ಬಿಇ ಸೀಟು ಕೈತಪ್ಪಿದ್ದಕ್ಕೆ ವಿದ್ಯಾರ್ಥಿಗಳೇ ಹೊಣೆ: ಪರೀಕ್ಷಾ ಪ್ರಾಧಿಕಾರ 2ನೇ ಸುತ್ತಿನಲ್ಲಿ 1 ಕೋರ್ಸ್‌ ಆಯ್ಕೆಗೆ ಮಾತ್ರ ಅವಕಾಶ: ಪರೀಕ್ಷಾ ಪ್ರಾಧಿಕಾರ ಸ್ಪಷ್ಟನೆ, ಪರೀಕ್ಷಾ ಪ್ರಾಧಿಕಾರದ ತಪ್ಪಿಲ್ಲ, ಮಕ್ಕಳೇ ನಿಯಮ ತಿಳದುಕೊಂಡಿಲ್ಲ ಬೆಂಗಳೂರು(ಡಿ.02):ಎರಡನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾದ ಸಾವಿರಾರು ವಿದ್ಯಾರ್ಥಿಗಳಿಗೆ ಅವರು ಹಿಂದೆ ಕಾಯ್ದಿರಿಸಿದ್ದ ಎಂಜಿನಿಯರಿಂಗ್‌ ಸೀಟುಗಳು ರದ್ದಾಗಿರುವ ಪ್ರಕರಣ ಸಂಬಂಧ ಸ್ಪಷ್ಟನೆ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಎಲ್ಲವೂ ನಿಯಮಾನುಸಾರ ಆಗಿದೆ. ಇದರಲ್ಲಿ ಯಾವುದೇ ಲೋಪವಾಗಿಲ್ಲ, ವಿದ್ಯಾರ್ಥಿಗಳೇ ನಿಯಮಗಳನ್ನು ಸರಿಯಾಗಿ ತಿಳಿದುಕೊಳ್ಳದೆ ತಪ್ಪು ಮಾಡಿಕೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದೆ. ಕೆಇಎ ನಿಯಮದ ಪ್ರಕಾರ, ಒಬ್ಬ ವಿದ್ಯಾರ್ಥಿ ವೈದ್ಯಕೀಯ ಅಥವಾ ಇಂಜಿನಿಯರಿಂಗ್‌ ಸೀಟುಗಳಲ್ಲಿ ಒಂದನ್ನು ಮಾತ್ರ ಪಡೆದುಕೊಳ್ಳಬಹುದಾಗಿದೆ. ಅದರೆ, ಮೊದಲ ಸುತ್ತಿನಲ್ಲಿ ಚಾಯ್‌್ಸ-2 ದಾಖಲಿಸಿ ಎರಡೂ ವಿಭಾಗಗಳಲ್ಲಿ ಭಾಗವಹಿಸಿ ಸೀಟು ಕಾಯ್ದಿರಿಸಿ ಎರಡನೇ ಸುತ್ತಿನಲ್ಲಿ ಇಂಜಿನಿಯರಿಂಗ್‌ ಅಥವಾ ವೈದ್ಯಕೀಯ ಸೀಟುಗಳಲ್ಲಿ ಒಂದನ್ನು ಅಂತಿಮಗೊಳಿಸಬೇಕಿರುತ್ತದೆ. ಸುಪ್ರೀಂ ಕೋರ್ಚ್‌ ಆದೇಶದ ಪ್ರಕಾರ ಆಯಾ ರಾಜ್ಯಗಳಲ್ಲಿ ಎರಡನೇ ಸುತ್ತಿನಲ್ಲಿ ಸೀಟು ಪಡೆದವರು ಮುಂದಿನ ಅಖಿಲ ಭಾರತದ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ. ಆದ್ದರಿಂದ ಎರಡನೇ ಸುತ್ತಿನಲ್ಲಿ ಪಡೆದ ವೈದ್ಯಕೀಯ ಸೀಟು ಅಂತಿಮವಾಗಿರುತ್ತದೆ ಎಂದು ತಿಳಿಸಿದೆ. ಬಿಇ ಸೀಟು ರದ್ದಾಗಿ 9,500 ವಿದ್ಯಾರ್ಥಿಗಳು ಅತಂತ್ರ..! ಆದರೆ, ಕೆಲವು ವಿದ್ಯಾರ್ಥಿಗಳು ಇಂಜಿನಿಯರಿಂಗ್‌ ಎರಡನೇ ಸುತ್ತಿನಲ್ಲಿ ಸೀಟು ಪಡೆಯುವ ಜತೆಗೆ ವೈದ್ಯಕೀಯ ಸೀಟು ಹಂಚಿಕೆಯಲ್ಲೂ ಭಾಗವಹಿಸಿದ್ದಾರೆ. ಇದರಿಂದ ಎರಡನೇ ಸುತ್ತಿನಲ್ಲಿ ಇವರಿಗೆ ವೈದ್ಯಕೀಯ ಸೀಟು ಹಂಚಿಕೆಯಾಗಿದೆ. ವಿದ್ಯಾರ್ಥಿಗಳು ಶುಲ್ಕ ಪಾವತಿಸಲು ಸಾಧ್ಯವಾಗದ ಕಾಲೇಜುಗಳನ್ನು ಆಯ್ಕೆ ಮಾಡಿರುವುದು ಅವರ ತಪ್ಪು. ಇದಕ್ಕೆ ಕೆಇಎ ಹೊಣೆ ಆಗುವುದಿಲ್ಲ. ಇನ್ನೂ ಮೆಡಿಕಲ್‌ ಸೀಟು ಸಿಕ್ಕ ತಕ್ಷಣ, ಇಂಜಿನಿಯರಿಂಗ್‌ ಸೀಟು ರದ್ದಾಗಲಿದೆ ಎಂದು ಕೆಇಎ ಮೊದಲೇ ಸೂಚನೆ ನೀಡಿದೆ. ಎಲ್ಲವೂ ಎಂಸಿಸಿ, ಎಐಸಿಟಿಇ ನಿಯಮಗಳ ಪ್ರಕಾರವೇ ನಡೆಯುತ್ತಿದೆ. ಇದರ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಮಾಡುವ ಅಗತ್ಯ ಇಲ್ಲವೆಂದು ಕೆಇಎ ತಿಳಿಸಿದೆ. ಅಂದಾಜು 8 ಸಾವಿರ ವೈದ್ಯಕೀಯ ಸೀಟುಗಳು ಈ ಬಾರಿ ಪ್ರವೇಶಕ್ಕೆ ಲಭ್ಯವಿದ್ದು, ಅವುಗಳಲ್ಲಿ 6 ಸಾವಿರ ಸೀಟುಗಳು ಹಂಚಿಕೆಯಾಗಿವೆ. ಎರಡನೇ ಸುತ್ತಿನ ನಂತರ ವೈದ್ಯಕೀಯ ಸೀಟನ್ನು 106 ವಿದ್ಯಾರ್ಥಿಗಳು ರದ್ದುಗೊಳಿಸಿದ್ದಾರೆ. ಇವರಲ್ಲಿ 18 ವಿದ್ಯಾರ್ಥಿಗಳು ಪಡೆದಿರುವ ಇಂಜಿನಿಯರಿಂಗ್‌ ಸೀಟುಗಳನ್ನು ಮರಳಿಸುವಂತೆ ಮನವಿ ನೀಡಿದ್ದಾರೆ. ಉಳಿದಂತೆ ಯಾವುದೇ ವಿದ್ಯಾರ್ಥಿಗಳು ಆಕ್ಷೇಪಣೆ ಸಲ್ಲಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ.