ಪಠ್ಯದಿಂದ ಟಿಪ್ಪು ವಿಚಾರ ಕೈಬಿಟ್ಟಿಲ್ಲ: ಸಚಿವ ನಾಗೇಶ್‌ * ಇತಿಹಾಸ ತಿರುಚುವ ಯತ್ನಗಳನ್ನು ಸರಿಪಡಿಸಿದ್ದೇವೆ* ಶೀಘ್ರ ವಿವರ ಕೊಡುವೆ* ಟಿಪ್ಪು ಪಠ್ಯ ಕೈಬಿಟ್ಟ ಸಮಿತಿ ವರದಿ ಜಾರಿ ಬೇಡ ಬೆಂಗಳೂರು(ಮಾ.26):ಶಾಲಾ ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್‌( ) ವಿಚಾರಗಳನ್ನು ಸಂಪೂರ್ಣ ಕೈಬಿಡಲಾಗುತ್ತಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾದುದು. ಪಠ್ಯದಲ್ಲಿ() ನಡೆದಿದ್ದ ಇತಿಹಾಸ ತಿರುಚುವ ಪ್ರಯತ್ನಗಳು, ತಪ್ಪು, ದೋಷಗಳನ್ನು ಸರಿಪಡಿಸುವ ಕೆಲಸವನ್ನು ಮಾತ್ರ ನಾವು ಮಾಡುತ್ತಿದ್ದೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌( ) ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸದ್ಯದಲ್ಲೇ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ವಿವರವಾಗಿ ಮಾಹಿತಿ ಕೊಡುತ್ತೇನೆ. ಟಿಪ್ಪು ವಿಚಾರವನ್ನು ಪಠ್ಯದಿಂದ ಕೈಬಿಡುವ ಸುದ್ದಿ ಸತ್ಯಕ್ಕೆ ದೂರವಾದುದು. ಪಠ್ಯದಲ್ಲಿ ತಿರುಚಿದ್ದ ಇತಿಹಾಸವನ್ನು() ಸರಿಪಡಿಸಿದ್ದೇವೆ. ಕಡೆಗಣನೆಯಾಗಿದ್ದ ಇತಿಹಾಸದ ವಿಷಯಗಳನ್ನು ಸೇರ್ಪಡೆ ಮೂಲಕ ಪರಿಚಯಿಸುವ ಪ್ರಯತ್ನ ನಡೆದಿದೆ. ಮಕ್ಕಳು ಓದಲೇಬೇಕಾದ ಪಠ್ಯವನ್ನು ಮತ್ತೆ ತರುವ ಪ್ರಯತ್ನ ಮಾಡಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಬೆರೆಸುವ ಕೆಲಸ ಮಾಡಿಲ್ಲ ಎಂದರು. ಟಿಪ್ಪು ಸುಲ್ತಾನ್ ಏನೆಲ್ಲಾ ಮಾಡಿದ್ರು? ಇತಿಹಾಸ ತೆರೆದಿಟ್ಟ ಸಿದ್ದರಾಮಯ್ಯ ದುಪಟ್ಟಾಗೂ ಅವಕಾಶವಿಲ್ಲ- ನಾಗೇಶ್‌: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಯಾರದ್ದೋ ಒತ್ತಡಕ್ಕೆ ಮಣಿದು ಶಾಲಾ, ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್‌ ಬದಲು ದುಪಟ್ಟಾಗೆ ಅವಕಾಶ ನೀಡಲು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿಯಾಗಿ, ಒಬ್ಬ ವಕೀಲರಾಗಿ ಅವರಿಗೆ ಸಂವಿಧಾನದಲ್ಲಿ ನ್ಯಾಯಾಂಗಕ್ಕೆ ಇರುವ ಪ್ರಾಮುಖ್ಯತೆ ಗೊತ್ತಿದೆ. ಆದರೂ, ಒತ್ತಡದಿಂದ ದುಪಟ್ಟಾಗೆ ಆಗ್ರಹಿಸಿರಬಹುದು. ಆದರೆ, ಇದಕ್ಕೆ ಅವಕಾಶವಿಲ್ಲ. ಸರ್ಕಾರ ಹೈಕೋರ್ಟ್‌ ತೀರ್ಪನ್ನು ಕಟ್ಟುನಿಟ್ಟಾಗಿ ಪಾಲಿಸಲಿದೆ ಎಂದು ಇದೇ ವೇಳೆ ನಾಗೇಶ್‌ ಸ್ಪಷ್ಟಪಡಿಸಿದರು. ಟಿಪ್ಪು ಪಠ್ಯ ಕೈಬಿಟ್ಟ ಸಮಿತಿ ವರದಿ ಜಾರಿ ಬೇಡ: ಸಲೀಂ ವಿಧಾನ ಪರಿಷತ್‌: ರಾಜ್ಯ() ಪಠ್ಯಕ್ರಮದ ಶಾಲಾ ಪುಸ್ತಕಗಳಲ್ಲಿ ಟಿಪ್ಪು ಸುಲ್ತಾನ್‌ ಚರಿತ್ರೆಯ ಹಲವು ವಿಷಯಗಳನ್ನು ಕೈಬಿಡುವಂತೆ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಮಾಡಿರುವ ಶಿಫಾರಸುಗಳ ವಿಷಯವನ್ನು ಶುಕ್ರವಾರ ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪಿಸಿದ ಕಾಂಗ್ರೆಸ್‌ ಸದಸ್ಯ ಸಲೀಂ ಅಹ್ಮದ್‌( ), ಸಮಿತಿ ವರದಿಯನ್ನು ಜಾರಿಗೊಳಿಸಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದರು. ಮುಸ್ಲಿಂ ಧರ್ಮಗುರುಗಳು ಗಡ್ಡ ಬಿಡ್ತಾರೆ, ಹಾಗಂತ ವಿದ್ಯಾರ್ಥಿಗಳಿಗೆ ಅದನ್ನೇ ಹೇಳೋಕೆ ಆಗುತ್ತಾ? ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಶಿಕ್ಷಣ ಇಲಾಖೆಯು( ) ರಚಿಸಿದ್ದ ಪಠ್ಯ ಪರಿಷ್ಕರಣಾ ಸಮಿತಿಯು ಇತ್ತೀಚೆಗೆ ನೀಡಿರುವ ವರದಿಯಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ಚರಿತ್ರೆಗೆ ಸಂಬಂಧಿಸಿದ ಹಲವು ವಿಷಯಗಳನ್ನು ಪಠ್ಯದಿಂದ ಕೈಬಿಡುವಂತೆ ಶಿಫಾರಸು ಮಾಡಿರುವ ವಿಷಯ ಸಾರ್ವಜನಿಕವಾಗಿ ಮಹತ್ವದ್ದಾಗಿದೆ ಎಂದು ಹೇಳಿದರು. ಟಿಪ್ಪು ಸುಲ್ತಾನ್‌ ದೂರದೃಷ್ಟಿಯ, ಸರ್ವಧರ್ಮ ಸಹಿಷ್ಣು, ವೈಜ್ಞಾನಿಕ ಮನೋಭಾವ ಹೊಂದಿದ್ದ ಒಬ್ಬ ರಾಜ. ಪ್ರಗತಿಪರ ಆಡಳಿತಗಾರರಾಗಿ ಬ್ರಿಟಿಷರ() ವಿರುದ್ಧ ಯುದ್ಧಗಳನ್ನು ಮಾಡಿ, ಸ್ವಾತಂತ್ರ್ಯಕ್ಕಾಗಿ() ಹೋರಾಡುತ್ತಲೇ ರಣಾಂಗಣದಲ್ಲೇ ಮಡಿದ ಮೊದಲ ರಾಜ. ಇಂತಹ ಟಿಪ್ಪುವಿನ ಇತಿಹಾಸವನ್ನು ರಾಜ್ಯದ ಮಕ್ಕಳಿಗೆ ತಿಳಿಸುವುದು ಸರ್ಕಾರದ ಕರ್ತವ್ಯ. ಹಾಗಾಗಿ ಇಂತಹ ಟಿಪ್ಪುವಿಗೆ ಸಂಬಂಧಿಸಿದ ಹಲವು ವಿಷಯಗಳನ್ನು ಪಠ್ಯಕ್ರಮದಿಂದ ಕೈಬಿಡಲು ಪಠ್ಯ ಪರಿಷ್ಕರಣಾ ಸಮಿತಿ ಮಾಡಿರುವ ಸರಿಯಲ್ಲ. ನಿರ್ದಿಷ್ಟ ಸಮಾಜವನ್ನು ಗುರಿಯಾಗಿಸಿಕೊಂಡು ತಯಾರು ಮಾಡಿರುವ ಈ ವರದಿಯನ್ನು ಜಾರಿಗೊಳಿಸುವ ನಿರ್ಧಾರವನ್ನು ಬದಲಿಸಬೇಕು. ಈ ಸಂಬಂಧ ಮಾಡಿರುವ ಆದೇಶವನ್ನು ಸರ್ಕಾರ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಸಭಾನಾಯಕರೂ ಆದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಈ ಪ್ರಸ್ತಾವನೆಯನ್ನು ಶಿಕ್ಷಣ ಸಚಿವರ ಗಮನಕ್ಕೆ ತಂದು ಉತ್ತರ ಕೊಡಿಸುವ ಭರವಸೆ ನೀಡಿದರು.