೩೫ ಕೋಟಿ ರೂ ಪತ್ತೆ ಸಚಿವರ ಅಪ್ತ ಆಲಂಗೀರ್ ಸೆರೆ
ರಾಂಚಿ(ಜಾರ್ಖಂಡ್),ಮೇ.೭-ಸುಮಾರು ೩೫ ಕೋಟಿ ರೂ ಮೊತ್ತದಷ್ಟು ಭಾರಿ ಮೊತ್ತದ ನಗದು ಪತ್ತೆಯಾಗಿರುವ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಚಿವ ಆಲಂಗೀರ್ ಆಲಮ್ ಆಪ್ತ ಸಂಜೀವ್ ಲಾಲ್‌ನನ್ನು ಬಂಧಿಸಿದ್ದಾರೆ.
ಜಾರ್ಖಂಡ್ ಸಚಿವ ಅಲಂಗೀರ್ ಅಲಂ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಅವರ ಮನೆ ಸೇರಿದಂತೆ ದಾಳಿ ನಡೆಸಲಾಗಿದೆ. ಸಂಜೀವ್ ಲಾಲ್ ಅವರ ಮನೆಗೆಲಸದವನ ಬಳಿ ಅಂದಾಜು ೩೦ರಿಂದ ೩೫ ಕೋಟಿ ರೂ ಮೊತ್ತದಷ್ಟು ಭಾರಿ ಮೊತ್ತದ ನಗದು ಪತ್ತೆಯಾಗಿತ್ತು.
ಕಾಂಗ್ರೆಸ್ ನಾಯಕ ಆಲಂಗೀರ್ ಅಲಂ ಅವರು ಜಾರ್ಖಂಡ್‌ನ ಗ್ರಾಮೀಣಾಭಿವೃದ್ಧಿ ಖಾತೆ ಸಚಿವರಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಡೆದ ಈ ದಾಳಿಯು ರಾಜಕೀಯ ವಲಯದಲ್ಲಿ ಚರ್ಚೆಗೆ ಒಳಗಾಗಿದೆ. ಪ್ರತಿಪಕ್ಷಗಳ ವಿರುದ್ಧ ಬಿಜೆಪಿಗೆ ಇದು ಅಸ್ತ್ರವಾಗಿ ಪರಿಣಮಿಸಿದೆ.
ಸಂಜೀವ್ ಲಾಲ್ ಹಾಗೂ ಮನೆ ಕೆಲಸಗಾರ ಜಹಾಂಗೀರ್ ಆಲಂ ಅವರನ್ನು ಕೂಡ ಬಂಧಿಸಿದೆ. ಇಷ್ಟು ದೊಡ್ಡ ಮೊತ್ತದ ನಗದು ಪತ್ತೆಯಾದ ಬಳಿಕ ನೋಟುಗಳನ್ನು ಎಣಿಸಲು ಬ್ಯಾಂಕ್ ನೌಕರರನ್ನು ನೋಟಿ ಎಣಿಕೆ ಯಂತ್ರಗಳೊಂದಿಗೆ ಕರೆಸಲಾಯಿತು. ಈ ವೇಳೆ ಒಟ್ಟು ೬ ಕಡೆ ದಾಳಿ ನಡೆದಿತ್ತು. ಒಟ್ಟು ೩೫.೨೩ ಕೋಟಿ ರೂ ನಗದು ಪತ್ತೆಯಾಗಿದೆ.
ಆಲಂಗೀರ್ ಆಲಂ ಪಾಕುರ್ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಕಾಂಗ್ರೆಸ್ ಶಾಸಕರಾಗಿದ್ದಾರೆ ಮತ್ತು ಪ್ರಸ್ತುತ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳು ಮತ್ತು ಗ್ರಾಮೀಣಾಭಿವೃದ್ಧಿಸಚಿವರಾಗಿದ್ದಾರೆ. ಇದಕ್ಕೂ ಮೊದಲು ಆಲಂಗೀರ್ ಆಲಂ ಅವರು ಅಕ್ಟೋಬರ್ ೨೦, ೨೦೦೬ರಿಂದ ೧೨ ಡಿಸೆಂಬರ್ ೨೦೦೯ರವರೆಗೆ ಜಾರ್ಖಂಡ್ ವಿಧಾನಸಭೆಯ ಸ್ಪೀಕರ್ ಆಗಿದ್ದರು. ೨೦೦೦ರಲ್ಲಿ ಮೊದಲ ಬಾರಿಗೆ ಶಾಸಕರಾದರು ಮತ್ತು ನಂತರ ೪ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.