ಗುಂಡಿಕ್ಕಿ ಐವರ ಬರ್ಬರ ಹತ್ಯೆ
ಸೀತಾಪುರ,ಮೇ.೧೧- ಜಿಲ್ಲೆಯ ರಾಮ್‌ಪುರ ಮಥುರಾ ಪ್ರದೇಶದಲ್ಲಿ ಕುಡಿದ ಅಮಲಿನಲ್ಲಿ ಮಾನಸಿಕ ರೋಗಿ ಯೊಬ್ಬ ತನ್ನ ತಾಯಿ, ಪತ್ನಿ ಮತ್ತು ಮೂವರು ಮಕ್ಕಳನ್ನು ಗುಂಡಿಕ್ಕಿ ಕೊಂದಿರುವ ಹೃದಯ ವಿದ್ರಾವಕ ಘಟನೆ ಜರುಗಿದೆ. ಇಂದು ಮುಂಜಾನೆ ಈ ಘಟನೆ ನಡೆದಿದೆ. ಮನೆಯವರೆಲ್ಲ ಮನೆಯಲ್ಲಿ ಮಲಗಿದ್ದಾಗ ಈ ಘಟನೆ ನಡೆದಿದೆ.ಘಟನೆ ಬಳಿಕ ಆರೋಪಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆರೋಪಿ ಮಾದಕ ವಸ್ತುಗಳ ವ್ಯಸನಿಯಾಗಿದ ಎನ್ನಲಾಗಿದೆ. ಏಕಕಾಲಕ್ಕೆ ಒಂದೇ ಕುಟುಂಬದ ೫ ಮಂದಿಯ ಹತ್ಯೆಗೆ ಇಡೀ ಪ್ರದೇಶವೇ ತತ್ತರಿಸಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಫೋರೆನ್ಸಿಕ್ ತಂಡ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಎಸ್ಪಿ ಚಕ್ರೇಶ್ ಮಿಶ್ರಾ, ಮಾಹಿತಿ ನೀಡಿ ಅನುರಾಗ್ ಸಿಂಗ್ ಎಂಬ ಮಾನಸಿಕ ರೋಗಿ ವ್ಯಕ್ತಿ ತನ್ನ ಕುಟುಂಬದ ೫ ಸದಸ್ಯರನ್ನು ಕೊಂದು ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎನ್ನಲಾಗಿದೆ. ಪೊಲೀಸರ ಪ್ರಕಾರ, ೪೫ ವರ್ಷದ ಅನುರಾಗ್ ತನ್ನ ಕುಟುಂಬದೊಂದಿಗೆ ರಾಂಪುರ್ ಮಥುರಾ ಪೊಲೀಸ್ ಠಾಣೆ ವ್ಯಾಪ್ತಿಯ ಪಲ್ಹಾಪುರ ಗ್ರಾಮದಲ್ಲಿ ವಾಸಿಸುತ್ತಿದ್ದ. ಶನಿವಾರ ಬೆಳಗ್ಗೆ ೭ ಗಂಟೆ ಸುಮಾರಿಗೆ ಅನುರಾಗ್ ಮನೆಯಲ್ಲಿ ಮಲಗಿದ್ದ ತಾಯಿ, ಪತ್ನಿ ಹಾಗೂ ಮೂವರು ಮಕ್ಕಳನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಇದಾದ ಬಳಿಕ ಆತನೂ ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅನುರಾಗ್ ತನ್ನ ತಾಯಿ ಸಾವಿತ್ರಿ (೬೨), ಪತ್ನಿ ಪ್ರಿಯಾಂಕಾ (೪೦) ಮತ್ತು ಮೂವರು ಮಕ್ಕಳಾದ ಅರ್ನಾ (೧೨), ಅದ್ವಿಕ್ (೮) ಮತ್ತು ಆರ್ವಿ (೭) ಅವರನ್ನು ಗುಂಡಿಕ್ಕಿ ಕೊಂದಿದ್ದಾನೆ. ಇದಾದ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈಗ ಅವರ ಕುಟುಂಬದಲ್ಲಿ ಯಾರೂ ಉಳಿದಿಲ್ಲ. ಕೊಲೆಯ ಹಿನ್ನೆಲೆಯಲ್ಲಿ ಎಲ್ಲಾ ಆಯಾಮಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನೆರೆಹೊರೆಯವರ ಪ್ರಕಾರ ಅನುರಾಗ್ ಮಾದಕ ದ್ರವ್ಯ ಸೇವಿಸುತ್ತಿದ್ದ. ಆಗಾಗ ಕುಡಿದು ಮನೆಗೆ ಬರುತ್ತಿದ್ದ. ಇದಾದ ಬಳಿಕ ಮನೆಯಲ್ಲಿ ಜಗಳವಾಡುತ್ತಿದ್ದರು. ಅವರ ಮಾನಸಿಕ ಸ್ಥಿತಿಯೂ ಕೆಲಕಾಲ ಚೆನ್ನಾಗಿರಲಿಲ್ಲ ಎಂದು ಹೇಳಿದ್ದಾರೆ.ಒಂದೇ ಕುಟುಂಬದ ಐವರ ಹತ್ಯೆಯಿಂದ ಗ್ರಾಮದ ಜನತೆಯೂ ಭಯಭೀತರಾಗಿದ್ದಾರೆ.