶ್ರಮಜೀವನದ ವ್ಯವಸ್ಥೆಗಳಿಂದಲೇ ಮೈಲುಗಟ್ಟಲೆ ದೂರ ಧಾವಿಸಲಾರಂಭಿಸಿದ್ದೇವೆ.‌ಕೆಲವು ಸಾಮಾಜಿಕ ಕಾರಣಗಳನ್ನು ಮುಂದಿಟ್ಟು ಸ್ವತಃ ಕೃಷಿಕರ ಮಕ್ಕಳೇ ನಮಗೆ ಬೇಸಾಯದ ಉಸಾಬರಿಯೇ ಬೇಡವೆಂದು, ಮನೆ ಬಿಟ್ಟು ನಗರದೆಡೆಗೆ ಮುಖ ಮಾಡುವ ವಿಕ್ಷಿಪ್ತ ಪರಿಸ್ಥಿತಿಗಳನ್ನು ಕಾಣುತ್ತಿದ್ದೇವೆ. ಕೆಲವು ಕೃಷಿಕರ ಮಕ್ಕಳು ಉತ್ತಮ‌ ಶಿಕ್ಷಣ ದೊರೆತ ಕಾರಣದಿಂದಲೂ ಉದ್ಯೋಗದ ನೆಪ ಹೇಳಿ ಊರು ಬಿಡುತ್ತಿರುವುದು ನಿತ್ಯದ ಕಥೆಗಳಾಗಿವೆ. ಪರಿಣಾಮವಾಗಿ ಕರಾವಳಿ ಜಿಲ್ಲೆಗಳೂ ಸೇರಿ ನಾಡಿನಲ್ಲಿ ಮಾತ್ರವಲ್ಲ, ದೇಶಾದ್ಯಂತ ಹೆಕ್ಟೇರ್‌ಗಟ್ಟಲೆ ಕೃಷಿ ಭೂಮಿಗಳು ಬರಡು ಬೆಂಗಾಡಾಗಿ ಬಿಡುವ ಆತಂಕದ ಸ್ಥಿತಿ ಎದುರಾಗುತ್ತಿವೆ. ಫಲಭರಿತ ಅನ್ನದ ಬಟ್ಟಲೇ ಬರಿದಾದರೆ, ಮನುಷ್ಯ ಮಣ್ಣು ತಿನ್ನಬೇಕಾದ ದಿನಗಳು ಎದುರಾದರೆ ಅಚ್ಚರಿಯೂ ಇಲ್ಲ. ಈಗಾಗಲೇ ಆಫ್ರಿಕಾದ ಅನೇಕ ದೇಶಗಳಲ್ಲಿ ಇಂಥ ಭೀಕರ ಕ್ಷಾಮ ತಲೆದೋರಿರುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಇಂಥ ವಿಕಲ್ಪಗಳ ನಡುವೆ ಎಲ್ಲೋ ಕೆಲವು ಕಡೆ ಭರವಸೆಯ ಹೊಂಗಿರಣಗಳು ನಿರಾಶೆಯ ಕಾರ್ಮೋಡಗಳನ್ನು ಸೀಳಿ ಹೊಸ ಬೆಳಕನ್ನು ಕೊಡುವ ಸಂಗತಿಗಳು ನಾಳೆ ಎದುರಾಗಬಹುದಾದ ಭೀಕರತೆ ಬಗ್ಗೆ ಕಳವಳಗೊಂಡ ಮನಸ್ಸಿನ ಭಾರವನ್ನು ಒಂದಷ್ಟು ದೂರ ಮಾಡುತ್ತವೆ . ಈ ರೀತಿಯ ಹೊಸ ಟಿಸಿಲುಗಳು ಸಮಾಜದ ತುಂಬೆಲ್ಲ ಮೂಡಿಬರಲೆಂಬ ಹಾರೈಕೆಗಳು ತಾನೇ ತಾನಾಗಿ ವ್ಯಕ್ತವಾಗುತ್ತವೆ. : ಹೂವಲ್ಲ ಹಾವಿನ ಗಾರ್ಡನ್..! ಕೈ ಹಾಕಿದ್ರೆ ಬುಸ್ ಎನ್ನುತ್ತೆ ನಾಗ ಅಂಥ ಒಂದು ಘಟನೆಯನ್ನು ಹೇಳಲು ಈ ಪೀಠಿಕೆ ಹಾಕಿದೆಯಷ್ಟೆ. ಮಣಿಪಾಲದ ಪ್ರತಿಷ್ಠಿತ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ದಂತ ವೈದ್ಯಕೀಯ ಶಿಕ್ಷಣವನ್ನು ಎಂಡಿ ಪದವಿಯೊಂದಿಗೆ ಮುಗಿಸುತ್ತಿರುವ ತರುಣ, ಉತ್ಸಾಹಿ ದಂತ ವೈದ್ಯ ಡಾ ಭಾರ್ಗವ ಭಟ್ಟರು ಭಾನುವಾರ ಗದ್ದೆಯಲ್ಲಿ ಉಳುಮೆ ಮಾಡಿ, ನಾಟಿ ಮಾಡುವ ಮೂಲಕ ಗಮನಸೆಳೆದಿದ್ದಾರೆ. ಮೇಟಿ ವಿದ್ಯೆಯನ್ನು ಆಸಕ್ತಿಯಿಂದಲೇ ಕಲಿತು ತಮ್ಮ ಅಜ್ಜನ ಮನೆಯ ಗದ್ದೆಯನ್ನು ಉಳುಮೆ ಮಾಡಿ, ಸ್ವಯಂ ನಾಟಿ ಮಾಡಿದ ಒಂದು ಅಪರೂಪದ ಮತ್ತು ಯುವಕರಿಗೆ ಸ್ಫೂರ್ತಿ ನೀಡುವ ಮಾದರಿ ಹೆಜ್ಜೆ ಇಟ್ಟಿದ್ದಾರೆ. ಡಾ ಭಾರ್ಗವ್ ಅವರು ಮೂಲತಃ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಮಟಪಾಡಿಯವರು. ಕುಂದಾಪುರ ಬಸ್ರೂರು ಸಮೀಪದ ಜಪ್ತಿ ಎಂಬ ಹಳ್ಳಿಯಲ್ಲಿರುವ ಅಜ್ಜನ (ತಾಯಿಯ ಮನೆ) ಮನೆಯಲ್ಲಿ ಪೂರ್ವಿಕರಿಂದ ಬಂದಿರುವ ಸುಮಾರು ಎರಡು ಎಕರೆ ಕೃಷಿ ಭೂಮಿ ಇದೆ. ಅದರಲ್ಲಿ ಅವರ ಸೋದರ ಮಾವ ಉದಯ ಉಡುಪರು ಈಗಲೂ ಭತ್ತದ ಕೃಷಿ ನಡೆಸುತ್ತಿದ್ದು, ವರ್ಷವೂ ಒಂದು ಅಥವಾ ಎರಡು ಬೆಳೆಗಳನ್ನು ಬೆಳೆಯುತ್ತಾರೆ. ಉಡುಪರು ನೂರಾರು ಕೃಷಿಕರಿಗೆ ಸ್ಫೂರ್ತಿ ಪ್ರೋತ್ಸಾಹ ನೀಡುತ್ತಲೇ ಉದಯ ಉಡುಪರು ಜನಾದರಣೀಯರಾದವರು. ಈ ಕೃಷಿ ಕಾರ್ಯಗಳನ್ನು ಬಾಲ್ಯದಿಂದಲೇ ನೋಡುತ್ತಲೇ ಬೆಳೆದ ಭಾರ್ಗವರಿಗೆ ಸ್ವಾಭಾವಿಕವಾಗಿಯೇ ಆ ಬಗ್ಗೆ ಆಸಕ್ತಿಯೂ ಇತ್ತು. ಆದರೆ ವಿದ್ಯಾಭ್ಯಾಸದ ಕಾರಣದಿಂದ ಹೆಚ್ಚು ಗಮನಹರಿಸಲಾಗಿಲ್ಲ. ಅಜ್ಜ ಅಜ್ಜಿಯ ಪ್ರೋತ್ಸಾಹ ಮತ್ತು ಕಠಿಣ ಪರಿಶ್ರಮದಿಂದ ವೈದ್ಯಕೀಯ ಶಿಕ್ಷಣವನ್ನು ಮಣಿಪಾಲದ ಕೆಎಂಸಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಯಶಸ್ವಿಯಾಗಿ ಮುಗಿಸಿದ್ದಾರೆ. : ಶುಂಠಿ ಬೆಳೆದ ರೈತ ರಾತ್ರೋ ರಾತ್ರಿ ಕುಬೇರ! ರಜೆಗೆಂದು ಅಜ್ಜನ ಮನೆಗೆ ಹೋದಾಗ ನಡೆಯುತ್ತಿದ್ದ ಕೃಷಿ ಕಾರ್ಯ ನೋಡಿ ಆಕರ್ಷಿತರಾಗಿ ಸ್ವಯಂ ಚಾಲಿತ ಯಂತ್ರದ ಮೂಲಕ ನಾಟಿ ಮಾಡುವ ಪ್ರಯತ್ನ ಮಾಡಿದ್ದಾರೆ. ಹಲ್ಲು ಕೀಳುವ ವೈದ್ಯಕೀಯ ಶಿಕ್ಷಣ ಪಡೆದದ್ದಾರೂ ಅನ್ನ ಕೊಡುವ ಮೇಟಿ ವಿದ್ಯೆಯೂ ಅಷ್ಟೇ ಅಮೂಲ್ಯವಾದುದು ಎಂದು ಸಾರಿದ ಡಾ ಭಾರ್ಗವ್ ಭಟ್ಟರ ನಡೆಗೊಂದು ಹ್ಯಾಟ್ಸಾಫ್ ಹೇಳಲೇಬೇಕು. ಅವರ ಈ ಉತ್ಸಾಹ ಸುಶಿಕ್ಷಿತರಾಗಿ ದೊಡ್ಡ ದೊಡ್ಡ ಹುದ್ದೆಗಳಲ್ಲಿರುವ ಯುವಕರಿಗೆ ಮತ್ತು ಕೃಷಿಯಿಂದ ವಿಮುಖರಾಗುತ್ತಿರುವವರಿಗೆ ನಿಜಕ್ಕೂ ಒಂದು ಮಾದರಿ.