ಶಿಕ್ಷಕರಿಗಾಗಿ ಬಂತು 'ಶಿಕ್ಷಕ ಮಿತ್ರ' ಅಪ್ಲಿಕೇಶನ್: ಸ್ಥಳದಲ್ಲಿಯೇ ಸಮಸ್ಯೆಗಳಿಗೆ ಪರಿಹಾರ..! ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ 'ಶಿಕ್ಷಕ ಮಿತ್ರ' ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದರು. ಹಾಗಾದ್ರೆ 'ಶಿಕ್ಷಕ ಮಿತ್ರ' ಮೊಬೈಲ್ ಅಪ್ಲಿಕೇಶನ್‌ ನಿಂದ ಏನೆಲ್ಲಾ ಉಪಯೋಗವಿದೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ. ಬೆಂಗಳೂರು, (ಆ.28):ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಇಂದು (ಶುಕ್ರವಾರ) 'ಶಿಕ್ಷಕ ಮಿತ್ರ' ಮೊಬೈಲ್ ಅಪ್ಲಿಕೇಶನ್ ಮತ್ತು 'ವಿದ್ಯಾವಿನೀತ' ಹಾಗೂ 'ಶಿಕ್ಷಣ ಯಾತ್ರೆ' ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಕರ್ನಾಟಕದ ಶಿಕ್ಷಣ ಇಲಾಖೆಯು 'ಶಿಕ್ಷಕ ಮಿತ್ರ' ಎಂಬ ಈ ಮೊಬೈಲ್ ಅಪ್ಲಿಕೇಶನ್ ಸಿದ್ಧಪಡಿಸಿದ್ದು, ಇನ್ಮುಂದೆ ವರ್ಗಾವಣೆಗಾಗಿ ಅರ್ಜಿಗಳನ್ನು ಈ ಅಪ್ಲಿಕೇಶನ್ ಮೂಲಕವೇ ಸಲ್ಲಿಸಬಹುದು. : ಶಿಕ್ಷಕರ ಕಾರಿಗೂ ಬಂತು ಲೋಗೋ! ಅಲ್ಲದೇ ಈ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಮಾಹಿತಿ ನೀಡಿದ್ದು, ಶಿಕ್ಷಕರು ತಮ್ಮ ಕೆಲಸಗಳಿಗಾಗಿ ಶಾಲೆಗೆ ರಜೆ ಹಾಕಿ ಇಲಾಖೆಯ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು 2019-20ರ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಶಿಕ್ಷಕ ಮಿತ್ರ ಮೊಬೈಲ್ ಅಪ್ಲಿಕೇಶನ್ ತಯಾರು ಮಾಡಲಾಗಿದೆ ಎಂದು ಹೇಳಿದರು. ಶಿಕ್ಷಕರು ಮೊಬೈಲ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ಕುಳಿತ ಸ್ಥಳದಿಂದಲೇ ಸೇವಾ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ನಿರ್ದಿಷ್ಟ ಸಮಸ್ಯೆಗಳನ್ನು ಇಂತಿಷ್ಟು ದಿನದಲ್ಲಿ ಬಗೆಹರಿಸುವ ಕಾಲವಾಧಿಯನ್ನು ನಿರ್ಧರಿಸಲಾಗಿದೆ ಎಂದು ತಿಳಿಸಿದರು.