ಪರೀಕ್ಷೆಯಿಂದ ಒಂದು ಸಾವಾದರೂ ಆಂಧ್ರ ಸರ್ಕಾರ ಹೊಣೆ: ಸುಪ್ರೀಂ ವಾರ್ನಿಂಗ್! * ಪರೀಕ್ಷೆಯಿಂದ ಒಂದೇ ಒಂದು ಸಾವಾದರೂ ಸರ್ಕಾರ ಹೊಣೆ * ಆಂಧ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ * 12ನೇ ಕ್ಲಾಸ್‌ ಪರೀಕ್ಷೆಗೆ ಮುಂದಾಗಿರುವುದಕ್ಕೆ ಚಾಟಿ ನವದೆಹಲಿ(ಜೂ.23): ಕೊರೋನಾ ಹಾವಳಿ ನಡುವೆಯೂ 12ನೇ ತರಗತಿ ಪರೀಕ್ಷೆ ನಡೆಸಲು ಮುಂದಾಗಿರುವ ಆಂಧ್ರಪ್ರದೇಶಕ್ಕೆ ತೀಕ್ಷ$್ಣ ಎಚ್ಚರಿಕೆ ನೀಡಿರುವ ಸುಪ್ರೀಂ ಕೋರ್ಟ್‌, ‘ಪರೀಕ್ಷೆ ನಡೆಸುವ ಬಗ್ಗೆ ಇನ್ನು 2 ದಿನದಲ್ಲಿ ಅಂತಿಮ ನಿರ್ಧಾರ ತಿಳಿಸಬೇಕು. ಪರೀಕ್ಷೆಯಿಂದಾಗಿ ಒಂದೇ ಒಂದು ಸಾವು ಸಂಭವಿಸಿದರೂ ರಾಜ್ಯ ಸರ್ಕಾರವನ್ನೇ ಹೊಣೆ ಮಾಡುತ್ತೇವೆ’ ಎಂದು ಎಚ್ಚರಿಸಿದೆ. ಪರೀಕ್ಷೆ ನಡೆಸುವ ಕುರಿತು ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ‘ನೀವು ಎಲ್ಲವನ್ನೂ ಅನಿಶ್ಚಿತ ಸ್ಥಿತಿಯಲ್ಲಿ ಇಡಲು ಆಗದು. 2 ದಿನದಲ್ಲಿ ನಿರ್ಧಾರ ತಿಳಿಸಬೇಕು’ ಎಂದು ಚಾಟಿ ಬೀಸಿತು. ಈ ವೇಳೆ ವಾದ ಮಂಡಿಸಿದ ಆಂಧ್ರ ಸರ್ಕಾರದ ಪರ ವಕೀಲ ಮಹಫೂಜ್‌ ನಾಕ್ಜಿ, ‘ಕೊರೋನಾ ನಿಯಂತ್ರಣಕ್ಕೆ ಬಂದಿರುವ ಕಾರಣ ಪರೀಕ್ಷೆ ನಡೆಸಲು ಆಂಧ್ರ ನಿರ್ಧರಿಸಿದೆ’ ಎಂದರು. ಸಿಬಿಎಸ್‌ಇ, ಐಸಿಎಸ್‌ಇ ಹಾಗೂ 21 ರಾಜ್ಯಗಳು 12ನೇ ಕ್ಲಾಸ್‌ ಪರೀಕ್ಷೆ ರದ್ದುಗೊಳಿಸಿವೆ. 6 ರಾಜ್ಯಗಳು ಈಗಾಗಲೇ ಪರೀಕ್ಷೆ ನಡೆಸಿವೆ. ಆದರೆ ಆಂಧ್ರ ಸರ್ಕಾರ ಪರೀಕ್ಷೆ ರದ್ದು ಮಾಡಿಲ್ಲ. ಇದು ವಿವಾದದ ಮೂಲ.