ಬದರಿನಾಥ ಧಾಮ್ ಇಂದಿನಿಂದ ಭಕ್ತರಿಗೆ ದರ್ಶನ ಭಾಗ್ಯ
ಚಮೋಲಿ(ಉತ್ತರಾಖಂಡ)ಮೇ೧೨: ಧಾರ್ಮಿಕ ಪೂಜಾ ಕೈಂಕರ್ಯಗಳು ಮತ್ತು ಮಂತ್ರಘೋಷಗಳೊಂದಿಗೆ ಹಿಂದೂಗಳ ಪವಿತ್ರ ಪುಣ್ಯಕ್ಷೇತ್ರ ಬದರಿನಾಥ ಧಾಮ್ ಬಾಗಿಲುಗಳನ್ನು ಇಂದು ಬೆಳಗ್ಗೆ ೬ ಗಂಟೆಯ ತೆರೆಯಲಾಯಿತು.
ಸೇನಾ ಬ್ಯಾಂಡ್ ಸೇರಿದಂತೆ ಇಂಪಾದ ಸಂಗೀತ ಹಾಗೂ ಭಕ್ತರ ಜೈಕಾರದ ಝೇಂಕಾರವು ತಂಪಾದ ಮುಂಜಾವಿನಲ್ಲಿ ರಿಂಗಣಿಸಿದವು.ಬದರಿನಾಥನ ದರ್ಶನಕ್ಕೆ ಬೆಳಗ್ಗೆಯೇ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಇಂದಿನಿಂದ ಮುಂದಿನ ಆರು ತಿಂಗಳ ಕಾಲ ಭಕ್ತರಿಗೆ ದರ್ಶನಾವಕಾಶ ಸಿಗಲಿದೆ.
ದೇಶದ ಪ್ರಮುಖ ಚಾರ್‌ಧಾಮಗಳಾದ ಗಂಗೋತ್ರಿ, ಯಮುನೋತ್ರಿ ಮತ್ತು ಕೇದಾರನಾಥ ಧಾಮದ ಬಾಗಿಲುಗಳನ್ನು ಮೇ ೧೦ರಂದು ತೆರೆಯಲಾಗಿದೆ. ಬದರಿನಾಥ ಕ್ಷೇತ್ರವನ್ನು ಭೂವೈಕುಂಠ ಧಾಮ ಎಂದೂ ಕರೆಯುತ್ತಾರೆ. ಈ ಧಾಮವು ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ಅಲಕನಂದಾ ನದಿ ದಡದಲ್ಲಿದೆ. ಇದು ಹಿಂದೂಗಳ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದ್ದು, ವಿಷ್ಣುವಿಗೆ ಸಮರ್ಪಿತವಾಗಿದೆ.
ಬದರಿನಾಥ ದೇಗುಲದ ವಿಶೇಷತೆಗಳು: ಬದರಿನಾಥ ಧಾಮದಲ್ಲಿ ೧೫ ವಿಗ್ರಹಗಳಿವೆ. ಇದರಲ್ಲಿ ಒಂದು ಮೀಟರ್ ಎತ್ತರದ ಕಪ್ಪು ಕಲ್ಲಿನ ವಿಷ್ಣುವಿನ ಪ್ರತಿಮೆ ಅತ್ಯಂತ ವಿಶೇಷ. ಇಲ್ಲಿ ಬದರಿ ವಿಶಾಲ ಅಂದರೆ ಧ್ಯಾನಸ್ಥ ಭಂಗಿಯಲ್ಲಿ ಕುಳಿತಿದ್ದು, ಬಲಭಾಗದಲ್ಲಿ ಕುಬೇರ, ಲಕ್ಷ್ಮಿ ಮತ್ತು ನಾರಾಯಣನ ಪ್ರತಿಮೆಗಳನ್ನು ನೋಡಬಹುದು.
ಬದರಿನಾಥ ಧಾಮದಲ್ಲಿ ಭಗವಾನ್ ಬದರಿನಾರಾಯಣನ ೫ ರೂಪಗಳನ್ನು ಪೂಜಿಸಲಾಗುತ್ತದೆ. ವಿಷ್ಣುವಿನ ಈ ಐದು ರೂಪಗಳನ್ನು ’ಪಂಚ ಬದ್ರಿ ಎಂದೂ ಕರೆಯುವರು. ಬದರಿನಾಥ ಧಾಮದ ಮುಖ್ಯ ದೇವಾಲಯದ ಹೊರತಾಗಿ, ಇತರ ನಾಲ್ಕು ಬದರಿ ದೇವಾಲಯಗಳನ್ನು ಸಹ ಭಕ್ತರು ನೋಡಬಹುದಾಗಿದೆ.