ದೇಶ ಕಟ್ಟುವಲ್ಲಿ ಶಾಲೆಗಳ ಪಾತ್ರ ದೊಡ್ಡದು; ಆನಂದ ಸಿಂಗ್ ಕೊಪ್ಪಳ (ಸೆ.18) :ದೇಶ ರೂಪಿಸುವಲ್ಲಿ ಶಿಕ್ಷಣದ ಪಾತ್ರ ಎಷ್ಟಿದೆಯೋ ಅಷ್ಟೇ ಖಾಸಗಿ ಶಾಲೆಗಳ ಪಾತ್ರವೂ ದೊಡ್ಡದಿದೆ, ಅದಕ್ಕೆ ಭಾರತವೇ ಚಿರಋುಣಿ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅಭಿಪ್ರಾಯಪಟ್ಟರು. ನಗರದ ಶ್ರೀ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಕೊಪ್ಪಳ ತಾಲೂಕು ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಜನ್ಮದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರ ಕೊಡುಗೆ ಅಪಾರ, ಶಿಕ್ಷಕ ಈ ದೇಶದ ರಕ್ಷಕ, ವಿದ್ಯಾರ್ಥಿಗಳನ್ನು ತಯಾರಿ ಮಾಡಿ ದೇಶಕ್ಕೆ ಕೊಡುವ ಕಾರ್ಖಾನೆಯ ಕಾಯಕಯೋಗಿಗಳು ಶಿಕ್ಷಕರು ಎಂದರು. ಕಲ್ಯಾಣ ಕರ್ನಾಟಕ ಪ್ರಗತಿಗೆ ಹತ್ತಾರು ಯೋಜನೆ; ಸಚಿವ ಆನಂದ್ ಸಿಂಗ್ ಸಂಸದ ಸಂಗಣ್ಣ ಕರಡಿ ಮಾತನಾಡಿ, ಸಮಾಜ ತಿದ್ದುವ ಕಾಯಕದಲ್ಲಿರುವ ಶಿಕ್ಷಕರು ಅತ್ಯಂತ ಗೌರವಕ್ಕೆ ಪಾತ್ರರು, ಅವರಿಗೆ ಸಿಗುವ ಬೆಲೆ ಜಗತ್ತಿನಲ್ಲಿ ಇನ್ಯಾರಿಗೂ ಸಿಗುವುದಿಲ್ಲ. ಆದರೆ ಸರ್ಕಾರಿ ಮತ್ತು ಖಾಸಗಿ ಶಾಲೆಯ ಶಿಕ್ಷಕರ ಸಂಬಳ ಪರಿಗಣಿಸಿದರೆ ತುಂಬಾ ವ್ಯತ್ಯಾಸ ಇದೆ. ಸಿಗುವ ಅಲ್ಪ ಸಂಬಳದಲ್ಲೇ ಮಕ್ಕಳನ್ನು ರೂಪಿಸುವ ಕಾಯಕ ಬಹು ದೊಡ್ಡದು, ಯಾವುದೇ ಸಂಬಳ ಅಥವಾ ಅಧಿಕಾರದ ಆಸೆ ಇಲ್ಲದೇ ಕೇವಲ ಸೇವೆಗಾಗಿ ಮಕ್ಕಳ ಏಳ್ಗೆಗಾಗಿ ದುಡಿಯುತ್ತಿರುವುದು ಶ್ಲಾಘನೀಯ. ಸರ್ಕಾರ ಈ ನಿಟ್ಟಿನಲ್ಲಿ ಖಾಸಗಿ ಶಾಲಾ ಶಿಕ್ಷಕರಿಗೂ ಸಹಾಯ ಮಾಡಲಿ ಎಂದರು. ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ಹಳೆಯ ಮೈಸೂರು, ದಕ್ಷಿಣ ಕನ್ನಡ ಭಾಗವನ್ನು ಪರಿಗಣಿಸಿದರೆ ನಮ್ಮ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣದಲ್ಲಿ ಹಿಂದೆ ಇರುವುದನ್ನು ನೋಡಬಹುದು. ಹಿಂದೆ ರಾಜ್ಯದಲ್ಲಿ ಮೆಟ್ರಿಕ್‌ ವಿದ್ಯಾರ್ಥಿಗಳ ರಿಸಲ್ಟ್‌ ಬಂದಾಗ ಒಬ್ಬರು ಇಬ್ಬರು 625 ಅಂಕ ಪಡೆಯುತ್ತಿದ್ದರು. ಆದರೆ ಈಗ ನೂರಾರು ವಿದ್ಯಾರ್ಥಿಗಳು 625 ಅಂಕ ಪಡೆಯುತ್ತಿದ್ದಾರೆ, ಅಷ್ಟರಮಟ್ಟಿಗೆ ಶಿಕ್ಷಣ ಸುಧಾರಿಸಿದೆ ಎಂದರು. ಭಾಗ್ಯನಗರ ಶಂಕರಾಚಾರ್ಯ ಮಠದ ಶ್ರೀ ಪ್ರಕಾಶಾನಂದ ಮಹಾಸ್ವಾಮಿಗಳು, ಕೊಪ್ಪಳ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಚೈತ್ಯಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯರಾದ ಹೇಮಲತಾ ನಾಯಕ್‌, ಬಿಜೆಪಿ ರಾಷ್ಟ್ರೀಯ ಪರಿಷತ್‌ ಸದಸ್ಯ ಸಿ.ವಿ. ಚಂದ್ರಶೇಖರ್‌, ಕೊಪ್ಪಳ ತಾಲೂಕು ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಶಾಹಿದ್‌ ಹುಸೇನ್‌ ತಸೀಲ್ದಾರ್‌ ಮಾತನಾಡಿದರು. ಹಿರಿಯ ವಕೀಲ ರಾಘವೇಂದ್ರ ಪಾನಗಂಟಿ ಅಧ್ಯಕ್ಷತೆ ವಹಿಸಿದ್ದರು. ಏನೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಸಚಿವ ಆನಂದ್ ಸಿಂಗ್; ದೂರು ದಾಖಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮುತ್ತಪ್ಪ ರೆಡ್ಡಿ, ಜಿಪಂ ಉಪ ಕಾರ್ಯದರ್ಶಿ ಬಿ. ಕಲ್ಲೇಶ್‌, ಉದ್ಯಮಿ ಬಸವರಾಜ್‌ ಬಳ್ಳೊಳ್ಳಿ, ಹಿರಿಯ ವಕೀಲ ವಿ.ಎಂ. ಭೂಸನೂರ್‌ಮಠ, ಉದ್ಯಮಿ ದಾನಪ್ಪ ಕವಲೂರ್‌, ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಯಶ್ವಂತ್‌ರಾಜ್‌ ಜೈನ್‌, ಜಿಲ್ಲಾ ಉಪಾಧ್ಯಕ್ಷ ವೀರಣ್ಣ ಕಂಬಳಿ, ಶಿವನಗೌಡ ಪಾಟೀಲ್‌, ಶಿವಪ್ಪ ಶೆಟ್ಟರ್‌, ಸುರೇಶ ಕುಂಬಾರ್‌ ಇತರರು ಇದ್ದರು. ಶಕುಂತಲಾ ಬೆನ್ನಾಳ ಸಂಗಡಿಗರು ಪ್ರಾರ್ಥಿಸಿದರು. ಎ.ಕೆ. ಮುಲ್ಲಾ ಸ್ವಾಗತಿಸಿದರು. ಫಕೀರಪ್ಪ ಎಮ್ಮಿಯವರ್‌ ಮತ್ತು ಚಿದಾನಂದ ಬನ್ನಿಮಠ ಕಾರ್ಯಕ್ರಮ ನಿರೂಪಿಸಿದರು. ಸಂದೇಶ ಶೆಟ್ಟರ್‌ ವಂದಿಸಿದರು. ತಾಲೂಕಿನ ನೂರಕ್ಕೂ ಅಧಿಕ ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು.