ತ್ರಿವಳಿ ಕೊಲೆಗೈದ ರೌಡಿ ಶೋಹಿಬ್ ಗೆ ಗುಂಡೇಟು
ಶಿವಮೊಗ್ಗ,ಮೇ.೧೩-ನಗರದಲ್ಲಿ ನಡೆದಿದ್ದ ಗ್ಯಾಂಗ್ ವಾರ್ ಪ್ರಕರಣದಲ್ಲಿ ಮೂವರನ್ನು ನಡುಬೀದಿಯಲ್ಲಿ ಕೊಚ್ಚಿ ಕೊಲೆ ಮಾಡಿದ್ದ ಪ್ರಮುಖ ಆರೋಪಿ ಕುಖ್ಯಾತ ರೌಡಿ ಶೋಹಿಬ್ ಗೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
ಕಾಲಿಗೆ ಪೊಲೀಸರ ಗುಂಡೇಟು ತಿಂದಿರುವ ರೌಡಿ ಶೋಹಿಬ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಗ್ರಾಮಾಂತರ ಠಾಣೆ ವ್ಯಾಪ್ತಿಯ ಬೀರನಕೆರೆ ಬಳಿ ರೌಡಿ ಶೀಟರ್ ಶೋಹಿಬ್‌ನನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ. ಪಿಎಸ್‌ಐ ಕುಮಾರ್ ಹಾಗೂ ಹೆಡ್ ಕಾನ್ಸ್‌ಟೇಬಲ್ ಅಣ್ಣಪ್ಪ ಮೇಲೆ ಹಲ್ಲೆಗೆ ಯತ್ನಿಸಿದ್ದ ಶೋಹಿಬ್ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಗಾಯಗೊಳಿಸಿ ಬಂಧಿಸಿದರು.
ಕೆಲ ದಿನಗಳ ಹಿಂದೆ ನಗರದ ಲಷ್ಕರ್ ಮೊಹಲ್ಲಾ ಸರ್ಕಲ್ ಬಳಿ ಗ್ಯಾಂಗ್ ವಾರ್ ನಡೆದು ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್‌ಗಳನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಭೀಕರವಾಗಿ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ತುಂಗಾನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಶೋಹೆಬ್ ಅಲಿಯಾಸ್ ಸೇಬು, ದೊಡ್ಡಪೇಟೆ ಠಾಣಾ ವ್ಯಾಪ್ತಿಯ ರೌಡಿಶೀಟರ್ ಗೌಸ್ ಹತ್ಯೆಯಾಗಿತ್ತು. ಚಾಕುವಿನಿಂದ ತಿವಿತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ಯಾಸೀನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಮೊದಲಿಗೆ ಮೃತ ಯುವಕರ ಕಡೆಯ ಗುಂಪು ರೌಡಿ ಶೀಟರ್ ಯಾಸೀನ್ ಕುರೇಶಿ ಎಂಬಾತನ ಮೇಲೆ ದಾಳಿ ಮಾಡಿದೆ. ಹೀಗಾಗಿ ಯಾಸೀನ್ ಕುರೇಶಿ ಗ್ಯಾಂಗ್ ಪ್ರತಿದಾಳಿ ನಡೆಸಿ, ಹಲ್ಲೆ ಮಾಡಲು ಬಂದಿದ್ದ ಶೋಹೆಬ್, ಗೌಸ್‌ನನ್ನು ಕೊಲೆ ಮಾಡಿದ್ದಾರೆ. ಬ್ಯಾಟ್, ಲಾಂಗುಗಳಿಂದ ಹೊಡೆದು, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.