ವಿಚ್ಛೇದನ ಕೋರಿದ್ದ ದಂಪತಿಗೆ ಗವಿಸಿದ್ದೇಶ್ವರ ಶ್ರೀಗಳ ಕಿವಿಮಾತು
ಕೊಪ್ಪಳ. ಸೆ.೨೨- ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿಗಳಿಗೆ ಗವಿಸಿದ್ದೇಶ್ವರ ಶ್ರೀಗಳು ಬುದ್ಧಿವಾದ ಹೇಳಿ ಒಂದಾಗಿ ಬಾಳುವಂತೆ ತಿಳಿಸಿದ್ದಾರೆ.
ಗದಗ ಜಿಲ್ಲೆಯ ದಂಪತಿ ವಿಚ್ಛೇದನಕ್ಕಾಗಿ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು.ಪತ್ನಿ ಎಮ್‌ಕಾಂ ಪದವಿಧರೆಯಾಗಿದ್ದು, ಪತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸೆ.೧೭ರಂದು ದಂಪತಿಯ ವಿಚ್ಛೇದನ ಅರ್ಜಿ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠದ ನ್ಯಾ. ಶ್ರೀಕೃಷ್ಣ ದೀಕ್ಷತ ಅವರು ದಂಪತಿಗೆ ಬುದ್ಧಿವಾದ ಹೇಳಿದ್ದಾರೆ.
ಶ್ರೀಗಳನ್ನ ಭೇಟಿಯಾಗಲು ನ್ಯಾಯಾಧೀಶರ ಸಲಹೆ
ದಂಪತಿಗಳ ಮಧ್ಯೆ ಇರುವ ಸಮಸ್ಯೆಗಳನ್ನು ಆಲಿಸಿದ ನ್ಯಾಯಾಧೀಶರು, ದಾಂಪತ್ಯದಲ್ಲಿ ಸಮಸ್ಯೆ ಬರುವುದು ಸಹಜ. ಗಂಡ-ಹೆಂಡತಿ ಜಗಳ ಸಾಮಾನ್ಯ. ಸಣ್ಣ-ಪುಟ್ಟ ವಿಚಾರಕ್ಕೆ ದೂರವಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ. ಸಮಸ್ಯೆ ಇದ್ದರೆ ಬಗೆ ಹರಿಸಿಕೊಳ್ಳಿ. ವಿಚ್ಛೇದನ ಅಂದರೆ ಅಂಗಡಿಯಿಂದ ವಸ್ತು ಖರೀದಿಸಿದಂತೆ ಅಲ್ಲ. ಸ್ವಲ್ಪ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಕಾನೂನಿಂದ ಜೀವನ ಸಾಧ್ಯವಾಗುವುದಿಲ್ಲ. ನಿಮ್ಮ ಸಮಸ್ಯೆಯ ಬಗ್ಗೆ ಯಾರಾದರು ಮಠಾಧೀಶರ ಬಗ್ಗೆ ಹೇಳಿಕೊಳ್ಳಿ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ನ್ಯಾಯಾಧೀಶರ ಮಾತಿಗೆ, ಪತಿ ಗದಗನ ತೋಂಟದಾರ್ಯ ಮಠದ ಸ್ವಾಮೀಜಿ ಹತ್ತಿರ ಹೋಗುತ್ತೇವೆ ಎಂದು ಹೇಳಿದ್ದಾನೆ. ಆಗ, ಪತಿಯ ಮಾತಿಗೆ ಒಪ್ಪದ ಪತ್ನಿ ಕೊಪ್ಪಳ ಗವಿಸಿದ್ದೇಶ್ವರ ಸ್ವಾಮೀಜಿ ಬಳಿ ಹೋಗುತ್ತೇನೆ ಎಂದು ಹೇಳಿದ್ದಾಳೆ. ಈ ವೇಳೆ ನ್ಯಾಯಾಧೀಶರು ಒಳ್ಳೆದಾಯ್ತು. ಅವರು ಮಹಾನ್ ವ್ಯಕ್ತಿ. ತುಂಬಾ ಎತ್ತರ ವ್ಯಕ್ತಿ, ಜ್ಞಾನವಂತರು. ಅವರ ಬಳಿ ಹೋಗಿ ಸಮಸ್ಯೆ ಬಗೆ ಹರಿಸಿಕೊಳ್ಳಿ ಎಂದಿದ್ದಾರೆ.
ಗವಿ ಮಠಕ್ಕೆ ಬಂದ ದಂಪತಿ ಮತ್ತು ಕುಟುಂಬಸ್ಥರು
ನ್ಯಾಯಾಧೀಶರ ಆದೇಶದಂತೆ ದಂಪತಿ ಒಟ್ಟಿಗೆ ಕೊಪ್ಪಳ ಗವಿಸಿದ್ದೇಶ್ವರ ಮಠಕ್ಕೆ ಹೋಗದೆ ಪ್ರತ್ಯೇಕವಾಗಿ ಹೋಗಿದ್ದಾರೆ. ಶನಿವಾರ ಮಹಿಳೆಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ್ದರೇ,ಇಂದು ಗಂಡನ ಕುಟುಂಬಸ್ಥರು ಭೇಟಿ ನೀಡಿ ಗವಿಮಠದ ಅಭಿನವ ಗವಿಶ್ರೀಗಳ ಆಶಿರ್ವಾದ ಪಡೆದರು. ಗವಿಸಿದ್ದೇಶ್ವರ ಶ್ರೀಗಳು ಸುಮಾರು ೧೦-೨೦ ನಿಮಿಷ ಕುಟುಂಬದವರೊಂದಿಗೆ ಮಾತನಾಡಿದ್ದಾರೆ.
ಹೈಕೋರ್ಟ್ ನ್ಯಾಯಾಧೀಶರು ಹೇಳಿದ ಹಾಗೇ ಗವಿಮಠಕ್ಕೆ ಭೇಟಿ ನೀಡಿದ್ದೇವೆ. ಗವಿಮಠದ ಅಜ್ಜರ ಆಶೀರ್ವಾದ ಪಡೆದಿದ್ದೇವೆ. ಗವಿಶ್ರೀಗಳು ಕೂಡಿ ಒಂದಾಗಿ ಬಾಳುವಂತೆ ತಿಳಿ ಹೇಳಿದ್ದಾರೆ ಎಂದು ಕುಟುಂಬಸ್ಥರು ಹೇಳಿದರು.