2022 ಮಕ್ಕಳಿಗೆ ಕೃಷಿ ಪಾಠ ಕಲಿಸಿದ ಮಿತ್ತೂರು ಸರ್ಕಾರಿ ಶಾಲೆ! ಶತಮಾನ ಕಂಡ ಬಂಟ್ವಾಳ ತಾಲೂಕಿನ ಮಿತ್ತೂರು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕುಟಕ್ಕೆ ಈಗ ರೈತರತ್ನ ಪ್ರಶಸ್ತಿಯ ಗರಿ. ಸುವರ್ಣ ಕೃಷಿ ಶಾಲೆ ವಿಭಾಗದಲ್ಲಿ ಈ ಶಾಲೆಗೆ ಕನ್ನಡಪ್ರಭ, ಸುವರ್ಣನ್ಯೂಸ್‌ನ ರೈತರತ್ನ ಪ್ರಶಸ್ತಿ ಲಭಿಸಿದೆ. ಆತ್ಮಭೂಷಣ್‌ ಮಂಗಳೂರು ಶತಮಾನ ಕಂಡ ಮಿತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 4.14 ಎಕರೆ ಗುಡ್ಡದಂತಹ ಜಾಗ. ಕಲ್ಲು ಬಂಡೆಗಳ ನಡುವೆ ಬಂಗಾರ ಬೆಳೆ ಬೆಳೆಯುವ ಯೋಚನೆ ಮಾಡಿದ್ದು ಈ ಶಾಲೆಯ ಶಿಕ್ಷಕರು. ಈ ಪ್ರಯತ್ನವೇ ಇಂದು ಉತ್ತಮ ಕೃಷಿ ಶಾಲೆಯಾಗಿ ಹೆಸರು ಗಳಿಸುವಂತಾಗಿದೆ. 2007ರಲ್ಲಿ 630ಕ್ಕೂ ಅಧಿಕ ಅಡಕೆ ಗಿಡ ನೆಟ್ಟರು. 25 ತೆಂಗು, 50 ಬಾಳೆ ಜೊತೆಯಲ್ಲಿ ಭತ್ತ ಕೃಷಿಗೆ ಇಳಿದರು. ಇಲ್ಲಿ ಕೃಷಿ ಕಾಯಕ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್‌ ಅನುಭವ. 1ರಿಂದ 8ನೇ ತರಗತಿ ವರೆಗಿನ ಈ ಶಾಲೆಯಲ್ಲಿ 124 ವಿದ್ಯಾರ್ಥಿಗಳು, ಐವರು ಶಿಕ್ಷಕರು ಇದ್ದಾರೆ. ಬದನೆ, ಆಲಸಂಡೆ, ತೊಂಡೆಕಾಯಿ, ಪಪ್ಪಾಯ, ಬಸಳೆ ಹೀಗೆ ತರಹೇವಾರಿ ಕೃಷಿ ಬೆಳೆದಿದ್ದಾರೆ. ಇವೆಲ್ಲವನ್ನು ಶಾಲಾ ಬಿಸಿಯೂಟಕ್ಕೆ ಬಳಸುತ್ತಾರೆ. ಎಲ್ಲ ಕೃಷಿಗೆ ಸಹ ಶಿಕ್ಷಕ ಸಂಜೀವ ನಾೖಕ ಅವರದ್ದೇ ಉಸ್ತುವಾರಿ. ಅಕ್ಷರಶಃ ಸುವರ್ಣ ಕೃಷಿ ಶಾಲೆ: ಅಡಕೆ ಗಿಡ ಮರವಾಗಿ ಬೆಳೆದು ಈಗ ಫಲ ಕೊಡುತ್ತಿದೆ. ತೆಂಗಿನಲ್ಲಿ ಐದು ಮರ ಈಗ ಫಲ ನೀಡುತ್ತಿದ್ದು, ತೆಂಗಿನಕಾಯಿ ಬಿಸಿಯೂಟಕ್ಕೆ ಬಳಕೆಯಾಗುತ್ತಿದೆ. ಕೃಷಿ ತೋಟಕ್ಕೆ ನೀರು ಹಾಯಿಸುವುದನ್ನು ವಿದ್ಯಾರ್ಥಿಗಳು ಹಾಗೂ ಎಸ್‌ಡಿಎಂಸಿಯವರು ನೋಡಿಕೊಳ್ಳುತ್ತಿದ್ದಾರೆ. ಅಡಕೆ ಈ ಬಾರಿ ನಾಲ್ಕನೇ ವರ್ಷದಲ್ಲಿ ಸುಮಾರು ಒಂದೂವರೆ ಲಕ್ಷ ರು. ಆದಾಯ ತಂದುಕೊಟ್ಟಿದೆ. ತರಗತಿಯ ಕಾರ್ಯಾನುಭವ ಅವಧಿಯಲ್ಲಿ ಮಕ್ಕಳಿಗೆ ಕೃಷಿ ತೋಟದ ಕಾಯಕ ನೀಡುತ್ತಾರೆ. ಕಳೆ ತೆಗೆಯುವುದು, ನೀರುಣಿಸುವುದು ಹೀಗೆ ನಾನಾ ಕೃಷಿ ಚಟುವಟಿಕೆಯಲ್ಲಿ ಮಕ್ಕಳು ನಿರತರಾಗಿರುತ್ತಾರೆ. ತೋಟಕ್ಕೆ ಸ್ಟ್ರಿಂಕ್ಲರ್‌ ನೀರು ಇದೆ. ತರಕಾರಿಗೆ ಪೈಪ್‌ ಮೂಲಕ ನೀರು ಬಿಡುತ್ತಾರೆ. ಕಳೆದ ಎರಡು ವರ್ಷ ಲಾಕ್‌ಡೌನ್‌ ಅಡ್ಡಿಬಂದ ಕಾರಣ, ಕಾಯಂ ತರಕಾರಿ ಕೃಷಿ ಮಾಡುತ್ತಿಲ್ಲ. ಬಿಸಿಯೂಟಕ್ಕೆ ಬೇಕಾದ ತರಕಾರಿಗೆ ಇಲ್ಲಿ ಕೊರತೆ ಇಲ್ಲ. ಇನ್ನೂ 200 ಅಡಕೆ ಗಿಡ ನೆಡಲು ಅವಕಾಶ ಮಾಡಿದ್ದಾರೆ. ‘ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ನಮ್ಮ ಶಾಲೆಗೆ ಕೃಷಿ ಸಾಧನೆಗೆ ರೈತರತ್ನ ಪ್ರಶಸ್ತಿ ನೀಡಿರುವುದಕ್ಕೆ ಧನ್ಯವಾದಗಳು. ಇನ್ನು ಮುಂದೆಯೂ ಕೃಷಿಯಲ್ಲಿ ಇನ್ನಷ್ಟುಕೆಲಸ ಕಾರ್ಯಗಳನ್ನು ಮಾಡಲು ಇದು ಪ್ರೇರಣೆ ನೀಡಿದೆ. ವಿದ್ಯಾರ್ಥಿಗಳಿಗೆ ಕೃಷಿಯ ಕುರಿತು ಆಸಕ್ತಿಯನ್ನು ಮೂಡಿಸಲು ಇದು ಸಹಕಾರಿ.’ -ಸಂಜೀವ ನಾೖಕ, ಸಹ ಶಿಕ್ಷಕ, ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿತ್ತೂರು. ಇಷ್ಟೆಲ್ಲ ಸಾಧನೆಗಾಗಿ ಈ ಶಾಲೆಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಜಿಲ್ಲಾ ಪರಿಸರ ಮಿತ್ರ ಪ್ರಶಸ್ತಿ ಲಭಿಸಿದೆ. -ಶಾಲೆಯ ಮಾಡಿನ ಹಾಗೂ ಗುಡ್ಡದ ನೀರು ಕೊಳವೆಬಾವಿಗೆ ನೀರಿಂಗಿಸುವುದರಿಂದ ಬೇಸಗೆಯಲ್ಲಿ ಅಷ್ಟಾಗಿ ನೀರಿನ ಸಮಸ್ಯೆ ಉಂಟಾಗುತ್ತಿಲ್ಲ. ಶಾಲಾ ತೋಟ ಪರಿಸರ ತಂಪಿನಿಂದ ಕೂಡಿರುತ್ತದೆ. -ಬಿಸಿಯೂಟಕ್ಕೆ ಬೇಕಾದ ದೀವಿ ಹಲಸು, ನುಗ್ಗೆ ಬೆಳೆಸುವ ಇರಾದೆ ಇದೆ. ಕಾಯಂ ತರಕಾರಿ ಕೃಷಿಗೆ ಉದ್ದೇಶಿಸಿದ್ದಾರೆ. ರಸ್ತೆ ಬದಿ ಅರ್ಧ ಎಕರೆ ಪ್ರದೇಶದಲ್ಲಿ ಬಾಳೆ ಕೃಷಿ ಬೆಳೆಯಲಿದ್ದಾರೆ. -ಅಡಕೆ ಮಾರಾಟದ ಆದಾಯದಿಂದ ಶಾಲೆಗೆ ಪ್ರವೇಶದ್ವಾರ ರಚನೆ, ಗೌರವ ಶಿಕ್ಷಕರ ನೇಮಕ್ಕೆ ಚಿಂತನೆ ನಡೆಸಲಾಗಿದೆ. ಅವಶ್ಯವಾದರೆ ಶಾಲಾ ಬಸ್‌ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ.