ಆತಂದಲ್ಲಿದ್ದ ಪೋಷಕರಿಗೆ ನೆಮ್ಮದಿ, ಶಾಲಾ-ಕಾಲೇಜು ಪ್ರಾರಂಭ ಬಗ್ಗೆ ಸಚಿವರ ಸ್ಪಷ್ಟನೆ! ಶಾಲಾ- ಕಾಲೇಜು ಆರಂಭದ ಬಗ್ಗೆ ಮಾತುಗಳು| ಮಕ್ಕಳ ಆರೋಗ್ಯದ ಬಗ್ಗೆ ಹೆತ್ತವರ ಕಾಳಜಿ| ಶಾಲಾ-ಕಾಲೇಜು ಪ್ರಾರಂಭ ವಿಚಾರವಾಗಿ ಹೆತ್ತವರ ಆಕ್ರೋಶ, ಸಚಿವರ ಸ್ಪಷ್ಟನೆ ಬೆಂಗಳೂರು(ಸೆ.29): ಕೊರೋನಾತಂಕ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೀಗಿರುವಾಗ ಶಾಲಾ- ಕಾಲೇಜು ಆರಂಭದ ಮಾತುಗಳು ಜೋರಾಗಿದ್ದವು. ಸರ್ಕಾರ ಶಾಲೆ ಆರಂಭಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ ಎಂಬ ವಿಚಾರ ಕೇಳಿ ಬಂದ ಬೆನ್ನಲ್ಲೇ ಮಕ್ಕಳ ಪೋಷಕರಿಂದ ಈ ಸಂಬಂಧ ಅಸಮಾಧಾನ ವ್ಯಕ್ತವಾಗಿತ್ತು. ಆದರೀಗ ಇದರ ಬೆನ್ನಲ್ಲೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ. ಶಾಸಕ, ಸಂಸದರಿಗಿರುವ ಕೊರೋನಾ ರಿಸ್ಕ್‌ ಮಕ್ಕಳಿಗಿಲ್ಲವೇ? ಶಾಲಾ ಕಾಲೇಜು ಪುನಾರಂಭ ಕುರಿತು ಸ್ಪಷ್ಟನೆ ನೀಡಿರುವ ಸಚಿವ ಸುರೇಶ್ ಕುಮಾರ್ 'ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ‌ ಕೈಗೊಂಡಿಲ್ಲ. ಸದ್ಯಕ್ಕೆ ಶಾಲೆ-ಕಾಲೇಜುಗಳನ್ನು ಪ್ರಾರಂಭ ಮಾಡುವ ಯೋಚನೆಯು ಸರ್ಕಾರದ ಮುಂದೆ ಇಲ್ಲ ಎಂದಿದ್ದಾರೆ. ಅಲ್ಲದೇ ಈ ಬಗ್ಗೆ ಈ ಕುರಿತು ಶಾಸಕರ ಮತ್ತು ಸಂಸದರ ಹಾಗೂ ಇತರೆ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಆಹ್ವಾನಿಸುತ್ತಿದ್ದೇನೆ. ಇದರ ಜೊತೆಗೆ ಶಿಕ್ಷಕ ಸಂಘಟನೆಗಳೊಂದಿಗೆ ಹಾಗೂ ಶಿಕ್ಷಣ ತಜ್ಞರೊಂದಿಗೆ ಸಂವಾದ ನಡೆಸುತ್ತಿದ್ದೇನೆ.ನಾನೀಗ ಸಧ್ಯಕ್ಕೆ ಬೀದರ್ ಜಿಲ್ಲೆಯ ಪ್ರವಾಸದಲ್ಲಿದ್ದು ಬೆಂಗಳೂರಿಗೆ ಬಂದ ನಂತರ ಈ ಕುರಿತು ಇನ್ನಷ್ಟು ವಿವರವಾಗಿ ವಾಸ್ತವಾಂಶವನ್ನು ತಿಳಿಸುತ್ತೇನೆ ಎಂದಿದ್ದಾರೆ. ಮತ್ತೊಮ್ಮೆ ಸ್ಪಷ್ಟೀಕರಣ ನೀಡುವುದೆಂದರೆ ನಮ್ಮ ರಾಜ್ಯದ ಶಾಲೆ-ಕಾಲೇಜು ಪ್ರಾರಂಭ ಮಾಡುವ ದಿನಾಂಕದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಪೋಷಕರ ಆತಂಕ ನಿವಾರಿಸಿದ್ದಾರೆ. ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ‌ ಕೈಗೊಂಡಿಲ್ಲ. ಸದ್ಯಕ್ಕೆ ಶಾಲೆ-ಕಾಲೇಜುಗಳನ್ನು ಪ್ರಾರಂಭ ಮಾಡುವ ಯೋಚನೆಯು ಸರ್ಕಾರದ ಮುಂದೆ... ಪೋಷಕರ ಆತಂಕಕ್ಕೆ ಏನು ಕಾರಣ? * ಶಾಲೆಗಳಲ್ಲಿ ಸಾಮಾಜಿಕ ಅಂತರ ಅಸಾಧ್ಯ: ಸಂಸತ್‌ ಹಾಗೂ ವಿಧಾನಮಂಡಲದ ಕಲಾಪ ನಡೆಸುವ ಮುನ್ನ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ವರದಿಗೆ ತೆರಳುವ ಪತ್ರಕರ್ತರಿಗೂ ಕೊರೋನಾ ಪರೀಕ್ಷೆ ನಡೆಸಲಾಗಿತ್ತು. ನಂತರ ಶಾಸನಸಭೆಯಲ್ಲಿ ಆಸನಗಳನ್ನು ದೂರದೂರಕ್ಕೆ ಹಾಕಿ, ಅವುಗಳ ಮಧ್ಯೆ ಫೈಬರ್‌ ಶೀಟ್‌ ಅಳವಡಿಸಿ, ಪ್ರತಿದಿನ ಸ್ಯಾನಿಟೈಸ್‌ ಮಾಡಿ ಸಾಕಷ್ಟುಮುನ್ನೆಚ್ಚರಿಕೆ ವಹಿಸಲಾಗುತ್ತಿತ್ತು. ಕೆಲವೇ ನೂರು ಸಂಖ್ಯೆಯಲ್ಲಿರುವ ಜನಪ್ರತಿನಿಧಿಗಳ ವಿಷಯದಲ್ಲಿ ಇಷ್ಟುಮುನ್ನೆಚ್ಚರಿಕೆ ತೆಗೆದುಕೊಂಡರೂ ಈಗ ಕಲಾಪ ಮುಗಿದ ಮೇಲೆ ಕೆಲ ಶಾಸಕರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇಷ್ಟಕ್ಕೂ ವಿಧಾನಮಂಡಲ ಹಾಗೂ ಸಂಸತ್ತಿನ ಅಧಿವೇಶನಕ್ಕೂ ಮುನ್ನ ಕೆಲವೇ ನೂರು ಸಂಖ್ಯೆಗಳಲ್ಲಿರುವ ಜನಪ್ರತಿನಿಧಿಗಳ ವಿಷಯದಲ್ಲಿ ಸರ್ಕಾರ ಕೈಗೊಂಡ ಮುನ್ನೆಚ್ಚರಿಕೆಯ ಶೇ.1ರಷ್ಟುಮುನ್ನೆಚ್ಚರಿಕೆಯನ್ನೂ ಲಕ್ಷಾಂತರ ಸಂಖ್ಯೆಯಲ್ಲಿರುವ ಶಾಲಾ ಮಕ್ಕಳ ವಿಷಯದಲ್ಲಿ ಕೈಗೊಳ್ಳಲು ಸಾಧ್ಯವಿಲ್ಲ. ಇನ್ನು, ಪುಟ್ಟಪುಟ್ಟಮಕ್ಕಳು ಶಾಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಾರೆಯೇ? ಅವರು ಒಬ್ಬರ ಸಮೀಪ ಒಬ್ಬರು ಹೋಗದಂತೆ ಶಿಕ್ಷಕರು ನೋಡಿಕೊಳ್ಳುವುದು ಸಾಧ್ಯವಿದೆಯೇ? ಖಂಡಿತ ಇಲ್ಲ ಎನ್ನುತ್ತಾರೆ ಪೋಷಕರು. * ಮಕ್ಕಳು ಕೊರೋನಾ ಕ್ಯಾರಿಯರ್‌ ಆಗಬಹುದು: 60 ವರ್ಷ ಮೇಲ್ಪಟ್ಟವರು ಹೇಗೆ ಕೊರೋನಾದ ರಿಸ್ಕ್‌ ಅಧಿಕವಿರುವ ವರ್ಗದಲ್ಲಿ ಬರುತ್ತಾರೋ ಹಾಗೆಯೇ 10 ವರ್ಷಕ್ಕಿಂತ ಕೆಳಗಿನ ಮಕ್ಕಳೂ ಅಧಿಕ ರಿಸ್ಕ್‌ ವರ್ಗದಲ್ಲೇ ಬರುತ್ತಾರೆ. ಆದ್ದರಿಂದ ವಯಸ್ಸಾದ ಜನಪ್ರತಿನಿಧಿಗಳಿಗೆ ಕೊರೋನಾ ಬರುತ್ತದೆ ಎಂದು ಕಾಳಜಿ ತೋರಿ ಅಧಿವೇಶನಗಳನ್ನು ಮೊಟಕುಗೊಳಿಸಿದ ಸರ್ಕಾರ ಪುಟ್ಟಮಕ್ಕಳಿಗೆ ಕೊರೋನಾ ತಗಲುವ ಅಪಾಯವನ್ನು ಅರ್ಥಮಾಡಿಕೊಳ್ಳದಿದ್ದರೆ ಅದು ದ್ವಂದ್ವ ನೀತಿಯಾಗುವುದಿಲ್ಲವೇ? ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳು ಶಾಲೆಗೆ ಹೋಗಿ ಕೊರೋನಾ ಅಂಟಿಸಿಕೊಂಡರೆ ಮನೆಮಂದಿಗೆಲ್ಲ ಕೊರೋನಾ ಹರಡುವ ಅಪಾಯವಿರುತ್ತದೆ. ಹೆಚ್ಚಿನ ರೋಗನಿರೋಧಕ ಶಕ್ತಿಯಿರುವ ಮಕ್ಕಳು ಕೊರೋನಾವನ್ನು ಗೆದ್ದರೂ ಮನೆಗಳಲ್ಲಿರುವ ವಯಸ್ಸಾದವರು ಅವರಿಂದಾಗಿ ಅಪಾಯಕ್ಕೆ ಸಿಲುಕಬಹುದು ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.