ಭೀಕರ ಅಪಘಾತ: 6 ಮಂದಿ ಸ್ಥಳದಲ್ಲೇ ಸಾವು
ಹಾಸನ,ಮೇ.೨೬-ವೇಗವಾಗಿ ಹೋಗುತ್ತಿದ್ದ ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಆರು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಗರದ ಹೊರವಲಯದ ಈಚನಹಳ್ಳಿ ಬಳಿ ನಡೆದಿದೆ.
ನಾರಾಯಣಪ್ಪ, ಸುನಂದಾ, ರವಿಕುಮಾರ್, ನೇತ್ರ, ಚೇತನ್ ಮತ್ತು ಕಾರು ಚಾಲಕ ರಾಕೇಶ್ ಮೃತ ದುರ್ದೈವಿಗಳು. ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ.
ಈಚನಹಳ್ಳಿಯ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ನಲ್ಲಿ ಇಂದು ಮುಂಜಾನೆ ವೇಗವಾಗಿ ಹೋಗುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಹಾರಿ ಕಂಟೇನರ್ ಲಾರಿಗೆ ಗುದ್ದಿ ಸಂಭವಿಸಿ ಸ್ಥಳದಲ್ಲೇ ಇಬ್ಬರು ಮಹಿಳೆಯರು, ಮೂರು ಪುರುಷರು ಹಾಗೂ ಒಂದು ಮಗು ಸೇರಿ ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ.
ಚಿಕ್ಕಬಳ್ಳಾಪುರ ಮೂಲದ ಮೃತ ಆರು ಮಂದಿಯು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನು ಭೇಟಿಯಾಗಿ, ವಾಪಸ್ ಊರಿಗೆ ಹೋಗುತ್ತಿದ್ದಾಗ ನಿದ್ದೆ ಮಂಪರಿನಲ್ಲಿ ಅಪಘಾತ ಸಂಭವಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಕಾರಳ್ಳಿ ಗ್ರಾಮದ ನಾರಾಯಣಪ್ಪ, ಸುನಂದಾ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಂದರಹಳ್ಳಿ ಗ್ರಾಮದ ನೇತ್ರಾ ಹಾಗೂ ರವಿಕುಮಾರ್ ದಂಪತಿ ಹಾಗೂ ಪುತ್ರ ಚೇತನ್ ಒಂದೇ ಕುಟುಂಬದವರಾಗಿದ್ದಾರೆ. ಕುಟುಂಬಸ್ಥರು, ಪಾರ್ಶ್ವವಾಯುಗೆ ತುತ್ತಾಗಿದ್ದ ನಾರಾಯಣಪ್ಪ ಅವರಿಗೆ ಚಿಕಿತ್ಸೆ ಕೊಡಿಸಲೆಂದು ಕೆಎ-೫೩-ಸಿ.೧೪೧೯ ನಂಬರ್‌ನ ಇಟಿಯೋಸ್ ಬಾಡಿಗೆ ಕಾರು ಮಾಡಿಕೊಂಡು ಮಂಗಳೂರಿಗೆ ಹೋಗಿದ್ದರು.
ಚಿಕಿತ್ಸೆ ಪಡೆದು ವಾಪಸ್ಸು ಬೆಂಗಳೂರಿನ ಕಡೆಗೆ ಬರುವಾಗ ಬೆಳಗಿನ ಜಾವ ನಿದ್ದೆ ಮಂಪರಿನಲ್ಲಿ ಕಾರು ಚಾಲಕನ ಅಜಾಗರೂಕತೆಯಿಂದ ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ಲೇನ್‌ಗೆ ಹಾರಿ ಕಂಟೇನರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿದೆ.
ಘಟನೆ ನಡೆದ ಸಂಬಂಧ ಮೃತ ನಾರಾಯಣಪ್ಪ ಸಂಬಂಧಿ ಶ್ರೀನಿವಾಸ್ ಮಾತನಾಡಿ, ನಾರಾಯಣಪ್ಪ ಪಾರ್ಶ್ವವಾಯುಗೆ ತುತ್ತಾದ ಹಿನ್ನೆಲೆಯಲ್ಲಿ ಮದ್ದು ತೆಗೆದುಕೊಂಡು ಬರಲು ಕುಟುಂಬಸ್ಥರು ಮಂಗಳೂರಿಗೆ ಹೋಗಿದ್ದರು. ಬಾಡಿಗೆ ಕಾರು ಮಾಡಿ ಮೊನ್ನೆ ರಾತ್ರಿ ಕಳುಹಿಸಲಾಗಿತ್ತು. ವಾಪಸ್ ಬರುವಾಗ ದುರ್ಘಟನೆ ನಡೆದಿದೆ ಎಂದರು.
ಕಾರಿನ ಮಾಲಿಕ ಮನೋಜ್ ಕುಮಾರ್ ಮಾತನಾಡಿ, ಚಿಕ್ಕಬಳ್ಳಾಫುರದಿಂದ ಮೊನ್ನೆ ರಾತ್ರಿ ಕಾರು ಮಂಗಳೂರಿಗೆ ಬಾಡಿಗೆ ಹೋಗಿದೆ. ದೇವನಹಳ್ಳಿ ತಾಲೂಕಿನ ಕಾರಹಳ್ಳಿ ನಿವಾಸಿ ನಾರಾಯಣಪ್ಪ ಬಾಡಿಗೆ ಪಡೆದಿದ್ದರು. ಮಂಗಳೂರಿಗೆ ಹೋಗಿ ಬರಲು ಕಾರು ಬಾಡಿಗೆ ಪಡೆದಿದ್ದರು. ಕಾರಿನ ಚಾಲಕನಾಗಿ ಕೊಂಡೇನಹಳ್ಳಿ ನಿವಾಸಿ ರಾಕೇಶನನ್ನು ಕಳುಹಿಸಲಾಗಿತ್ತು ಎಂದು ತಿಳಿಸಿದರು.
ಹಾಸನ ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.